* ಶ್ರೀಲಂಕಾದಲ್ಲಿ 17 ಮಂದಿ ಸಚಿವರ ನೂತನ ಸಂಪುಟ ನೇಮಕ * ಪ್ರಭಾವಿ ರಾಜಪಕ್ಸೆ ಕುಟುಂಬದಿಂದ ಮಹಿಂದಾ ಒಬ್ಬರೇ ಸಂಪುಟದಲ್ಲಿ* ಚಮಲ್‌ ರಾಜಪಕ್ಸೆ, ಮಹಿಂದಾ ಪುತ್ರ ನಮಲ್‌ ರಾಜಪಕ್ಸೆಗಿಲ್ಲ ಸ್ಥಾನ

ಕೊಲಂಬೋ(ಏ.19): ಶ್ರೀಲಂಕಾ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ನಡುವೆಯೇ, ಲಂಕಾ ಅಧ್ಯಕ್ಷ ಗೋಟಬಾಯ ರಾಜಪಕ್ಸೆ ಅವರು ಸೋಮವಾರ ಪ್ರಧಾನಿ ಮಹಿಂದಾ ರಾಜಪಕ್ಸೆ ಸೇರಿ 17 ಮಂದಿ ಸಚಿವರ ನೂತನ ಸಂಪುಟ ನೇಮಕ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಪ್ರಭಾವಿ ರಾಜಪಕ್ಸೆ ಕುಟುಂಬದಿಂದ ಮಹಿಂದಾ ಒಬ್ಬರೇ ಸಂಪುಟ ಸೇರಿದ್ದಾರೆ. ಹೊಸ ಸಂಪುಟದಲ್ಲಿ ರಾಜಪಕ್ಸೆ ಕುಟುಂಬದ ಚಮಲ್‌ ರಾಜಪಕ್ಸೆ, ಮಹಿಂದಾ ಪುತ್ರ ನಮಲ್‌ ರಾಜಪಕ್ಸೆರನ್ನು ಕೈಬಿಡಲಾಗಿದೆ. ಸೋದರಳಿಯ ಶಶೀಂದ್ರ ಅವರನ್ನೂ ಕೈಬಿಡಲಾಗಿದೆ. ದೇಶದ ಆರ್ಥಿಕ ಅಧಃಪತನಕ್ಕೆ ಅಧ್ಯಕ್ಷರು ಮತ್ತು ಅವರ ಕುಟುಂಬವೇ ಕಾರಣ ಎಂದು ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕುಟುಂಬದವರನ್ನು ಹೊರಗಿಟ್ಟು ಸಂಪುಟ ರಚಿಸಲಾಗಿದೆ ಎನ್ನಲಾಗುತ್ತಿದೆ.

ದೇಶಾದ್ಯಂತ ರಾಜ್ಯ ತುರ್ತು ಪರಿಸ್ಥಿತಿ ಮತ್ತು ಕಫä್ರ್ಯ ವಿಧಿಸಿದ ಸರ್ಕಾರವನ್ನು ವಿರೋಧಿಸಿ ಜನರು ದಂಗೆ ಏಳಲು ಆರಂಭಿಸಿದ ಬಳಿಕ ಅಧ್ಯಕ್ಷ ಗೊಟಬಯ ಮತ್ತು ಅವರ ಸಹೋದರ, ಪ್ರಧಾನಿ ಮಹಿಂದಾ ಹೊರತುಪಡಿಸಿ ಸಂಪುಟದ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದರು. ವಿಪಕ್ಷಗಳ ನಾಯಕರನ್ನೂ ಸಂಪುಟಕ್ಕೆ ಸೇರಿಸುವ ತೀರ್ಮಾನ ಸಹ ಮಾಡಲಾಗಿತ್ತು. ಆದರೆ ಈ ಕೋರಿಕೆಯನ್ನು ವಿಪಕ್ಷಗಳು ನಿರಾಕರಿಸಿದ್ದವು.

ರಾಜೀನಾಮೆಗೆ ಲಂಕಾ ಅಧ್ಯಕ್ಷ ರಾಜಪಕ್ಸೆ ನಕಾರ

ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸುತ್ತಿರುವ ಶ್ರೀಲಂಕಾದಲ್ಲಿ ಬಹುಮತ ಕಳೆದುಕೊಂಡರೂ ಕುರ್ಚಿ ಬಿಡದಿರಲು ಅಧ್ಯಕ್ಷ ಗೊಟಬಾಯ ರಾಜಪಕ್ಸೆ ನಿರ್ಧರಿಸಿದ್ದಾರೆ. ಈ ಮೂಲಕ ವಿಪಕ್ಷಗಳು ಹಾಗೂ ಆಕ್ರೋಶಗೊಂಡಿರುವ ಜನತೆಗೇ ಸಡ್ಡು ಹೊಡೆದಿದ್ದಾರೆ.

ಪ್ರಸಕ್ತ ಪರಿಸ್ಥಿತಿಯನ್ನು ಎದುರಿಸಲು ರಾಜಪಕ್ಸೆ ನಿರ್ಧರಿಸಿದ್ದಾರೆ. ಅವರು ಪದತ್ಯಾಗ ಮಾಡಲು ಯಾವುದೇ ಕಾರಣಗಳಿಲ್ಲ ಎಂದು ರಾಜಪಕ್ಸೆ ಸಂಪುಟದ ಸಚಿವ ಜಾನ್ಸ್‌ಟನ್‌ ಫರ್ನಾಂಡೋ ಮಂಗಳವಾರ ಹೇಳಿದ್ದಾರೆ. ವಿಪಕ್ಷ ‘ಜೆವಿಪಿ’, ಈಗಿನ ಹಿಂಸಾಚಾರದ ಹಿಂದೆ ಇದೆ. ಹೀಗಾಗಿ ಹಿಂಸೆಯ ಕುಮ್ಮಕ್ಕಿಗೆ ಕಿವಿಗೊಡದೇ ಶಾಂತಿ ನೆಲೆಸುವಂತೆ ಜನರು ನೋಡಿಕೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.

ಈ ನಡುವೆ, ತುರ್ತುಪರಿಸ್ಥಿತಿ ಹೇರಿ ಜನಾಕ್ರೋಶದಿಂದ ಹಿಂಪಡೆದಿದ್ದರೂ, ಈ ನಿರ್ಣಯವನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಕಾಯಲು ಈ ಕ್ರಮ ಕೈಗೊಳ್ಳುವ ಅಧಿಕಾರ ಅಧ್ಯಕ್ಷರಿಗೆ ಇದೆ ಎಂದಿದ್ದಾರೆ.

ವಿಶ್ವಸಂಸ್ಥೆ ಮಧ್ಯಪ್ರವೇಶ:

ಶ್ರೀಲಂಕಾ ಬಿಕ್ಕಟ್ಟಿನಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕು ಕಚೇರಿ ಮಧ್ಯಪ್ರವೇಶಿಸಿದ್ದು, ಅಲ್ಲಿನ ಪರಿಸ್ಥಿತಿ ಗಮನಿಸುತ್ತಿರುವುದಾಗಿ ಹೇಳಿದೆ ಹಾಗೂ ಮಾತುಕತೆ ಮೂಲಕ ಬಿಕ್ಕಟ್ಟು ಇತ್ಯರ್ಥಕ್ಕೆ ಸಲಹೆ ನೀಡಿದೆ.