ಹಮಾಸ್ ನಡೆಸಿದ ಘನಘೋರ ದಳಿ ರೀತಿಯಲ್ಲಿ ಪೆಹಲ್ಗಾಮ್‌ನಲ್ಲಿ ದಾಳಿ ನಡೆಸಲಾಗಿದೆ. ಇದೀಗ ಇಸ್ರೇಲ್ ದಿಟ್ಟ ನಿರ್ಧಾರದ ಮೂಲಕ ಹಮಾಸ್ ನಾಯಕತ್ವ ಅಂತ್ಯಹಾಡಿದೆ. ಇದೇ ರೀತಿ ಭಾರತ ಕೂಡ ಪಾಕಿಸ್ತಾನದ ಐಎಸ್ಐ ನಿರ್ನಾಮ ಮಾಡಬೇಕು ಎಂದು ಅಮೆರಿಕ ರಕ್ಷಣಾ ಇಲಾಖೆ ಮಾಜಿ ಅಧಿಕಾರಿ ಸಲಹೆ ನೀಡಿದ್ದಾರೆ.  

ನವದೆಹಲಿ(ಏ.25): ಪಹಲ್ಗಾಮ್‌ ದಾಳಿಗೂ ಕಳೆದ ವರ್ಷ ಅ.7ರಂದು ಇಸ್ರೇಲ್‌ ಮೇಲೆ ಹಮಾಸ್‌ ನಡೆಸಿದ ದಾಳಿಗೂ ಸಾಮ್ಯತೆಗಳಿವೆ. ಹಮಾಸ್‌ ದುಸ್ಸಾಹಸಕ್ಕೆ ಇಸ್ರೇಲ್‌ ಯಾವ ರೀತಿಯ ಪಾಠ ಕಲಿಸಿತೋ ಅದೇ ರೀತಿಯ ಪಾಠವನ್ನು ಇದೀಗ ಭಾರತ ಐಎಸ್‌ಐಗೆ ಕಲಿಸಬೇಕು. ಕಾಶ್ಮೀರವನ್ನು ಪಾಕಿಸ್ತಾನದ ಕಂಠನಾಳ ಎಂದು ಪಾಕ್‌ ಸೇನಾ ಮುಖ್ಯಸ್ಥ ಆಸಿಫ್‌ ಮುನೀರ್‌ ಹೇಳಿದ್ದಾರೆ. ಈಗ ಅದರ ಕಂಠ ನಾಳವನ್ನೇ ಭಾರತ ಕತ್ತರಿಸಬೇಕು. ಪಹಲ್ಗಾಮ್‌ ದಾಳಿ ಹಿನ್ನೆಲೆಯಲ್ಲಿ ಉಗ್ರದಾಳಿಯನ್ನು ಹೇಗೆ ನಿಯಂತ್ರಿಸಬೇಕೆಂಬ ಕುರಿತು ಅಮೆರಿಕದ ರಕ್ಷಣಾ ಇಲಾಖೆ (ಪೆಂಟಗನ್‌)ಯ ಮಾಜಿ ಅಧಿಕಾರಿ ಮೈಕಲ್‌ ರುಬಿನ್‌ ಅವರು ಭಾರತಕ್ಕೆ ನೀಡಿದ ಸಲಹೆ ಇದು.

ಅ.7ರ ಹಮಾಸ್‌ ದಾಳಿ ಗುರಿ ಯೆಹೂದಿಯರಷ್ಟೇ ಆಗಿರಲಿಲ್ಲ, ಬದಲಾಗಿ ಗಾಜಾ ಪಟ್ಟಿಯಲ್ಲಿ ಶಾಂತಿ ಸ್ಥಾಪನೆಯಾಗಬೇಕೆಂಬ ನಿಲುವು ಹೊಂದಿರುವ ಬಹುಸಂಖ್ಯಾತ ಉದಾರವಾದಿಗಳೂ ಆಗಿದ್ದರು. ಅದೇ ರೀತಿ ಪಾಕಿಸ್ತಾನ ಇದೀಗ ಪ್ರವಾಸಕ್ಕೆ ಹೋಗಿದ್ದ ಹಿಂದೂ ಮಧ್ಯಮವರ್ಗದವರನ್ನೇ ಗುರಿಯಾಗಿಸಿ ದಾಳಿ ನಡೆಸಿದೆ. ಹಮಾಸ್‌ನಂತೆ ನಿರ್ದಿಷ್ಟ ಧರ್ಮ ಮತ್ತು ಉದಾರವಾದಿಗಳೇ ಉಗ್ರರ ಗುರಿಯಾಗಿದ್ದರು. ಆದರೆ ಅ.7ರ ದಾಳಿ ಬಳಿಕ ಹಮಾಸ್‌ ನಾಯಕತ್ವವನ್ನೇ ಇಸ್ರೇಲ್‌ ಚೆಂಡಾಡಿತು. ಈಗ ಭಾರತ ಕೂಡ ಐಎಸ್‌ಐ ನಾಯಕತ್ವವನ್ನೇ ನಿರ್ವಂಶ ಮಾಡಬೇಕು. ಐಎಸ್‌ಐ ಅನ್ನು ಘೋಷಿತ ಉಗ್ರ ಸಂಘಟನೆಯ ರೀತಿಯಲ್ಲೇ ನೋಡಬೇಕು. ಭಾರತದ ಎಲ್ಲ ಭಾರತದ ಎಲ್ಲ ಮಿತ್ರ ರಾಷ್ಟ್ರಗಳೂ ಇದೇ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

ಹಂದಿಗೆ ಎಷ್ಟೇ ಲಿಪ್‌ಸ್ಟಿಕ್‌ ಹಾಕಿದ್ರೂ ಹಂದಿ ಹಂದಿಯೇ!
ಪಾಕಿಸ್ತಾನವನ್ನು ಉಗ್ರರಿಗೆ ಬೆಂಬಲ ನೀಡುವ ರಾಷ್ಟ್ರ ಹಾಗೂ ಪಾಕ್‌ ಸೇನಾ ಮುಖ್ಯಸ್ಥ ಆಸಿಂ ಮುನೀರ್‌ನನ್ನು ಭಯೋತ್ಪಾದಕ ಎಂದು ಕರೆಯುವಂತೆ ಅಮೆರಿಕಕ್ಕೆ ಮೈಕಲ್ ರುಬಿನ್‌ ಆಗ್ರಹಿಸಿದ್ದಾರೆ. ಮುನೀರ್‌ರನ್ನು ಭಯೋತ್ಪಾದಕ ಒಸಮಾ ಬಿಲ್‌ ಲಾಡೆನ್‌ಗೆ ಹೋಲಿಸಿರುವ ಅ‍ವರು, ಇವರಿಬ್ಬರ ನಡುವಿನ ಏಕೈಕ ವ್ಯತ್ಯಾಸವೆಂದರೆ ಮುನೀರ್‌ ಗುಹೆಯಲ್ಲಿ ವಾಸಿಸುತ್ತಿದ್ದ, ಮುನೀರ್‌ ಅರಮನೆಯಲ್ಲಿದ್ದಾರೆ. ಇದನ್ನು ಹೊರತುಪಡಿಸಿ ಇಬ್ಬರೂ ಒಂದೇ. ಅವರ ಅಂತ್ಯ ಕೂಡ ಒಂದೇ ತೆರನಾಗಿರಬೇಕು ಎಂದು ಹೇಳಿದರು. ನೀವು ಹಂದಿಗೆ ಎಷ್ಟೇ ಲಿಪ್‌ಸ್ಟಿಕ್‌ ಹಾಕಿದ್ರೂ ಹಂದಿ ಹಂದಿಯೇ, ಅದೇ ರೀತಿ ನೀವು ಪಾಕಿಸ್ತಾನ ಉಗ್ರರ ಪೋಷಕನಲ್ಲ ಎಂಬಂತೆ ನಟಿಸಬಹುದು, ಆದರೆ, ಎಷ್ಟೇ ಪ್ರಯತ್ನಪಟ್ಟರೂ ಅದು ಉಗ್ರ ಪೋಷಕನಾಗಿಯೇ ಉಳಿಯುತ್ತದೆ ಎಂದಿದ್ದಾರೆ.