ಬೆಂಗಳೂರಿನ ವಾಸ್ತು ತಜ್ಞ ಶಾಂತಕುಮಾರ್ ವಿರುದ್ಧ ಗರ್ಭಿಣಿಯೊಬ್ಬರು ಲೈಂಗಿಕ ದೌರ್ಜನ್ಯದ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ, ಶಾಂತಕುಮಾರ್ ಅವರು ಆ ಮಹಿಳೆ 'ವಸೂಲಿ ಗ್ಯಾಂಗ್'ನ ಭಾಗವಾಗಿದ್ದು, ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡಿ, ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ.
ಬೆಂಗಳೂರು (ಏ.18): ರಾಜಧಾನಿಯ ವಿಜಯನಗರದಲ್ಲಿರುವ 'ಶ್ರೀ ಅನಂತ್ ಮೆಡಿಕಲ್ ಸಲ್ಯೂಷನ್ಸ್' ಎಂಬ ವಾಸ್ತು ಕೇಂದ್ರ ಈಗ ಪರಸ್ಪರ ದೂರು-ಪ್ರತಿದೂರುಗಳ ಸಮರಕ್ಕೆ ಸಾಕ್ಷಿಯಾಗಿದೆ. ಗರ್ಭಿಣಿ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ದೂರು ನೀಡಿದ್ದರೆ, ಎದುರು ಪಕ್ಷದವರು ಆಕೆ 'ವಸೂಲಿ ಗ್ಯಾಂಗ್' ಸದಸ್ಯೆ ಎಂದು ಎಫ್ಐಆರ್ ದಾಖಲಿಸಿದ್ದಾರೆ. ಸಂತ್ರಸ್ತೆ ಎನ್ನಲಾದ ಲತಾ ಎಂಬುವವರು ತಮ್ಮ ಮನೆಯ ವಾಸ್ತು ಕೇಳಲು ಈ ತಿಂಗಳ 4ನೇ ತಾರೀಖಿನಂದು ಶಾಂತಕುಮಾರ್ ಎಂಬುವವರ ಕಚೇರಿಗೆ ಹೋಗಿದ್ದರು. ಈ ವೇಳೆ ಶಾಂತಕುಮಾರ್ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಾಸ್ತು ಹೇಳುವ ನೆಪದಲ್ಲಿ ಶಾಂತಕುಮಾರ್ ಅವರು ಗರ್ಭಿಣಿ ಲತಾ ಅವರ ಹೊಟ್ಟೆ ಹಾಗೂ ಎದೆಯ ಭಾಗವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ ಅಲ್ಲಿನ ಸಿಬ್ಬಂದಿ ಹಾಗೂ ಶಾಂತಕುಮಾರ್ ಪತ್ನಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ವಾಸ್ತು ಸಲಹೆಗಾಗಿ ಶಾಂತಕುಮಾರ್ ಈಗಾಗಲೇ 15 ಸಾವಿರ ರೂಪಾಯಿ ಹಣ ಪಡೆದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಲತಾ ನೀಡಿದ ದೂರಿನ ಮೇರೆಗೆ ಗೋವಿಂದರಾಜನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇವರದ್ದು ವಸೂಲಿ ಗ್ಯಾಂಗ್ ಎಂದ ವಾಸ್ತುತಜ್ಞ ಶಾಂತರಾಜು
ಈ ಬೆನ್ನಲ್ಲೇ ವಾಸ್ತು ಕೇಂದ್ರದ ಮಾಲೀಕ ಶಾಂತರಾಜು ಅವರು ಲತಾ ಹಾಗೂ ಆಕೆಯ ಗ್ಯಾಂಗ್ ವಿರುದ್ಧ ಪ್ರತಿಯಾಗಿ ದೂರು ನೀಡಿದ್ದು, ಇದು ದೊಡ್ಡ ಮಟ್ಟದ ವಸೂಲಿ ಜಾಲ ಎಂದು ಆರೋಪಿಸಿದ್ದಾರೆ. ಲತಾ, ಜಮಾಲ್ ಮತ್ತು ಅಮೃತ ಲಿಂಗಂ ಎಂಬ ಮೂವರು ಕಚೇರಿಗೆ ಬಂದು ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ನಾವು ಒಪ್ಪದಿದ್ದಾಗ ಹಲ್ಲೆ ನಡೆಸಿ ಅಸಭ್ಯವಾಗಿ ವರ್ತಿಸಿದ್ದಾರೆ. ಶಾಂತರಾಜು ಅವರ ಪತ್ನಿ ಶೋಭಾ ರಾಣಿ ಬಿಡಿಸಲು ಬಂದಾಗ ಅವರ ಮೇಲೆಯೂ ಜಮಾಲ್ ಮತ್ತು ಅಮೃತಲಿಂಗಂ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಲತಾ ಎಂಬಾಕೆ ತಾನು 'ದಲಿತ್ ವಾಯ್ಸ್' ಸಂಘಟನೆಯವಳು ಹಾಗೂ ಪೊಲೀಸ್ ಎಂದು ಬೆದರಿಸಿದ್ದರೆ, ಅಮೃತಲಿಂಗಂ ತಾನು ಪ್ರೆಸ್ ಮತ್ತು ಮೀಡಿಯಾದವನೆಂದು ಹೇಳಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಇಲ್ಲದಿದ್ದರೆ ಮಾನ ಹರಾಜು ಹಾಕುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದೆ.
ಮೊಬೈಲ್ ಲೂಟಿ ಹಾಗೂ ಕಿಡ್ನಾಪ್ ಯತ್ನ
ಶಾಂತರಾಜು ಅವರ ಬಳಿಯಿದ್ದ ಸುಮಾರು 1 ಲಕ್ಷ ರೂ. ಬೆಲೆಯ ಸ್ಯಾಮ್ಸಂಗ್ S-23 ಅಲ್ಟ್ರಾ ಮೊಬೈಲ್ ಫೋನನ್ನು ಈ ಗ್ಯಾಂಗ್ ಕಿತ್ತುಕೊಂಡಿದೆ. ಅಲ್ಲದೆ, ಶಾಂತರಾಜು ಮತ್ತು ಅವರ ಪತ್ನಿಯನ್ನು ಬಲವಂತವಾಗಿ ಆಟೋದಲ್ಲಿ ಕುಳ್ಳಿರಿಸಿಕೊಂಡು ಜಯನಗರದ ಕಡೆಗೆ ಅಪಹರಿಸಲು ಯತ್ನಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
"ಬಟ್ಟೆ ಬಿಚ್ಚಿಕೊಂಡು ದೂರು ನೀಡುವೆ":
ಆಟೋದಲ್ಲಿ ಕರೆದೊಯ್ಯುವಾಗ ಲತಾ ಎಂಬಾಕೆ, "ನನ್ನ ಬಟ್ಟೆಯನ್ನು ನಾನೇ ಬಿಚ್ಚಿಕೊಂಡು, ನೀನೇ ನನ್ನ ಮೇಲೆ ದೌರ್ಜನ್ಯ ಮಾಡಿದೆ ಎಂದು ದೂರು ನೀಡಿ ನಿನ್ನ ಮಾನ ಕಳೆಯುತ್ತೇನೆ" ಎಂದು ಬೆದರಿಕೆ ಹಾಕಿದ್ದಾಳೆ ಎಂದು ಶಾಂತರಾಜು ದೂರಿನಲ್ಲಿ ತಿಳಿಸಿದ್ದಾರೆ. ದಾರಿಯುದ್ದಕ್ಕೂ ಹಲ್ಲೆ ನಡೆಸುತ್ತಿದ್ದಾಗ ಕಿರುಚಿಕೊಂಡ ಶಾಂತರಾಜು, ಆಟೋ ನಿಲ್ಲಿಸಿದ ತಕ್ಷಣ ಅಲ್ಲಿಂದ ತಪ್ಪಿಸಿಕೊಂಡು ಬಂದು ಪೊಲೀಸರ ಮೊರೆ ಹೋಗಿದ್ದಾರೆ.
ಒಂದೆಡೆ ಲೈಂಗಿಕ ದೌರ್ಜನ್ಯದ ಆರೋಪ, ಇನ್ನೊಂದೆಡೆ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮತ್ತು ಕಿಡ್ನಾಪ್ ಆರೋಪ. ಇಬ್ಬರ ದೂರಿನ ಮೇರೆಗೆ ಗೋವಿಂದರಾಜನಗರ ಪೊಲೀಸರು ಪರಸ್ಪರ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಲತಾ ನಿಜಕ್ಕೂ ಸಂತ್ರಸ್ತೆಯೇ ಅಥವಾ ವಸೂಲಿ ಗ್ಯಾಂಗ್ನ ಭಾಗವೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ.


