ನೀರಿನ ಸಮಸ್ಯೆ ಪರಿಹಾರಕ್ಕೆ ಸಖತ್ ಪ್ಲ್ಯಾನ್, ಗಂಡ-ಹೆಂಡತಿ ಒಟ್ಟಿಗೆ ಸ್ನಾನ ಮಾಡಿ ಎಂದ ಸರ್ಕಾರ!
ನೀರಿನ ಸಮಸ್ಯೆ ಕಾರಣಕ್ಕೆ ಸರ್ಕಾರ ಸಖತ್ ಪ್ಲ್ಯಾನ್ ಮಾಡಿದ್ದು, ಗಂಡ-ಹೆಂಡತಿ ಇಬ್ಬರೂ ಒಟ್ಟಿಗೆ ಸ್ನಾನ ಮಾಡುವಂತೆ ಸಲಹೆ ನೀಡಿದೆ.
![Colombia capital Bogota Water Crisis asks Couple Bath together san Colombia capital Bogota Water Crisis asks Couple Bath together san](https://static-ai.asianetnews.com/images/01hvb765bpvckvyk47bgb0a327/bath_363x203xt.jpg)
ನವದೆಹಲಿ (ಏ.13): ಕರ್ನಾಟಕದ ಬೆಂಗಳೂರು ಮಾತ್ರವಲ್ಲ, ಕೊಲಂಬಿಯಾ ದೇಶದ ರಾಜಧಾನಿ ಬಗೋಟಾ ಕೂಡ ನೀರಿನ ಸಂಕಷ್ಟದಲ್ಲಿದೆ. ಜನರಿಗೆ ಸೂಕ್ತಕಾಲದಲ್ಲಿ ನೀರು ಪೂರೈಕೆ ಮಾಡಲು ಕೂಡ ಅಲ್ಲಿನ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇದರ ಬೆನ್ನಲ್ಲಿಯೇ ಬೊಗೋಟಾ ಮೇಯರ್ ಕಾರ್ಲೋಸ್ ಫೆರ್ನಾಂಡೊ ಗ್ಯಾಲನ್ ನಗರದ ಜನರಿಗೆ ವಿಚಿತ್ರ ಸಲಹೆಗಳನ್ನು ನೀಡಿದ್ದಾರೆ. ಅದರಂತೆ ನೀರು ಉಳಿಸುವ ನಿಟ್ಟಿನಲ್ಲಿ ನಗರದಲ್ಲಿ ವಾಸವಾಗಿರುವ ದಂಪತಿಗಳು ಒಟ್ಟಿಗೆ ಸ್ನಾನ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಇಷ್ಟು ಮಾತ್ರವಲ್ಲದೆ ಭಾನುವಾರ ಹಾಗೂ ಮನೆಯಿಂದ ಹೊರಗೆ ಹೋಗುವ ಅಗತ್ಯವಿಲ್ಲದ ದಿನದಂದು ಸ್ನಾನವನ್ನೇ ಮಾಡಬೇಡಿ ಎಂದು ಹೇಳಿದ್ದಾರೆ. ಬೊಗೋಟಾದಲ್ಲಿ ನೀರು ಸಂಗ್ರಹಣೆ ಮಾಡುವ ನಿಟ್ಟಿನಲ್ಲಿ ಸ್ಥಳೀಯ ಸರ್ಕಾರ ದೊಡ್ಡ ಮಟ್ಟದಲ್ಲಿ ಕ್ರಮ ಕೈಗೊಂಡಿದೆ. ನಗರದ ಅಂತರ್ಜಲ ಮಟ್ಟ ದಾಖಲೆ ಪ್ರಮಾಣದಲ್ಲಿ ಕುಸಿದಿದ್ದು, ನೀರು ಪೋಲಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ.
ಇನ್ನು ಕೊಲಂಬಿಯಾ ದೇಶದಲ್ಲಿ ಬೇಸಿಗೆ ಎಷ್ಟು ಭೀಕರವಾಗಿದೆ ಎಂದರೆ, ಜಲಾಶಯಗಳ ನೀರು ಸಂಪೂರ್ಣವಾಗಿ ಬರಿದಾಗಿದೆ. ನಗರಕ್ಕೆ ಅಗತ್ಯವಿರುವ ಶೇ. 70ರಷ್ಟು ನೀರನ್ನು ಮೂರು ಜಲಾಶಯಗಳು ಪೂರೈಕೆ ಮಾಡುತ್ತಿದೆ. ಆದರೆ, ಈ ಜಲಾಶಯಗಳಲ್ಲಿ ಈಗ ಶೇ. 17ರಷ್ಟು ಮಾತ್ರವೇ ನೀಡಿದೆ. ಕಳೆದ 40 ವರ್ಷಗಳಲ್ಲಿ ಈ ಜಲಾಶಯಗಳಲ್ಲಿ ದಾಖಲಾದ ಅತೀ ಕಡಿಮೆ ಮಟ್ಟದ ನೀರು ಇದಾಗಿದೆ ಎಂದು ಕಾರ್ಲೋಸ್ ಫೆರ್ನಾಂಡೊ ಗ್ಯಾಲನ್ ತಿಳಿಸಿದ್ದಾರೆ. ಇದೇ ಕಾರಣದಿಂದ ಜನರಿಗೆ ಎಚ್ಚರಿಕೆಗಳನ್ನೂ ನೀಡಲಾಗುತ್ತದೆ. ಒಂದು ಹನಿ ನೀರನ್ನೂ ವ್ಯರ್ಥ ಮಾಡಬೇಡಿ. ಇದನ್ನು ಪಾಲಿಸದೇ ಇದ್ದಲ್ಲಿ ಅನಿವಾರ್ಯವಾಗಿ ನಿರ್ಬಂಧಗಳನ್ನು ಹೇರಬೇಕಾಗುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರು: ಯುಗಾದಿ ಹಬ್ಬಕ್ಕೆಂದು ಬೈಕ್ ತೊಳೆಯುತ್ತಿದ್ದ ವ್ಯಕ್ತಿಗೆ 5,000 ರೂ. ದಂಡ ಹಾಕಿದ ಜಲಮಂಡಳಿ
ಎಲ್ ನಿನೋ ವಿದ್ಯಮಾನದಿಂದ ಹೆಚ್ಚಿನ ಮಳೆ ಆಗುತ್ತಿದೆ. ಇದರಿಂದಾಗಿ ವಿಶ್ವದ ಹಲವು ಪ್ರದೇಶಗಳಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿಯನ್ನು ನಿಭಾಯಿಸುವ ಹಲವು ಪ್ರದೇಶಗಳಲ್ಲಿ ವಾಟರ್ ಗ್ರಿಡ್ ಗಳನ್ನು ಕಡಿತಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಇನ್ನಿ ಕೊಲಂಬಿಯಾದಲ್ಲಿ ಇದರ ಪರಿಣಾಮ ವ್ಯಾಪಕವಾಗಿದೆ. ರಾಜಧಾನಿ ವಲಯಕ್ಕೆ ಹತ್ತಿರ ಇರುವ 11 ಪುರಸಭೆಗಳಿಗೂ ನಿರ್ಬಂಧ ವಿಧಿಸಲಾಗಿದ್ದು, ಇದು 9 ಮಿಲಿಯನ್ ಜನರ ಮೇಲೆ ಪರಿಣಾಮ ಬೀರಲಿದೆ.
ಬೆಂಗಳೂರಿನ ಪೀಣ್ಯ ಇಂಡಸ್ಟ್ರಿಯಲ್ ಏರಿಯಾ ಕೈಗಾರಿಕೆಗಳಿಗೆ ಸಂಸ್ಕರಿಸಿದ ನೀರು ಪೂರೈಕೆ; ರಾಮ್ ಪ್ರಸಾತ್ ಮನೋಹರ್