ಪತ್ರಕರ್ತ ಸಿದ್ದಿಕಿ ನಮ್ಮೊಂದಿಗೆ ಸಹಕರಿಸ್ಲಿಲ್ಲ ಎಂದ ತಾಲಿಬಾನ್
- ಭಾರತದ ಪತ್ರಕರ್ತ ಸಿದ್ದಿಖಿಯನ್ನು ಬೇಕೆಂದು ಕೊಂದಿಲ್ಲ: ತಾಲಿಬಾನ್
- ಈ ಹಿಂದೆ ನಾವು ಸಿದ್ದಿಕಿಯನ್ನು ಕೊಂದೇ ಇಲ್ಲ ಎಂದಿದ್ದ ತಾಲಿಬಾನಿಗಳು
ನವದೆಹಲಿ(ಆ.14): ‘ಭಾರತದ ಪುಲಿಟ್ಜರ್ ಪ್ರಶಸ್ತಿ ವಿಜೇತ ದಾನಿಶ್ ಸಿದ್ದಿಖಿ ಅವರನ್ನು ಜೀವಂತವಾಗಿ ಸೆರೆಹಿಡಿದ ತಾಲಿಬಾನ್ ಉಗ್ರರು ಬಳಿಕ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ್ದಾರೆ’ ಎಂಬ ಆರೋಪವನ್ನು ತಾಲಿಬಾನ್ ನಿರಾಕರಿಸಿದೆ.
‘ಆಷ್ಘಾನಿಸ್ತಾನ ಸೇನೆ ಮತ್ತು ನಮ್ಮ ಸೇನಾನಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಅಚಾತುರ್ಯವಾಗಿ ಛಾಯಾಗ್ರಾಹಕ ಡಾನಿಶ್ ಸಿದ್ದಿಖಿ ಅವರು ಸಾವಿಗೀಡಾಗಿದ್ದಾರೆ. ತಾಲಿಬಾನ್ ಜತೆಗೆ ಸಮನ್ವಯ ಸಾಧಿಸದೇ ಇರುವುದು ಸಿದ್ದಿಖಿ ಅವರ ತಪ್ಪು’ ಎಂದು ತಾಲಿಬಾನ್ ವಕ್ತಾರ ಮೊಹಮ್ಮದ್ ಸೊಹೇಲ್ ಶಹೀನ್ ಹೇಳಿದ್ದಾನೆ.
ಚಿತ್ರಹಿಂಸೆ ನೀಡಿ ತಾಲಿಬಾನ್ನಿಂದ ಪತ್ರಕರ್ತ ಸಿದ್ದಿಖಿ ಹತ್ಯೆ: ವರದಿ!
ಈ ಬಗ್ಗೆ ಭಾರತದ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಶಹೀನ್, ‘ನಮ್ಮ ಸ್ಥಳಗಳಿಗೆ ಭೇಟಿ ನೀಡುವ ಪತ್ರಕರ್ತರಿಗೆ ಭದ್ರತೆ ನೀಡುವುದಾಗಿ ನಾವೇ ಹಲವು ಬಾರಿ ಹೇಳಿದ್ದೇವೆ. ಆದರೆ ಸಿದ್ದಿಖಿ ಅವರನ್ನು ನಾವೇ ಹೊಡೆದು ಹಾಕಿದ್ದೇವೆ ಎನ್ನುವುದು ಸರಿಯಲ್ಲ. ಆಷ್ಘಾನಿಸ್ತಾನದ ವಾಸ್ತವ ಸ್ಥಿತಿಯ ವರದಿ ಮಾಡಲು ಬಯಸುವ ವಿಶ್ವದ ಪತ್ರಕರ್ತರು ಬಂದು ತಮ್ಮ ಶಾಖೆಗಳನ್ನು ತೆರೆಯಲು ನಾವೇ ಅವಕಾಶ ಕಲ್ಪಿಸಿಕೊಡುತ್ತೇವೆ’ ಎಂದಿದ್ದಾನೆ. ಜೊತೆಗೆ ಆಷ್ಘಾನಿಸ್ತಾನದ ಶೇ.90ರಷ್ಟುಭಾಗ ನಮ್ಮ ವಶದಲ್ಲಿದೆ ಎಂದು ಹೇಳಿದ್ದಾನೆ.