ಪಾಕಿಸ್ತಾನಕ್ಕೆ ಟರ್ಕಿ ಮಿಲಿಟರಿ ನೆರವು ನೀಡಿದ್ದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ಭೂಕಂಪದ ಸಂದರ್ಭದಲ್ಲಿ ಭಾರತ ನೀಡಿದ್ದ ನೆರವನ್ನು ಮರೆತ ಟರ್ಕಿ, ಪಾಕ್ ಪರ ನಿಂತಿದೆ. ಪ್ರವಾಸಿ ಬಹಿಷ್ಕಾರದ ಬೆದರಿಕೆಗೆ ಟರ್ಕಿ ಸಮಜಾಯಿಷಿ ನೀಡಿದ್ದು, ಪಾಕ್‌ಗೆ ನೆರವು ನೀಡಿಲ್ಲ ಎಂದಿದೆ. ಭವಿಷ್ಯದ ನಡೆ ಕುತೂಹಲಕಾರಿ.

 ಪಹಲ್ಗಾಮ್​ ಉಗ್ರರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗಿರುವ ನಡುವೆಯೇ, ಕೆಲವೇ ಕೆಲವು ಮುಸ್ಲಿಂ ರಾಷ್ಟ್ರಗಳು ಪಾಕ್​ ಪರವಾಗಿ ನಿಂತಿವೆ. ಇದಾಗಲೇ, ಟರ್ಕಿ ಕೂಡ ಪಾಕ್​ಗೆ ನೆರವಾಗಿರುವುದಾಗಿ ದೊಡ್ಡ ಮಟ್ಟದಲ್ಲಿ ನಿನ್ನೆ ಸದ್ದು ಮಾಡಿತ್ತು. ಟರ್ಕಿಯು, ಯುದ್ಧ ಉಪಕರಣಗಳನ್ನು ಸರಬರಾಜು ಮಾಡಿರುವುದಾಗಿ ವರದಿಯಾಗಿದೆ. ಟರ್ಕಿ ವಾಯುಪಡೆಯ C-130 Hercules ಯುದ್ಧ ವಿಮಾನಗಳು ಹಾಗೂ ಯುದ್ಧ ಸಾಮಾಗ್ರಿಗಳು ಪಾಕಿಸ್ತಾನದ ಕರಾಚಿಗೆ ಬಂದಿಳಿದಿವೆ! ಈ ಕುರಿತು ಇದಾಗಲೇ ಟರ್ಕಿ ಹಾಗೂ ಪಾಕಿಸ್ತಾನದ ವಿದೇಶಾಂಗ ಸಚಿವರು ದೂರವಾಣಿ ಮೂಲಕ ಸಂಪರ್ಕಿಸಿ ನೆರವು ನೀಡುವ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನಕ್ಕೆ ಮಿಲಿಟರಿ ಸಹಾಯ ಮಾಡುತ್ತಿರುವ ಟರ್ಕಿಯಿಂದ ಪಾಕಿಸ್ತಾನದ ಕರಾಚಿ ಹಾಗೂ ಇಸ್ಲಾಮಾಬಾದ್‌ನ ಮಿಲಿಟರಿ ನೆಲೆಗಳಿಗೆ ಯುದ್ಧ ವಿಮಾನಗಳು ಬಂದಿಳಿದಿವೆ ಎಂದು ವರದಿಯಾಗಿತ್ತು.

ಇದರ ಬೆನ್ನಲ್ಲೇ, ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟಕ್ಕೂ ಟರ್ಕಿಯು ಭಾರತೀಯ ಪ್ರವಾಸಿಗರಿಂದಾಗಿ ಸಾಕಷ್ಟು ಗಳಿಸುತ್ತದೆ. ಪ್ರವಾಸೋದ್ಯಮವಾಗಿ ಹೆಸರು ಪಡೆದಿರುವ ಟಿರ್ಕಿಗೆ ಲಕ್ಷಾಂತರ ಭಾರತೀಯರು ಹೋಗುತ್ತಾರೆ. ಆದರೆ ಇದೀಗ ಪಾಕಿಗಳಿಗೆ ಟರ್ಕಿ ಬೆಂಬಲ ಕೊಡಲು ನಿಂತಿರುವ ಕಾರಣ, ಬೈಕಾಟ್​ ಟರ್ಕಿ ಎಂಬ ಅಭಿಯಾನವನ್ನು ಶುರು ಮಾಡಲಾಗಿದೆ. ಇದಕ್ಕೆ ಈಗ ಟರ್ಕಿ ಬೆದರಿ ಬಿಟ್ಟಂಗೆ ಕಾಣಿಸುತ್ತಿದೆ. ಲಕ್ಷದ್ವೀಪದಲ್ಲಿ, ಒಂದೇ ಒಂದು ಫೋಟೋ ಪ್ರಧಾನಿ ನರೇಂದ್ರ ಮೋದಿ ಕ್ಲಿಕ್ಕಿಸಿಕೊಂಡಿದ್ದ ಬೆನ್ನಲ್ಲೇ ಮಾರಿಷಸ್​ ಟೂರಿಸಂ ಅಧೋಗತಿಗೆ ಇಳಿದು, ಕೊನೆಗೆ ಅಲ್ಲಿಯ ಪ್ರಧಾನಿ ಕಾಲಿಗೆ ಬೀಳುವ ಸ್ಥಿತಿ ಬಂದಿತ್ತು. ಅದನ್ನೇ ನೆನಪಿಸಿಕೊಂಡೋ ಏನೋ ಟರ್ಕಿ ತಾವು ಪಾಕ್​ಗೆ ನೆರವಾಗಲೇ ಇಲ್ಲ, ಮುಂದೆಯೂ ನೆರವಾಗಲ್ಲ ಎಂದು ಸಮಜಾಯಿಷಿ ಕೊಟ್ಟಿದೆ!

'ಉಗ್ರರನ್ನು ಕ್ಷಮಿಸುವುದು ದೇವರಿಗೆ ಬಿಟ್ಟದ್ದು, ಆದರೆ ಅವರನ್ನು ಆತನ ಬಳಿಗೆ ಕಳುಹಿಸುವುದು ನನಗೆ ಸೇರಿದ್ದು!'

ಅಂದಹಾಗೆ, 2023ರಲ್ಲಿ ಟರ್ಕಿಯಲ್ಲಿ ನಡೆದಿದ್ದ ಭೀಕರ ಭೂಕಂಪದಲ್ಲಿ ಸುಮಾರು 25 ಸಾವಿರ ಮಂದಿ ಜೀವ ಕಳೆದುಕೊಂಡಿದ್ದರು. ಜನಜೀವನ ಅಸ್ತವ್ಯಸ್ತವಾಗಿ ಲಕ್ಷಾಂತರ ಮಂದಿ ನಿರ್ಗತಿಕರಾಗಿದ್ದರು. ಆಗ ಅವರ ನೆರವಿಗೆ ಧಾವಿಸಿದ್ದು ಭಾರತ. ಭಾರತವು ಆಪರೇಷನ್​ ದೋಸ್ತ್​ ಮೂಲಕ ಅಪಾರ ಪ್ರಮಾಣದ ವೈದ್ಯಕೀಯ ನೆರವನ್ನು ಕಳುಹಿಸಿತ್ತು. ಭಾರತದ ಯೋಧರು ಟರ್ಕಿಗೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಇಲ್ಲಿಂದ ಪಡೆದ ವೈದ್ಯಕೀಯ ನೆರವಿನಿಂದಾಗಿ ಲಕ್ಷಾಂತರ ಮಂದಿಯ ಪ್ರಾಣ ಕಾಪಾಡುವಲ್ಲಿ ಸಹಾಯವಾಗಿತ್ತು. ಆದರೆ ಈಗ ಭಾರತದ ವಿರುದ್ಧ ಯುದ್ಧಕ್ಕೆ ಟರ್ಕಿ ನೆರವಾಗಿ ನಿಲ್ಲುವ ಮೂಲಕ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಆದರೆ, ಈ ಮಾತನ್ನು ಎಷ್ಟು ದಿನ ಉಳಿಸಿಕೊಳ್ಳುತ್ತದೇ, ತಮ್ಮವರೇ ಇರುವ ಪಾಕಿಸ್ತಾನಕ್ಕೆ ಹೇಗೆ ನೆರವು ನೀಡುತ್ತದೆ, ಒಳಗೊಳಗೇ ಸಪೋರ್ಟ್​ ಮಾಡತ್ತಾ ಅಥವಾ ಯಾರಿಗೆ ಬೇಕು ಉಸಾಬರಿ ಎಂದು ಸುಮ್ಮನೆ ಆಗತ್ತಾ ಎನ್ನುವುದನ್ನು ಕಾದು ನೋಡಬೇಕಿದೆ ಅಷ್ಟೇ. 

ಪಾಕಿಸ್ತಾನದ​ ಟಿವಿಯಲ್ಲೂ ಸಿದ್ದರಾಮಯ್ಯ ಫೇಮಸ್​: ಸುದ್ದಿಯ ವಿಡಿಯೋ ವೈರಲ್​- ನಿರೂಪಕಿ ಹೇಳಿದ್ದೇನು ಕೇಳಿ...