ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ಗಂಟೆಗಳ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ‘ಭಾರತ-ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ್ದೇನೆ’ ಎಂಬ ತಮ್ಮ ಹೇಳಿಕೆಯನ್ನು 15ನೇ ಬಾರಿ ಪುನರುಚ್ಚರಿಸಿದ್ದಾರೆ.

ವಾಷಿಂಗ್ಟನ್ (ಜೂ.19): ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ಗಂಟೆಗಳ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ‘ಭಾರತ-ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ್ದೇನೆ’ ಎಂಬ ತಮ್ಮ ಹೇಳಿಕೆಯನ್ನು 15ನೇ ಬಾರಿ ಪುನರುಚ್ಚರಿಸಿದ್ದಾರೆ. ಬುಧವಾರ ಸಂಜೆ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾನು ಪಾಕಿಸ್ತಾನವನ್ನು ಪ್ರೀತಿಸುತ್ತೇನೆ. ಮೋದಿ ಒಬ್ಬ ಅದ್ಭುತ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ. ನಾನು ನಿನ್ನೆ ರಾತ್ರಿ ಅವರೊಂದಿಗೆ ಮಾತನಾಡಿದೆ. ನಾವು ಮೋದಿಯೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದ್ದೇವೆ. ಆದರೆ ನಾನು ಪಾಕಿಸ್ತಾನ ಮತ್ತು ಭಾರತದ ನಡುವಿನ ಯುದ್ಧವನ್ನು ನಿಲ್ಲಿಸಿದೆ’ ಎಂದರು.

Add Asianetnews Kannada as a Preferred SourcegooglePreferred

ಇದೇ ವೇಳೆ, ಪಾಕ್ ಸೇನಾ ಮುಖ್ಯಸ್ಥ ಜ। ಅಸೀಂ ಮುನೀರ್‌ ಅವರಿಗೆ ಶ್ವೇತಭವನದಲ್ಲಿ ಔತಣ ನೀಡುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿ, ‘ಈ ಸಭೆಯಿಂದ ರಾಜತಾಂತ್ರಿಕವಾಗಿ ಏನನ್ನು ಸಾಧಿಸಲು ಎದುರು ನೋಡುತ್ತಿದ್ದೀರಿ’ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಟ್ರಂಪ್‌, ‘ಪಾಕಿಸ್ತಾನದ ಕಡೆಯಿಂದ ಅದನ್ನು ನಿಲ್ಲಿಸುವಲ್ಲಿ ಈ ವ್ಯಕ್ತಿ (ಜ। ಮುನೀರ್) ಅತ್ಯಂತ ಪ್ರಭಾವಶಾಲಿಯಾಗಿದ್ದರು. ಇನ್ನು ಭಾರತದ ಕಡೆಯಿಂದ ಮೋದಿ ಮತ್ತು ಇತರರು. ಅವು ಎರಡೂ ಪರಮಾಣು ರಾಷ್ಟ್ರಗಳು. ಅದನ್ನು ಪ್ರಯೋಗಿಸಲೂ ಸಿದ್ಧವಾಗಿದ್ದವು. ಎರಡು ಪ್ರಮುಖ ರಾಷ್ಟ್ರಗಳ ನಡುವಿನ ಯುದ್ಧವನ್ನು ನಾನು ನಿಲ್ಲಿಸಿದೆ. ಆದರೂ ನನ್ನ ಬಗ್ಗೆ ಯಾರೂ ಒಳ್ಳೇ ಸ್ಟೋರಿ (ವರದಿ) ಬರೆದಿಲ್ಲ’ ಎಂದರು.

ಯುದ್ಧ ನನ್ನಿಂದ ಸ್ಥಗಿತ: ’ಭಾರತ ಮತ್ತು ಪಾಕಿಸ್ತಾನದ ನಡುವೆ ಅಣು ಯುದ್ಧ ನಡೆಯುವ ಸಾಧ್ಯತೆ ಇತ್ತು. ನಾನು ವ್ಯಾಪಾರವನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಎರಡೂ ದೇಶಗಳ ನಾಯಕರನ್ನು ಕದನ ವಿರಾಮಕ್ಕೆ ಒಪ್ಪಿಸಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಈ ಮೂಲಕ ಭಾರತ ಮತ್ತು ಪಾಕ್‌ ನಡುವಿನ ಕದನವಿರಾಮಕ್ಕೆ ತಮ್ಮ ಮಧ್ಯಸ್ಥಿಕೆಯೇ ಕಾರಣ ಎಂದು ಟ್ರಂಪ್‌ ಇದೀಗ 12ನೇ ಬಾರಿ ಹೇಳಿಕೊಂಡಂತಾಗಿದೆ. ಶುಕ್ರವಾರ ತಮ್ಮ ಏರ್‌ಫೋರ್ಸ್‌ ಒನ್‌ ವಿಮಾನದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಬಹುತೇಕರಿಗೆ ಗೊತ್ತಿಲ್ಲದ ಕೆಲಸ ನಾನು ಮಾಡಿದ್ದೇನೆ. ನಾವು ಗಂಭೀರ ಸಮಸ್ಯೆಯೊಂದನ್ನು ಪರಿಹರಿಸಿದ್ದೇವೆ.

ಪಾಕಿಸ್ತಾನ ಮತ್ತು ಭಾರತದ ನಡುವೆ ಅಣುಯುದ್ಧದ ಸಾಧ್ಯತೆ ತಪ್ಪಿಸಿದ್ದೇವೆ ಎಂದರು. ‘ಪಾಕ್‌-ಭಾರತ ಎರಡೂ ದೇಶಗಳ ಪ್ರಧಾನಿಗಳು ಒಳ್ಳೆಯ ನಾಯಕರು. ಇವೆರಡೂ ಅಣ್ವಸ್ತ್ರ ಹೊಂದಿರುವ ಬಲಿಷ್ಠ ರಾಷ್ಟ್ರಗಳು. ನಾನು ಎರಡೂ ದೇಶಗಳ ನಾಯಕರ ಜತೆ ಮಾತನಾಡಿದೆ. ಯುದ್ಧ ಇದೇ ರೀತಿ ಮುಂದುವರಿದರೆ ಅಮೆರಿಕವು ನಿಮ್ಮ ಜತೆಗೆ ವ್ಯಾಪಾರ ನಿಲ್ಲಿಸಲಿದೆ ಎಂದು ಎಚ್ಚರಿಕೆ ನೀಡಿದೆ. ಆಗ ಎರಡೂ ದೇಶಗಳು ತಕ್ಷಣ ಯುದ್ಧ ನಿಲ್ಲಿಸಿದವು’ ಎಂದರು. ಪಹಲ್ಗಾಂ ದಾಳಿ ಬಳಿಕ ಭಾರತವು ಆಪರೇಷನ್‌ ಸಿಂದೂರ ಕಾರ್ಯಾಚರಣೆ ಮೂಲಕ ಪ್ರತಿದಾಳಿ ನಡೆಸಿ ಪಾಕಿಸ್ತಾನದಲ್ಲಿದ್ದ ಉಗ್ರರ ನೆಲೆ ನಾಶ ಮಾಡಿತ್ತು. ಈ ವೇಳೆ ಎರಡೂ ದೇಶಗಳು ಪರಸ್ಪರ ವೈಮಾನಿಕ ದಾಳಿ ನಡೆಸಿದ್ದು, ಕೊನೆಗೆ ಪಾಕಿಸ್ತಾನದ ಮನವಿ ಮೇರೆಗೆ ಭಾರತ ಕದನ ವಿರಾಮಕ್ಕೆ ಒಪ್ಪಿಕೊಂಡಿತ್ತು.