* ದಿಲ್ಲಿ, ಗುಜರಾತ್‌, ಉ.ಪ್ರ., ಮುಂಬೈನಲ್ಲಿ ದಾಳಿ ಬೆದರಿಕೆ* ಪ್ರವಾದಿಗೆ ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತೇವೆ* ನಾವು, ನಮ್ಮ ಮಕ್ಕಳು ಬಾಂಬ್‌ ಕಟ್ಟಿಕೊಂಡು ಆತ್ಮಾಹುತಿ ದಾಳಿ ಮಾಡ್ತೇವೆ* ಕೇಸರಿ ಭಯೋತ್ಪಾದಕರು ತಮ್ಮ ಕೊನೆಯ ದಿನ ಎಣಿಸಲಿ

ನವದೆಹಲಿ(ಜೂ.09): ಪ್ರವಾದಿ ಮೊಹಮ್ಮದರಿಗೆ ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಅವಮಾನ ಮಾಡಿದ್ದಾರೆ ಎಂದು ಅರೋಪಿಸಿ ಅಲ್‌ ಖೈದಾ ಭಾರತೀಯ ಉಪಖಂಡ (ಎಕ್ಯುಎಎಸ್‌) ಉಗ್ರ ಸಂಘಟನೆಯು ಗುಜರಾತ್‌, ಉತ್ತರ ಪ್ರದೇಶ, ಮುಂಬೈ ಹಾಗೂ ದಿಲ್ಲಿಯಲ್ಲಿ ಭಯೋತ್ಪಾದಕ ಆತ್ಮಾಹುತಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ.

Add Asianetnews Kannada as a Preferred SourcegooglePreferred

ಸಾಮಾಜಿಕ ಮಾಧ್ಯಮಗಳಲ್ಲಿ ಅಲ್‌ ಖೈದಾ ಸಂಘಟನೆ, ಬೆದರಿಕೆ ಪತ್ರವನ್ನು ಹಂಚಿಕೊಂಡಿದ್ದು, ‘ಪ್ರವಾದಿಯ ಗೌರವ ಉಳಿಸಲು ನಾವು ಹೋರಾಡುತ್ತೇವೆ. ದಿಲ್ಲಿ, ಮುಂಬೈ, ಉತ್ತರ ಪ್ರದೇಶ ಹಾಗೂ ಗುಜರಾತ್‌ನಲ್ಲಿನ ಕೇಸರಿ ಭಯೋತ್ಪಾದಕರು ತಮ್ಮ ಅಂತಿಮ ದಿನಗಳನ್ನು ಎಣಿಸಲಿ’ ಎಂದು ಎಚ್ಚರಿಕೆ ನೀಡಿದೆ.

‘ಭಾರತೀಯ ಟೀವಿ ಚಾನೆಲ್‌ನಲ್ಲಿ ಪ್ರವಾದಿ ಮೊಹಮ್ಮದರು ಹಾಗೂ ಅವರ ಧರ್ಮಪತ್ನಿಯನ್ನು ನಿಂದಿಸಿ ಅವಮಾನಿಸಲಾಗಿದೆ. ಇವರಿಗೆ (ಹಿಂದೂ ಸಂಘಟನೆಗಳಿಗೆ) ಅವರ ಮನೆಗಳಲ್ಲೂ ಆಶ್ರಯ ಸಿಗುವುದಿಲ್ಲ ಹಾಗೂ ಸೈನಿಕ ಭದ್ರಕೋಟೆಯಲ್ಲೂ ಸ್ಥಾನ ಸಿಗುವುದಿಲ್ಲ. ಪ್ರವಾದಿಗೆ ಆದ ಅವಮಾನದ ಸೇಡು ತೀರಿಸಿಕೊಳ್ಳದೇ ಹೋದರೆ ನಮ್ಮ ತಾಯಂದಿರು ದುಃಖ ಅನುಭವಿಸಬೇಕಾಗಬಹುದು’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

‘ಪ್ರವಾದಿಗೆ ಅವಮಾನ ಮಾಡಿದವರನ್ನು ಸಾಯಿಸೋಣ. ನಮ್ಮ ಹಾಗೂ ನಮ್ಮ ಮಕ್ಕಳ ದೇಹಕ್ಕೆ ಬಾಂಬ್‌ಗಳನ್ನು ಕಟ್ಟಿಕೊಳ್ಳೋಣ. ಪೈಗಂಬರರಿಗೆ ಅವಮಾನ ಮಾಡಿದವರು ನಮ್ಮ ಮುಂದೆ ತಲೆಬಾಗಬೇಕು’ ಎಂದು ಅಲ್‌ ಖೈದಾ ಬೆದರಿಸಿದೆ.