Asianet Suvarna News Asianet Suvarna News

ರೈತರಿಗೆ ಗುಡ್‌ ನ್ಯೂಸ್‌: ವಿಶ್ವದ ಮೊದಲ ನ್ಯಾನೋ ಡಿಎಪಿ ಗೊಬ್ಬರ ಭಾರತದಲ್ಲಿ ಬಿಡುಗಡೆ

ಇದುವರೆಗೂ ಬಳಕೆಯಲ್ಲಿದ್ದ ಸಾಂಪ್ರದಾಯಿಕ 50 ಕೆಜಿ ಡಿಎಪಿ ರಸಗೊಬ್ಬರಕ್ಕೆ 1350 ರೂ. ದರವನ್ನು ರೈತರು ಪಾವತಿ ಮಾಡಬೇಕಿತ್ತು. ಆದರೆ ಹೊಸ 500 ಎಂಎಲ್‌ನ ನ್ಯಾನೋ ಡಿಎಪಿ ರಸಗೊಬ್ಬರ 50 ಕೆಜಿ ಬ್ಯಾಗ್‌ಗೆ ಸಮನಾಗಿರುವುದರ ಜೊತೆಗೆ ದರವೂ ಶೇ. 50ಕ್ಕಿಂತ ಕಡಿಮೆ ಇದೆ.

amit shah launches first liquid nano dap to cut fertiliser import bill ash
Author
First Published Apr 27, 2023, 11:50 AM IST

ನವದೆಹಲಿ (ಏಪ್ರಿಲ್ 27, 2023): ವಿಶ್ವದಲ್ಲೇ ಮೊದಲ ಬಾರಿಗೆ ‘ಇಫ್ಕೋ’’ ಕಂಪನಿ ಅಭಿವೃದ್ಧಿಪಡಿಸಿರುವ ದ್ರವರೂಪದ ‘ನ್ಯಾನೋ ಡಿಎಪಿ’ ರಸಗೊಬ್ಬರವನ್ನು ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಬುಧವಾರ ಇಲ್ಲಿ ವಾಣಿಜ್ಯ ಮಾರಾಟಕ್ಕಾಗಿ ಬಿಡುಗಡೆ ಮಾಡಿದರು. 500 ಎಂ.ಎಲ್‌.ನ ಪ್ರತಿ ಬಾಟಲ್‌ಗೆ 600 ರೂ. ದರ ನಿಗದಿಪಡಿಸಲಾಗಿದೆ. 2021ರಲ್ಲಿ ‘ನ್ಯಾನೋ ಯೂರಿಯಾ’ ರಸಗೊಬ್ಬರ ಬಿಡುಗಡೆ ಮಾಡಿದ್ದ ಕಂಪನಿ, ಇದೀಗ ಹೆಚ್ಚು ಬೇಡಿಕೆಯಲ್ಲಿರುವ ಮತ್ತೊಂದು ರಸಗೊಬ್ಬರವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಏನು ಇದರ ಲಾಭ?
ಇದುವರೆಗೂ ಬಳಕೆಯಲ್ಲಿದ್ದ ಸಾಂಪ್ರದಾಯಿಕ 50 ಕೆಜಿ ಡಿಎಪಿ ರಸಗೊಬ್ಬರಕ್ಕೆ 1350 ರೂ. ದರವನ್ನು ರೈತರು ಪಾವತಿ ಮಾಡಬೇಕಿತ್ತು. ಆದರೆ ಹೊಸ 500 ಎಂಎಲ್‌ನ ನ್ಯಾನೋ ಡಿಎಪಿ ರಸಗೊಬ್ಬರ 50 ಕೆಜಿ ಬ್ಯಾಗ್‌ಗೆ ಸಮನಾಗಿರುವುದರ ಜೊತೆಗೆ ದರವೂ ಶೇ. 50ಕ್ಕಿಂತ ಕಡಿಮೆ ಇದೆ. ಸಾಗಣೆ, ನಿರ್ವಹಣೆ ವೆಚ್ಚವೂ ಕಡಿತ. ವಿಷಕಾರಿಯಲ್ಲ. ಪರಿಸರಕ್ಕೆ ಹಾನಿ ಕಡಿಮೆ., ಇದಕ್ಕೆ ಸಬ್ಸಿಡಿ ಇಲ್ಲ. ಹೀಗಾಗಿ ಸರ್ಕಾರಕ್ಕೂ ಸಬ್ಸಿಡಿ ಹಣ ಉಳಿತಾಯ.

ಇದನ್ನು ಓದಿ: ಅಮುಲ್‌ ಆದಾಯ 66 ಸಾವಿರ ಕೋಟಿ ರೂ. ಗೆ ಹೆಚ್ಚಳ: ದಕ್ಷಿಣ ಭಾರತಕ್ಕೆ ಲಗ್ಗೆ ಇಟ್ಟ ಸಂದೇಶ ನೀಡಿದ ಎಂಡಿ..!

ಸ್ವಾವಲಂಬನೆ ಮಂತ್ರ - ಅಮಿತ್ ಶಾ
ರಸಗೊಬ್ಬರ ಬಿಡುಗಡೆ ಮಾಡಿ ಮಾತನಾಡಿದ ಸಚಿವ ಅಮಿತ್‌ ಶಾ ‘ಭೂಮಿಯ ಆರೋಗ್ಯವನ್ನು ಹಾಳುಗೆಡವದೆಯೇ ಕೃಷಿ ಉತ್ಪಾದಕತೆ ಹೆಚ್ಚಿಸುವ ನ್ಯಾನೋ ಡಿಎಪಿ (ಡೈ-ಅಮೋನಿಯಂ ಫಾಸ್ಪೇಟ್‌) ರಸಗೊಬ್ಬರವನ್ನು ರೈತರು ಬಳಸಬೇಕು. ಇದರ ಬಳಕೆಯಿಂದ ರಸಗೊಬ್ಬರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿ ಆಗಲಿದೆ’ ಎಂದು ಹೇಳಿದರು.

ಮತ್ತಷ್ಟು ಗೊಬ್ಬರ ಶೀಘ್ರ:
2021ರಲ್ಲಿ ಇಫ್ಕೋ ನ್ಯಾನೋ ಯೂರಿಯೂ ಗೊಬ್ಬರ ಬಿಡುಗಡೆ ಮಾಡಿತ್ತು. ಅದಕ್ಕೆ 50 ಎಂಎಲ್‌ಗೆ 260 ರೂ .ನಿಗದಿ ಮಾಡಿತ್ತು. ಇದೀಗ ನ್ಯಾನೋ ಡಿಎಪಿ ಬಿಡುಗಡೆ ಮಾಡಿದ್ದು ಮುಂದಿನ ದಿನಗಳಲ್ಲಿ ನ್ಯಾನೋ ಜಿಂಕ್‌, ನ್ಯಾನೋ ಪೊಟಾಷ್‌, ನ್ಯಾನೋ ಕಾಪರ್‌ ಬಿಡುಗಡೆ ಮಾಡುವ ಉದ್ದೇಶ ಹೊಂದಿದೆ.

ಇದನ್ನೂ ಓದಿ: ರೈತರಿಗೆ ಶುಭ ಸುದ್ದಿ: ಈ ವರ್ಷ ಸಹಜ ಮುಂಗಾರು; ‘ಎಲ್‌ ನಿನೋ’ ಪರಿಣಾಮ ಇಲ್ಲ ಎಂದ ಹವಾಮಾನ ಇಲಾಖೆ

ಸಬ್ಸಿಡಿ ಇಲ್ಲ:
ಸಾಂಪ್ರದಾಯಿಕ ರಸಗೊಬ್ಬರಕ್ಕೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತಿದ್ದರೆ, ಹೊಸ ರಸಗೊಬ್ಬರಕ್ಕೆ ಯಾವುದೇ ಸಬ್ಸಿಡಿ ಇರುವುದಿಲ್ಲ. ಭಾರತಕ್ಕೆ ಪ್ರತಿ ವರ್ಷ 1.2 ಲಕ್ಷ ಕೋಟಿ ಟನ್‌ ರಸಗೊಬ್ಬರದ ಅವಶ್ಯಕತೆ ಇದೆ. ಈ ಪೈಕಿ 50 ಲಕ್ಷ ಟನ್‌ ದೇಶೀಯವಾಗಿ ಉತ್ಪಾದನೆಯಾಗುತ್ತದೆ. ಉಳಿದಿದ್ದನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕು. ಪ್ರತಿ 50 ಕೆಜಿ ಡಿಎಪಿ ಸಾಂಪ್ರದಾಯಿಕ ಗೊಬ್ಬರಕ್ಕೆ ಅಂದಾಜು 3,800 ರೂ. ದರ ಇದೆ. ಆದರೆ ಸರ್ಕಾರ ಪ್ರತಿ ಬ್ಯಾಗ್‌ಗೆ 2500 ರೂ. ಸಬ್ಸಿಡಿ ನೀಡುವ ಮೂಲಕ ರೈತರಿಗೆ ಪ್ರತಿ ಬ್ಯಾಗ್‌ಗೆ ಕೇವಲ 1350 ರೂ. ದರ ವಿಧಿಸುತ್ತಿತ್ತು. ಪ್ರತಿ ವರ್ಷ ಸರ್ಕಾರ ರಸಗೊಬ್ಬರ ಸಬ್ಸಿಡಿಗೆಂದೇ 65,000 ಕೋಟಿ ರೂ.ಗೂ ಹೆಚ್ಚಿನ ಹಣ ವೆಚ್ಚ ಮಾಡುತ್ತಿದೆ.

ಸರ್ಕಾರಕ್ಕೆ ಏನು ಲಾಭ?

  • ರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬನೆ
  • ಭಾರಿ ಪ್ರಮಾಣದ ರಸಗೊಬ್ಬರ ಸಬ್ಸಿಡಿ ಉಳಿಕೆ
  • ಆಮದಿಗೆ ಬೇಕಾದ ವಿದೇಶಿ ವಿನಿಮಯ ಉಳಿಕೆ

ಇದನ್ನೂ ಓದಿ: ಬಿಜೆಪಿ ಸರ್ಕಾರದಲ್ಲಿ ರಾಜ್ಯ ಹೆಚ್ಚು ಅಭಿವೃದ್ಧಿ ಆಗಿದೆ; ಕಾಂಗ್ರೆಸ್ ಅವಧಿಯಲ್ಲಿ ರೈತರ ಆತ್ಮಹತ್ಯೆ ಅಧಿಕ: ನಿರ್ಮಲಾ ಸೀತಾರಾಮನ್

ರೈತರಿಗೆ ಏನು ಲಾಭ?

  • ಖರೀದಿ ವೆಚ್ಚದಲ್ಲಿ ಶೇ.50ರಷ್ಟು ಉಳಿತಾಯ
  • ಸಾಗಣೆ, ಮತ್ತಿತರೆ ನಿರ್ವಹಣೆ ವೆಚ್ಚ ಕಡಿತ
  • ವಿಷಕಾರಿಯಲ್ಲ, ಪರಿಸರಕ್ಕೆ ಹಾನಿ ಕಡಿಮೆ
  • ಉತ್ಪಾದಕತೆ ಹೆಚ್ಚಳ, ನೆಲದ ಫಲವತ್ತತೆ ಹೆಚ್ಚಳ

ಇದನ್ನೂ ಓದಿ: ಮದ್ರಸಾಗೆ ಹೋಗ್ದೆ ಹಠ ಹಿಡಿದು ಶಾಲೆ, ಕಾಲೇಜಲ್ಲಿ ಓದಿ ಈ ಗ್ರಾಮದ ಮೊದಲ ಡಾಕ್ಟರ್‌ ಎನಿಸಿಕೊಂಡ ಶೇಖ್‌ ಯೂನುಸ್‌ 

Follow Us:
Download App:
  • android
  • ios