ಕೊರೋನಾಗೆ ತತ್ತರಿಸಿದ ಭಾರತ; ಲಾಕ್ಡೌನ್ ನಿರ್ಧಾರ ಇಲ್ಲ ಎಂದ ನಿರ್ಮಲಾ ಸೀತಾರಾಮನ್!
ಕೊರೋನಾ ವೈರಸ್ ಭೀಕರತೆಗೆ ಭಾರತ ನಲುಗಿದೆ. ರಾಜ್ಯಗಳು ಕಠಿಣ ನಿಯಮಗಳನ್ನು ಜಾರಿಮಾಡುತ್ತಿದೆ. ತಮಿಳುನಾಡು ಭಾನುವಾರ ಲಾಕ್ಡೌನ್ ಹೇರಿದರೆ, ಇತ್ತ ಭಾರತ ಲಾಕ್ಡಾನ್ ಆಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದಾರೆ.
ನವದೆಹಲಿ(ಏ.19): ಕೊರೋನಾ ವೈರಸ್ ದೇಶದ ಮೂಲೆ ಮೂಲೆಯಲ್ಲೂ ಆರ್ಭಟಿಸುತ್ತಿದೆ. ನಗರಗಳ ಪರಿಸ್ಥಿತಿ ಯಾರಿಗೂ ಬೇಡ. ಇದೀಗ ಜನರೇ ಸ್ವಯಂ ಕರ್ಫ್ಯೂ ಹೇರಿಕೊಂಡಿದ್ದಾರೆ. ಆಸ್ಪತ್ರೆಗಳಲ್ಲಿ ಸೋಂಕಿತರ ಪರಿಸ್ಥಿತಿ ಶೋಚನೀಯವಾಗಿದೆ. ಪರಿಸ್ಛಿತಿ ಕೈಮೀರುವ ಹಂತ ತಲುಪಿದೆ. ಇದರ ನಡುವೆ ಲಾಕ್ಡೌನ್ ಆತಂಕ ಕೂಡ ಜನರನ್ನು ಕಾಡುತ್ತಿದೆ. ಆದರೆ ಭಾರತ ಲಾಕ್ಡೌನ್ ಮಾಡುವ ಯಾವುದೇ ನಿರ್ಧಾರಗಳು ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.
Fact Check: ಭಾರತದಲ್ಲಿ ಲಾಕ್ಡೌನ್ ಜಾರಿ ಸುದ್ದಿ ಸುಳ್ಳು!.
ಲಾಕ್ಡೌನ್ ಬದಲು ಸಣ್ಣ ಸಣ್ಣ ಕಂಟೈನ್ಮೆಂಟ್ ಝೋನ್ ನಿರ್ಮಿಸಿ ಕೊರೋನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಕೊರೋನಾ ಮಾರ್ಗಸೂಚಿ ಪಾಲನೆ, ಕೊರೋನಾ ಲಸಿಕೆ ನೀಡುವಿಕೆಗೆ ಇನ್ನಷ್ಟು ವೇಗ ನೀಡಲಿದ್ದೇವೆ. ಈ ರೀತಿ ಕ್ರಮಗಳಿಂದ ಕೇಂದ್ರ ಕೊರೋನಾ ನಿಯಂತ್ರಣಕ್ಕೆ ತರಲಿದೆ. ಆದರೆ ಲಾಕ್ಡೌನ್ ಆಯ್ಕೆ ಕೇಂದ್ರದ ಮುಂದಿಲ್ಲ ಎಂದು ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.
ಭಾರತೀಯ ಸೂಕ್ಷ್ಮ , ಸಣ್ಣ ಮತ್ತು ಮಧ್ಯಮ ಉದ್ಯಮಗಳ ಒಕ್ಕೂಟ (FISME) ಅಧ್ಯಕ್ಷ ಅನಿಮೇಶ್ ಸಕ್ಸೇನಾ ಜೊತೆ ಮಾತುಕತೆ ನಡೆಸಿದ ನಿರ್ಮಲಾ ಸೀತಾರಾಮನ್, ದೇಶ ಮತ್ತೊಂದು ಲಾಕ್ಡೌನ್ ಎದುರಿಸಲ್ಲ ಎಂದು ಭರವಸೆ ನೀಡಿದ್ದಾರೆ. ಕೈಗಾರಿಗಳು, ಉದ್ಯಮಗಳ ಎಂದಿನಂತೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಲಾವುಗುದು. ಆದರೆ ಕೊರೋನಾ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದೆ ಎಂದು ಸೀತಾರಾಮನ್ ಹೇಳಿದ್ದಾರೆ.
ಭಾನುವಾರ ಸಂಪೂರ್ಣ ಲಾಕ್ಡೌನ್; ಇತರ ದಿನ ನೈಟ್ಕರ್ಫ್ಯೂ ಹೇರಿದ ತಮಿಳುನಾಡು!.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ರಾಜ್ಯಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಆಕ್ಸಿಜನ್ ಕೊರತೆ ಹಾಗೂ ಲಸಿಕೆ ಕೊರತೆಯನ್ನೂ ನೀಗಿಸಲಾಗುತ್ತಿದೆ. ಹೆಚ್ಚುವರಿ ಕೋವಿಡ್ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಈ ಮೂಲಕ ದೇಶದಲ್ಲಿನ ಕೊರೋನಾ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.