* ಪ್ರಕ್ಷುಬ್ಧ ಸನ್ನಿವೇಶದಲ್ಲಿ ದೇಶಕ್ಕೆ ಬಲಿಷ್ಠ ನಾಯಕ ಬೇಕು: ಮೋದಿ* ರಷ್ಯಾ-ಉಕ್ರೇನ್‌ ಬಿಕ್ಕಟ್ಟಿನ ಬಗ್ಗೆ ಪರೋಕ್ಷ ಹೇಳಿಕೆ* ಯುದ್ಧದ ಸನ್ನಿವೇಶ ನಿರ್ಮಾಣ

ಬಹ್ರೈಚ್‌ (ಉ.ಪ್ರ)(ಫೆ. 23) ರಷ್ಯಾ-ಉಕ್ರೇನ್‌(Russia) ನಡುವಣ ಬಿಕ್ಕಟ್ಟಿನ ಬಗ್ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಪ್ರಧಾನಿ (Narendra Modi) ನರೇಂದ್ರ ಮೋದಿ, ‘ವಿಶ್ವದಲ್ಲಿ ಪ್ರಕ್ಷುಬ್ಧತೆ ಇರುವಾಗ ಭಾರತ ಬಲಿಷ್ಠವಾಗಿರಬೇಕು ಮತ್ತು ಕಷ್ಟದ ಸಮಯದಲ್ಲಿ ಕಠಿಣ ನಾಯಕನ ಅಗತ್ಯವಿದೆ’ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ (Uttar Pradesh) ಬಹ್ರೈಚ್‌ನಲ್ಲಿ ಚುನಾವಣಾ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಅವರು, ‘ಇಂದು ವಿಶ್ವದಲ್ಲಿ ಅನೇಕ ತಲ್ಲಣಗಳು ಉಂಟಾಗುತ್ತಿರುವುದನ್ನು ನೀವು ನೋಡುತ್ತಿದ್ದೀರಿ. ಈ ಹಂತದಲ್ಲಿ ಭಾರತಕ್ಕೆ ಹಾಗೂ ಇಡೀ ಮನುಕುಲಕ್ಕೆ ಶಕ್ತಿಶಾಲಿ ನಾಯಕನ ಅಗತ್ಯವಿದೆ. ಇಂದು ನಿಮ್ಮ ಮತವು ಭಾರತವನ್ನು ಶಕ್ತಿಶಾಲಿ ಮಾಡಲಿದೆ ಹಾಗೂ ದೇಶವನ್ನು ಮತ್ತಷ್ಟುಸದೃಢಗೊಳಿಸಲು ಸಹಾಯ ಮಾಡುತ್ತದೆ’ ಎಂದರು.

ಈ ನಡುವೆ, ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ. ಗೆಲುವಿನ ಬೌಂಡರಿ (2014, 2017, 2019 ಹಾಗೂ 2022ರ ಜಯ) ಬಾರಿಸಲಿದೆ’ ಎಂದೂ ವಿಶ್ವಾಸ ವ್ಯಕ್ತಪಡಿಸಿರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಗರೀಬಿ ಹಟಾವೋ ಮತ್ತು ಸಮಾಜವಾದ ಹೆಸರಿನಲ್ಲಿ ಅವರು ದೇಶವನ್ನು ಲೂಟಿ ಮಾಡಿದರು ಎಂದರು.

ಮೋದಿ ವರ್ಸಸ್ ಅಖಿಲೇಶ್ ಸಮರ ಹೇಗಿತ್ತು?

ಅಹಮದಾಬಾದ್‌ ಸ್ಫೋಟ ಪ್ರಕರಣದ ನ್ಯಾಯಾಲಯದ ತೀರ್ಪಿನ ಬಗ್ಗೆ ವಿರೋಧ ಪಕ್ಷಗಳ ಮೌನವನ್ನು ಪ್ರಶ್ನಿಸಿದ ಅವರು, ಭಯೋತ್ಪಾದಕರಿಗೆ ಯಾರು ಸಹಾಯ ಮಾಡುತ್ತಿದ್ದಾರೆಂದು ದೇಶಕ್ಕೆ ತಿಳಿದಿದೆ ಎಂದು ಹೇಳಿದರು

ಯುದ್ಧದ ಕಾರ್ಮೋಡ: ಜಗತ್ತು ಆತಂಕದಿಂದ ಎದುರು ನೋಡುತ್ತಿದ್ದ ಕ್ಷಣ ಕೊನೆಗೂ ಸನ್ನಿಹಿತವಾಗಿದೆ. ಉಕ್ರೇನ್‌ಗೆ ಸೇನೆ ನುಗ್ಗಿಸಲು ರಷ್ಯಾ ಹಸಿರು ನಿಶಾನೆ ತೋರಿಸಿದ್ದು, ಯುದ್ಧ ಘೋಷಣೆ ಮಾಡಿದೆ. ಇದರೊಂದಿಗೆ ಉಭಯ ದೇಶಗಳ ನಡುವೆ ಬಹುನಿರೀಕ್ಷಿತ ಯುದ್ಧ ಬಹುತೇಕ ಆರಂಭ ಆಗುವುದು ಸನ್ನಿಹಿತವಾಗಿದೆ.

ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಪೂರ್ವ ಉಕ್ರೇನ್‌ಗೆ ಸೇನೆಯನ್ನು ಕಳುಹಿಸುವ ಆದೇಶಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಮಂಗಳವಾರ ಬೆಳಗ್ಗೆ ಸಹಿ ಹಾಕಿದ್ದರು. ಇದರ ಬೆನ್ನಲ್ಲೇ ರಾತ್ರಿ, ರಷ್ಯಾ ಸಂಸತ್ತಿಗೆ ಮನವಿ ಮಾಡಿಕೊಂಡ ಪುಟಿನ್‌, ದೇಶದ ಆಚೆಗೆ ಸೇನಾ ಪಡೆಗಳನ್ನು ಕಳಿಸಲು ಸದನದ ಅನುಮತಿ ಕೋರಿದರು. ಇದಕ್ಕೆ ರಷ್ಯಾ ಸಂಸತ್ತಿನ ಎಲ್ಲ 153 ಸಂಸದರು ಅನುಮೋದನೆ ನೀಡಿದ್ದಾರೆ. ಹೀಗಾಗಿ ಯುದ್ಧದ ಘೋಷಣೆ ಮಾಡಿದಂತಾಗಿದೆ.

ಇನ್ನೊಂದೆಡೆ, ಉಕ್ರೇನ್‌ ಅಧ್ಯಕ್ಷ ವೋಲೋದಿಮಿರ್‌ ಜೆಲೆನ್‌ಸ್ಕಿ ರಷ್ಯಾ ವಿರುದ್ಧ ಗುಟುರು ಹಾಕಿದ್ದು, ‘ನಾವು ಯಾರಿಗೂ, ಯಾವುದಕ್ಕೂ ಹೆದರುವುದಿಲ್ಲ’ ಎಂದಿದ್ದಾರೆ. ಈ ವಿದ್ಯಮಾನದ ನಡುವೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಬಹಳ ಅಪರೂಪಕ್ಕೆ ರಾತ್ರೋರಾತ್ರಿ ತುರ್ತು ಸಭೆ ನಡೆಸಿ, ರಷ್ಯಾ ನಡೆಯನ್ನು ಖಂಡಿಸಿದೆ.

ರಷ್ಯಾ-ಉಕ್ರೇನ್‌ ನಡುವೆ ಯುದ್ಧ ಆರಂಭವಾದರೆ ಎರಡನೇ ಮಹಾಯುದ್ಧದ ನಂತರದ ಅತಿದೊಡ್ಡ ಯುದ್ಧವಾಗಲಿದೆ. ಅದರಿಂದ ತೈಲ ಬೆಲೆ ತೀವ್ರ ದುಬಾರಿಯಾಗುವುದೂ ಸೇರಿದಂತೆ ಜಾಗತಿಕ ಆರ್ಥಿಕತೆಯ ಮೇಲೆ ಬಲವಾದ ಹೊಡೆತ ಬೀಳುವ ಸಾಧ್ಯತೆಯಿದೆ.

ಆದೇಶಕ್ಕೆ ಪುಟಿನ್‌ ಸಹಿ: ಪ್ರತ್ಯೇಕತಾವಾದಿಗಳ ಕಪಿಮುಷ್ಟಿಯಲ್ಲಿರುವ ಪೂರ್ವ ಉಕ್ರೇನ್‌ನ ಭಾಗಗಳನ್ನು ಸ್ವತಂತ್ರವೆಂದು ಗುರುತಿಸುವ ಹಾಗೂ ಅಲ್ಲಿನ ಸ್ವಾಯತ್ತೆ ರಕ್ಷಣೆಗೆ ಮಿಲಿಟರಿ ಸೇರಿದಂತೆ ಎಲ್ಲಾ ನೆರವು ನೀಡುವ ಮೂಲಕ ಶಾಂತಿ ಕಾಪಾಡುವ ಆದೇಶಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಸಹಿ ಹಾಕಿದ್ದಾರೆ. ಇದಾದ ನಂತರ ಸಂಸತ್ತಿನ ಮೇಲ್ಮನೆ ಕೂಡ ಇದಕ್ಕೆ ಅನುಮೋದನೆ ನೀಡಿದೆ.

ಇದರ ಬೆನ್ನಲ್ಲೇ ಪೂರ್ವ ಉಕ್ರೇನ್‌ನತ್ತ ಈಗಾಗಲೇ ಮಿಲಿಟರಿ ವಾಹನಗಳು ನುಗ್ಗುತ್ತಿರುವುದು ಕಂಡುಬಂದಿದೆ ಎಂದು ಮಾಧ್ಯಮ ವರದಿಗಳು ಖಚಿತಪಡಿಸಿವೆ.

ಪಾಶ್ಚಾತ್ಯ ರಾಷ್ಟ್ರಗಳ ಆಕ್ರೋಶ: ರಷ್ಯಾದ ನಡೆಗೆ ಅಮೆರಿಕ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಜಾಗತಿಕ ಶಿಸ್ತನ್ನು ರಷ್ಯಾ ಮೀರಿದೆ ಎಂದು ಅನೇಕ ಪಾಶ್ಚಾತ್ಯ ನಾಯಕರು ಅಸಮಾಧಾನ ಹೊರಹಾಕಿದ್ದಾರೆ. ಉಕ್ರೇನ್‌, ಅಮೆರಿಕ ಸೇರಿದಂತೆ ಕೆಲ ರಾಷ್ಟ್ರಗಳ ಮನವಿಯ ಮೇರೆಗೆ ಸೋಮವಾರ ತಡರಾತ್ರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತು ಸಭೆ ನಡೆಸಿ ಮುಂದಿನ ಕ್ರಮಗಳ ಕುರಿತು ಚರ್ಚಿಸಿದೆ. ರಷ್ಯಾದ ಮೇಲೆ ಅಥವಾ ರಷ್ಯಾ ಬೆಂಬಲಿತ ಉಕ್ರೇನ್‌ನ ಪೂರ್ವ ಪ್ರದೇಶಗಳ ಮೇಲೆ ಈ ಅಮೆರಿಕ, ಬ್ರಿಟನ್‌ ಸೇರಿ ಪಾಶ್ಚಾತ್ಯ ರಾಷ್ಟ್ರಗಳು ನಿರ್ಬಂಧಗಳನ್ನು ಘೋಷಣೆ ಮಾಡಿವೆ.

ರಷ್ಯಾ ವಿರುದ್ಧ ಉಕ್ರೇನ್‌ ಗುಡುಗು; ಪೂರ್ವ ಉಕ್ರೇನ್‌ಗೆ ಸೇನೆ ನುಗ್ಗಿಸುವ ಆದೇಶಕ್ಕೆ ರಷ್ಯಾ ಸಹಿ ಹಾಕುತ್ತಿದ್ದಂತೆ ರಷ್ಯಾ ವಿರುದ್ಧ ಬಹಿರಂಗವಾಗಿ ಗುಡುಗಿರುವ ಉಕ್ರೇನ್‌ನ ಅಧ್ಯಕ್ಷ ವೋಲೋದಿಮಿರ್‌ ಜೆಲೆನ್‌ಸ್ಕಿ, ‘ನಾವು ಯಾರಿಗೂ, ಯಾವುದರ ಬಗ್ಗೆಯೂ ಹೆದರುವುದಿಲ್ಲ. ನಾವು ಯಾರಿಗೂ ಏನನ್ನೂ ಕೊಡಬೇಕಾಗಿಲ್ಲ. ಮತ್ತು ನಾವು ಯಾರಿಗೂ ಏನನ್ನೂ ಕೊಡುವುದಿಲ್ಲ’ ಎಂದು ತಮ್ಮ ದೇಶದ ಪ್ರಜೆಗಳನ್ನು ಉದ್ದೇಶಿಸಿ ಹೇಳಿದ್ದಾರೆ.