ಎಪಿಎಂಸಿ ಆಯ್ತು, ಕೇಂದ್ರದಿಂದ ಎಸ್ಕಾಂಗಳು ಖಾಸಗಿಗೆ| ಬೆಸ್ಕಾಂ, ಜೆಸ್ಕಾಂ, ಚೆಸ್ಕಾಂ ಖಾಸಗೀಕರಣಕ್ಕೆ ಕೇಂದ್ರ ಸಜ್ಜು| ರಾಜ್ಯ ಸರ್ಕಾರದ ವಿರೋಧವಿದ್ದರೂ ಟೆಂಡರ್‌ ಕರಡು ಸಿದ್ಧ

ಬೆಂಗಳೂರು(ಸೆ.24): ಎಪಿಎಂಸಿ ಕಾಯಿದೆ ತಿದ್ದುಪಡಿ ಮೂಲಕ ಕೃಷಿ ಮಾರುಕಟ್ಟೆಸ್ಥಾಪಿಸಲು ಖಾಸಗಿಯವರಿಗೆ ಅವಕಾಶ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರೋಧದ ನಡುವೆಯೂ ವಿದ್ಯುತ್‌ ಸರಬರಾಜು ಕಂಪನಿಗಳನ್ನೂ ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಅಲ್ಲದೆ, ರಾಜ್ಯದ ಬೆಸ್ಕಾಂ, ಚೆಸ್ಕಾಂ ಹಾಗೂ ಗುಲ್ಬರ್ಗಾ ವಿದ್ಯುತ್‌ ಪೂರೈಕೆ ಕಂಪನಿಗಳನ್ನು ಖಾಸಗೀಕರಣಗೊಳಿಸಲು ಟೆಂಡರ್‌ ಬಿಡ್‌ನ ಕರಡು ಸಿದ್ಧಪಡಿಸಿದೆ.

Add Asianetnews Kannada as a Preferred SourcegooglePreferred

HALನ ಶೇ.15ರಷ್ಟು ಪಾಲು ಮಾರಾಟ ಮಾಡಲು ಮುಂದಾದ ಕೇಂದ್ರ!

ಒಂದು ವೇಳೆ ರಾಜ್ಯ ಸರ್ಕಾರ ಬೆಂಗಳೂರು ವಿದ್ಯುತ್‌ ಸರಬರಾಜು ನಿಗಮ, ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ಹಾಗೂ ಗುಲ್ಬರ್ಗಾ ವಿದ್ಯುತ್‌ ಸರಬರಾಜು ನಿಗಮಗಳ ವಿದ್ಯುತ್‌ ಪೂರೈಕೆಯನ್ನು ಖಾಸಗಿಗೆ ವಹಿಸಲು ಒಪ್ಪಿಗೆ ನೀಡಿದರೆ ರಾಜ್ಯದ 19 ಜಿಲ್ಲೆಗಳ ವ್ಯಾಪ್ತಿಯ ವಿದ್ಯುತ್‌ ಪೂರೈಕೆ ವ್ಯವಸ್ಥೆ ಖಾಸಗಿ ಕೈಗಳಿಗೆ ಹೋಗಲಿದೆ.

ರಾಜ್ಯದ ಎಸ್ಕಾಂಗಳನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರವು 2015ರಲ್ಲೇ ಪ್ರಸ್ತಾವನೆ ಸಲ್ಲಿಸಿದ್ದರೂ ಅಂದಿನ ರಾಜ್ಯ ಸರ್ಕಾರ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಬಳಿಕ ಆರು ತಿಂಗಳ ಹಿಂದೆ ವಿದ್ಯುತ್‌ ಕಾಯಿದೆ -2020ರ ಕರಡಿನಲ್ಲೂ ರಾಜ್ಯದ ಎಸ್ಕಾಂಗಳನ್ನು ಖಾಸಗೀಕರಣಗೊಳಿಸಲು ಪ್ರಸ್ತಾಪ ಮಾಡಿತ್ತು. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಮೊದಲು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜು ವ್ಯವಸ್ಥೆಯನ್ನು ಖಾಸಗೀಕರಣಗೊಳಿಸಿ. ಅಲ್ಲಿನ ವ್ಯವಸ್ಥೆ ಯಶಸ್ವಿಯಾದರೆ ಬಳಿಕ ನಮ್ಮಲ್ಲಿ ಅನುಷ್ಠಾನಗೊಳಿಸಲು ಚಿಂತಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದರು.

ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿಗೂ ಅವಕಾಶ, ಕೇಂದ್ರ ಸಂಪುಟದಿಂದ ಐತಿಹಾಸಿಕ ನಿರ್ಧಾರ!

ಇದರ ನಡುವೆಯೂ ವಿದ್ಯುತ್‌ ಸರಬರಾಜು ಕಂಪನಿಗಳನ್ನು ಖಾಸಗೀಕರಣಗೊಳಿಸಲು ಸೆ.20 ರಂದು ಕೇಂದ್ರ ಇಂಧನ ಇಲಾಖೆಯು ‘ಸ್ಟಾಂಡರ್ಡ್‌ ಬಿಡ್ಡಿಂಗ್‌ ಡಾಕ್ಯುಮೆಂಟ್‌ ಫಾರ್‌ ಪ್ರೈವೆಟೈಸೇಷನ್‌ ಆಫ್‌ ಡಿಸ್ಟ್ರಿಬ್ಯೂಷನ್‌ ಲೈಸೆನ್ಸೀಸ್‌’ ಹೆಸರಿನಲ್ಲಿ ಕರಡು ಸಿದ್ಧಪಡಿಸಿದೆ. ಅಲ್ಲದೆ, ಕರ್ನಾಟಕದ ಮೂರು ಎಸ್ಕಾಂಗಳನ್ನು ಇದರಡಿ ಖಾಸಗೀಕರಣಗೊಳಿಸಲು ರಾಜ್ಯ ಸರ್ಕಾರದ ಅಭಿಪ್ರಾಯ ಕೇಳಿದೆ ಎಂದು ತಿಳಿದುಬಂದಿದೆ.

ರಾಜ್ಯ ಇಂಧನ ಇಲಾಖೆ ಮೂಲಗಳ ಪ್ರಕಾರ, ರಾಜ್ಯ ಸರ್ಕಾರ ಈ ಬಾರಿಯೂ ಖಾಸಗೀಕರಣಕ್ಕೆ ಆಕ್ಷೇಪ ವ್ಯಕ್ತಪಡಿಸಲಿದೆ ಎನ್ನಲಾಗಿದೆ.

ಎಸ್ಕಾಂಗಳ ಖಾಸಗೀಕರಣಕ್ಕೆ ವಿದ್ಯುತ್‌ ಮಸೂದೆ ಕರಡಿನಲ್ಲೇ ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿತ್ತು. ಈ ಹಂತದಲ್ಲಿ ನಮ್ಮ ಎಸ್ಕಾಂಗಳನ್ನು ಖಾಸಗೀಕರಣ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದೆವು. ಅಲ್ಲದೆ ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಯೋಗ ಯಶಸ್ವಿಯಾದರೆ ಬಳಿಕ ಯೋಚಿಸುತ್ತೇವೆ ಎಂದು ಹೇಳಿದ್ದೆವು. ಇದೀಗ ಮತ್ತೆ ಬಿಡ್ಡಿಂಗ್‌ ಡಾಕ್ಯುಮೆಂಟ್‌ ಕರಡು ಹೊರಡಿಸಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕೇಂದ್ರಕ್ಕೆ ಅಭಿಪ್ರಾಯ ಕಳುಹಿಸುತ್ತೇವೆ.

- ಮಹೇಂದ್ರ ಜೈನ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ

ಆರ್ಥಿಕ ಪ್ಯಾಕೇಜ್‌ನ ಕೊನೆಯ ಕಂತಿನಲ್ಲಿ ಏಳು ಪ್ರಮುಖ ಘೋಷಣೆ!

ಎಸ್ಕಾಂಗಳು ಹಾಗೂ ವ್ಯಾಪ್ತಿ

ಬೆಸ್ಕಾಂ (ಬೆಂಗಳೂರು): ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ, ತುಮಕೂರು, ಚಿತ್ರದುರ್ಗ, ರಾಮನಗರ

ಚೆಸ್ಕಾಂ (ಚಾಮುಂಡೇಶ್ವರಿ-ಮೈಸೂರು) : ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರು

ಜೆಸ್ಕಾಂ (ಗುಲ್ಬರ್ಗಾ) : ಬಳ್ಳಾರಿ, ಬೀದರ್‌, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ