‘1965, 1971 ಅಥವಾ 1999ರ ಕಾರ್ಗಿಲ್‌ ಯುದ್ಧವಾಗಲಿ. ನಮ್ಮ ಸಾವಿರಾರು ಯೋಧರು ತಮ್ಮ ಜೀವವನ್ನು ಪಾಕಿಸ್ತಾನ ಮತ್ತು ಇಸ್ಲಾಂಗಾಗಿ ಬಲಿದಾನ ನೀಡಿದ್ದಾರೆ’ ಎಂದು ಹೇಳುವ ಮೂಲಕ ಕಾರ್ಗಿಲ್‌ ಯುದ್ಧದಲ್ಲಿ ಪಾಕ್‌ ಸೇನೆ ಕೂಡಾ ಸಕ್ರಿಯವಾಗಿ ಭಾಗಿಯಾಗಿತ್ತು ಎಂದು ಒಪ್ಪಿಕೊಂಡ ಪಾಕಿಸ್ತಾನ ಸೇನಾ ಮುಖ್ಯಸ್ಥ ಜ.ಆಸಿಂ ಮುನೀರ್ 

ಇಸ್ಲಾಮಾಬಾದ್‌(ಸೆ.09): 1999ರಲ್ಲಿ ಕಾಶ್ಮೀರದ ಕಾರ್ಗಿಲ್‌ ವಲಯದಲ್ಲಿ ಭಾರತದ ಮೇಲೆ ಕಳ್ಳರ ರೀತಿ ದಾಳಿ ನಡೆಸಿ ಬಳಿಕ ಹೀನಾಯ ಸೋಲು ಕಂಡಿದ್ದ ಪಾಕಿಸ್ತಾನ, ಇದೇ ಮೊದಲ ಬಾರಿಗೆ ಆ ಯುದ್ಧದಲ್ಲಿ ತನ್ನ ಸೇನೆ ಭಾಗಿಯಾಗಿದ್ದರ ಕುರಿತು ಬಹಿರಂಗವಾಗಿ ಒಪ್ಪಿಕೊಂಡಿದೆ.

ಪಾಕಿಸ್ತಾನ ಸೇನೆಯ ಅಂದಾಜು 4000 ಯೋಧರು ಹತರಾದ ಘಟನೆ ಕುರಿತು ಪಾಕ್‌ ಸರ್ಕಾರವಾಗಲೀ, ಸೇನೆಯಾಗಲೀ ಇದುವರೆಗೂ ಎಲ್ಲಿಯೂ ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ. ಘಟನೆ ಹಿಂದೆ ಮುಜಾಹಿದೀನ್‌ಗಳು ಅಥವಾ ಸ್ವಾತಂತ್ರ್ಯ ಹೋರಾಟಗಾರರ ಪಾತ್ರವಿತ್ತು ಎಂದೇ ಹೇಳಿಕೊಂಡು ಬಂದಿತ್ತು. ಜೊತೆಗೆ ತನ್ನ ಸೇನೆ ಭಾಗಿಯಾಗಿದ್ದರ ಕುರಿತು ಎಲ್ಲಿಯೂ ಒಪ್ಪಿರಲಿಲ್ಲ.

ಮತ್ತೊಂದು ಕಾರ್ಗಿಲ್‌ ಯುದ್ಧ: ಭಾರತಕ್ಕೆ ಪಾಕಿಸ್ತಾನದ 600 ಕಮಾಂಡೋಗಳ ಪ್ರವೇಶ?

ಆದರೆ ಶನಿವಾರ ಪಾಕ್‌ ಸೇನಾ ದಿನದ ಅಂಗವಾಗಿ ರಾವಲ್ಪಿಂಡಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪಾಕಿಸ್ತಾನ ಸೇನಾ ಮುಖ್ಯಸ್ಥ ಜ.ಆಸಿಂ ಮುನೀರ್, ‘1965, 1971 ಅಥವಾ 1999ರ ಕಾರ್ಗಿಲ್‌ ಯುದ್ಧವಾಗಲಿ. ನಮ್ಮ ಸಾವಿರಾರು ಯೋಧರು ತಮ್ಮ ಜೀವವನ್ನು ಪಾಕಿಸ್ತಾನ ಮತ್ತು ಇಸ್ಲಾಂಗಾಗಿ ಬಲಿದಾನ ನೀಡಿದ್ದಾರೆ’ ಎಂದು ಹೇಳುವ ಮೂಲಕ ಕಾರ್ಗಿಲ್‌ ಯುದ್ಧದಲ್ಲಿ ಪಾಕ್‌ ಸೇನೆ ಕೂಡಾ ಸಕ್ರಿಯವಾಗಿ ಭಾಗಿಯಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ.

1999ರ ಮೇ ತಿಂಗಳಲ್ಲಿ ಪಾಕ್‌ ಸೇನೆ ಕಾರ್ಗಿಲ್‌ ವಲಯದ ಟೈಗರ್‌ ಹಿಲ್‌ ಮೇಲೆ ದಾಳಿ ನಡೆಸಿತ್ತು. ಪಾಕ್‌ ಸೇನೆ ಹಿಮ್ಮೆಟ್ಟಿಸಲು ಭಾರತ ಆಪರೇಷನ್‌ ವಿಜಯ್‌ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿ, ಜುಲೈ ಅಂತ್ಯದ ವೇಳೆ ಪಾಕ್‌ ಸೇನೆ ಕಾರ್ಗಿಲ್‌ ವಲಯದಿಂದ ಹಿಂದೆ ಸರಿಯುವಂತೆ ಮಾಡಿತ್ತು. ಅಂದಿನ ಪಾಕ್‌ ಸೇನಾ ಮುಖ್ಯಸ್ಥ ಪರ್ವೇಜ್‌ ಮುಷರ್ರಫ್‌ ಈ ದಾಳಿ ಸಂಚು ರೂಪಿಸಿದ್ದರು ಎನ್ನಲಾಗಿದೆ. ಆದರೆ ಯುದ್ಧದಲ್ಲಿ ಪಾಕ್‌ ಸೇನೆ ಹೀನಾಯ ಸೋಲುಕಂಡಿತ್ತು.