ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು, ಭಾರತ ಮತ್ತೊಂದು ಸಂಘರ್ಷಕ್ಕೆ ಸಿದ್ಧತೆ ನಡೆಸುತ್ತಿದೆ ಎಂದು ಆರೋಪ ಮಾಡಿದ್ದಾರೆ. ಯುದ್ಧದ ಹಾದಿ ಬಿಟ್ಟು ಮಾತುಕತೆಗೆ ಮರಳುವಂತೆ ನವದೆಹಲಿಗೆ ಒತ್ತಾಯಿಸಿದ ಅವರು, ಸಿಂಧೂ ನದಿ ನೀರು ಒಪ್ಪಂದ ಸ್ಥಗಿತಗೊಳಿಸಿದ್ದನ್ನು 'ಜಲ-ಭಯೋತ್ಪಾದನೆ' ಎಂದು ಕರೆದಿದ್ದಾರೆ.

ನವದೆಹಲಿ (ಮಾ.4): ಭಾರತ ದೇಶವು ಪಾಕಿಸ್ತಾನದ ಜೊತೆಗೆ ಮತ್ತೊಂದು ಸಂಘರ್ಷಕ್ಕೆ ಸಿದ್ಧತೆ ನಡೆಸುತ್ತಿದೆ ಎಂದು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಸೋಮವಾರ ಆರೋಪಿಸಿದ್ದಾರೆ ಮತ್ತು ನವದೆಹಲಿಯು ಯುದ್ಧ ರಂಗಭೂಮಿ ಎಂದು ಕರೆಯುವುದರಿಂದ ಹಿಂದೆ ಸರಿದು ಮಾತುಕತೆಗೆ ಮರಳಬೇಕೆಂದು ಒತ್ತಾಯಿಸಿದ್ದಾರೆ. ವಿರೋಧ ಪಕ್ಷದ ಪ್ರತಿಭಟನೆಗಳ ನಡುವೆ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಜರ್ದಾರಿ, 'ಮತ್ತೊಂದು ಯುದ್ಧಕ್ಕೆ ಸಿದ್ಧರಾಗುತ್ತಿರುವುದಾಗಿ ಭಾರತದ ನಾಯಕರು ಹೇಳುತ್ತಾರೆ. ಪ್ರಾದೇಶಿಕ ಶಾಂತಿಯ ಜೀವಮಾನದ ಪ್ರತಿಪಾದಕ ನಾನು, ನಾನು ಅದನ್ನು ಎಂದಿಗೂ ಶಿಫಾರಸು ಮಾಡೋದಿಲ್ಲ' ಎಂದು ಹೇಳಿದ್ದಾರೆ. ಇನ್ನು ಪಾಕಿಸ್ತಾನ ಯಾವಾಗಲೂ ಮಾತುಕತೆಯ ವೇದಿಕೆಗೆ ಬರಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.

'ಯುದ್ಧ ರಂಗಭೂಮಿಯಿಂದ ಹಿಂದೆ ಸರಿಯಬೇಕು ಎಂದು ಭಾರತಕ್ಕೆ ನಾನು ಸಂದೇಶ ನೀಡುತ್ತೇನೆ. ಸೂತ್ರಬದ್ಧವಾದ ಸಂಧಾನಕ್ಕಾಗಿ ವೇದಿಕೆಗೆ ಬರಬೇಕು. ಇದು ಪ್ರಾದೇಶಿಕ ಭದ್ರತೆಗೆ ಇರುವ ಏಕೈಕ ದಾರಿ' ಎಂದು ಹೇಳಿದ್ದಾರೆ.

ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸುವ ಭಾರತದ ನಿರ್ಧಾರವನ್ನು ಪಾಕಿಸ್ತಾನಿ ಅಧ್ಯಕ್ಷ ಟೀಕಿಸಿದ್ದು, ಇದು ಜಲ-ಭಯೋತ್ಪಾದನೆ ಎಂದು ಕರೆದರು ಮತ್ತು ರಾಜಕೀಯ ಹತೋಟಿಗಾಗಿ ನವದೆಹಲಿ ನೀರಿನ ಹರಿವನ್ನು ಅಸ್ತ್ರಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಜನರಿಗೆ ಪಾಕಿಸ್ತಾನವು ರಾಜತಾಂತ್ರಿಕ ಮತ್ತು ನೈತಿಕ ಬೆಂಬಲವನ್ನು ನೀಡುವುದನ್ನು ಮುಂದುವರಿಸುತ್ತದೆ ಎಂದು ಪುನರುಚ್ಚರಿಸಿದ್ದಾರೆ. ಕಾಶ್ಮೀರ ಸಮಸ್ಯೆ ಬಗೆಹರಿಯುವವರೆಗೆ ದಕ್ಷಿಣ ಏಷ್ಯಾದಲ್ಲಿ ಶಾಶ್ವತ ಶಾಂತಿ ಸಿಗುವುದು ಅಸಾಧ್ಯವೆಂದು ತಿಳಿಸಿದ್ದಾರೆ.

ಅಫ್ಘಾನಿಸ್ತಾನಕ್ಕೆ ಎಚ್ಚರಿಕೆ

ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಗುಂಪುಗಳ ಉಪಸ್ಥಿತಿಯ ಬಗ್ಗೆ ಎಚ್ಚರಿಕೆ ನೀಡುವ ಇತ್ತೀಚಿನ ವಿಶ್ವಸಂಸ್ಥೆಯ ವರದಿಯನ್ನು ಉಲ್ಲೇಖಿಸಿ ಜರ್ದಾರಿ ಕೂಡ ತಮ್ಮ ಗಮನವನ್ನು ಪಶ್ಚಿಮದ ಕಡೆಗೆ ತಿರುಗಿಸಿದರು. "ಈ ವಿಷಯವನ್ನು ನಿರ್ಲಕ್ಷಿಸಿದರೆ ಬೇರೆ ಯಾವುದೇ ದೇಶವು ಮತ್ತೊಂದು ದುರಂತ ದಾಳಿಗೆ ಬಲಿಯಾಗಬಹುದು ಎಂದು ಈ ವರದಿ ಎಚ್ಚರಿಸುತ್ತದೆ" ಎಂದು ಅವರು ಹೇಳಿದರು.

ಗಡಿಯಾಚೆಗಿನ ಉಗ್ರಗಾಮಿ ಚಟುವಟಿಕೆಯಿಂದಾಗಿ ಮಿಲಿಟರಿ ಉಲ್ಬಣಗೊಳ್ಳುವುದನ್ನು ತಡೆಯಲು ಪಾಕಿಸ್ತಾನವು ರಾಜತಾಂತ್ರಿಕ ಮಾರ್ಗಗಳನ್ನು ಬಳಸಿಕೊಂಡಿದೆ ಎಂದು ಅವರು ಹೇಳಿದರು. "ನಾನು ಸ್ಪಷ್ಟವಾಗಿ ಹೇಳುತ್ತೇನೆ: ಪಾಕಿಸ್ತಾನದ ಮಣ್ಣು ಪವಿತ್ರ. ನಮ್ಮ ಶಾಂತಿಯನ್ನು ಅಸ್ಥಿರಗೊಳಿಸಲು ನೆರೆಯ ಪ್ರದೇಶವನ್ನು ಬಳಸಲು ದೇಶೀಯ ಅಥವಾ ವಿದೇಶಿ ಯಾವುದೇ ಘಟಕವನ್ನು ನಾವು ಅನುಮತಿಸುವುದಿಲ್ಲ" ಎಂದಿದ್ದಾರೆ.

ದೋಹಾ ಒಪ್ಪಂದದ ಅಡಿಯಲ್ಲಿ ಉಗ್ರಗಾಮಿ ಗುಂಪುಗಳು ಅಫ್ಘಾನ್ ನೆಲದಿಂದ ಕಾರ್ಯನಿರ್ವಹಿಸುವುದನ್ನು ತಡೆಯಲು ಮಾಡಿದ ಬದ್ಧತೆಗಳನ್ನು ಪೂರೈಸಲು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ವಿಫಲವಾಗಿದೆ ಎಂದು ಜರ್ದಾರಿ ಆರೋಪಿಸಿದರು. ಅಂತಹ ಗುಂಪುಗಳನ್ನು ಕೆಡವಲು ಮತ್ತು ಅಫ್ಘಾನಿಸ್ತಾನವು ಇತರರ ಮಹತ್ವಾಕಾಂಕ್ಷೆಗಳಿಗೆ ಯುದ್ಧಭೂಮಿಯಾಗಲು ಬಿಡಬೇಡಿ ಎಂದು ಅವರು ಕಾಬೂಲ್‌ಗೆ ಒತ್ತಾಯಿಸಿದರು.

ಪ್ಯಾಲೆಸ್ತೇನ್‌ ರಚನೆಗೆ ಪಾಕಿಸ್ತಾನ ಬೆಂಬಲ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಖಂಡಿಸಿದ್ದಾರೆ ಮತ್ತು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಯುಎಇ, ಬಹ್ರೇನ್, ಜೋರ್ಡಾನ್, ಕುವೈತ್, ಕತಾರ್ ಮತ್ತು ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ದಾಳಿಗಳನ್ನು ಅವರು ಖಂಡಿಸಿದರು.

ಇದೇ ವೇಳೆ, 1967ಕ್ಕೂ ಮೊದಲಿನ ಗಡಿರೇಖೆಗಳ ಆಧಾರದ ಮೇಲೆ, ಅಲ್-ಖುದ್ಸ್ ಅಲ್ ಶರೀಫ್ ಅನ್ನು ರಾಜಧಾನಿಯನ್ನಾಗಿ ಹೊಂದಿರುವ ಸ್ವತಂತ್ರ ಪ್ಯಾಲೆಸ್ಟೈನ್ ರಾಷ್ಟ್ರದ ರಚನೆಗೆ ಪಾಕಿಸ್ತಾನದ ಬೆಂಬಲವನ್ನು ಜರ್ದಾರಿ ಪುನರುಚ್ಚರಿಸಿದರು.

ಸೋಮವಾರದ ಈ ಭಾಷಣವು ಅಧ್ಯಕ್ಷರಾಗಿ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಜರ್ದಾರಿ ಅವರು ಮಾಡಿದ ಒಂಬತ್ತನೇ ಭಾಷಣವಾಗಿದೆ. ಜೈಲಿನಲ್ಲಿರುವ ತಮ್ಮ ನಾಯಕ ಮತ್ತು ದೇಶದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಿಡುಗಡೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ವಿರೋಧ ಪಕ್ಷದ ಸದಸ್ಯರಿಂದ ಅವರ ಭಾಷಣಕ್ಕೆ ಪದೇ ಪದೇ ಅಡ್ಡಿಯುಂಟಾಯಿತು.