ಹೋಳಿ ಹುಣ್ಣಿಮೆಯಂದು ವರ್ಷದ ಮೊದಲ ರಕ್ತ ಚಂದ್ರಗ್ರಹಣ ಸಂಭವಿಸಲಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಮುಖ ದೇವಾಲಯಗಳ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಗ್ರಹಣ ಮೋಕ್ಷದ ನಂತರ, ದೇವಾಲಯಗಳಲ್ಲಿ ಶುದ್ಧೀಕರಣ ಕಾರ್ಯಗಳನ್ನು ನಡೆಸಿ, ವಿಶೇಷ ಪೂಜೆ ಹಾಗೂ ಹೋಮಗಳನ್ನು ಆಯೋಜಿಸಲಾಗುವುದು.

ಬೆಂಗಳೂರು: ಹೋಳಿ ಹುಣ್ಣಿಮೆ ದಿನವಾದ ಮಂಗಳವಾರ ಈ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ದೇವಾಲಯಗಳಲ್ಲಿ ಬೆಳಗಿನ ಪೂಜೆ ಮುಗಿದ ಬಳಿಕ ಬಾಗಿಲು ಬಂದ್ ಆಗಲಿದ್ದು, ಗ್ರಹಣ ಮುಗಿದು ಶುದ್ಧೀಕರಣ ಕಾರ್ಯಗಳ ಬಳಿಕವೇ ದೇವಾಲಯಗಳು ತೆರೆಯಲಿವೆ.

ಹೋಳಿ ಹುಣ್ಣಿಮೆ ದಿನವೇ ಈ ಗ್ರಹಣ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಇದು ಧಾರ್ಮಿಕವಾಗಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ಬೆಂಗಳೂರಿನ ಪ್ರಮುಖ ದೇವಾಲಯಗಳಾದ ಅಣ್ಣಮ್ಮ, ಕಾಡು ಮಲ್ಲೇಶ್ವರ, ಗವಿಗಂಗಾಧರೇಶ್ವರ, ಬನಶಂಕರಿ ಅಮ್ಮನವರ ದೇವಾಲಯ ಸೇರಿ ಹಲವು ದೇವಾಲಯಗಳಲ್ಲಿ ಪೂಜಾ ಸಮಯದಲ್ಲಿ ಬದಲಾವಣೆಯಾಗಿದೆ.

ಅಣ್ಣಮ್ಮ ದೇವಾಲಯದಲ್ಲಿ ಬೆಳಗಿನಿಂದ ಎಂದಿನಂತೆ ಪೂಜೆ ನಡೆಯಲಿದ್ದು ಮಧ್ಯಾಹ್ನ 12 ಗಂಟೆಗೆ ದರ್ಬೆ ಮೂಲಕ ಗರ್ಭಗುಡಿಯನ್ನು ಬಂದ್‌ ಮಾಡಲಾಗುತ್ತದೆ. ಈ ಸಮಯದಲ್ಲಿ ಯಾವುದೇ ಪೂಜೆ ನಡೆಯುವುದಿಲ್ಲ. ಗ್ರಹಣ ಮೋಕ್ಷದ ನಂತರ ಸಂಜೆ 6.30ಕ್ಕೆ ದೇವಾಲಯ ಶುದ್ಧಿ ಕಾರ್ಯ ಕೈಗೊಳ್ಳಲಿದ್ದು, ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬುಧವಾರವೂ ವಿಶೇಷ ಪೂಜೆ ಇರುತ್ತದೆ ಎಂದು ಮೂಲಗಳು ತಿಳಿಸಿವೆ.

ಮಧ್ಯಾಹ್ನ 12 ಗಂಟೆವರೆಗೂ ಭಕ್ತರಿಗೆ ಎಂದಿನಂತೆ ದರ್ಶನ

ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ 12 ಗಂಟೆವರೆಗೂ ಭಕ್ತರಿಗೆ ಎಂದಿನಂತೆ ದರ್ಶನಕ್ಕೆ ಅವಕಾಶವಿರುತ್ತದೆ. ಬಳಿಕ ಗರ್ಭಗುಡಿಯನ್ನು ದರ್ಬೆಯಿಂದ ಮುಚ್ಚಿ ಬಂದ್‌ ಮಾಡಲಾಗುತ್ತದೆ. ಸಂಜೆ 7 ಗಂಟೆಗೆ ದೇವಸ್ಥಾನದ ಬಾಗಿಲು ತೆಗೆದು, ಪುಣ್ಯಃ, ಶುಚಿತ್ವ, ಚಂದ್ರನಿಗೆ ಹಾಗೂ ಕಾಡುಮಲ್ಲೇಶ್ವರನಿಗೆ ಕ್ಷೀರಾಭಿಷೇಕ ಹಾಗೂ ಪಂಚಾಮೃತ ನೈವೇದ್ಯ ಮಾಡಲಾಗುವುದು. ರಾತ್ರಿ 9.30 ರವರೆಗೆ ಭಕ್ತಾಧಿಗಳಿಗೆ ದರ್ಶನಕ್ಕೆ ಅವಕಾಶವಿದೆ. ಬುಧವಾರ ನವಗ್ರಹ ಶಾಂತಿ ಹೋಮ ಹಮ್ಮಿಕೊಳ್ಳಲಾಗಿದೆ.

ಸಾವಿರಾರು ವರ್ಷದ ಪದ್ಧತಿ

ರಕ್ತಚಂದ್ರ ಗ್ರಹಣದಲ್ಲಿ ದೇವಸ್ಥಾನದ ಆಚರಣೆಗಳ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀವತ್ಸ, ‘ನಮ್ಮ ಸನಾತನ ಧರ್ಮದ ಇತಿಹಾಸದಲ್ಲಿ ದೇವಾಲಯಗಳಿಗೆ ಬಹಳಷ್ಟು ಪ್ರಾಮುಖ್ಯತೆ ಇದೆ. ಋಷಿ-ಮುನಿಗಳ ಕಾಲದಲ್ಲೂ ಗ್ರಹಣದ ಬಗ್ಗೆ ಉಲ್ಲೇಖಿಸಲಾಗಿದ್ದು, ಇದು ಸಾವಿರಾರು ವರ್ಷಗಳ ಪದ್ಧತಿಯಾಗಿದೆ’ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ನಿಜವಾಯ್ತು ಬ್ರಹ್ಮಾಂಡ ಗುರೂಜಿ ಭವಿಷ್ಯ: ಇರಾನ್-ಇಸ್ರೇಲ್ ಯುದ್ಧದ ಮೂಲಕ ಜಗತ್ತಿಗೆ ಶುರುವಾಯ್ತು ಗ್ರಹಣ ಗಂಡಾಂತರ!

ಮುಜರಾಯಿ ದೇವಾಲಯ, ಖಾಸಗಿ ಸೇರಿ ಎಲ್ಲ ದೇವಾಲಯಗಳಲ್ಲೂ ಈ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಮೋಕ್ಷ ಕಾಲದಲ್ಲಿ ದೇವಸ್ಥಾನಗಳನ್ನು ತೆರೆದು ಶುಚಿಗೊಳಿಸಿ ನಂತರ ದೇವರಿಗೆ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ ನಡೆಸಲಾಗುವುದು. ಕೆಲವೆಡೆ ಹೋಮಹವನ ಹಮ್ಮಿಕೊಂಡು ವಿಶೇಷ ಅಲಂಕಾರ, ಪೂಜೆ ಮಾಡಿ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಈ ದಿನಗಳಲ್ಲಿ ಗಂಡ ಹೆಂಡತಿ ಸೇರಬಾರದು, ಅದರಲ್ಲೂ ನಾಳೆ ಮಾರ್ಚ್‌ 3 ಅಪ್ಪಿತಪ್ಪಿಯೂ ದೈಹಿಕ ಸಂಬಂಧ ಬೇಡ