ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ 6 ವರ್ಷದ ಬಾಲಕನ ಮೇಲೆ ಏಕಾಏಕಿ ಕರಡಿ ದಾಳಿ ಮಾಡಲು ಮುಂದಾಗಿದೆ. ಆದರೆ ತಕ್ಷಣ ಕಾರ್ಯಪ್ರವೃತ್ತಗೊಂಡ ಸಾಕು ನಾಯಿ ಕರಡಿ ಮೇಲೆ ದಾಳಿ ಮಾಡಿ ಬಾಲಕನ ಪ್ರಾಣಾಪಾಯದಿಂದ ಪಾರು ಮಾಡಿದೆ. ನಾಯಿ ಸಾಹಸಕ್ಕೆ ಇದೀಗ ಭರ್ಜರಿ ಬಾಡೂಟ ಗೌರವ ನೀಡಲಾಗಿದೆ.
ಟೊರಿಂಗಟನ್ (ಜು.21) ಕಾಡು ಪ್ರಾಣಿಗಳು ನಾಡಿಗೆ ಬಂದು ದಾಳಿ ಮಾಡುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಬೆಂಗಳೂರಿನ ಬ್ಯಾಡರಹಳ್ಳಿ ಬಳಿ ಚಿರತೆ ಕಾಣಿಸಿಕೊಂಡ ಬಳಿಕ ಸ್ಥಳೀಯರ ಆತಂಕ ಹೆಚ್ಚಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ದಾಳಿ ತೀವ್ರಗೊಳ್ಳುತ್ತಲೇ ಇದೆ. ಹೀಗೆ 6 ವರ್ಷದ ಬಾಲಕ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಏಕಾಏಕಿ ಕರಡಿಯೊಂದು ದಾಳಿಗೆ ಮುಂದಾಗಿದೆ. ಇನ್ನೇನು ಕೆಲೆವೇ ಮೀಟರ್ ದೂರದಲ್ಲಿದ್ದ ಕರಡಿ ಬಾಲಕನ ಮೇಲೆ ದಾಳಿ ಮಾಡಬೇಕು ಎನ್ನುವಷ್ಟರಲ್ಲಿ ಮನೆಯ ಸಾಕು ನಾಯಿ ತಕ್ಷಣವೇ ಕರಡಿಯನ್ನು ಬೆನ್ನಟ್ಟಿದೆ. ನಾಯಿ ಒಮ್ಮೆಲೆ ಕರಡಿ ಮೇಲೆ ದಾಳಿಗೆ ಮುಂದಾದಾಗ ಕರಡಿ ಭಯದಿಂದ ಓಡಿದೆ. ಈ ಮೂಲಕ 6 ವರ್ಷದ ಬಾಲಕನಿಗೆ ಪ್ರಾಣ ಮಾತ್ರವಲ್ಲ , ಯಾವುದೇ ರೀತಿಯ ಗಾಯವಾಗದಂತೆ ನಾಯಿ ನೋಡಿಕೊಂಡ ಘಟನೆ ಅಮೆರಿಕದ ಟೊರಿಂಗಟನ್ ಬಳಿ ನಡೆದಿದೆ. ನಾಯಿಯ ಸಾಹಸಕ್ಕೆ ಇದೀಗ ಭರ್ಜರಿ ಬಾಡೂಟದ ಗೌರವ ನೀಡಲಾಗಿದೆ. ಕರಡಿ ದಾಳಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಕೌಂಪೌಂಡ್ ಹಾರಿ ಬಂದ ಕರಡಿ
ಮನೆಯ ಮುಂದಿನ ಅಂಗಳದಲ್ಲಿ 6 ವರ್ಷದ ಬಾಲಕ ಕಾಲ್ಟನ್ ತಝರಾ ಆಟವಾಡುತ್ತಿದ್ದ. ಮನೆಯ ಸುತ್ತಲೂ ಕಂಪೌಂಡ್ ಇದೆ. ಅಕ್ಕ ಪಕ್ಕದಲ್ಲೇ ಇದೆ ರೀತಿ ರಿಸಿಡೆನ್ಶಿಯಲ್ ಮನೆಗಳಿವೆ. ಎಲ್ಲಾ ಮನೆಗಳಲ್ಲಿ ಬಾಗಿಲು ಕ್ಲೋಸ್ ಆಗಿತ್ತು. ಯಾರೂ ಹೊರಗಡೆ ಇರಲಿಲ್ಲ. ಕಾಲ್ಟನ್ ತಝರಾ ತನ್ನ ಆಟಿಕೆ, ಸೈಕಲ್ ಸೇರಿದಂತೆ ಹಲವು ವಸ್ತುಗಳಲ್ಲಿ ಆಟವಾಡುತ್ತಿತ್ತ. ಸಾಕು ನಾಯಿ ಕೌಂಪೌಂಡ್ ಒಳಗಡೆ ಗೇಟ್ ಬಳಿಕ ಮಲಗಿತ್ತು. ಕಾಡಿನಿಂದ ಬಂದ ಕರಡಿಯೊಂದು ನೇರವಾಗಿ ಬಾಲಕನ ನೋಡಿದೆ. ಬಳಿಕ ಕೌಂಪೌಂಡ್ ಹಾರಿ ಬಾಲಕನ ಮೇಲೆ ದಾಳಿ ಮಾಡಲು ಆಗಮಿಸಿದೆ.
ಕರಡಿ ಮೇಲೆ ದಾಳಿ ಮಾಡಿದ ನಾಯಿ
ಕರಡಿ ಬಾಲಕನಿಗಿಂತ ಕೆಲವೇ ಮೀಟರ್ ದೂರದಲ್ಲಿರುವಾಗ ದೂರದಲ್ಲಿದ್ದ ಸಾಕು ನಾಯಿ ನೋಡಿದೆ. ತಕ್ಷಣವೇ ಹಾರಿ ಬಂದ ನಾಯಿ ಕರಡಿಯತ್ತ ಬೊಗಳುತ್ತಾ ಬಂದಿದೆ. ನಾಯಿ ಬೊಗಳುವಿಕೆ ಕೇಳಿದ ಕೂಡಲೇ ಬಾಲಕ ಭಯದಿಂದ ಮನೆಯ ಒಳಗೆ ಓಡಲು ಪ್ರಯತ್ನಿಸಿದ್ದಾನೆ. ಒಂದು ವೇಳೆ ನಾಯಿ ಇಲ್ಲದಿದ್ದರೆ ಸೆಕೆಂಡ್ಗಳ ಅಂತರದಲ್ಲಿ ಬಾಲಕ ಮೇಲೆ ಕರಡಿ ದಾಳಿ ಮಾಡುತ್ತಿತ್ತು. ಆದರೆ ನಾಯಿ ಓಡಿ ಬಂದ ಕಾರಣ ಕರಡಿ ಭಯಗೊಂಡಿದೆ. ತಕ್ಷಣವೇ ಕರಡಿ ಓಡಿ ಹೋಗಲು ಯತ್ನಿಸಿದೆ. ಆದರೆ ನಾಯಿ ಕರಡಿ ಮೇಲೆ ದಾಳಿ ಮಾಡಿದೆ. ಕರಡಿ ಅದೇ ವೇಗದಲ್ಲಿ ಕಂಪೌಂಡ್ ಹಾರಿ ಓಡಿ ಹೋಗಿದೆ.
ನಾಯಿಯ ಬೊಗಳುವಿಕೆ ಕೇಳಿ ಬಾಲಕನ ತಂದೆ ಹೊರಗೆ ಬಂದಿದ್ದಾರೆ. ಕರಡಿ ನೋಡಿ ಭಯಗೊಂಡು ಓಡಿಸುವ ಪ್ರಯತ್ನ ಮಾಡಿದ್ದಾರೆ. ಅಷ್ಟೊರೊಳಗೆ ಸಾಕು ನಾಯಿ ಕರಡಿಯನ್ನು ಓಡಿಸಿದೆ. ಸಾಕು ನಾಯಿ ಸಾಹಸದಿಂದ ಬಾಲಕ ಕಾಲ್ಟನ್ ಬದುಕಿ ಉಳಿದಿದ್ದಾನೆ. ದೈತ್ಯ ಕರಡಿಯನ್ನು ಓಡಿಸಿ ಬಾಲಕನ ಪ್ರಾಣ ಉಳಿಸಿದೆ.
ಘಟನೆ ಬಳಿಕ ಬಾಲಕನ ತಂದೆ ಸಾಕು ನಾಯಿಯನ್ನು ಪರೀಕ್ಷಿಸಿದ್ದಾರೆ. ಕರಡಿಯ ಪರಚಿದ ಗಾಯ, ದಾಳಿ ನಾಯಿ ಮೇಲೆ ಆಗಿದೆಯಾ ಎಂದು ಪರಿಶೀಲಿಸಿದ್ದಾರೆ. ನಾಯಿ ಕೂಡ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿತ್ತು. ಮಗನ ಪ್ರಾಣ ಉಳಿಸಿದ ಸಾಕು ನಾಯಿಗೆ ಟಿ ಬೋನ್ ಸ್ಟೀಕ್ (ಮೂಳೆ ಇರುವ ಮಾಂಸ) ಗೌರವವಾಗಿ ನೀಡಲಾಗಿದೆ. ಬಳಿಕ ನಾಯಿಗೆ ಸನ್ಮಾನ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ನಾಯಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಾಕು ನಾಯಿ ತನ್ನ ಪ್ರಾಣದ ಹಂಗು ತೊರೆದು ಬಾಲಕನ ಜೀವ ಉಳಿಸಿದೆ ಎಂದು ಹಲವರು ಮೆಚ್ಚುಗೆ ಸೂಚಿಸಿದ್ದಾರೆ.


