ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಅವರ 'ವಂತಾರಾ' ಸಂಸ್ಥೆಯು 'ವಂತಾರಾ ಕ್ರೀಮರಿ' ಎಂಬ ಹೊಸ ಐಸ್‌ಕ್ರೀಂ ಬ್ರ್ಯಾಂಡ್ ಅನ್ನು ಆರಂಭಿಸಿದೆ. ಗಿರ್ ಹಸುವಿನ A2 ಹಾಲಿನಿಂದ ತಯಾರಿಸಿದ ದೇಸಿ ಫ್ಲೇವರ್‌ಗಳ ಈ ಐಸ್‌ಕ್ರೀಂ ಬಗ್ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಅವರ 'ವಂತಾರಾ' ಸಂಸ್ಥೆಯು ಇದೀಗ ಆಹಾರ ಮತ್ತು ಪಾನೀಯ ಉದ್ಯಮಕ್ಕೆ ಕಾಲಿಟ್ಟಿದೆ. 'ವಂತಾರಾ ಕ್ರೀಮರಿ' ಎಂಬ ಹೆಸರಿನಲ್ಲಿ ಹೊಸ ಐಸ್‌ಕ್ರೀಂ ಬ್ರ್ಯಾಂಡ್ ಅನ್ನು ಪರಿಚಯಿಸಿದೆ. ಗಿರ್ ತಳಿಯ ಉತ್ಕೃಷ್ಟ A2 ಹಸುವಿನ ಹಾಲಿನಿಂದ ಈ ಐಸ್‌ಕ್ರೀಂಗಳನ್ನು ತಯಾರಿಸಲಾಗುತ್ತಿದೆ. ಭಾರತೀಯರಿಗೆ ಇಷ್ಟವಾಗುವ ದೇಸಿ ಫ್ಲೇವರ್‌ಗಳಿಗೆ ಇದರಲ್ಲಿ ಹೆಚ್ಚು ಒತ್ತು ನೀಡಲಾಗಿದೆ.

Add Asianetnews Kannada as a Preferred SourcegooglePreferred

ಮೇ 9 ಮತ್ತು 10 ರಂದು ಮುಂಬೈನ ಜಿಯೋ ವರ್ಲ್ಡ್ ಡ್ರೈವ್‌ನಲ್ಲಿ ಒಂದು ಟ್ರಕ್ ಮೂಲಕ ಈ ಐಸ್‌ಕ್ರೀಂಗಳನ್ನು ಗ್ರಾಹಕರಿಗೆ ನೀಡಲಾಯಿತು. ಫಿಲ್ಟರ್ ಕಾಫಿ, ಕೇಸರ್‌ ಪೇಡಾ, ಮಲೈ ಕುಲ್ಫಿ, ಪೇರಳೆ-ಮೆಣಸು (guava chilli), ನಿಂಬೆ ಸೋರ್ಬೆ ಸೇರಿದಂತೆ 17ಕ್ಕೂ ಹೆಚ್ಚು ಬಗೆಯ ಫ್ಲೇವರ್‌ಗಳು ಇಲ್ಲಿ ಲಭ್ಯವಿದ್ದವು.

ಒಂದು ವೇಳೆ ನೀವು ಈ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದರೆ, ಮತ್ತೆ ಟ್ರೈ ಮಾಡಲು ಅವಕಾಶವಿದೆ. ಮಾಧ್ಯಮ ವರದಿಗಳ ಪ್ರಕಾರ, ಇದೇ ಬ್ರ್ಯಾಂಡ್‌ನ ಟ್ರಕ್ ಮೇ 16 ಮತ್ತು 17, 2026 ರಂದು ಮತ್ತೆ ಬರಲಿದೆ.

View post on Instagram

View post on Instagram

ನೆಟ್ಟಿಗರ ಪ್ರತಿಕ್ರಿಯೆ ಏನು?

ಈ ಐಸ್‌ಕ್ರೀಂ ಲಾಂಚ್ ಬಗ್ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

ವೈರಲ್ ಆದ X ಪೋಸ್ಟ್‌ಗೆ ಕಾಮೆಂಟ್ ಮಾಡಿದ ಒಬ್ಬರು, 'ರೈತರಿಂದ ಹಾಲಿಗಾಗಿ ಶೋಷಣೆಗೆ ಒಳಗಾಗಿದ್ದ ಹಸುಗಳನ್ನು ರಕ್ಷಿಸಿ, ಅವುಗಳ ಹಾಲಿನಿಂದಲೇ ತಯಾರಿಸಿದ 100% ಕ್ರೌರ್ಯ-ಮುಕ್ತ ಐಸ್‌ಕ್ರೀಂ ಇದು' ಎಂದು ವ್ಯಂಗ್ಯವಾಡಿದ್ದಾರೆ.

'ಅವರ ಸಮಾಜಸೇವೆ, ದಾನ-ಧರ್ಮ ಎಲ್ಲವೂ ಬರೀ ತಮ್ಮ ಬ್ರ್ಯಾಂಡ್ ಪ್ರಮೋಟ್ ಮಾಡೋಕೆ. ಇದರಲ್ಲಿ ನಿಜವಾದ ಕಾಳಜಿ ಇಲ್ಲ, ಎಲ್ಲವೂ ದುಡ್ಡಿಗಾಗಿ' ಎಂದು ಇನ್ನೊಬ್ಬರು ಬರೆದಿದ್ದಾರೆ.

ಮತ್ತೊಬ್ಬರು, 'ಈಗ ವಂತಾರಾ ಕ್ರೀಮರಿ ಐಸ್‌ಕ್ರೀಂ ಯಾಕೆ ಬೇಕಿತ್ತು? ವಂತಾರಾ ಈಗಾಗಲೇ ಸಾವಿರಾರು ಪ್ರಾಣಿಗಳನ್ನು ರಕ್ಷಿಸಿದೆ ಮತ್ತು ಅನಂತ್ ಬಳಿ ರಿಲಯನ್ಸ್‌ನಿಂದ ಅಪಾರ ಹಣವಿದೆ. ಭಾರತಕ್ಕೆ ಬೇಕಾಗಿರೋದು ಟೆಕ್ ಮತ್ತು R&D, ಇನ್ನೊಂದು ಸ್ನ್ಯಾಕ್ ಬ್ರ್ಯಾಂಡ್ ಅಲ್ಲ,' ಎಂದು ಪ್ರಶ್ನಿಸಿದ್ದಾರೆ.

'ಇದರಲ್ಲಿ ಬಳಸಿದ ಪದಾರ್ಥಗಳ ಬಗ್ಗೆ ನನಗೆ ಅನುಮಾನವಿದೆ. ನಾನು ಆ ಐಸ್‌ಕ್ರೀಂ ಹತ್ತಿರಕ್ಕೂ ಹೋಗಲ್ಲ' ಎಂದು ಮತ್ತೊಬ್ಬರು ಹೇಳಿದ್ದಾರೆ.

ಆದರೆ, ಕೆಲವರು ಈ ಬ್ರ್ಯಾಂಡ್‌ಗೆ ಬೆಂಬಲವನ್ನೂ ಸೂಚಿಸಿದ್ದಾರೆ. 'ವಿದೇಶಿ ಬ್ರ್ಯಾಂಡ್‌ಗಳಿಗೆ ಪೈಪೋಟಿ ನೀಡಲು ಹೊಸ ಭಾರತೀಯ ಕಂಪನಿಗಳು ಈ ಕ್ಷೇತ್ರಕ್ಕೆ ಬರುತ್ತಿರುವುದು ಒಳ್ಳೆಯದು,' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

'ವಂತಾರಾ' ಬಗ್ಗೆ ಒಂದಿಷ್ಟು ಮಾಹಿತಿ

ಅನಂತ್ ಅಂಬಾನಿ ಅವರ ನೇತೃತ್ವದಲ್ಲಿ 'ವಂತಾರಾ' ಎಂಬ ವನ್ಯಜೀವಿ ರಕ್ಷಣೆ ಮತ್ತು ಪುನರ್ವಸತಿ ಯೋಜನೆಯನ್ನು ನಡೆಸಲಾಗುತ್ತಿದೆ. ಗುಜರಾತ್‌ನ ಜಾಮ್‌ನಗರದಲ್ಲಿ ಸುಮಾರು 3,000 ಎಕರೆ ಪ್ರದೇಶದಲ್ಲಿ ಈ ಬೃಹತ್ ಕೇಂದ್ರವಿದೆ. ಇದಕ್ಕೆ ರಿಲಯನ್ಸ್ ಫೌಂಡೇಶನ್ ಹಣಕಾಸಿನ ನೆರವು ನೀಡುತ್ತಿದೆ. ಇದು 'ವಿಶ್ವದ ಅತಿದೊಡ್ಡ ವನ್ಯಜೀವಿ ರಕ್ಷಣೆ, ಆರೈಕೆ ಮತ್ತು ಸಂರಕ್ಷಣಾ ಕೇಂದ್ರಗಳಲ್ಲಿ ಒಂದು' ಎಂದು ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ. ಇಲ್ಲಿ 2,000ಕ್ಕೂ ಹೆಚ್ಚು ಪ್ರಭೇದಗಳ 1.5 ಲಕ್ಷಕ್ಕೂ ಅಧಿಕ ಗಾಯಗೊಂಡ, ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ರಕ್ಷಿಸಿ ಆರೈಕೆ ಮಾಡಲಾಗುತ್ತಿದೆ.