ಬಾಂಗ್ಲಾದೇಶದಲ್ಲಿ ಬಂಧಿತರಾಗಿರುವ ಇಸ್ಕಾನ್ ಸಂತ ಚಿನ್ಮಯಕೃಷ್ಣದಾಸ್ ಅವರ ವಕೀಲ ರಾವನ್ ರಾಯ್ ಅವರ ಮೇಲೆ ಹಲ್ಲೆ ನಡೆದಿದೆ.

ಢಾಕಾ: ಬಾಂಗ್ಲಾದೇಶದಲ್ಲಿ ಬಂಧಿತರಾಗಿರುವ ಇಸ್ಕಾನ್ ಸಂತ ಚಿನ್ಮಯಕೃಷ್ಣದಾಸ್ ಅವರ ವಕೀಲ ರಾವನ್ ರಾಯ್ ಅವರ ಮೇಲೆ ಸೋಮವಾರ ಸಂಜೆ ದಾಳಿ ಮಾಡ ಲಾಗಿದೆ. 'ದಾಸ್ ಜಾಮೀನು ಅರ್ಜಿ ಮಂಗಳವಾರ ವಿಚಾರಣೆಗೆ ಬರಲಿದೆ. ಅಷ್ಟರಲ್ಲಿ ರಾಯ್ ಮನೆಗೆ ನುಗ್ಗಿದ ದುಷ್ಕರ್ಮಿಗಳು ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅವರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಇಸ್ಕಾನ್ ವಕ್ತಾರ ರಾಧಾರಮಣ ದಾಸ್ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಬಾಂಗ್ಲಾ ದೂತಾವಾಸಕ್ಕೆ ನುಗ್ಗಿ ಜನರ ಪ್ರತಿಭಟನೆ
ಅಗರ್ತಲಾ: ಬಾಂಗ್ಲಾ ದೇಶದಲ್ಲಿ ಬಂಧನಕ್ಕೊಳಗಾಗಿರುವ ಇಸ್ಕಾನ್‌ ದೇಗುಲದ ಸನ್ಯಾಸಿ ಚಿನ್ಮಯ್ ದಾಸ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ, ತ್ರಿಪುರ ರಾಜಧಾನಿ ಅಗರ್ತಲಾದಲ್ಲಿ ಸಾವಿರಾರು ಹಿಂದೂಗಳು ಪ್ರತಿಭಟನೆ ನಡೆಸಿದರು. ಈ ವೇಳೆ ಅಗರ್ತಲಾದ ಬಾಂಗ್ಲಾ ಹೈ ಕಮಿಷನರ್ ಕಚೇರಿಗೆ ನುಗ್ಗಿದ 50ಕ್ಕೂ ಹೆಚ್ಚು ಪ್ರತಿಭಟನಕಾರರು ಗಲಾಟೆ ನಡೆಸಿ, ಭದ್ರತೆಯನ್ನು ಉಲ್ಲಂಘಿಸಿದ ಘಟನೆಯೂ ನಡೆದಿದೆ. ಈ ಘಟನೆಗೆ ಭಾರತ ವಿಷಾದ ವ್ಯಕ್ತಪಡಿಸಿದೆ. ಯಾವುದೇ ವೇಳೆಯೂ ಕಾನ್ಸುಲರ್ ಆಸ್ತಿ ಗುರಿಯಾಗಿಸಬಾರದು ಎಂದು ಹೇಳಿದೆ.

ವಿಶ್ವಸಂಸ್ಥೆ ಶಾಂತಿಪಡೆ ಕಳಿಸಿ: ದೀದಿ ಆಗ್ರಹ
ಕೋಲ್ಕತಾ: ನೆರೆಯ ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲಿನ ದೌರ್ಜನ್ಯಕ್ಕೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಳವಳ ವ್ಯಕ್ತಪಡಿಸಿದ್ದು, ಅಲ್ಲಿ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆ ನಿಯೋಜನೆಗೆ ಒತ್ತಡ ಹೇರಬೇಕು ಎಂದು ಮೋದಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಮಮತಾ, 'ಅಗತ್ಯವಿದ್ದಲ್ಲಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದೊಂದಿಗೆ ಮಾತನಾಡಿದ ಬಳಿಕ ಶಾಂತಿ ಸ್ಥಾಪನೆಗೆ ಅಂತಾರಾಷ್ಟ್ರೀಯ ಶಾಂತಿ ಪಾಲನಾ ಪಡೆಗಳನ್ನು ಬಾಂಗ್ಲಾಗೆ ಕಳುಹಿಸಲು ಯತ್ನಿಸಬೇಕು ಎಂದಿದ್ದಾರೆ.

₹135 ಕೋಟಿ ವಿದ್ಯುತ್ ಬಿಲ್‌ ಕಟ್ಟಿ: ಬಾಂಗ್ಲಾದೇಶಕ್ಕೆ ತಾಕೀತು
ಅಗರ್ತಲಾ: ಹಿಂದೂಗಳ ಮೇಲಿನ ದೌರ್ಜನ್ಯದಿಂದ ಭಾರತದ ಕೆಂಗಣ್ಣಿಗೆ ಗುರಿಯಾಗಿರುವ ಬಾಂಗ್ಲಾದೇಶವು ತ್ರಿಪುರ ಸರ್ಕಾರಕ್ಕೆ 135 ಕೋಟಿ ರು. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಈ ಬಿಲ್ ಅನ್ನು ಕೂಡಲೇ ಕಟ್ಟಬೇಕು ಎಂದು ತ್ರಿಪುರ ಸರ್ಕಾರ ಬಾಂಗ್ಲಾ ಸರ್ಕಾರಕ್ಕೆ ತಾಕೀತು ಮಾಡಿದೆ. 'ತ್ರಿಪುರ ಸರ್ಕಾರವು ಬಾಂಗ್ಲಾದೇಶಕ್ಕೆ ಯೂನಿಟ್‌ಗೆ 6.65 ರು. ದರದಲ್ಲಿ 160 ಮೆಗಾ ವ್ಯಾಟ್ ವಿದ್ಯುತ್ ಪೂರೈಸುತ್ತದೆ. ಆದರೆ ಕಳೆದ 1 ವರ್ಷದಿಂದ ಬಾಂಗ್ಲಾ ಬಿಲ್ ಸರಿಯಾಗಿ ಕಟ್ಟುತ್ತಿಲ್ಲ' ಎಂದು ತ್ರಿಪುರ ಸರ್ಕಾರ ಹೇಳಿದೆ. 

ಊಟ ನೀಡಲ್ಲ-ಹೋಟೆಲ್‌ಗಳು: ಬಾಂಗ್ಲಾ ಪ್ರವಾಸಿಗರಿಗೆ ನಮ್ಮ ಹೋಟೆಲ್‌ಗಳಲ್ಲಿಊಟ, ವಸತಿ ನೀಡಲ್ಲ ಎಂದು ತ್ರಿಪುರ ಹೋಟೆಲ್ ಅಸೋಸಿಯೇಷನ್‌ ಸೋಮವಾರ ಘೋಷಿಸಿದೆ.

ಇದನ್ನೂ ಓದಿ: ಕಷ್ಟಕಾಲದಲ್ಲಿ ಕಾಪಾಡಿದ ಇಸ್ಕಾನ್ ಮೇಲೆ ಬಾಂಗ್ಲಾಗೆ ಯಾಕಿಷ್ಟು ದ್ವೇಷ?