ಬೆಂಗಳೂರಿನಲ್ಲಿ ಯುಗಾದಿ ಹಬ್ಬದ ದಿನ ಮನೆಯ ಮುಂದೆ ಬೈಕ್‌ ತೊಳೆಯುತ್ತಿದ್ದ ವ್ಯಕ್ತಿಗೆ ಜಲಮಂಡಳಿ ಅಧಿಕಾರಿಗಳು ಬಂದು ಬರೋಬ್ಬರಿ 5,000 ರೂ. ದಂಡ ಹಾಕಿದ್ದಾರೆ.

ಬೆಂಗಳೂರು (ಏ.09): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಜನತೆಗೆ ಕುಡಿಯಲು ಸರಬರಾಜು ಮಾಡುವ ಕಾವೇರಿ ನೀರನ್ನು ಅನ್ಯಬಳಕೆಗೆ ಉಪಯೋಗ ಮಾಡದಂತೆ ಆದೇಶ ಹೊರಡಿಸಲಾಗಿದೆ. ಆದರೂ, ನಿಯಮ ಉಲ್ಲಂಘಿಸಿ ಮನೆಯ ಮುಂದೆ ಪೈಪ್‌ನಲ್ಲಿ ನೀರು ಹಿಡಿಯುತ್ತಾ ಬೈಕ್‌ ತೊಳೆಯುತ್ತಿದ್ದ ವ್ಯಕ್ತಿಗ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಿಬ್ಬಂದಿ 5,000 ರೂ. ದಂಡ ವಿಧಿಸಿದ್ದಾರೆ.

Add Asianetnews Kannada as a Preferred SourcegooglePreferred

ರಾಜ್ಯದಲ್ಲಿ ಭಾರಿ ಬರಗಾಲ ಆವರಿಸಿದ್ದು, ಬೆಂಗಳೂರು ಸೇರಿದಂತೆ ಎಲ್ಲ ನಗರಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಇನ್ನು ಕೆಆರ್‌ಎಸ್‌ ಜಲಾಶಯದಲ್ಲಿಯೂ ನೀರಿನ ಪ್ರಮಾಣ ಕುಸಿತವಾಗಿರುವುದರಿಂದ ಬೆಂಗಳೂರಿಗೆ ಕುಡಿಯುವ ಉದ್ದೇಶಕ್ಕೆ ಮತ್ತು ಗೃಹಬಳಕೆಗೆ ಮಾತ್ರ ಕಾವೇರಿ ನೀರನ್ನು ಪೂರೈಸಲಾಗುತ್ತಿದೆ. ಜೊತೆಗೆ, ಕಾವೇರಿ ನದಿಯಿಂದ ಪೂರೈಸುವ ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡದಂತೆ ಆದೇಶ ಹೊರಡಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದವರಿಗೆ 5,000 ರೂ. ದಂಡ ವಿಧಿಸಲಾಗುತ್ತಿದೆ.

ಆದರೆ, ಯುಗಾದಿ ಹಬ್ಬದ ದಿನ ಗೃಹಬಳಕೆ ಹಾಗೂ ಕುಡಿಯುವ ಉದ್ದೇಶಕ್ಕೆ ಪೂರೈಸಲಾದ ನೀರನ್ನ ಅನ್ಯ ಬಳಕೆಗೆ ಬಳಕೆ ಮಾಡಿದವರಿಗೆ ಜಲಮಂಡಳಿ ಸಿಬ್ಬಂದಿ ದಂಡ ಹಾಕಿದ್ದಾರೆ. ಜಲಮಂಡಳಿಯ ಆದೇಶವನ್ನು ಉಲ್ಲಂಘನೆ ಮಾಡಿದ ಪ್ರತಿಯೊಬ್ಬರಿಗೂ ತಲಾ 5 ಸಾವಿರ ರೂ. ದಂಡ ಹಾಕಲಾಗಿದೆ. ಜಲಕ್ಷಾಮದ ಮಧ್ಯೆ ಎಚ್ಚರಿಕೆ ವಹಿಸಿದೇ ಕುಡಿಯುವ ನೀರಿನಲ್ಲಿ ಬೈಕ್ ತೊಳೆಯುತ್ತಿದ್ದ ವ್ಯಕ್ತಿಗೆ ದಂಡ ಹಾಕಲಾಗಿರುವ ವಿಡಿಯೋ ವೈರಲ್ ಆಗುತ್ತಿದೆ. ಬೆಂಗಳೂರಿನ ವಿಜ್ಞಾನ ನಗರದಲ್ಲಿ ಬೈಕ್ ತೊಳೆಯುತ್ತಿದ್ದ ವ್ಯಕ್ತಿಗೆ ದಂಡ ದಂಡ ಹಾಕಲಾಗಿದೆ. ಕಳೆದ ಒಂದು ತಿಂಗಳಿಂದ ಕುಡಿಯುವ ನೀರನ್ನು ಅನ್ಯ ಬಳಕೆಗೆ ಉಪಯೋಗಿಸುತ್ತಿರುವ ಜನರಿಗೆ ಜಲಮಂಡಳಿ ಅಧಿಕಾರಿಗಳು ದಂಡ ಹಾಕುತ್ತಿದ್ದಾರೆ. ಇದುವರೆಗೂ ಬರೋಬ್ಬರಿ 365 ಜನರಿಗೆ ದಂಡ ಹಾಕಲಾಗಿದೆ. ಈ ಪೈಕಿ 362 ಜನರಿಂದ ಬರೋಬ್ಬರಿ 19 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.

ಫ್ಯಾಮಿಲಿ ಎಮರ್ಜೆನ್ಸಿ ಎಂದು ರಜೆ ಹಾಕಿ ಐಪಿಎಲ್ ಮ್ಯಾಚ್‌ಗೆ ಹೋದ ಮಹಿಳೆ; ಲೈವ್ ಟಿವಿಯಲ್ಲಿ ಬಾಸ್ ಕಣ್ಣಿಗೆ ಬಿದ್ಲು!

ಬೆಂಗಳೂರು ಮೆಟ್ರೋ ಪ್ರಯಾಣದ ಅನುಭವ ಹಂಚಿಕೊಳ್ಳಿ:
ಬೆಂಗಳೂರು (ಏ.09):
ಬೆಂಗಳೂರು ಮೆಟ್ರೋ ರೈಲು ನಿಗಮವು ‘ಮೆಟ್ರೋ ಪ್ರಯಾಣಿಕರ ತೃಪ್ತಿ ಸಮೀಕ್ಷೆ’ ಯನ್ನು ಏ.8ರಿಂದ ಮೇ 6ರವರೆಗೆ ಕೈಗೊಂಡಿದೆ. ಮೆಟ್ರೋ ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ ಅಗತ್ಯವಾಗಿ ಆಗಬೇಕಾದ ಬದಲಾವಣೆ ಮಾಡಿಕೊಳ್ಳಲು ಈ ಸಮೀಕ್ಷೆ ನಡೆಸಲಾಗುವುದು. ಜೊತೆಗೆ ಲಂಡನ್‌ನ ಇಂಪೀರಿಯಲ್‌ ಕಾಲೇಜ್‌ ಮೆಟ್ರೋಗಾಗಿ ನಡೆಸಲಿರುವ ಕಾರ್ಯಸೂಚಿ ಅಧ್ಯಯನಕ್ಕೂ ನೆರವಾಗಲಿದೆ. ಕನ್ನಡ, ಇಂಗ್ಲಿಷ್‌ನಲ್ಲಿ ಸಮೀಕ್ಷೆ ನಡೆಯಲಿದ್ದು, ಪ್ರಯಾಣಿಕರು www.bmrc.co.in ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು. ಸಮೀಕ್ಷೆಯ ಕ್ಯೂಆರ್‌ ಕೋಡ್‌ನ್ನು ರೈಲ್ವೇ ನಿಲ್ದಾಣದಲ್ಲಿ ಪ್ರದರ್ಶಿಸಲಾಗುವುದು. ಹೆಚ್ಚಿನ ಮಾಹಿತಿಗೆ 1800-425-12345ಗೆ ಸಂಪರ್ಕಿಸಬಹುದು.

BMRCL ಪ್ರಕಾರ, Namma Metro ಗಾಗಿ ಪ್ರಮುಖ ಕಾರ್ಯಕ್ಷಮತೆ ಸೂಚಕಗಳನ್ನು ರೂಪಿಸಲು ಈ ಸಮೀಕ್ಷೆಯು ಲಂಡನ್‌ನ ಇಂಪೀರಿಯಲ್ ಕಾಲೇಜ್‌ಗೆ ಪ್ರಮುಖ ಅಧ್ಯಯನವಾಗಿಯೂ ಕಾರ್ಯನಿರ್ವಹಿಸುತ್ತದೆ. ನಮ್ಮ ಮೆಟ್ರೋದಲ್ಲಿ ಜನವರಿಯಿಂದ ಮಾರ್ಚ್ ವರೆಗೆ 21 ಲಕ್ಷ ಜನ ಸಂಚರಿಸಿದ್ದು, ಹೀಗಾಗಿ ದಟ್ಟಣೆ ತಪ್ಪಿಸಲು ಭೋಗಿಗಳ ಸಂಖ್ಯೆ ಹೆಚ್ಚಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. ಮಾರ್ಚ್‌ 7 ಲಕ್ಷ, ಫೆಬ್ರವರಿ 7.5 ಲಕ್ಷ, ಜನವರಿ 6.72 ಲಕ್ಷ ಜನ ಮೆಟ್ರೋದಲ್ಲಿ ಓಡಾಡಿದ್ದಾರೆ.