ಮೊದಲ ಶಾಲು, ಹಾರ ಪಡೆದ ಕ್ಷಣವನ್ನು ಮನದುಂಬಿಕೊಂಡ ಹಿರಿಯ ಚೇತನ ವೆಂಕಟೇಶ್ ಭಟ್
88 ವರ್ಷಗಳನ್ನು ಪೂರೈಸಿದರೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ವೆಂಕಟೇಶ್ ಭಟ್ ಅವರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಸನ್ಮಾನ ಮಾಡಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದು ಆಗಸ್ಟ್ 15, 2022 ರಂದು ಅಂದರೆ ನಿನ್ನೆಗೆ 75 ವರ್ಷಗಳು ತುಂಬಿದೆ. ಈ ಹಿನ್ನೆಲೆ, ಅಮೃತ ಸ್ವಾತಂತ್ರ್ಯದ ಸಂದರ್ಭದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) (Karnataka Union of Working Journalists) ಹಮ್ಮಿಕೊಂಡಿರುವ ಹಿರಿಯ ಪತ್ರಕರ್ತರಿಗೆ (Journalists) ಗೌರವ ಸಮರ್ಪಣೆ ಮಾಡುವ ಮನೆಯಂಗಳದಲ್ಲಿ ಮನದುಂಬಿ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ, 88 ವರ್ಷಗಳನ್ನು ಪೂರೈಸಿದ ವೆಂಕಟೇಶ್ ಭಟ್ (ಪಾಟಣಕರ್) ಅವರನ್ನು ಬೆಂಗಳೂರಿನ ಜೆ.ಪಿ ನಗರದ ಅವರ ಮನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಶಾಲು ಹೊದಿಸಿ, ಹಾರ ಹಾಕಿ ಗೌರವಿಸಿದರು.
ಸಂಯುಕ್ತ ಕರ್ನಾಟಕ ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ (Journalism) ಕಾಲಿರಿಸಿ ಮೂರೂವರೆ ದಶಕಗಳ ಕಾಲ ಒಂದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಶೃಂಗೇರಿ ಮೂಲದ ವೆಂಕಟೇಶ್ ಭಟ್ ಅವರದು. ಇನ್ನು, 1992 ರಲ್ಲಿ ಇವರು ನಿವೃತ್ತಿ ಹೊಂದಿದರೂ ಸಹ ಅವರ ವೃತ್ತಿ ಬದುಕನ್ನು ಈಗಲೂ ಹಾಗೆಯೇ ಮುಂದುವರಿಸಿದ್ದಾರೆ. ಈ ಇಳಿ ವಯಸ್ಸಿನಲ್ಲೂ ವೆಂಕಟೇಶ ಭಟ್ ಅವರು ಪ್ರೂಫ್ ರೀಡ್ ಮಾಡಿಕೊಡುವುದನ್ನು ಮಾತ್ರ ನಿಲ್ಲಿಸಿಲ್ಲ.
ಇದನ್ನು ಓದಿ: Gadag: ಗಾಂಧಿ ತಾತನಿಗೆ ಊಟ ಉಪಚಾರ ಮಾಡಿದ್ದ ಪೋರಿ ಈಗ ಶತಾಯುಷಿ ಅಜ್ಜಿ
ವೃತ್ತಿ ಜೀವನದಲ್ಲಿ ಸಿಕ್ಕ ಮೊದಲ ಶಾಲು ಎಂದು ಭಾವುಕರಾದ ವೆಂಕಟೇಶ್ ಭಟ್
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಗೌರವ ಸ್ವೀಕರಿಸಿದ ವೆಂಕಟೇಶ್ ಭಟ್ ಅವರು ‘’ನನ್ನ ವೃತ್ತಿ ಜೀವನದಲ್ಲಿ ನನಗೆ ಸಿಕ್ಕ ಮೊದಲ ಶಾಲು ಇದು’’ ಎಂದು ಭಾವುಕರಾದರು. ಅಲ್ಲದೆ, ನಾನು ಎಂದಿಗೂ ಯಾರನ್ನೂ ಬೇಡಿದವನಲ್ಲ. ಸ್ವಾಭಿಮಾನದಿಂದ ಬದುಕನ್ನು ಬದುಕಿದವನು. ಕೆಯುಡಬ್ಲ್ಯೂಜೆ ಅಧ್ಯಕ್ಷರು, ಮನೆಗೆ ಬಂದು ನನ್ನ ಗೌರವಿಸಿರುವುದು ರಾಜ್ಯೋತ್ಸವ ಪ್ರಶಸ್ತಿ ಬಂದಷ್ಟು ಸಂತಸ ತಂದಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಸಾರ್ಥಕ ಕ್ಷಣಕ್ಕೆ ಅವರ ಪತ್ನಿ, ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಇಡೀ ಕುಟುಂಬ ಸಾಕ್ಷಿಯಾಗಿತ್ತು.ಅಲ್ಲದೆ, ಈ ವೇಳೆ ಬೆಂಗಳೂರು ನಗರ ಘಟಕದ ಸೋಮಶೇಖರ್ ಗಾಂಧಿ, ದೇವರಾಜು ಸಹ ಹಾಜರಿದ್ದರು.
ಇದನ್ನೂ ಓದಿ: ಕೋವಿಡ್ ವಾರಿಯರ್ಗಳಿಗೆ ಸನ್ಮಾನಿಸಿ ಗೌರವಿಸಿದ 'ನಮ್ಮ ಬೆಂಗಳೂರು ಪ್ರತಿಷ್ಠಾನ'