Asianet Suvarna News Asianet Suvarna News

Digital Economy `5 ವರ್ಷಗಳಲ್ಲಿ 400 ಶತಕೋಟಿ ಡಾಲರ್ ಡಿಜಿಟಲ್ ಆರ್ಥಿಕತೆಯ ಗುರಿ’

*`5 ವರ್ಷಗಳಲ್ಲಿ 400 ಶತಕೋಟಿ ಡಾಲರ್ ಡಿಜಿಟಲ್ ಆರ್ಥಿಕತೆಯ ಗುರಿ’ 
* ಖಾಸಗಿ ಕಾಲೇಜುಗಳನ್ನು ವಿಶ್ವ ಮಟ್ಟಕ್ಕೆ ಸುಧಾರಿಸುವ `ಸೂಪರ್-30’ ಯೋಜನೆ
* ಬೆಳಗಾವಿ ಸಿಇಒ ಶೃಂಗಸಭೆಯಲ್ಲಿ ಸಚಿವ ಡಾ.ಅಶ್ವತ್ಥನಾರಾಯಣ ಹೇಳಿಕೆ

400 billion dollar digital economy target in 5 years Says Ashwath Narayan rbj
Author
Bengaluru, First Published Jan 5, 2022, 11:21 PM IST

ಬೆಳಗಾವಿ, (ಜ.05): ರಾಜ್ಯದ ಎಲ್ಲ ಭಾಗಗಳಲ್ಲೂ ಸಮಾನವಾಗಿ ಉದ್ಯಮಗಳನ್ನು ಬೆಳೆಸುವ ಮೂಲಕ ಮುಂದಿನ ಐದು ವರ್ಷಗಳಲ್ಲಿ 400 ಶತಕೋಟಿ ಡಾಲರ್ ಮೌಲ್ಯದ ಡಿಜಿಟಲ್ ಆರ್ಥಿಕತೆಯನ್ನು ಬೆಳೆಸುವ ಗುರಿಯನ್ನು ಸರಕಾರ ಇಟ್ಟುಕೊಂಡಿದೆ ಎಂದು ಐಟಿ, ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ (Dr CN Ashwath Narayan) ಹೇಳಿದ್ದಾರೆ. 

ಕರ್ನಾಟಕ ಡಿಜಿಟಲ್ ಎಕಾನಮಿ (karnataka Digital Economy) ಮಿಷನ್ (ಕೆ-ಡಿಇಎಂ) `ಬಿಯಾಂಡ್ ಬೆಂಗಳೂರು’ ಉಪಕ್ರಮದ ಅಂಗವಾಗಿ ಮಂಗಳವಾರ ಇಲ್ಲಿ ಏರ್ಪಡಿಸಿದ್ದ `ಸಿಇಓಗಳ ದುಂಡುಮೇಜಿನ ಶೃಂಗಸಭೆ’ಯಲ್ಲಿ ಮಾತನಾಡಿದ ಅವರು, `ಬೆಳಗಾವಿಯು(Belagavi) ಉದ್ಯಮಶೀಲತೆ, ಶೈಕ್ಷಣಿಕ ಸಂಸ್ಕೃತಿ ಮತ್ತು ಹಿತಕರ ಹವಾಮಾನ ಮೂರಕ್ಕೂ ಹೆಸರಾಗಿದೆ. ಇಲ್ಲಿ ಉದ್ದಿಮೆಗಳನ್ನು ಸಮೃದ್ಧವಾಗಿ ಪೂರ್ಣಪ್ರಮಾಣದಲ್ಲಿ ಬೆಳೆಸಲಾಗುವುದು’ ಎಂದರು. 

Business: ವಿದ್ಯುನ್ಮಾನ ಉದ್ಯಮಕ್ಕೆ ರಾಜ್ಯ ಅತ್ಯುತ್ತಮ ತಾಣ: ಅಶ್ವತ್ಥನಾರಾಯಣ

ಪ್ರಧಾನಿ ನರೇಂದ್ರ ಮೋದಿ(Narendra Modi) ದೂರದೃಷ್ಟಿಯಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ಘೋಷಿಸಿದ್ದು, ರಾಜ್ಯದಲ್ಲಿ ಇದು ಪೂರ್ವ ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಜಾರಿಗೆ ಬರುತ್ತಿದೆ. ಈಗಾಗಲೇ ಎಂಜಿನಿಯರಿಂಗ್, ಡಿಪ್ಲೊಮಾ, ಐಟಿಐ ಮತ್ತು ಪದವಿ ಹಂತಗಳಲ್ಲಿ ಜಾಗತಿಕ ಗುಣಮಟ್ಟದ ಬೋಧನೆಯನ್ನು ಅಳವಡಿಸಿಕೊಂಡಿದ್ದು, ಉದ್ದಿಮೆಗಳ ಬೇಡಿಕೆಗೆ ತಕ್ಕಂತೆ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಹೇರಳವಾಗಿ ಲಭ್ಯವಾಗಲಿದೆ ಎಂದು ಅವರು ನುಡಿದರು. 

ರಾಜ್ಯದಲ್ಲಿ ಸರಕಾರಿ ಎಂಜಿನಿಯರಿಂಗ್ ಮತ್ತು ಇವು ಇಲ್ಲದ ಕಡೆಗಳಲ್ಲಿ ಖಾಸಗಿ ಕಾಲೇಜುಗಳನ್ನು ವಿಶ್ವ ಮಟ್ಟಕ್ಕೆ ಸುಧಾರಿಸುವ `ಸೂಪರ್-30’ ಯೋಜನೆಯನ್ನು ರೂಪಿಸಲಾಗಿದೆ. ಇದರ ಜತೆಗೆ ಎಂಜಿನಿಯರಿಂಗ್ ಕಾಲೇಜುಗಳು ವಿಶ್ವದ ಯಾವುದೇ ಅತ್ಯುತ್ತಮ ಶಿಕ್ಷಣ ಸಂಸ್ಥೆ ಮತ್ತು ಉದ್ದಿಮೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವುದನ್ನು ಉತ್ತೇಜಿಸಲಾಗುತ್ತಿದೆ. ಇದು ಸಮಾಜದಲ್ಲಿ ಪರಿವರ್ತನೆಯನ್ನು ತರಲಿದ್ದು, ಜಾಗತಿಕ ಮಟ್ಟದ ನಾಯಕತ್ವವನ್ನು ಸೃಷ್ಟಿಸಲಿದೆ’ ಎಂದು ಅವರು ವಿವರಿಸಿದರು. 

ಬೆಳಗಾವಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕೇಂದ್ರ ಕಚೇರಿ ಇದೆ. ಈ ವಿಶ್ವವಿದ್ಯಾಲಯವನ್ನು ಐಐಎಸ್ಸಿ ಮತ್ತು ಐಐಟಿಗಳ ಮಟ್ಟಕ್ಕೆ ಬೆಳೆಸಿ, ಉತ್ಕೃಷ್ಟ (ಆಂಕರ್) ಸಂಸ್ಥೆಯನ್ನಾಗಿ ಮಾಡಲಾಗುವುದು. ಇದಕ್ಕಾಗಿ ಈಗಾಗಲೇ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ ಎಂದು ಸಚಿವರು ಹೇಳಿದರು. 

ರಾಜ್ಯದ ಎಲ್ಲ ಭಾಗಗಳೂ ಸಮಾನವಾಗಿ ಬೆಳವಣಿಗೆ ಸಾಧಿಸಬೇಕೆನ್ನುವ ಮಹತ್ವಾಕಾಂಕ್ಷೆಯಿಂದಲೇ `ಬಿಯಾಂಡ್ ಬೆಂಗಳೂರು’ ಉಪಕ್ರಮವನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಉದ್ದಿಮೆಗಳು ಬೆಂಗಳೂರಿನಲ್ಲಿ ಮಾತ್ರವೇ ನೆಲೆಗೊಳ್ಳಬಾರದು ಎನ್ನುವುದು ಇದರ ಉದ್ದೇಶವಾಗಿದೆ. ಇದಕ್ಕಾಗಿ ಹುಬ್ಬಳ್ಳಿ, ಮೈಸೂರು ಮತ್ತು ಮಂಗಳೂರು ಕ್ಲಸ್ಟರ್ ಗಳನ್ನು ಮಾಡಲಾಗಿದ್ದು, ಬೆಳಗಾವಿಯಲ್ಲಿ ಕೂಡ ಉದ್ಯಮಗಳ ಸ್ಥಾಪನೆಗೆ ಎಲ್ಲ ನೆರವನ್ನೂ ಸರಕಾರ ನೀಡಲಿದೆ ಎಂದು ಅಶ್ವತ್ಥನಾರಾಯಣ ನುಡಿದರು. 

ಕಾರ್ಯಕ್ರಮದಲ್ಲಿ ವಿದ್ಯುನ್ಮಾನ ಮತ್ತು ಐಟಿ, ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಐಟಿ‌ ನಿರ್ದೇಶಕಿ‌ ಮೀನಾ ನಾಗರಾಜ, ಕೆ-ಡಿಇಎಂ ಮುಖ್ಯಸ್ಥ ಬಿ.ವಿ.ನಾಯ್ಡು, ಉದ್ಯಮಿಗಳಾದ ಸುನೀಲ್ ದೇಶಪಾಂಡೆ, ಜಯಂತ್ ಹುಂಬರವಾಡಿ, ರಾಜೇಂದ್ರ ಬೆಳಗಾಂವ್ಕರ್, ಚೈತನ್ಯ ಕುಲಕರ್ಣಿ, ಎನ್.ಜಿ.ಸುಬ್ರಹ್ಮಣ್ಯಂ, ವೆಂಕಟೇಶ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.

ವಿದ್ಯುನ್ಮಾನ ಮತ್ತು ಅದಕ್ಕೆ ಪೂರಕವಾಗಿರುವ ಇತರ ಉದ್ದಿಮೆಗಳಿಗೆ ರಾಜ್ಯವು ಪ್ರಶಸ್ತ ತಾಣವಾಗಿದ್ದು, ಇವುಗಳ ಬೆಳವಣಿಗೆಗೆ ಸರಕಾರವು ರಚನಾತ್ಮಕ ನೀತಿಗಳನ್ನು ರೂಪಿಸಿದೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ’ದಲ್ಲಿ `ಎಲೆಕ್ಟ್ರಾನಿಕ್ & ಪ್ರಾಡಕ್ಟಾನಿಕಾ ಇಂಡಿಯಾ-2021’ ಪ್ರದರ್ಶನ ಮತ್ತು ವಾಣಿಜ್ಯ ಮೇಳವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಮೇಳಗಳು ಉದ್ಯಮಗಳನ್ನು ಸಮಗ್ರವಾಗಿ ಬೆಳೆಸಲು ದೊಡ್ಡ ಶಕ್ತಿಯಾಗಿ ಕೆಲಸ ಮಾಡಲಿವೆ ಎಂದರು.

Follow Us:
Download App:
  • android
  • ios