Asianet Suvarna News Asianet Suvarna News

ಭಾರತದ ಅಕ್ಸಾಯ್‌ ಚಿನ್‌ನಲ್ಲಿ ತನ್ನದೆಂದು ಚೀನಾ ನಕ್ಷೆ ಬಿಡುಗಡೆ, ಚೈನೀಸ್ ಬಂಕರ್‌, ಸುರಂಗ ಪತ್ತೆ

2023ನೇ ಆವೃತ್ತಿಯ ತನ್ನ ದೇಶದ ಅಧಿಕೃತ ನಕ್ಷೆ ಬಿಡುಗಡೆ ಮಾಡಿರುವ ಚೀನಾ. ಭಾರತದ ಅರುಣಾಚಲಪ್ರದೇಶದ ತವಾಂಗ್‌ ಪ್ರದೇಶ ಸೇರಿಸಿಕೊಂಡಿದೆ. ಇದಲ್ಲದೆ ಲಡಾಖ್‌ನ ಅಕ್ಸಾಯ್‌ ಚಿನ್‌ ಪ್ರದೇಶವನ್ನೂ ಸೇರಿಸಿಕೊಂಡಿದ್ದು, ಚೀನಾದಿಂದ ಬಂಕರ್‌, ಸುರಂಗ ನಿಲ್ಲಿಸಲಾಗಿದೆ.

China Goes Underground In Aksai Chin Chinese  built reinforced bunkers and underground facilities gow
Author
First Published Aug 30, 2023, 9:12 AM IST

ನವದೆಹಲಿ (ಆ.30): ಭಾರತದ ಅಕ್ಸಾಯ್‌ ಚಿನ್‌ ತನ್ನದೆಂದು ತೋರಿಸುವ ಹೊಸ ನಕ್ಷೆ ಬಿಡುಗಡೆ ಮಾಡಿರುವ ನೆರೆಯ ಚೀನಾ, ಅಕ್ಸಾಯ್‌ ಚಿನ್‌ ಪ್ರದೇಶದಲ್ಲಿ ರಹಸ್ಯವಾಗಿ ಸುರಂಗ ಮತ್ತು ಬಂಕರ್‌ ನಿರ್ಮಾಣ ಚಟುವಟಿಕೆ ತೀವ್ರಗೊಳಿಸಿರುವ ವಿಷಯ ಬೆಳಕಿಗೆ ಬಂದಿದೆ. ಇಂಥ ಕೆಲಸದಲ್ಲಿ ಚೀನಾ ತೊಡಗಿಸಿಕೊಂಡಿರುವುದು ಉಪಗ್ರಹಗಳ ಚಿತ್ರದ ಮೂಲಕ ಬಹಿರಂಗೊಂಡಿದೆ ಎಂದು ವರದಿಯೊಂದು ತಿಳಿಸಿದೆ.

ವಾಸ್ತವ ಗಡಿ ನಿಯಂತ್ರಣ ರೇಖೆಯಿಂದ 70 ಕಿ.ಮೀ. ದೂರದಲ್ಲಿ ವಿವಿಧ ಪ್ರದೇಶಗಳಲ್ಲಿ ಚೀನಾ 3 ಬಂಕರ್‌ಗಳು ಹಾಗೂ 3 ಸುರಂಗ ಮಾರ್ಗಗಳನ್ನು ನಿರ್ಮಾಣ ಮಾಡಿದೆ. ಅಲ್ಲದೇ ಈ 6 ಪ್ರದೇಶಗಳು ಸಹ 15 ಚದರ ಕಿ.ಮೀ. ವಿಸ್ತೀರ್ಣದೊಳಗಿವೆ ಎಂದು ವರದಿ ತಿಳಿಸಿದೆ. 2021ರ ಡಿ.6 ಮತ್ತು 2023 ಆ.18ರಂದು ಬಿಡುಗಡೆ ಮಾಡಲಾದ ಉಪಗ್ರಹ ಚಿತ್ರಗಳನ್ನು ಆಧಾರವಾಗಿಟ್ಟುಕೊಂಡು ಈ ವಿಶ್ಲೇಷಿಸಲಾಗಿದೆ.

ಜಮ್ಮು ಕಾಶ್ಮೀರಕ್ಕೆ ರಾಜ್ಯ ಸ್ಥಾನ ಯಾವಾಗ ಕೊಡ್ತೀರಿ ಟೈಂ ಹೇಳಿ: ಕೇಂದ್ರಕ್ಕೆ ಸುಪ್ರೀಂ

2020ರ ಮೇ 20ರಂದು ಸೈನ್ಯವನ್ನು ಹಿಂಪಡೆಯಲು ಉಭಯ ದೇಶಗಳು ನಿರ್ಧಾರ ಮಾಡಿದ ಬಳಿಕ ವಿಮಾನ ನಿಲ್ದಾಣ, ಹಲಿಪ್ಯಾಡ್‌, ರೈಲ್ವೆ, ಕ್ಷಿಪಣಿ ಬೇಸ್‌, ರಸ್ತೆ ಮತ್ತು ಸೇತುವೆ ಮುಂತಾದ ಕಾರ್ಯಗಳನ್ನು ಕೈಗೊಳ್ಳುವುದನ್ನು ನಿಲ್ಲಿಸಿದ್ದರೂ, ಸುರಂಗ ನಿರ್ಮಾಣ ಕಾರ್ಯವನ್ನು ಕೈಗೊಂಡಿದೆ. ಒಂದು ವೇಳೆ ಕ್ಷಿಪಣಿ ಅಥವಾ ರಾಕೆಟ್‌ ದಾಳಿ ನಡೆದರೆ ತಮ್ಮ ಸೈನಿಕರನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಈ ಬಂಕರ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ.

ಆದರೆ ಈ ಉಪಗ್ರಹ ಚಿತ್ರಗಳ ವಿಶ್ಲೇಷಣೆಯ ಬಗ್ಗೆ ಪ್ರತಿಕ್ರಿಯಿಸಲು ಭಾರತದ ಅಧಿಕಾರಿಗಳು ನಿರಾಕರಿಸಿದ್ದಾರೆ. ಈ ನಿರ್ಮಾಣಗಳ ಬಗ್ಗೆ ಮಾತನಾಡಿದರು ನಿವೃತ್ತ ಏರ್‌ ವೈಸ್‌ ಮಾರ್ಷಲ್‌ ಮನೋಹರ್‌ ಬಹದ್ದೂರ್‌ ಅವರು, ‘ಇವುಗಳನ್ನು ಕೇವಲ ಸೈನಿಕರನ್ನು ರಕ್ಷಿಸಲು ಅಷ್ಟೇ ಅಲ್ಲದೇ ಕಮಾಂಡ್‌ ಸೆಂಟರ್‌ಗಳಾಗಿಯೂ ಬಳಕೆ ಮಾಡಲಾಗುತ್ತದೆ. ಜೊತೆಗೆ ಇಲ್ಲಿ ಸ್ಪೋಟಕಗಳನ್ನು ಅಡಗಿಸಿಡಲಾಗುತ್ತದೆ. ಇವು ವಾಯು ಮಾರ್ಗದಲ್ಲಿ ಚಲಿಸುವ ಕ್ಷಿಪಣಿಗಳನ್ನು ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂಧು ಹೇಳಿದ್ದಾರೆ.

ಈ ಮೊದಲು ಲಡಾಖ್‌ ಬಳಿಯೂ ಸಹ ಚೀನಾ ಇಂತಹುದ್ದೇ ರಚನೆಗಳನ್ನು ನಿರ್ಮಾಣ ಮಾಡಿತ್ತು. ಈಗ ಅಕ್ಸಾಯ್‌ ಚಿನ್‌ ಪ್ರದೇಶಗದಲ್ಲಿ ಇವುಗಳ ನಿರ್ಮಾಣ ತೊಡಗಿದೆ ಎಂದು ವರದಿ ತಿಳಿಸಿದೆ.

84 ಲಕ್ಷ ರೂ ವೇತನದ ಉದ್ಯೋಗ ಬಿಟ್ಟು ಬಟ್ಟೆ ಒಗೆಯವ ಕಂಪೆನಿ ತೆರೆದು ಗೆದ್ದು ಬೀಗಿದ ಐಐಟಿ

ಚೀನಾ ನಕ್ಷೆಯಲ್ಲಿ ಅರುಣಾಚಲ, ಲಡಾಖ್‌ ಭಾಗ: ಭಾರತ ಕೆಂಡ
ಭಾರತದ ಅರುಣಾಚಲ ಪ್ರದೇಶ, ಅಕ್ಸಾಯ್‌ ಚಿನ್‌ ಪ್ರದೇಶವನ್ನೂ ಸೇರಿಸಿಕೊಂಡು ಚೀನಾ 2023ನೇ ಸಾಲಿನ ತನ್ನ ದೇಶದ ಅಧಿಕೃತ ನಕ್ಷೆಯನ್ನು ಬಿಡುಗಡೆ ಮಾಡಿದೆ. ಜೊತೆಗೆ ತೈವಾನ್‌ ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿರುವ ಇನ್ನಿತರ ವಿವಾದಿತ ಪ್ರದೇಶಗಳನ್ನೂ ಈ ನಕ್ಷೆಯಲ್ಲಿ ಸೇರಿಸಿಕೊಂಡಿದೆ.

ಅರುಣಾಚಲ ಪ್ರದೇಶ ನಮ್ಮ ದೇಶದ ಅವಿಭಾಜ್ಯ ಅಂಗ ಎಂದು ಭಾರತ ಸಾಕಷ್ಟುಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೇಳುತ್ತಾ ಬಂದಿದ್ದರೂ ಚೀನಾ ಮತ್ತೊಮ್ಮೆ ಅದನ್ನು ಸೇರಿಸಿಕೊಂಡು ನಕ್ಷೆ ಬಿಡುಗಡೆ ಮಾಡುವ ಮೂಲಕ ಉದ್ಧಟತನ ಮೆರೆದಿದೆ. ಇದರಲ್ಲಿ ಅರುಣಾಚಲ ಪ್ರದೇಶದ ತವಾಂಗ್‌ ಮತ್ತಿತರೆ ಪ್ರದೇಶಗಳನ್ನು ಚೀನಾಕ್ಕೆ ಸೇರಿದ್ದು ಎನ್ನುವ ರೀತಿಯಲ್ಲಿ ಚಿತ್ರಿಸಲಾಗಿದೆ.

ಈ ನಡುವೆ ಚೀನಾ ವರ್ತನೆಗೆ ತೀಕ್ಷ$್ಣ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ‘ಅಸಂಬದ್ಧ ಹೇಳಿಕೆ ನೀಡುವುದರಿಂದ ಯಾವುದೇ ದೇಶದ ಭೂಭಾಗ ನಿಮ್ಮದಾಗದು. ಚೀನಾ ಹಿಂದಿನಿಂದಲೂ ಇಂಥ ವರ್ತನೆ ತೋರಿಕೊಂಡೇ ಬಂದಿದೆ. ಮತ್ತೊಂದು ದೇಶದ ಭೂಭಾಗವನ್ನು ನಿಮ್ಮ ಭೂಪಟದಲ್ಲಿ ತೋರಿಸಿದಾಕ್ಷಣ ಅದು ನಿಮ್ಮದಾಗದು’ ಎಂದು ಹೇಳಿದ್ದಾರೆ. ಮತ್ತೊಂದೆಡೆ, ‘ಇಂಥ ಎಲ್ಲ ಹೇಳಿಕೆಗಳನ್ನು ನಾವು ತಳ್ಳಿಹಾಕುತ್ತೇವೆ. ಚೀನಾದ ಇಂಥ ನಡೆಗಳು ಗಡಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಕ್ರಿಯೆಯನ್ನು ಇನ್ನಷ್ಟುಕ್ಲಿಷ್ಟಗೊಳಿಸುತ್ತದೆ. ಚೀನಾದ ಹೇಳಿಕೆ ಕುರಿತು ನಾವು ರಾಜತಾಂತ್ರಿಕ ಮಾರ್ಗಗಳ ಮೂಲಕ ನಮ್ಮ ಪ್ರಬಲ ವಿರೋಧ ವ್ಯಕ್ತಪಡಿಸಿದ್ದೇವೆ’ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್‌ ಬಗ್ಚಿ ಪ್ರತಿಕ್ರಿಯಿಸಿದ್ದಾರೆ.

ಹೊಸ ಭೂಪಟ:
‘2023ನೇ ಆವೃತ್ತಿಯ ಚೀನಾದ ಸ್ಟಾಂಡರ್ಡ್‌ ನಕ್ಷೆ ಬಿಡುಗಡೆ ಮಾಡಲಾಗಿದೆ. ಅದನ್ನು ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯದ ವೆಬ್‌ಸೈಟಿನಲ್ಲೂ ಪ್ರಕಟಿಸಲಾಗಿದೆ. ದೇಶದ ರಾಷ್ಟ್ರೀಯ ಗಡಿಯನ್ನು ಗುರುತು ಮಾಡಲು ಚೀನಾ ಹಾಗೂ ವಿವಿಧ ದೇಶಗಳು ಬಳಸುವ ಪದ್ಧತಿಯನ್ನು ಬಳಸಿ ಈ ನಕ್ಷೆ ರಚಿಸಲಾಗಿದೆ’ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್‌ ಟೈಮ್ಸ್‌ ಟ್ವೀಟ್‌ ಮಾಡಿದೆ.

ಅನೇಕ ವರ್ಷಗಳಿಂದ ಅರುಣಾಚಲ ಪ್ರದೇಶ ತನ್ನದು, ಅದು ದಕ್ಷಿಣ ಟಿಬೆಟ್‌ನ ಭಾಗ ಎಂದು ಹೇಳಿಕೊಳ್ಳುತ್ತಿರುವ ಚೀನಾ, ಅಲ್ಲಿನ ಜನರಿಗೆ ಚೀನಾಕ್ಕೆ ಬರಲು ಸ್ಟೇಪಲ್ಡ್‌ ವೀಸಾ ನೀಡುತ್ತದೆ. ಇನ್ನು, 1962ರ ಯುದ್ಧದಲ್ಲಿ ಅಕ್ಸಾಯ್‌ ಚಿನ್‌ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ. ಆದರೆ ಅದೂ ಮೂಲತಃ ಭಾರತದ ಭೂಭಾಗವಾಗಿದೆ. ಈ ಹಿಂದಿನ ವರ್ಷಗಳಲ್ಲೂ ಇವುಗಳನ್ನು ಸೇರಿಸಿಕೊಂಡು ಚೀನಾ ತನ್ನ ನಕ್ಷೆ ಬಿಡುಗಡೆ ಮಾಡಿತ್ತು. ಅದಕ್ಕೆ ಭಾರತ ಆಕ್ಷೇಪಿಸಿತ್ತು.

ಚೀನಾ ನಡೆಗೆ ಕಾಂಗ್ರೆಸ್‌ ಕಿಡಿ:
ಚೀನಾದ ಹೊಸ ನಕ್ಷೆಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಅರುಣಾಚಲ ಮತ್ತು ಅಕ್ಸಾಯ್‌ ಚಿನ್‌ ಭಾರತದ ಅವಿಭಾಜ್ಯ ಅಂಗಗಳು. ಭಾರತ ಸರ್ಕಾರ ಮುಂಬರುವ ಜಿ20 ಶೃಂಗದಲ್ಲಿ ಚೀನಾದ ನಡೆಗೆ ಜಾಗತಿಕ ವೇದಿಕೆಯಲ್ಲೇ ಆಕ್ಷೇಪ ವ್ಯಕ್ತಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

Follow Us:
Download App:
  • android
  • ios