ಈ ಪುಸ್ತಕ ಮೇಳಕ್ಕೆ ಸಾವಿರಾರು ಜನ ಆಗಮಿಸಿದ್ದರು. ಆದರೆ ಇಲ್ಲಿ ಸೇಲ್ ಆದ ಪುಸ್ತಕಗಳ ಸಂಖ್ಯೆ ಕೇವಲ 35 ಎಂದು ವರದಿಯಾಗಿದೆ. ಆದರೆ ಇದರ ಬದಲಾಗಿ ಇಲ್ಲಿ 1200 ಪ್ಲೇಟ್ ಬಿರಿಯಾನಿ 800 ಶವಾರ್ಮಗಳು ಸೇಲ್ ಆಗಿವೆ.

ಎಲ್ಲಾ ದೇಶ ರಾಜ್ಯ, ನಗರಗಳಲ್ಲಿ ಆಗಾಗ ಪುಸ್ತಕ ಮೇಳಗಳು ನಡೆಯುತ್ತಿರುತ್ತವೆ. ಪುಸ್ತಕ ಮೇಳದ ಜೊತೆ ಜೊತೆಗೆ ಅನೇಕ ಆಹಾರಗಳು ಇತರ ಉತ್ಪನ್ನಗಳನ್ನು ಅಲ್ಲಿ ಸೇಲ್ ಮಾಡಲಾಗುತ್ತದೆ. ಸಾಹಿತ್ಯಪ್ರಿಯರು ಈ ಪುಸ್ತಕ ಮೇಳಕ್ಕೆ ಹೋಗಿ ಪುಸ್ತಕಗಳನ್ನು ಖರೀದಿಸುತ್ತಾರೆ. ಸ್ಥಳೀಯ ಅಂಗಡಿಗಳಲ್ಲಿ ಲಭ್ಯವಿರದ, ಜಗತ್ತಿನ ವಿವಿಧ ಪಬ್ಲಿಕೇಷನ್‌ಗಳ ವಿವಿಧ ಖ್ಯಾತ ಬರಹಗಾರರ ಪುಸ್ತಕಗಳು ಇಲ್ಲಿ ಸುಲಭದಲ್ಲಿ ಸಿಗುತ್ತವೆ. ಹೀಗಾಗಿ ಅನೇಕ ಸಾಹಿತ್ಯ ಪ್ರಿಯರು ಈ ಪುಸ್ತಕ ಮೇಳಕ್ಕೆ ಹೋಗಿ ಪುಸ್ತಕಗಳನ್ನು ಖರೀದಿಸುತ್ತಾರೆ. ಅದೇ ರೀತಿ ಕೆಲ ದಿನಗಳ ಹಿಂದೆ ಪಾಕಿಸ್ತಾನದ ಲಾಹೋರ್‌ನಲ್ಲಿ ಸಾಹಿತ್ಯಪ್ರಿಯರಿಗಾಗಿ ಪುಸ್ತಕ ಮೇಳವನ್ನು ಆಯೋಜಿಸಲಾಗಿತ್ತು. ಆದರೆ ಅಲ್ಲಿ ಸೇಲ್ ಆದ ಪುಸ್ತಕಗಳ ಸಂಖ್ಯೆ ಕೇಳಿದ್ರೆ ನೀವು ಗಾಬರಿಯಾಗ್ತಿರಿ.

ಹಾಗಿದ್ರೆ ಪುಸ್ತಕ ಮೇಳದಲ್ಲಿ ಸೇಲಾದ ಪುಸ್ತಕಗಳೆಷ್ಟು?

ಹೌದು ಪುಸ್ತಕ ಸಂಸ್ಕೃತಿ, ಸಾಹಿತ್ಯ ಹಾಗೂ ಬೌದ್ಧಿಕ ಪರಂಪರೆಯನ್ನು ಸಂಭ್ರಮಿಸುವುದಕ್ಕಾಗಿ ಕೆಲ ದಿನಗಳ ಹಿಂದೆ ಲಾಹೋರ್‌ನಲ್ಲಿ ಪುಸ್ತಕ ಮೇಳವನ್ನು ಅಯೋಜಿಸಿದವರಿಗೆ ನಿರಾಶೆ ಕಾದಿತ್ತು. ಇದಕ್ಕೆ ಕಾರಣವಾಗಿದ್ದು, ಮಾರಾಟವಾದ ಪುಸ್ತಕಗಳ ಸಂಖ್ಯೆ. ಹೌದು ಈ ಪುಸ್ತಕ ಮೇಳಕ್ಕೆ ಸಾವಿರಾರು ಜನ ಆಗಮಿಸಿದ್ದರು. ಆದರೆ ಇಲ್ಲಿ ಸೇಲ್ ಆದ ಪುಸ್ತಕಗಳ ಸಂಖ್ಯೆ ಕೇವಲ 35 ಎಂದು ವರದಿಯಾಗಿದೆ. ಆದರೆ ಇದರ ಬದಲಾಗಿ ಇಲ್ಲಿ 1200 ಪ್ಲೇಟ್ ಬಿರಿಯಾನಿ 800 ಶವಾರ್ಮಗಳು ಸೇಲ್ ಆಗಿವೆ. ಇದರಿಂದಾಗಿ ಪುಸ್ತಕ ಮೇಳದಲ್ಲಿದ್ದ ಆಹಾರ ಮೇಳವೇ ಇಲ್ಲಿ ಜನರ ಆಕರ್ಷಣೆಗೆ ಕಾರಣವಾಯ್ತು, ಪುಸ್ತಕ ಮೇಳವೇ ರಾರಾಜಿಸಬೇಕಾದ ಈ ಕಾರ್ಯಕ್ರಮದಲ್ಲಿಆಹಾರವೇ ಜನರ ಪ್ರಮುಖ ಆಕರ್ಷಣೆ ಆಯ್ತು ಎಂದು ವರದಿಯಾಗಿದೆ.

ಪಾಕಿಸ್ತಾನದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕೇಂದ್ರ ಎನಿಸಿರುವ ಲಾಹೋರ್ ದೀರ್ಘಕಾಲದಿಂದ ಸಾಹಿತ್ಯ ಸಂಸ್ಕೃತಿಗಳಿಗೆ ಖ್ಯಾತಿ ಪಡೆದಿದೆ. ಹೀಗಿದ್ದರೂ. ಈ ರೀತಿಯ ಬದಲಾವಣೆಯು ಸಾಹಿತ್ಯ ಪ್ರಿಯರನ್ನು ವಿಶೇಷವಾಗಿ ಅಚ್ಚರಿಗೀಡು ಮಾಡಿತು. ಲಾಹೋರ್ ನಗರವು ಸಾದತ್ ಹಸನ್ ಮಾಂಟೊ ಮತ್ತು ಫೈಜ್ ಅಹ್ಮದ್ ಫೈಜ್‌ರಂತಹ ಪ್ರಸಿದ್ಧ ಬರಹಗಾರರ ಕಾರಣಕ್ಕೆ ಹೆಸರಾಗಿದೆ. ಮತ್ತು ಐತಿಹಾಸಿಕವಾಗಿ ಓದು, ಕಾವ್ಯ ಮತ್ತು ಬೌದ್ಧಿಕ ಪ್ರವಚನದ ಕೇಂದ್ರವಾಗಿದೆ. ಆದರೂ, ಈ ಕಾರ್ಯಕ್ರಮದಲ್ಲಿ, ಜನಸಮೂಹವು ಪುಸ್ತಕಗಳಿಗಿಂತ ಆಹಾರದ ಕಡೆಗೆ ಆಕರ್ಷಿತವಾಗಿದ್ದು, ಪಾಕಿಸ್ತಾನದ ಜನರ ಇಂದಿನ ಮನ ಹಾಗೂ ಮನಿಸ್ಥಿತಿಯನ್ನು ಪ್ರತಿಬಿಂಬಿಸಿರುವುದಂತು ಸುಳ್ಳಲ್ಲ.

ಹೊಟ್ಟೆಗೆ ತಿನ್ನೋಕೆ ಅನ್ನವಿಲ್ಲದೇ ಇದ್ದಾಗ ಹಾಸಿವು ನೀಗಿಸದ ಸಾಹಿತ್ಯ ಯಾರಿಗೆ ಬೇಕು ಅಲ್ವಾ? ಹೇಳಿ ಕೇಳಿ ಪಾಕಿಸ್ತಾನ ರಾಜಕೀಯ ಆಸ್ಥಿರತೆ ಹಾಗೂ ಆರ್ಥಿಕ ಸಂಕಷ್ಟ, ಅಂತರಿಕ ಕಲಹ, ಭಯೋತ್ಪಾದನೆ, ಮತಾಂಧತೆಯ ಕಾರಣದಿಂದ ಅಭಿವೃದ್ಧಿ ಕಾಣದೇ ಬಳಲುತ್ತಿದೆ. ಶ್ರೀಮಂತರು ಇಲ್ಲಿ ಎಲ್ಲಾ ಸವಲತ್ತುಗಳನ್ನು ಹೊಂದಿದ್ದರೆ, ಬಡವರು ಒಂದು ಹೊತ್ತು ಅನ್ನಕ್ಕೂ ಪರದಾಡುವಂತಾಗಿದೆ. ಆರ್ಥಿಕ ಸಂಕಷ್ಟದಿಂದಾಗಿ ಜನರ ದಿನನಿತ್ಯದ ಅಗತ್ಯಗಳ ಬೆಲೆ ಗಗನಕ್ಕೇರಿದೆ. ಹೀಗಿರುವಾಗ ಜನರಿಗೆ ಸದ್ಯದ ಸ್ಥಿತಿಯಲ್ಲಿ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಿಂತಲೂ ದೊಡ್ಡ ಕಲೆ ಬೇರೆ ಬೇಕಿಲ್ಲ. ಇದೇ ಕಾರಣಕ್ಕೆ ಸಾಹಿತ್ಯ ಮೇಳದಲ್ಲಿ ಜನ ಸಾಹಿತ್ಯದ ಪುಸ್ತಕಗಳ ಬದಲು ಆಹಾರದ ಅತೀ ಹೆಚ್ಚು ಆಕರ್ಷಿತರಾಗಿದ್ದಾರೆ.

ಏಷ್ಯಾ ನ್ಯೂಸ್ ನೆಟ್‌ವರ್ಕ್‌ ಈ ಬಗ್ಗೆ ವರದಿ ಮಾಡಿದ್ದು, ಪಾಕಿಸ್ತಾನದ ಈ ಅಸಮತೋಲನವನ್ನು ಎತ್ತಿ ತೋರಿಸಿದೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದ್ದಂತೆ ಹಲವು ಕಾಮೆಂಟ್‌ಗಳನ್ನು ನೆಟ್ಟಿಗರು ಮಾಡಿದ್ದಾರೆ. ಇದು ಪಾಕಿಸ್ತಾನದಲ್ಲಿ ಕಡಿಮೆಯಾಗುತ್ತಿರುವ ಓದುವ ಸಂಸ್ಕೃತಿಯ ಸಂಕೇತ ಎಂದು ಕೆಲವರು ಹೇಳಿದರೆ ಇನ್ನೂ ಕೆಲವವರು ಇದೊಂದು ಮುಜುಗರದ ಸಂಗತಿ ಎಂದು ಬಣ್ಣಿಸಿದ್ದಾರೆ. ಮತ್ತೆ ಕೆಲವರು ದೇಶದಲ್ಲಿ ಬಲವಾದ ಸಾಹಿತ್ಯ ಸಂಪ್ರದಾಯದ ಕೊರತೆಯಿದೆ ಎಂದು ವಿಷಾದಿಸಿದರು.

ದೇಶದ ಹಾಗೂ ಜನರ ಆರ್ಥಿಕ ದುಸ್ಥಿತಿ ಕೂಡ ಇದಕ್ಕೆ ಮತ್ತೊಂದು ಕಾರಣವಾಗಿದೆ. ಮೇಳದಲ್ಲಿ ಪುಸ್ತಕಗಳು ಆಹಾರಕ್ಕಿಂತ ಗಮನಾರ್ಹವಾಗಿ ಹೆಚ್ಚು ದುಬಾರಿಯಾಗಿದ್ದವು ಎಂದು ವರದಿಯಾಗಿದೆ. ಇದರಿಂದಾಗಿ ಅನೇಕ ಸಂದರ್ಶಕರಿಗೆ ಅವುಗಳ ಖರೀದಿಸುವ ಸಾಮರ್ಥ್ಯ ಇರಲಿಲ್ಲ. ಬಿರಿಯಾನಿ ಅಥವಾ ಷಾವರ್ಮಾ ಬೆಲೆ ಸುಮಾರು 100 ರೂಪಾಯಿಗಳಾಗಿದ್ದರೆ, ಪುಸ್ತಕಗಳು 400 ರಿಂದ 500 ರೂಪಾಯಿಗಳಿಗಿಂತ ಹೆಚ್ಚು ದರದ್ದಾಗಿದ್ದವು ಎಂದು ವರದಿಯಾಗಿದೆ. ಹೀಗಾಗಿ ಅನೇಕರು ಕೆಲವರು ಸೆಕೆಂಡ್ ಹ್ಯಾಂಡ್ ಪುಸ್ತಕ ಮಳಿಗೆಗಳು ಉತ್ತಮ ಬೆಲೆಗಳು ಮತ್ತು ಹೆಚ್ಚಿನ ವೈವಿಧ್ಯತೆಯನ್ನು ನೀಡುತ್ತವೆ ಎಂದು ಭಾವಿಸಿದರು ಎಂದು ವರದಿಯಾಗಿದೆ.