ಮುಂಬೈ ದಾಳಿ ಸಂಚುಕೋರ ರಾಣಾ ಅಮೆರಿಕದಲ್ಲಿ ಬಂಧನ| ಭಾರತಕ್ಕೆ ಗಡೀಪಾರು ಸಾಧ್ಯತೆ

ವಾಷಿಂಗ್ಟನ್‌/ಮುಂಬೈ(ಜೂ.21): 166 ಜನರ ಬಲಿ ಪಡೆದ 2008ರ ಮುಂಬೈ ದಾಳಿ ಪ್ರಕರಣದ ಸಂಚುಕೋರ, ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ತಹಾವುರ್‌ ರಾಣಾನನ್ನು ಅಮೆರಿಕ ಪೊಲೀಸರು ಮರುಬಂಧನಕ್ಕೆ ಒಳಪಡಿಸಿದ್ದಾರೆ. ಜೊತೆಗೆ ದ್ವಿಪಕ್ಷೀಯ ಒಪ್ಪಂದದ ಅನ್ವಯ ಆತನನ್ನು ಶೀಘ್ರ ಭಾರತಕ್ಕೆ ಗಡೀಪಾರು ಮಾಡುವ ಸಾಧ್ಯತೆ ಇದೆ.

Add Asianetnews Kannada as a Preferred SourcegooglePreferred

ಪಾಕ್‌- ಅಮೆರಿಕನ್‌ ಪ್ರಜೆ ಡೇವಿಡ್‌ ಹೆಡ್ಲಿ ಜೊತೆಗೂಡಿದ್ದ ತಹಾವುರ್‌, ಲಷ್ಕರ್‌ ಸಂಘಟನೆಯೊಡಗೂಡಿ ಭಾರತದಾದ್ಯಂತ ದಾಳಿಯ ಸಂಚು ರೂಪಿಸಿದ್ದ. ಈ ವಿಷಯವನ್ನು ವಿಚಾರಣೆ ವೇಳೆ ಹೆಡ್ಲಿ ಒಪ್ಪಿಕೊಂಡಿದ್ದ. ಹೀಗಾಗಿ ಈತನನ್ನು ಪೊಲೀಸರು ಮುಂಬೈ ದಾಳಿ ಪ್ರಕರಣದಲ್ಲಿ ಆರೋಪಿಯನ್ನಾಗಿಸಿದ್ದರು. ಜೊತೆಗೆ ಈ ಪ್ರಕರಣದಲ್ಲಿ ನ್ಯಾಯಾಲಯ ಆತನಿಗೆ 14 ವರ್ಷ ಶಿಕ್ಷೆ ಕೂಡ ವಿಧಿಸಿತ್ತು.

ದಾವೂದ್‌ ಜೊತೆಗೂಡಿ ಭಾರತದಲ್ಲಿ ದಾಳಿಗೆ ಲಷ್ಕರ್‌ ಉಗ್ರ ಸಂಚು!

2009ರಲ್ಲೇ ತಹಾವುರ್‌ನನ್ನು ಮುಂಬೈ ದಾಳಿ ಪ್ರಕರಣದಲ್ಲಿ ಅಮೆರಿಕದಲ್ಲಿ ಬಂಧಿಸಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಆತ ಪಾರಾಗಿದ್ದ. ಆದರೆ ಡೆನ್ಮಾರ್ಕ್ನ ಪತ್ರಿಕೆಯೊಂದರ ಮೇಲಿನ ದಾಳಿ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ. ಆದರೆ ಇತ್ತೀಚೆಗೆ ತಾನು ಕೊರೋನಾಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಬಿಡುಗಡೆ ಮಾಡುವಂತೆ ಕೋರಿದ್ದ. ಇದನ್ನು ಮಾನ್ಯ ಮಾಡಿ ಕೋರ್ಟ್‌ ಇತ್ತೀಚೆಗಷ್ಟೇ ಆತನನ್ನು ಬಿಡುಗಡೆ ಮಾಡಿತ್ತು. ಆದರೆ ಬಿಡುಗಡೆ ಮಾರನೇ ದಿನವೇ ಅಂದರೆ ಜೂ.10ರಂದು ಭಾರತ ಈ ಹಿಂದೆಯೇ ಮಾಡಿದ್ದ ಕೋರಿಕೆ ಅನ್ವಯ ತಹಾವುರ್‌ನನ್ನು ಪೊಲೀಸರು ಬಂಧಿಸಿ, ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಕೋರ್ಟ್‌ ಪ್ರಕರಣದ ವಿಚಾರಣೆಯನ್ನು ಜೂ.30ಕ್ಕೆ ಮುಂದೂಡಿದೆ.

ಈ ನಡುವೆ ತಹಾವುರ್‌ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದರೆ ಪಾಕ್‌ ಗುಪ್ತಚರ ಸಂಸ್ಥೆ ಐಎಸ್‌ಐ ಕುರಿತು ಇನ್ನಷ್ಟುಹೆಚ್ಚಿನ ಮಾಹಿತಿ ಹೊರಬೀಳಲಿದೆ ಎಂದು ಮುಂಬೈ ಪ್ರಕರಣದ ವಿಶೇಷ ಅಭಿಯೋಜಕರಾಗಿದ್ದ ಉಜ್ವಲ್‌ ನಿಕ್ಕಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಗ್ರ ಸಯೀದ್ ಶಾಲೆ ಮಕ್ಕಳು ಸರ್ಕಾರಿ ಶಾಲೆಗೆ, ನೆರವು ಕಟ್!

ಯಾರು ಈ ತಹಾವುರ್‌?

ಈತ ಪಾಕಿಸ್ತಾನದ ಸೇನೆಯಲ್ಲಿ ಈ ಮೊದಲು ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದ. ಬಳಿಕ ಕೆನಡಾಕ್ಕೆ ತೆರಳಿ ಅಲ್ಲಿ ಪೌರತ್ವ ಪಡೆದುಕೊಂಡ. ಅಲ್ಲಿ ಉದ್ಯಮಿಯಾಗಿ ಕಾರ್ಯನಿರ್ವಹಿಸುತ್ತಲೇ ಉಗ್ರ ಸಂಘಟನೆಗಳ ಜೊತೆಗೂಡಿದ್ದ.