ಜರ್ಮನಿಯ ಡುಯಿಸ್ಬರ್ಗ್ ಪ್ರದೇಶದ ಗುರುದ್ವಾರವೊಂದರಲ್ಲಿ ನಿರ್ವಹಣೆ ಮತ್ತು ಹಣಕಾಸಿನ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿದೆ. ಈ ಗಲಾಟೆಯಲ್ಲಿ ಕಿರ್ಪಾನ್ಗಳನ್ನು ಬಳಸಿ ದಾಳಿ ನಡೆಸಲಾಗಿದ್ದು, ಕನಿಷ್ಠ 11 ಜನರು ಗಾಯಗೊಂಡಿದ್ದಾರೆ.
ಜರ್ಮನಿಯ ಗುರುದ್ವಾರದಲ್ಲಿ ಘರ್ಷಣೆ: 11 ಜನರಿಗೆ ಗಾಯ
ಜರ್ಮನಿಯ ಗುರುದ್ವಾರವೊಂದರಲ್ಲಿ ದುಷ್ಕರ್ಮಿಗಳು ಘರ್ಷಣೆ ನಡೆಸಿದ್ದು, ತಮ್ಮ ಸಂಪ್ರದಾಯಿಕ ಆಯುಧವಾದ ಕಿರ್ಪಾನ್ನ್ನು ತೋರಿಸಿ ಬೆದರಿಸಿದ್ದಾರೆ. ಮೋರ್ಸ್ನ ಡುಯಿಸ್ಬರ್ಗ್ ಪ್ರದೇಶದ ಗುರುದ್ವಾರದಲ್ಲಿಈ ಗಲಾಟೆ ನಡೆದಿದ್ದು, ಈ ಹಿಂಸಾತ್ಮಕ ಘರ್ಷಣೆಯಲ್ಲಿ ಕನಿಷ್ಠ 11 ಜನರು ಗಾಯಗೊಂಡಿದ್ದಾರೆ. ಘಟನೆಯ ಬಳಿಕ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳಲ್ಲಿ ಗುರುದ್ವಾರದ ಆವರಣದೊಳಗೆ ಘರ್ಷಣೆಯಿಂದ ಎಲ್ಲಾ ಅಸ್ತವ್ಯಸ್ತವಾಗಿರುವುದನ್ನು ಕಾಣಬಹುದು. ಜೊತೆಗೆ ಅಲ್ಲಿ ಸೇರಿದವರು ಪರಸ್ಪರ ಹೊಡೆದಾಡುವುನ್ನು ಕಾಣಬಹುದು. ಈ ಸಮಯದಲ್ಲಿ ಸಿಖ್ಖರ್ ಸಾಂಪ್ರದಾಯಿಕ ಆಯುಧವಾದ ಚಾಕುಗಳು ಕಿರ್ಪಾನ್ಗಳನ್ನು ಅಲ್ಲಿದ್ದವರು ಬಳಸಿದ್ದಾರೆ ಎಂಬುದು ವೈರಲ್ ಆದ ವೀಡಿಯೋದಿಂದ ಕಂಡುಬಂದಿದೆ.
ರಕ್ಷಿಸಲು ಬಳಸುವ ಕಿರ್ಪಾನ್ ಆಯುಧದಿಂದಲೇ ರಕ್ತ ಹರಿಸಿದರು: 11 ಜನರಿಗೆ ಗಾಯ
ಜರ್ಮನ್ ಪತ್ರಿಕೆ ಬಿಲ್ಡ್ ಪ್ರಕಾರ, ಭಾನುವಾರ ನಾರ್ತ್ ರೈನ್ ವೆಸ್ಟ್ಫಾಲಿಯಾದ ಗುರುದ್ವಾರ ಸಿಂಗ್ ಸಭಾದಲ್ಲಿ ಈ ಘರ್ಷಣೆ ನಡೆದಿದ್ದು, 40 ಕ್ಕೂ ಹೆಚ್ಚು ಜನರು ಇದರಲ್ಲಿ ಭಾಗಿಯಾಗಿದ್ದಾರೆ. ಇಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಅಧಿಕಾರಿಗಳು ವಿಶೇಷ ಪೊಲೀಸ್ ಘಟಕವನ್ನು ಇಲ್ಲಿ ನಿಯೋಜಿಸಿದ್ದಾರೆ. ಗುರುದ್ವಾರದ ನಿರ್ವಹಣೆ ಮತ್ತು ಹಣಕಾಸಿನ ವಿವಾದಗಳಿಗೆ ಸಂಬಂಧಿಸಿದಂತೆ ಈ ಹಿಂಸಾಚಾರ ನಡೆದಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದು, ಆದರೆ ಪೊಲೀಸರು ಈ ವಿಚಾರವನ್ನು ಖಚಿತಪಡಿಸಿಲ್ಲ.
ಇಲ್ಲಿ ಗುಂಡಿನ ಚಕಮಕಿ ನಡೆದ ಬಗ್ಗೆ ವರದಿ ಬಂದ ನಂತರ ಪೊಲೀಸರು ವೈಮಾನಿಕ ಮೇಲ್ವಿಚಾರಣೆಗಾಗಿ ಹೆಲಿಕಾಪ್ಟರ್ ಅನ್ನು ಸಹ ಬಳಸಿದರು ಎಂದು ವರದಿಯಾಗಿದೆ.
ಭಾನುವಾರ ಮಧ್ಯಾಹ್ನ ಘರ್ಷಣೆ ಪ್ರಾರಂಭವಾಗಿ ವೇಗವಾಗಿ ತೀವ್ರ ಸ್ವರೂಪ ಪಡೆದುಕೊಂಡಿತು 56 ವರ್ಷದ ಪ್ರತ್ಯಕ್ಷದರ್ಶಿಯೊಬ್ಬರು ಪ್ರಕಾರ, ಪ್ರಾರ್ಥನಾ ಸೇವೆಗೆ ಸ್ವಲ್ಪ ಮೊದಲು, ದಾಳಿಕೋರರು ಪೆಪ್ಪರ್ ಸ್ಪೇ ಬಳಸಿದರು, ನಂತರ ಒಬ್ಬರು ಪಿಸ್ತೂಲಿನಿಂದ ಗುಂಡು ಹಾರಿಸಿದರು. ನಾನು ಚಾಕುಗಳನ್ನು ಸಹ ನೋಡಿದೆ ಎಂದು ಹೇಳಿದ್ದಾರೆ.
ಗುರುದ್ವಾರದ ನಿರ್ವಹಣೆ ಮತ್ತು ಹಣಕಾಸಿನ ಕುರಿತಾದ ಆಂತರಿಕ ವಿವಾದಗಳು, ಹೊಸ ಮಂಡಳಿಯ ಚುನಾವಣೆ ಮತ್ತು ಸಮುದಾಯ ನಿಧಿಯ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದ ಭಿನ್ನಾಭಿಪ್ರಾಯಗಳು ಹಿಂಸಾಚಾರಕ್ಕೆ ಕಾರಣ ಆಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಹಿಂದಿನ ಸಮಿತಿ ಸದಸ್ಯರು ಮತ್ತು ಈಗಿನ ಸದಸ್ಯರ ನಡುವಿನ ವಿವಾದವಿದೆ. ಇದು ಸಮುದಾಯಕ್ಕೆ ಸೇರಿದ ಹಣವನ್ನು ಸಹ ಒಳಗೊಂಡಿದೆ. ಸ್ವಲ್ಪ ಸಮಯದಿಂದ ಸಮಸ್ಯೆಗಳು ಮತ್ತು ತೊಂದರೆಗಳಿವೆ ಎಂದು ಒಬ್ಬರು ಹೇಳಿದ್ದಾರೆ. ಹಿಂಸಾಚಾರ ನಡೆಯುತ್ತಿದ್ದಂತೆ ಅಲ್ಲಿದ್ದ ಭಕ್ತರು ಭಯಗೊಂಡಿದ್ದುಮ ಹಲವಾರು ಜನರು ಕಟ್ಟಡದಿಂದ ಹೊರಗೆ ಓಡಿಹೋದರು, ಅವರಲ್ಲಿ ಕೆಲವರು ಬರಿಗಾಲಿನಲ್ಲಿ ಓಡಿದ್ದಾರೆ ಎಂದು ಒಬ್ಬ ಪ್ರತ್ಯಕ್ಷದರ್ಶಿ ಹೇಳಿದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಬಂದ ತುರ್ತು ಪ್ರತಿಕ್ರಿಯೆ ನೀಡುವವರು ಘಟನಾ ಸ್ಥಳದಲ್ಲಿಯೇ ಗಾಯಾಳುಗಳಿಗೆ ಚಿಕಿತ್ಸೆ ನೀಡಿದ್ದಾರೆ. ಹೆಚ್ಚಿನವರ ತಲೆಗೆ ಗಾಯಗಳಾಗಿದ್ದವು ಎಂದು ವರದಿಯಾಗಿದೆ. ಶಸ್ತ್ರಸಜ್ಜಿತ ಶಂಕಿತನ ಬಗ್ಗೆ ಆತಂಕವಿದ್ದ ಹಿನ್ನೆಲೆ ಪೊಲೀಸರು ಆವರಣವನ್ನು ಮುಚ್ಚಿ ನಂತರ ಕಟ್ಟಡವನ್ನು ಪ್ರವೇಶಿಸಿದರು, , ಆದರೆ ಯಾವುದೇ ಬಂದೂಕುಧಾರಿ ಪತ್ತೆಯಾಗಲಿಲ್ಲ. ಘಟನೆಗೆ ಸಂಬಂಧಿಸಿದಂತೆ ಕನಿಷ್ಠ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ತನಿಖಾಧಿಕಾರಿಗಳು ಘಟನಾ ಸ್ಥಳದಿಂದ ಜೀವಂತ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಘಟನೆಯು ಸಿಖ್ ಸಮುದಾಯದ ಸದಸ್ಯರೂ ತೀವ್ರ ಬೇಸರ ಹಾಗೂ ಟೀಕೆ ವ್ಯಕ್ತಪಡಿಸಿದ್ದಾರೆ, ಪತ್ರಕರ್ತ ರವೀಂದರ್ ಸಿಂಗ್ ರಾಬಿನ್ ಇದನ್ನು ಆಘಾತಕಾರಿ ಎಂದು ಬಣ್ಣಿಸಿದ್ದಾರೆ. ಸಿಖ್ಖರು ಗುರುದ್ವಾರದ ಒಳಗೆ ಹೋರಾಡುತ್ತಿದ್ದಾರೆ, ಗಾಳಿಯಲ್ಲಿ ಪೇಟಗಳನ್ನು ಧರಿಸಿದ್ದಾರೆ. ಕಿರ್ಪಣಗಳು (ದುರ್ಬಲರನ್ನು ರಕ್ಷಿಸಲು ಉದ್ದೇಶಿಸಲಾಗಿದೆ)ಆದರೆ ಇಲ್ಲಿ ಪರಸ್ಪರರ ವಿರುದ್ಧ ಬಳಸಲಾಗಿದೆ ಇದೊಂದು ನಾಚಿಕೆಗೇಡಿನ ಘಟನೆ ಎಂದು ಅವರು ಹೇಳಿದ್ದಾರೆ.


