*   ದೇಶದಲ್ಲೇ ಬಂಡವಾಳ ಹೂಡಿಕೆಗೆ ಕರ್ನಾಟಕ ಪ್ರಶಸ್ತ ರಾಜ್ಯ*  4 ದಿನಗಳ ‘ಎಕ್ಸ್‌ಕಾನ್‌’ ಪ್ರದರ್ಶನದಲ್ಲಿ ಉದ್ಯಮಿಗಳಿಗೆ ಆಹ್ವಾನ*  ನವೆಂಬರ್‌ನಲ್ಲಿ ಬಂಡವಾಳ ಹೂಡಿಕೆದಾರರ ಜಾಗತಿಕ ಸಮಾವವೇಶ ಆಯೋಜನೆ  

ಬೆಂಗಳೂರು(ಮೇ.18): ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಉತ್ತಮ ವಾತಾವರಣವಿದೆ. ಕೈಗಾರಿಕೆಗಳು ಮತ್ತು ಉದ್ಯಮಕ್ಕೆ ಪೂರಕವಾದ ವಾತಾವರಣವಿದೆ. ಸರ್ಕಾರದಿಂದಲೂ ಎಲ್ಲ ಸೌಲಭ್ಯ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಯಮಿಗಳಿಗೆ ಆಹ್ವಾನ ನೀಡಿದರು.

Add Asianetnews Kannada as a Preferred SourcegooglePreferred

ಮಾದಾವರದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ 4 ದಿನಗಳ ಕಾಲ ಆಯೋಜಿಸಿರುವ ಕಟ್ಟಡ ನಿರ್ಮಾಣ ಸಲಕರಣೆಗಳ ‘ಎಕ್ಸ್‌ಕಾನ್‌’ ವಸ್ತು ಪ್ರದರ್ಶನಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

Silicon City Bengaluru ಅಮೆರಿಕದ ಸಿಲಿಕಾನ್‌ ವ್ಯಾಲಿ ಜತೆ ಕರ್ನಾಟಕ ಸ್ಪರ್ಧೆ, ಸಿಎಂ!

ದೇಶದಲ್ಲೇ ಬಂಡವಾಳ ಹೂಡಿಕೆಗೆ ಕರ್ನಾಟಕ ಪ್ರಶಸ್ತ ರಾಜ್ಯವಾಗಿದೆ. ಉದ್ಯಮ ಮತ್ತು ಕೈಗಾರಿಕಾ ಸ್ನೇಹಿ ವಾತಾವರಣವಿದೆ. ಆದ್ದರಿಂದಲೇ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹೂಡಿಕೆದಾರರು ಆಗಮಿಸುತ್ತಿದ್ದಾರೆ. ನಮ್ಮಲ್ಲಿ ಬಂಡವಾಳ ಹೂಡುವವರಿಗೆ ಸರ್ಕಾರದಿಂದ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಲಾಗುವುದು. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ ಎಂದು ವಿವರಿಸಿದರು.

ಕಠಿಣ ಶ್ರಮವೇ ಆರ್ಥಿಕತೆಗೆ ಬೆನ್ನೆಲುಬಾಗಿದೆ. ಆದ್ದರಿಂದ ಪಿರಮಿಡ್‌ನ ತಳ ಭಾಗದಲ್ಲಿರುವ ಶ್ರಮಿಕ ವರ್ಗಕ್ಕೆ ಸರ್ಕಾರ ಆದ್ಯತೆ ನೀಡುತ್ತಿದ್ದು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ನಿವಾಸ, ಶೈಕ್ಷಣಿಕ ಸಂಸ್ಥೆ, ಕೆಲಸದ ಸ್ಥಳಗಳಲ್ಲಿ ಅನ್ವೇಷಣೆ ನಡೆಸುವ ಈ ವರ್ಗಕ್ಕೆ ಸರ್ಕಾರ ಅಗತ್ಯ ಸಹಕಾರ ನೀಡಲಿದೆ. ಇವರಿಂದಲೇ ಹೆಚ್ಚು ಅನ್ವೇಷಣೆಗಳಾಗುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ 11,513 ಕೋಟಿ ರು. ಬಂಡವಾಳ ಹೂಡಿಕೆಗೆ ಅಸ್ತು: 47 ಸಾವಿರ ಉದ್ಯೋಗ ಸೃಷ್ಟಿ

ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌ ಅಂಡ್‌ ಡಿ)ಗೆ ಪ್ರದೇಶದ ವ್ಯಾಪ್ತಿಯಿಲ್ಲ, ಅದು ಗ್ಯಾರೇಜ್‌ನಲ್ಲೂ ನಡೆಯಬಹುದು. ಅದಕ್ಕಾಗಿ ರಾಜ್ಯದಲ್ಲಿ ಆರ್‌ ಅಂಡ್‌ ಡಿ ಯೋಜನೆ ಜಾರಿಗೊಳಿಸಲಾಗಿದೆ. ಖಾಸಗಿ ಮತ್ತು ಸಾರ್ವಜನಿಕ ವಲಯದ 400ಕ್ಕೂ ಅಧಿಕ ಆರ್‌ ಅಂಡ್‌ ಡಿ ಕೇಂದ್ರಗಳು ಇಲ್ಲಿವೆ. ದೇಶದ ಶೇ.50ಕ್ಕೂ ಅಧಿಕ ಸ್ಟಾರ್ಟಪ್‌ಗಳು ಕರ್ನಾಟಕದಲ್ಲಿವೆ. ಯೂನಿಕಾರ್ನ್‌ಗಳೂ ಹೆಚ್ಚಿನ ಸಂಖ್ಯೆಯಲ್ಲಿವೆ ಎಂದು ಹೇಳಿದರು.

ನವೆಂಬರ್‌ನಲ್ಲಿ ಬಂಡವಾಳ ಹೂಡಿಕೆದಾರರ ಜಾಗತಿಕ ಸಮಾವವೇಶ ಆಯೋಜಿಸಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಈಗಾಗಲೇ ಮುಂಬೈ, ದೆಹಲಿಯಲ್ಲಿ ವಿವಿಧ ದೇಶಗಳ ರಾಯಭಾರಿಗಳು, ಉದ್ಯಮಿಗಳೊಂದಿಗೆ ಸಭೆ ನಡೆಸಲಾಗಿದೆ. ವಿದೇಶಗಳಲ್ಲೂ ಪ್ರಚಾರ ಕೈಗೊಳ್ಳಲಾಗುತ್ತಿದೆ. ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಬಂಡವಾಳ ಹೂಡಿಕೆ ಮಾಡಿ ಎಂದು ಸಲಹೆ ನೀಡಿದರು. ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವ ಜನರಲ್‌ ವಿ.ಕೆ.ಸಿಂಗ್‌, ಎಕ್ಸ್‌ಕಾನ್‌ ಅಧ್ಯಕ್ಷ ದೀಪಕ್‌ ಶೆಟ್ಟಿ, ಸಹ ಅಧ್ಯಕ್ಷ ಡಿಮಿಟ್ರೋವ್‌ ಕೃಷ್ಣನ್‌ ಮತ್ತಿತರರು ಹಾಜರಿದ್ದರು.