ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಯು ಹಲವು ಪರೀಕ್ಷೆಗಳಲ್ಲಿ ಯಶಸ್ವಿಯಾಗಿದ್ದು, ಇದೀಗ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ಸದೃಢವಾಗಿದೆ. ಮುಂಬೈ ಮೂಲದ ಕಂಪನಿಯು ನಡೆಸಿದ 'ಲೋಡ್ ಟೆಸ್ಟಿಂಗ್' ವರದಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಿದ ನಂತರ, ಸಂಚಾರ ಪುನರಾರಂಭದ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ.
ಬೆಂಗಳೂರು: ತುಮಕೂರು ರಸ್ತೆಯ ಪೀಣ್ಯ ಫ್ಲೈಓವರ್ (ಮೇಲ್ಸೇತುವೆ) ಸದೃಢವಾಗಿದ್ದು ಎಲ್ಲ ಬಗೆಯ ವಾಹನಗಳ ಸಂಚಾರಕ್ಕೂ ಶಕ್ತವಾಗಿದೆ. ಇದನ್ನು ಶೀಘ್ರದಲ್ಲೇ ಅಧಿಕೃತವಾಗಿ ಘೋಷಣೆ ಮಾಡಲಾಗುವುದು.
ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶವಾದ ಪೀಣ್ಯದ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಬರುವ ಫ್ಲೈಓವರ್ (ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಇದಾಗಿದ್ದು, 2021ರ ಡಿಸೆಂಬರ್ನಿಂದ ಒಂದಲ್ಲಾ ಒಂದು ಕಾರಣಕ್ಕಾಗಿ ಸದಾ ಸುದ್ದಿಯಾಗುತ್ತಿತ್ತು. ಹಲವು ಕ್ರಮಗಳನ್ನು ಕೈಗೊಂಡ ಬಳಿಕ ಇದೀಗ ಈ ಮೇಲ್ಸೇತುವೆ ವಾರದ ಎಲ್ಲಾ ದಿನವೂ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ಸದೃಢವಾಗಿರುವುದು ಖಚಿತವಾಗಿದೆ.
ಲೋಡ್ ಟೆಸ್ಟಿಂಗ್ ಸೇರಿದಂತೆ ಹಲವು ವಿಧದ ಪರೀಕ್ಷೆಯಲ್ಲಿ ಮೇಲ್ಸೇತುವೆಯು ‘ಪಾಸ್’ ಆಗಿದ್ದು ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ. ಈ ಸಂಬಂಧ ಕಾಮಗಾರಿ ಗುತ್ತಿಗೆ ಪಡೆದಿದ್ದ ಕಂಪನಿಯು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್ಎಚ್ಎಐ)ಕ್ಕೆ ಶೀಘ್ರ ವರದಿ ಸಲ್ಲಿಸಲಿದೆ. ವರದಿ ಸಲ್ಲಿಕೆಯಾದ ಬಳಿಕ ಮೇಲ್ಸೇತುವೆಯ ಸದೃಢತೆಯ ಬಗ್ಗೆ ಎನ್ಎಚ್ಎಐ ಅಧಿಕಾರಿಗಳು ಅಧಿಕೃತವಾಗಿ ಹೇಳಿಕೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
2021 ರಲ್ಲಿ ಕಾಣಿಸಿಕೊಂಡಿದ್ದ ಸಮಸ್ಯೆ
ಭಾರೀ ವಾಹನಗಳು ಅಧಿಕ ತೂಕದೊಂದಿಗೆ ಮೇಲ್ಸೇತುವೆಯಲ್ಲಿ ಸಂಚರಿಸಿದ್ದರಿಂದ ಎಂಟನೇ ಮೈಲಿ ಜಂಕ್ಷನ್ ಸಮೀಪ 102 ಮತ್ತು 103 ನೇ ಪಿಲ್ಲರ್ ನಡುವೆ ಎರಡು ಕೇಬಲ್ಗಳು 2021 ಡಿಸೆಂಬರ್ ಕೊನೆಯ ವಾರದಲ್ಲಿ ಬಾಗಿದ್ದರಿಂದ ಸಮಸ್ಯೆ ಉಂಟಾಗಿತ್ತು. ಮುಂಬೈನ್ ಪ್ರೆಸಿನೇಟ್ ಕಂಪೆನಿಗೆ ಗುತ್ತಿಗೆ ಕಾಮಗಾರಿ ವಹಿಸಿದ್ದು ಮೊದಲಿಗೆ 120 ಪಿಲ್ಲರ್ ನಡುವೆ ತಲಾ ಎರಡರಂತೆ ಹೊಸದಾಗಿ 240 ಕೇಬಲ್ಗಳನ್ನು ಅಳವಡಿಸಲಾಗಿತ್ತು.
ಇದನ್ನೂ ಓದಿ: ಆಗಸ್ಟ್ 15ರಿಂದ ಹೊಸ 6 ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸಂಚಾರ ನಿರೀಕ್ಷೆ; 7.5 ಕಿ.ಮೀ ಉದ್ದದ ಮಾರ್ಗ
ಬಳಿಕ ಪ್ರತಿ ಪಿಲ್ಲರ್ನ ತಲಾ 10 ಕೇಬಲ್ನಂತೆ 1200 ಕೇಬಲ್ಗಳನ್ನೂ ಬದಲಾಯಿಸಿ ಮೇಲ್ಸೇತುವೆಯನ್ನು ಸದೃಢಗೊಳಿಲಾಗಿತ್ತು. ಮೇಲ್ಸೇತುವೆಯು ಭಾರ ತಡೆಯುವ ಸಾಮರ್ಥ್ಯ ಹೊಂದಿದೆಯೇ ಎಂದು ತಲಾ 30 ಟನ್ ತೂಕದ 6 ಟ್ರಕ್ಗಳನ್ನು ಸಿದ್ಧಪಡಿಸಿಕೊಂಡು ಮೇ 5 ರಿಂದ ನಾಲ್ಕು ದಿವಸ ಹಂತಹಂತವಾಗಿ ಮೇಲ್ಸೇತುವೆಯ ಮೇಲೆ ಟ್ರಕ್ಗಳನ್ನು ನಿಲ್ಲಿಸಿ ‘ಲೋಡ್ ಟೆಸ್ಟಿಂಗ್’ ನಡೆಸಿದ್ದು ಇದರಲ್ಲಿ ‘ಪಾಸ್’ ಆಗಿದೆ.
ಇದನ್ನೂ ಓದಿ: ಬೆಂಗಳೂರಿಗೆ ಬಿಗ್ ಗಿಫ್ಟ್: ಈ ರಸ್ತೆಲಿ 10.3 ಕಿ.ಮೀ ಉದ್ದದ ಬೃಹತ್ ಸೈಕ್ಲಿಂಗ್ ಕಾರಿಡಾರ್ ಜೂ.27ಕ್ಕೆ ಲೋಕಾರ್ಪಣೆ?


