Darshan Lawyer Cites Rapist Umesh Reddy Privileges ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೂಕ್ತ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಅವರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರು (ಸೆ.30): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕಿಲ್ಲಿಂಗ್ ಸ್ಟಾರ್ ದರ್ಶನ್, ಜೈಲಿನಲ್ಲಿ ತಮಗೆ ಸೂಕ್ತ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ದರ್ಶನ್ ಪರ ವಕೀಲ ಸುನೀಲ್ ಕುಮಾರ್ ಕೋರ್ಟ್ನಲ್ಲಿ ಸಾಕಷ್ಟು ವಿಚಾರಗಳನ್ನು ಇರಿಸಿಕೊಂಡು ವಾದ ಮಂಡಿಸಿದರು. ಜೈಲಿನಲ್ಲಿ ದರ್ಶನ್ಗೆ ಕನಿಷ್ಠ ಸೌಲಭ್ಯ ನೀಡಲು ಇಲ್ಲ ಸಲ್ಲದ ಕಾರಣ ನೀಡ್ತೀರಿ. ಆದರೆ, ಉಮೇಶ್ ರೆಡ್ಡಿಗೆ ಏನೆಲ್ಲಾ ಸೌಲಭ್ಯ ನೀಡ್ತಿದ್ದೀರಿ ಅಂತಾ ಗೊತ್ತಿದೆ ಎಂದು ಹೇಳಿದ್ದಾರೆ.
ಜೈಲಿನ ದಾಖಲೆಗಳನ್ನ ನೀಡುವಂತೆ ಅರ್ಜಿ ಹಾಕಿರುವುದಾಗಿ ವಕೀಲ ಸುನೀಲ್ ಕುಮಾರ್ ಹೇಳಿದರು. ಯಾವ ಯಾವ ಖೈದಿಗಳನ್ನ ಕ್ವಾರಂಟೈನ್ನಲ್ಲಿ ಇರಿಸಿದ್ದಾರೆ. ಯಾವ ಯಾವ ಸೌಲಭ್ಯ ನೀಡಿದ್ದಾರೆ ಎಂಬ ಮಾಹಿತಿ ಕೋರ್ಟ್ ಗೆ ನೀಡಲಿ. ಸಿಸಿಟಿವಿ ಸಮೇತ ಎಲ್ಲಾ ದಾಖಲೆಗಳನ್ನ ಕೋರ್ಟ್ ಗೆ ನೀಡಲಿ. ಆ ನಿಟ್ಟಿನಲ್ಲಿ ಅರ್ಜಿ ಹಾಕಿರುವುದಾಗಿ ತಿಳಿಸಿದ್ದಾರೆ.
ದರ್ಶನ್ಗೆ ಚಾಪೆ, ಚಾದರ, ಕಂಬಳಿ, ಮಗ್ಗು ನೀಡಿದ್ದಾರೆ. ಕೋರ್ಟ್ ಆದೇಶದ ಬಳಿಕ ಕಂಬಳಿ ನೀಡಿದ್ದಾರೆ. ಬೆಳಗ್ಗೆ ಒಂದು ಗಂಟೆ, ಸಂಜೆ ಒಂದು ಗಂಟೆ ವಾಕಿಂಗ್ ಅವಕಾಶ ನೀಡಿದ್ದಾರೆ. ಆರೋಪಿ ದರ್ಶನ್ ಭೇಟಿ ಮಾಡಲು ಹೋಗಿದ್ದ ವಕೀಲರಿಗೆ ಪ್ರತ್ಯೇಕ ರಿಜಿಸ್ಟ್ರಾರ್ ಮೆಂಟೇನ್ ಮಾಡಿದ್ದಾರೆ. ಎಲ್ಲಾ ಆರೋಪಿಗಳಿಗೆ ಹೀಗೆ ಪ್ರತ್ಯೇಕ ರಿಜಿಸ್ಟ್ರಾರ್ ಇಟ್ಟುಕೊಂಡಿರುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಏನ್ ಏನ್ ಕೊಟ್ಟಿಲ್ಲ..? ಏನ್ ಕೊಡಬೇಕು ಅನ್ನೋದನ್ನ ಮಾತ್ರ ಕೋರ್ಟ್ನಲ್ಲಿ ಹೇಳಿದರೆ ಸಾಕು ಎಂದು ಎಸ್ಎಸ್ಪಿ ಈ ವೇಳೆ ಹೇಳಿದರು. ಈ ವೇಳೆ ಜಡ್ಜ್ ಕೂಡ ಯಾವ ಸೌಲಭ್ಯ ನೀಡಿಲ್ಲ ಅನ್ನೋದನ್ನ ಮಾತ್ರ ಹೇಳಿ ಎಂದು ವಕೀಲ ಸುನೀಲ್ ಕುಮಾರ್ ಅವರಿಗೆ ತಿಳಿಸಿದರು.
ಜೈಲಿನ ನಿಯಮಾವಳಿಯ ಚಾಪ್ಟರ್ 6ನಲ್ಲಿ ಸ್ಪಷ್ಟವಾಗಿ ಹೇಳಿದೆ. ಚಳಿಗಾಲದಲ್ಲಿ ಮೀಡಿಯಂ ಥಿಕ್ ನೆಸ್ ಬೆಡ್ ನೀಡಲು ಅವಕಾಶ ಇದೆ. ಕ್ವಾರಂಟೈನ್ ಬಗ್ಗೆ ಜೈಲು ನಿಯಮಾವಳಿಯಲ್ಲಿ ಇಲ್ಲ. ಹಾಗಿದ್ದರೂ, ಆರೋಪಿಯನ್ನು ಕ್ವಾರಂಟೈನ್ನಲ್ಲಿ ಇರಿಸಿದ್ದಾರೆ. ಎಷ್ಟು ಜನರನ್ನ ಕ್ವಾರಂಟೈನ್ನಲ್ಲಿ ಇಟ್ಟಿದ್ದಾರೆ ಅನ್ನೋ ಮಾಹಿತಿ ನೀಡಿ ಎಂದು ಅರ್ಜಿ ಸಲ್ಲಿಸಿದ್ದೇನೆ ಎಂದು ದರ್ಶನ್ ಪರ ವಕೀಲ ಹೇಳಿದರು.
ದರ್ಶನ್ ಸೆಲೆಬ್ರಿಟಿ ಎಂದು ಭದ್ರತೆಗೆ ಪ್ರತ್ಯೇಕ ವ್ಯವಸ್ಥೆ ಎಂದು ಹೇಳುತ್ತಿದ್ದಾರೆ ಎಂದು ಸುನೀಲ್ ಕುಮಾರ್ ಹೇಳಿದ್ದಕ್ಕೆ, ದರ್ಶನ್ ಸೆಲೆಬ್ರಿಟಿ ಅಂತ ನಾವು ಹೇಳಿಲ್ಲ ಎಂದು ಎಸ್ಎಸ್ಪಿ ಹೇಳಿದರು. ನಾವು ಹೇಳ್ತಾ ಇದ್ದೇವೆ. ಎಲ್ಲೆಲ್ಲಿ ಯಾರೆಲ್ಲಾ ಹೇಳಿದ್ದಾರೆ ಅನ್ನೋದು ಗೊತ್ತಿದೆ ಸುನೀಲ್ ಕುಮಾರ್ ಹೇಳಿದರು.
ಹೈಸೆಕ್ಯೂರಿಟಿ ಯಾರಿಗೆ ಕೊಡಬೇಕು ಅಂತ ನಿಯಮಾವಳಿಯಲ್ಲಿ ಇದೆ. ನಕ್ಸಲ್, ಟೆರರ್, ಎಂಜರಸ್, ನಟೋರಿಯಸ್ ಆರೋಪಿಗಳಿಗೆ ಮಾತ್ರ ಸೆಕ್ಯುರಿಟಿ ಬ್ಯಾರಕ್ ನಲ್ಲಿ ಇಡಲಾಗುತ್ತೆ. ಈ ಯಾವ ಕ್ಯಾಟಗರಿಯಲ್ಲೂ ದರ್ಶನ್ ಬರಲ್ಲ. ಕ್ವಾರಂಟೈನ್ ನಿಯಮ 2021ರಲ್ಲಿ ಬಂದಿದ್ದು, ಕೊರೋನಾ ಸಂದರ್ಭದಲ್ಲಿ ಮಾತ್ರ ಎಂದ ವಕೀಲ ಸುನೀಲ್ ಕುಮಾರ್ ಕೈದಿಗಳಿಗೆ ಇರುವ ಹಕ್ಕುಗಳ ಬಗ್ಗೆ ವಾದ ಮಾಡಿದರು.
ಕಾಲಾಪಾನಿ ಜೈಲಲ್ಲೂ ಈ ರೀತಿ ಶಿಕ್ಷೆ ಇರೋದಿಲ್ಲ
ಕೋರ್ಟ್ ಆದೇಶ ಮಾಡದೇ ಇದ್ದಾಗ ಆರೋಪಿಗೆ ನೋವಾಗುತ್ತೆ ಎಂದು ಸುನೀಲ್ ಕುಮಾರ್ ಹೇಳಿದಾಗ, ಎಸ್ಎಸ್ಪಿ ಮತ್ತೊಮ್ಮೆ, 'ಏನೇನು ಕೊಟ್ಟಿಲ್ಲ ಅಂತ ಹೇಳಿದ್ರೆ ಸಾಕು' ಎಂದರು. ಕಾಲಪಾನಿ ಜೈಲಿನಲ್ಲಿ ಕೂಡ ಈ ರೀತಿ ಇಡೋದಿಲ್ಲ. ಆ ಥರ ಈ ಕೇಸಿನ ಆರೋಪಿಗಳನ್ನ ಯಾಕೆ ಇಟ್ಟಿದ್ದಾರೆ ಅನ್ನೋದು ಗೊತತಾಗುತ್ತಿಲ್ಲ. ಎಷ್ಟು ಆರೋಪಿಗಳನ್ನ ಕ್ವಾರಂಟೈನ್ನಲ್ಲಿ ಇಟ್ಟಿದ್ದಾರೆ ಅನ್ನೋ ಮಾಹಿತಿ ಬೇಕು. ಈ ಮಾಹಿತಿಯನ್ನ ಕೋರ್ಟ್ ಗೆ ನೀಡಬೇಕು ಎಂದು ಸಿಆರ್ಪಿಸಿ 91ಅಡಿ ಅರ್ಜಿ ಹಾಕಿದ್ದೇನೆ ಎಂದರು.
ಆರೋಪಿಗಳಿಗೆ ತಾರತಮ್ಯ ಮಾಡುತ್ತಿದ್ದಾರೆ. ಈ ಬಗ್ಗೆ ವಿಡಿಯೀ ನೀಡಲಾ ಸಾರ್ ಎಂದು ಎಸ್ಎಸ್ಪಿ ಅವರಿಗೆ ಸುನೀಲ್ ಕುಮಾರ್ ಕೇಳಿದ್ದಾರೆ. ರೇಪಿಸ್ಟ್ ಉಮೇಶ್ ರೆಡ್ಡಿಗೆ ಯಾವ ಸೌಲಭ್ಯ ನೀಡಿದ್ದಾರೆ ಅನ್ನೋ ವಿಡಿಯೋ ಇದೆ. ಅದನ್ನು ಕೋರ್ಟ್ಗೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಕ್ವಾರಂಟೈನ್ ಸಮಯ ಕೇವಲ 14 ದಿನ ಮಾತ್ರ ಇಡಬೇಕು. 14 ದಿನ ಮಾತ್ರ ಇಡಲು ಮಾತ್ರ ರೂಲ್ಸ್ ಹೇಳುತ್ತೆ. ಖೈದಿ ಅಪರಾಧ ಮಾಡಿದಾಗ ಮಾತ್ರ ಪ್ರತ್ಯೇಕವಾಗಿ ಇಡಲು ಅವಕಾಶ ಇದೆ. ಸಿಗರೇಟ್ ಸೇದಿದ್ದಾರೆ, ಕಾಫಿ ಕುಡಿದಿದ್ದಾರೆ, ಪೋನ್ ಬಳಕೆ ಮಾಡಿದ್ದಾರೆ ಅನ್ನೋದಾದರೂ 2 ತಿಂಗಳು ಮಾತ್ರ ಪ್ರತ್ಯೇಕ ಇಡಲು ಅವಕಾಶ ಇದೆ. ಮುಖ್ಯ ಜೈಲಿಗೆ ಕಳಿಸಿದರೆ ಅವರ ಬಣ್ಣ ಬಯಲಾಗುತ್ತೆ ಅಂತ ಜೈಲು ಅಧಿಕಾರಿಗಳು ಹೆದರುತ್ತಿದ್ದಾರೆ ಎಂದು ವಕೀಲ ಸುನೀಲ್ಹೇಳಿದರು.
ಅ. 9ಕ್ಕೆ ಆದೇಶ
ಸೌಲಭ್ಯ ನೀಡಿಲ್ಲ ಎಂದು ನ್ಯಾಯಾಂಗ ನಿಂದನೆ ಅರ್ಜಿ ಹಾಕಿರುವ ದರ್ಶನ್ ಪ್ರಕರಣದ ವಿಚಾರಣೆ ಅಂತ್ಯವಾಗಿದ್ದು, ಅಕ್ಟೋಬರ್ 9ಕ್ಕೆ ಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿದೆ.
