ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜಮ್ಮು-ಕಾಶ್ಮೀರದ ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದ ಪಾಕಿಸ್ತಾನವನ್ನು ಭಾರತ ತರಾಟೆಗೆ ತೆಗೆದುಕೊಂಡಿದ್ದು, ‘ಇಂತಹ ಹೇಳಿಕೆಗಳು ದೇಶದ ಹಕ್ಕನ್ನು ಮಾನ್ಯ ಮಾಡುವುದಿಲ್ಲ. ಗಡಿಯಾಚೆಗಿನ ಭಯೋತ್ಪಾದನೆಯನ್ನು ನಾವೆಂದೂ ಸಮರ್ಥಿಸುವುದಿಲ್ಲ’ ಎಂದಿದೆ. 

ವಿಶ್ವಸಂಸ್ಥೆ (ಮಾ.16): ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜಮ್ಮು-ಕಾಶ್ಮೀರದ ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದ ಪಾಕಿಸ್ತಾನವನ್ನು ಭಾರತ ತರಾಟೆಗೆ ತೆಗೆದುಕೊಂಡಿದ್ದು, ‘ಇಂತಹ ಹೇಳಿಕೆಗಳು ದೇಶದ ಹಕ್ಕನ್ನು ಮಾನ್ಯ ಮಾಡುವುದಿಲ್ಲ. ಗಡಿಯಾಚೆಗಿನ ಭಯೋತ್ಪಾದನೆಯನ್ನು ನಾವೆಂದೂ ಸಮರ್ಥಿಸುವುದಿಲ್ಲ’ ಎಂದಿದೆ. ‘ಇಸ್ಲಾಂ ವಿರೋಧಿ ಧೋರಣೆ ನಿಗ್ರಹ ದಿನ’ದ ಅಂಗವಾಗಿ ನಡೆದ ಸಭೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ತೆಹ್ಮಿನಾ ಜಂಜುವಾ ಜಮ್ಮು ಕಾಶ್ಮೀರದ ವಿಚಾರವನ್ನು ಕೆದಕಿದ್ದರು ಹಾಗೂ ‘ಕಾಶ್ಮೀರದಲ್ಲಿನ ಪರಿಸ್ಥಿತಿ ಪ್ಯಾಲೆಸ್ತೀನ್‌ನ ಗಾಜಾ ರೀತಿ ಆಗಿದೆ. ಮುಸ್ಲಿಮರ ಹತ್ಯೆ ನಡೆಯುತ್ತಿದೆ’ ಎಂದು ಆರೋಪಿಸಿದರು.

Add Asianetnews Kannada as a Preferred SourcegooglePreferred

ಇದಕ್ಕೆ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ರಾಯಭಾರಿ ಪಿ. ಹರೀಶ್‌, ‘ಅವರ ಹಳೇ ಚಾಳಿಯಂತೆ ಪಾಕಿಸ್ತಾನದ ಅಧಿಕಾರಿ ನಮ್ಮಜಮ್ಮು-ಕಾಶ್ಮೀರದ ಬಗ್ಗೆ ಅನಾವಶ್ಯಕ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯನ್ನು ನಾವು ಮನ್ನಿಸಲ್ಲ. ಗಡಿಯಾಚೆಗಿನ ಉಗ್ರವಾದವನ್ನು ಸಮರ್ಥಿಸಲ್ಲ. ಆ ದೇಶದ ಮತಾಂಧ ಮನಸ್ಥಿತಿ ಎಲ್ಲರಿಗೂ ತಿಳಿದಿದೆ. ಅದರ ಧರ್ಮಾಂಧತೆಯ ದಾಖಲೆಯೂ ಸಹ ತಿಳಿದಿದೆ. ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿತ್ತು. ಈಗಲೂ ಇದೆ. ಯಾವಾಗಲೂ ಇರುತ್ತದೆ.ಈ ವಾಸ್ತವವನ್ನು ಪಾಕಿಸ್ತಾನದ ವಾದಗಳು ಬದಲಿಸುವುದಿಲ್ಲ’ ಎಂದು ಖಾರವಾಗಿ ನುಡಿದರು.

ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದ ಸಿದ್ದರಾಮಯ್ಯ ಸರ್ಕಾರ: ಬಿ.ವೈ.ವಿಜಯೇಂದ್ರ

ಮುಸ್ಲಿಮರ ವಿರುದ್ಧ ಅಸಹಿಷ್ಣುತೆ ಸಹಿಸೆವು: ‘ಮುಸ್ಲಿಮರ ವಿರುದ್ಧದ ಧಾರ್ಮಿಕ ಅಸಹಿಷ್ಣುತೆಯನ್ನು ಖಂಡಿಸುವಲ್ಲಿ ಭಾರತವು ವಿಶ್ವಸಂಸ್ಥೆಯ ಇತರ ದೇಶಗಳೊಂದಿಗೆ ಒಗ್ಗಟ್ಟಾಗಿದೆ’ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಸರ್ಕಾರ ತಿಳಿಸಿದೆ.ಅಂತಾರಾಷ್ಟ್ರೀಯ ಇಸ್ಲಾಮೋಫೋಬಿಯಾ ನಿಗ್ರಹ ದಿನದ ನಿಮಿತ್ತ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಭಾರತದ ಕಾಯಂ ಪ್ರತಿನಿಧಿ ಪಿ. ಹರೀಶ್, ‘ಧಾರ್ಮಿಕ ತಾರತಮ್ಯ, ದ್ವೇಷ ಮತ್ತು ಹಿಂಸಾಚಾರದಿಂದ ಮುಕ್ತವಾದ ಜಗತ್ತನ್ನು ಬೆಳೆಸುವುದು ಅನಾದಿ ಕಾಲದಿಂದಲೂ ಭಾರತದ ಜೀವನ ವಿಧಾನವಾಗಿದೆ. ಭಾರತ ಹಿಂದೂ, ಬೌದ್ಧ, ಜೈನ ಹಾಗೂ ಸಿಖ್‌ ಧರ್ಮದ ಜನ್ಮಸ್ಥಾನ. ಮುಸ್ಲಿಮರ ವಿರುದ್ಧದ ಧಾರ್ಮಿಕ ಅಸಹಿಷ್ಣುತೆಯ ಘಟನೆ ಖಂಡಿಸುವಲ್ಲಿ ನಾವು ವಿಶ್ವಸಂಸ್ಥೆಯ ಸದಸ್ಯ ದೇಶಗಳ ಜತೆ ಒಗ್ಗಟ್ಟಾಗಿ ನಿಲ್ಲುತ್ತೇವೆ. ಎಲ್ಲಾ ದೇಶಗಳು ತಮ್ಮ ಎಲ್ಲಾ ನಾಗರಿಕರನ್ನು ಸಮಾನವಾಗಿ ಪರಿಗಣಿಸಲು ಬದ್ಧವಾಗಿರಬೇಕು ಮತ್ತು ಧಾರ್ಮಿಕ ತಾರತಮ್ಯವನ್ನು ಉತ್ತೇಜಿಸುವ ನೀತಿಗಳನ್ನು ಅನುಸರಿಸಬಾರದು’ ಎಂದು ಹೇಳಿದರು.

ಪಾಕ್‌ ಸೇರಿ 41 ದೇಶಕ್ಕೆ ಅಮೆರಿಕ ವೀಸಾ ನಿರ್ಬಂಧ?: ಅಮೆರಿಕದ ಡೊನಾಲ್ಡ್‌ ಟ್ರಂಪ್ ಆಡಳಿತವು ತನ್ನ ಭದ್ರತೆ ದೃಷ್ಟಿಯಿಂದ ಪಾಕಿಸ್ತಾನ, ಭೂತಾನ್‌ ಸೇರಿ 41 ದೇಶಗಳಿಗೆ ನೀಡುವ ವೀಸಾ ಮೇಲೆ ಕೆಲವು ನಿರ್ಬಂಧ ಹೇರುವ ಸಾಧ್ಯತೆ ಇದೆ. ಅಮೆರಿಕ ಅಧ್ಯಕ್ಷರಾಗಿ ಟ್ರಂಪ್‌ ಅವರು ತಮ್ಮ ಮೊದಲ ಅವಧಿಯಲ್ಲಿ ಕೆಲ ಮುಸ್ಲಿಂ ರಾಷ್ಟ್ರಗಳ ಮೇಲೆ ಪ್ರಯಾಣ ನಿರ್ಬಂಧ ಹೇರಿದ್ದರು. ಇದೀಗ 41 ರಾಷ್ಟ್ರಗಳ ಮೇಲೆ ಪ್ರಯಾಣ ನಿರ್ಬಂಧ ಹೇರುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಟ್ರಂಪ್‌ ಆಡಳಿತವು ನಿರ್ಬಂಧ ಹೇರಲು ಉದ್ದೇಶಿಸಿರುವ ಈ 41 ದೇಶಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿದೆ. ಮೊದಲ ಗುಂಪಿನಲ್ಲಿ ಅಫ್ಘಾನಿಸ್ತಾನ, ಇರಾನ್‌, ಸಿರಿಯಾ, ಕ್ಯೂಬಾ, ಉತ್ತರ ಕೊರಿಯಾ ಸೇರಿ 10 ದೇಶಗಳಿವೆ. ಈ ದೇಶಗಳಿಗೆ ಅಮೆರಿಕದ ವೀಸಾವನ್ನು ಸಂಪೂರ್ಣವಾಗಿ ರದ್ದು ಮಾಡಲಾಗುವುದು.ಎರಡನೇ ಗುಂಪಿನಲ್ಲಿ ಎರಿಟ್ರಿಯಾ, ಹೈಟಿ, ಲಾವೋಸ್‌, ಮ್ಯಾನ್ಸಾರ್ ಮತ್ತು ದಕ್ಷಿಣ ಸುಡಾನ್‌ ದೇಶಗಳಿದ್ದು, ಕೆಲ ವಿನಾಯ್ತಿಗಳೊಂದಿಗೆ ಪ್ರವಾಸಿ, ಶೈಕ್ಷಣಿಕ ಸೇರಿ ಇತರೆ ವಲಸೆ ವೀಸಾಗಳ ಮೇಲೆ ನಿರ್ಬಂಧ ಹೇರಲಾಗುವುದು.

ನಿಮ್ಮದು ನಾಲಿಗೆನೋ ಎಕ್ಕಡನೋ: ಶಾಸಕ ಯತ್ನಾಳ್‌ಗೆ ರೇಣುಕಾಚಾರ್ಯ ಪ್ರಶ್ನೆ

ಮೂರನೇ ಗುಂಪಿನಲ್ಲಿ ಪಾಕಿಸ್ತಾನ, ಭೂತಾನ್‌, ಮ್ಯಾನ್ಯಾರ್‌ ಸೇರಿ 26 ದೇಶಗಳಿದ್ದು, ಒಂದು ವೇಳೆ ಪ್ರಜೆಗಳ ಪೂರ್ವಾಪರಗಳ ಪರಿಶೀಲನಾ ಕ್ರಮಗಳಲ್ಲಿ ಕಂಡುಬಂದಿರುವ ನ್ಯೂನತೆಗಳನ್ನು 60 ದಿನಗಳಲ್ಲಿ ಈ ದೇಶಗಳ ಸರ್ಕಾರಗಳು ಸರಿಪಡಿಸದಿದ್ದರೆ ಅಮೆರಿಕದ ವೀಸಾಗಳನ್ನು ಭಾಗಶಃ ರದ್ದು ಮಾಡಲಾಗುವುದು ಎಂದು ಹೇಳಲಾಗಿದೆ.ಸದ್ಯಕ್ಕೆ 41 ದೇಶಗಳು ಈ ಪಟ್ಟಿಯಲ್ಲಿರಲಿವೆ ಎಂದು ಹೇಳಲಾಗಿದ್ದರೂ ಈವರೆಗೂ ಈ ಪಟ್ಟಿಗೆ ಒಪ್ಪಿಗೆ ಸಿಕ್ಕಿಲ್ಲ. ಹೀಗಾಗಿ ಈ ಪಟ್ಟಿಯಲ್ಲಿ ಅಂತಿಮ ಕ್ಷಣದಲ್ಲಿ ಬದಲಾವಣೆಯಾದರೂ ಅಚ್ಚರಿ ಇಲ್ಲ ಎಂದು ಮೂಲಗಳು ತಿಳಿಸಿವೆ.