ನೂತನ ಸಚಿವ ವಿಜಯಾನಂದ ಕಾಶಪ್ಪನವರ್ ಅವರು, ತಮಗೆ ಶಾಲು, ಪೇಟ, ಹಾರ-ತುರಾಯಿ ತರಬಾರದೆಂದು ಅಭಿಮಾನಿಗಳಲ್ಲಿ ಮನವಿ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಬೆಂಗಳೂರು (ಆ.5): ರಾಜಕೀಯ ವಲಯದಲ್ಲಿ ಸಚಿವರು ಅಥವಾ ನಾಯಕರು ಅಧಿಕಾರಕ್ಕೇರಿದಾಗ ಬೃಹತ್ ಹೂಹಾರಗಳು, ಪೇಟಗಳು, ಶಾಲೆಗಳನ್ನು ನೀಡಿ ಸನ್ಮಾನಿಸುವುದು ಇಲ್ಲವೇ ಗೌರವಿಸುವುದು, ಕಳೆದ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದೆ ಇದೆ. ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಇತ್ತೀಚಿಗಷ್ಟೇ ನೂತನ ಸಚಿವರಾಗಿ ಸಂಪುಟಕ್ಕೆ ಸೇರ್ಪಡೆಯಾಗಿರುವ ಸಚಿವ ವಿಜಯಾನಂದ ಕಾಶಪ್ಪನವರ್ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ತಮ್ಮನ್ನು ಭೇಟಿಯಾಗಲು ಬರುವ ಸಾರ್ವಜನಿಕರು, ಕಾರ್ಯಕರ್ತರು ಅಭಿಮಾನಿಗಳು ಸೇರಿದಂತೆ ಯಾರೊಬ್ಬರೂ ತಮಗೆ ಶಾಲು, ಪೇಟ, ತರಬಾರದೆಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಇದನ್ನು ಯಾರೊಬ್ಬರೂ ಅನ್ಯತಾ ಭಾವಿಸಬಾರದು ಎಂದು ಸಚಿವ ಕಾಶಪ್ಪನವರ್ ವಿನಮ್ರವಾಗಿ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ

ಹಾರ ತುರಾಯಿ ಪೇಟ ಶಾಲು ತರುವುದಕ್ಕೆ ಅನಗತ್ಯವಾಗಿ ಬಂದು ವೆಚ್ಚ ಮಾಡುವ ಬದಲು ಸರಳವಾಗಿಯೇ ತಮ್ಮ ಕಚೇರಿ ಇಲ್ಲವೇ ನಿವಾಸಕ್ಕೆ ಬಂದು ಯಾವುದೇ ಸಂದರ್ಭದಲ್ಲಿ ಭೇಟಿಯಾಗಬಹುದು ಎಂದು ತಿಳಿಸಿದ್ದಾರೆ. ಇಂದಿನ ರಾಜಕೀಯ ಮತ್ತು ಸಾಮಾಜಿಕ ವಾಸ್ತವಿಕತೆಯಲ್ಲಿ ಅತಿಶಯೋಕ್ತಿಯ ಸನ್ಮಾನಗಳು ಮತ್ತು ಅದ್ದೂರಿ ಸ್ವಾಗತಗಳು ಅನಗತ್ಯ ಖರ್ಚಿಗೆ ಕಾರಣವಾಗುವುದಲ್ಲದೆ, ಸಮಯದ ನಷ್ಟಕ್ಕೂ ದಾರಿ ಮಾಡಿಕೊಡುತ್ತವೆ.

ಸಾರ್ವಜನಿಕರ ಹಣ ಅಥವಾ ಅಭಿಮಾನಿಗಳ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಇಂತಹ ತಾತ್ಕಾಲಿಕ ವಸ್ತುಗಳ ಮೇಲೆ ವ್ಯಯ ಮಾಡುವುದಕ್ಕಿಂತ, ಜನಪರ ಕೆಲಸಗಳಿಗೆ ಬಳಸುವುದು ಉತ್ತಮ ಎಂಬ ಸಂದೇಶವನ್ನು ಈ ನಿರ್ಧಾರ ಸಾರುತ್ತದೆ. ವಿಜಯಾನಂದ ಕಾಶಪ್ಪನವರ್ ಅವರ ಅಭಿಮಾನಿಗಳ ಈ ನಡೆ ಇಂದಿನ ಯುವ ರಾಜಕಾರಣಕ್ಕೆ ಮತ್ತು ಸಮಾಜಕ್ಕೆ ಒಂದು ಸಕಾರಾತ್ಮಕ ಬದಲಾವಣೆಯ ಮುನ್ನುಡಿಯಾಗಿದೆ. ವಿಜಯಾನಂದ ಕಾಶಪ್ಪನವರ್ ಅವರು ಕೂಡ ತಮ್ಮ ಜನಪರ ಹೋರಾಟಗಳು ಮತ್ತು ನೇರ ನುಡಿಯ ರಾಜಕಾರಣಕ್ಕೆ ಹೆಸರುವಾಸಿಯಾದವರು. ಹಿಂದೆ ಶಾಸಕರಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲೂ ಅವರು ಸರಳ ಜೀವನಶೈಲಿಗೆ ಒತ್ತು ನೀಡಿದ್ದರು.

ಸಾರ್ವಜನಿಕರು ಕಷ್ಟಪಟ್ಟು ತರುವ ದುಬಾರಿ ಉಡುಗೊರೆಗಳು ಅಥವಾ ಶಾಲು-ಪೇಟಗಳ ಬದಲು ಜನರ ಸಮಸ್ಯೆಗಳನ್ನು ಆಲಿಸುವುದೇ ತಮಗೆ ನಿಜವಾದ ಸನ್ಮಾನ ಎಂದು ಅವರು ಹಿಂದೆ ಹಲವು ವೇದಿಕೆಗಳಲ್ಲಿ ಅಭಿಪ್ರಾಯಪಟ್ಟಿದ್ದರು. ಈ ವಿನೂತನ ನಿರ್ಧಾರವು ರಾಜಕೀಯ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದ್ದು, ಜನಸಾಮಾನ್ಯರೊಂದಿಗೆ ನಾಯಕರು ಮತ್ತಷ್ಟು ಹತ್ತಿರವಾಗಲು ಇಂತಹ ಸರಳತೆಯ ಕ್ರಮಗಳು ಅತ್ಯಂತ ಅವಶ್ಯಕವಾಗಿವೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.