ವೈದ್ಯಕೀಯ ಸ್ಥಳಾಂತರಕ್ಕೆ ಭಾರತದ ಚಾಪರ್ ಬಳಸಲು ಮಾಲ್ಡೀವ್ಸ್ ಸರ್ಕಾರ ಒಪ್ಪದ ಹಿನ್ನೆಲೆಯಲ್ಲಿ ಚಿಕಿತ್ಸೆ ವಿಳಂಬವಾಗಿ 13 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. 

ಭಾರತೀಯ ಹೆಲಿಕಾಪ್ಟರ್‌ಗಳನ್ನು ಬಳಸಲು ಮಾಲ್ಡೀವ್ಸ್ ಸರ್ಕಾರವು ಹಿಂಜರಿಕೆ ತೋರಿದ ಪರಿಣಾಮ, ವೈದ್ಯಕೀಯ ಸ್ಥಳಾಂತರದ ವಿಳಂಬದಿಂದಾಗಿ ಮಾಲ್ಡೀವ್ಸ್‌ನಲ್ಲಿ 13 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಶನಿವಾರದಂದು ಮಾಲ್ಡೀವಾನ್ ರಾಜಧಾನಿಯ ಇಂದಿರಾ ಗಾಂಧಿ ಸ್ಮಾರಕ ಆಸ್ಪತ್ರೆಯಲ್ಲಿ (IGMH) ಯುವ ಶಾಲಾ ಬಾಲಕ ಸಾವನ್ನಪ್ಪಿದ್ದಾನೆ ಎಂದು ಸನ್ ಆನ್‌ಲೈನ್ ಔಟ್‌ಲೆಟ್ ವರದಿ ಮಾಡಿದೆ.

Add Asianetnews Kannada as a Preferred SourcegooglePreferred

ಶನಿವಾರ ಬೆಳಗ್ಗೆ 13 ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿಸಿರುವ ಸರ್ಕಾರಿ ಆಸ್ಪತ್ರೆ, ಸಾವಿನ ಕಾರಣವನ್ನು ತಿಳಿಸಲು ಮಾತ್ರ ನಿರಾಕರಿಸಿದೆ.

ಭಾರತ-ಮಾಲ್ಡೀವ್ಸ್ ಸಂಬಂಧ ಹಳಸಿರುವ ಹಿನ್ನೆಲೆಯಲ್ಲಿ, ಮಾಲ್ಡೀವ್ಸ್‌ನ ವಿಲಿಂಗಿಲಿಯಿಂದ ಮಾಲೆಗೆ ಮಗುವನ್ನು ಸಾಗಿಸಲು ಲಭ್ಯವಿದ್ದ ಭಾರತದ ಚಾಪರ್ ಬಳಸಿಲ್ಲ. ಒಂದು ವೇಳೆ ತುರ್ತು ಚಿಕಿತ್ಸೆ ಸಿಕ್ಕಿದ್ದರೆ ಮಗು ಬದುಕುತಿತ್ತು ಎನ್ನಲಾಗಿದೆ. 

ಮಾಲ್ಡೀವ್ಸ್‌ನಲ್ಲಿ ಎಷ್ಟು ಭಾರತೀಯ ಸೈನಿಕರಿದ್ದಾರೆ? ನಮ್ಮ ಸೈನಿಕರು ದ್ವೀಪ ರಾಷ್ಟ್ರದಲ್ಲಿರೋದ್ಯಾಕೆ ನೋಡಿ..

ಭಾರತವು ಈ ಹಿಂದೆ ಎರಡು ನೌಕಾ ಹೆಲಿಕಾಪ್ಟರ್‌ಗಳು ಮತ್ತು ಡಾರ್ನಿಯರ್ ವಿಮಾನವನ್ನು ವೈದ್ಯಕೀಯ ಸ್ಥಳಾಂತರಿಸುವಿಕೆ ಮತ್ತು ಇತರ ವಿಪತ್ತು ಚೇತರಿಕೆ ಚಟುವಟಿಕೆಗಳಿಗಾಗಿ ಮಾಲ್ಡೀವ್ಸ್‌ಗೆ ಒದಗಿಸಿತ್ತು. ಇದಲ್ಲದೆ, ಭಾರತವು ಸೇನೆ, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಸುಮಾರು 89 ಸಿಬ್ಬಂದಿಯನ್ನು ಮಾಲ್ಡೀವ್ಸ್‌ನಲ್ಲಿ ನಿಯೋಜಿಸಿದೆ. ಮಾಲ್ಡೀವಿಯನ್ ಸರ್ಕಾರವು ಭಾರತೀಯ ಸೇನಾ ಸಿಬ್ಬಂದಿಯನ್ನು ಹೊರಹಾಕಲು ಒತ್ತಾಯಿಸುತ್ತಿರುವುದರಿಂದ ಭಾರತೀಯ ಹೆಲಿಕಾಪ್ಟರ್‌ಗಳ ಬಳಕೆ ಮಾಡದೆ, ತನ್ನ ಹಟದಿಂದಾಗಿ ಮಗುವಿನ ಪ್ರಾಣದ ಜೊತೆ ಆಟವಾಡಿದೆ.

ಮಾರ್ಚ್ 15ರೊಳಗೆ ಸೇನೆ ವಾಪಸ್ ಕರೆಯಿಸಿ, ಭಾರತಕ್ಕೆ ಡೆಡ್‌ಲೈನ್ ನೀಡಿದ ಮಾಲ್ಡೀವ್ಸ್!

ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಕಾರ್ಯಸಾಧ್ಯ ಪರಿಹಾರವನ್ನು ಕಂಡುಹಿಡಿಯಲು ನಡೆಯುತ್ತಿರುವ ಮಾತುಕತೆಗಳ ಹೊರತಾಗಿಯೂ ಮಾರ್ಚ್ 15ರೊಳಗೆ ಭಾರತೀಯ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಭಾರತಕ್ಕೆ ಗಡುವು ನೀಡಿದ್ದಾರೆ. ಭಾರತೀಯ ಹೆಲಿಕಾಪ್ಟರ್‌ಗಳನ್ನು ಬಳಸದಿರುವ ನಿರ್ಧಾರವನ್ನು ಮಾಲ್ಡೀವ್ಸ್ ರಕ್ಷಣಾ ಸಚಿವ ಮೊಹಮದ್ ಘಸ್ಸನ್ ಸಮರ್ಥಿಸಿಕೊಂಡಿದ್ದರಿಂದ ಬಾಲಕನ ಸಾವಿನ ವಿವಾದವು ಗಾಢವಾಗಿದೆ. 

ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಹೋಗಿ ಅಲ್ಲಿನ ಪ್ರವಾಸೋದ್ಯಮಕ್ಕೆ ಒತ್ತು ಕೊಟ್ಟಾಗ ಮಾಲ್ಡೀವ್ಸ್ ಸಚಿವರು ಅತಿರೇಖದ ಮಾತುಗಳನ್ನಾಡಿದ್ದು ಭಾರತೀಯರನ್ನು ಕೆರಳಿಸಿತ್ತು. ಇದು ಭಾರತೀಯರು ಮಾಲ್ಡೀವ್ಸ್ ಪ್ರವಾಸ ರದ್ದು ಮಾಡಲು ಕಾರಣವಾಯಿತು. ಈ ಹಿನ್ನೆಲೆಯಲ್ಲಿ ಮಾಲ್ಡೀವ್ಸ್- ಭಾರತ ಸಂಬಂಧ ಹದಗೆಟ್ಟಿದೆ. ಇದಕ್ಕೂ ಮುನ್ನ, 2020ರಿಂದಲೇ ಮಾಲ್ಡೀವ್ಸ್‌ನಲ್ಲಿ 'ಇಂಡಿಯಾ ಔಟ್' ಅನ್ನೋ ಪ್ರಚಾರ ಪ್ರಾರಂಭವಾಗಿದೆ. ಭಾರತೀಯ ಸೇನೆ ಅಲ್ಲಿರಬಾರದೆಂಬ ಕೂಗು ಕೇಳಿಬರುತ್ತಿದೆ. ಚೀನಾ ಪರ ಒಲವನ್ನು ಹೊಂದಿರುವ ಪ್ರಗತಿಶೀಲ ಪಕ್ಷದ (ಪಿಪಿಎಂ) ಅಬ್ದುಲ್ಲಾ ಯಮೀನ್ ಅಬ್ದುಲ್ ಗಯೂಮ್ 2013 ರಲ್ಲಿ ಅಧ್ಯಕ್ಷರಾದಾಗಿನಿಂದ ಭಾರತದ ವಿರುದ್ಧದ ಅಸಮಾಧಾನ ನಿರ್ಮಾಣವಾಗಿದೆ.

ಈ ಪರಿಸ್ಥಿತಿಯು ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಹದಗೆಟ್ಟ ಸಂಬಂಧಗಳನ್ನು ಒತ್ತಿಹೇಳುತ್ತಿದೆ. ಮಾಲ್ಡೀವ್ಸ್ ಚೀನಾದೊಂದಿಗೆ ಸಂಬಂಧ ಬೆಸೆದುಕೊಳ್ಳಲು ಪ್ರಯತ್ನ ಹಾಕುತ್ತಿದೆ.