ದತ್ತಾಂಶ ಉದ್ದಿಮೆಗಳಿಗೆ 100 ಕೋಟಿ ರು. ಪ್ರೋತ್ಸಾಹ, ಸಬ್ಸಿಡಿ ದತ್ತಾಂಶ ಉದ್ದಿಮೆಗೆ .10000 ಕೋಟಿ ಬಂಡವಾಳ ಆಕರ್ಷಿಸಲು ಹೊಸ ನೀತಿ ಎಂಟು ದತ್ತಾಂಶ ಕೇಂದ್ರಗಳಿಗೆ ನೆಲೆಯಾಗಿರುವ ಕರ್ನಾಟಕ

ಬೆಂಗಳೂರು(ಏ.19): 2025ರ ವೇಳೆಗೆ ದತ್ತಾಂಶ ಉದ್ಯಮದಲ್ಲಿ 10 ಸಾವಿರ ಕೋಟಿ ರು. ಹೂಡಿಕೆಯನ್ನು ಅಕರ್ಷಿಸುವ ಗುರಿ ಹೊಂದಿರುವ ಹೊಸ ದತ್ತಾಂಶ ಕೇಂದ್ರ ನೀತಿಗೆ (ಡಾಟಾ ಸೆಂಟರ್‌ ಪಾಲಿಸಿ) ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.

ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಕರ್ನಾಟಕ ದತ್ತಾಂಶ ಕೇಂದ್ರ ನೀತಿ-2022 ಜಾರಿಗೆ ತರಲು ತೀರ್ಮಾನಿಸಲಾಗಿದೆ. ಇದಕ್ಕಾಗಿ 100 ಕೋಟಿ ರು. ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ. ಹೊಸ ನೀತಿಯನ್ವಯ ಪ್ರೋತ್ಸಾಹ ಮತ್ತು ಸಬ್ಸಿಡಿಯನ್ನು ನೀಡಲಾಗುತ್ತದೆ ಎಂದು ಹೇಳಿದರು. ದೇಶದಲ್ಲಿ ಕರ್ನಾಟಕ ರಾಜ್ಯವು ದತ್ತಾಂಶ ಕೇಂದ್ರ ಕ್ಷೇತ್ರದಲ್ಲಿ ಮುಂಚೂಣಿ ಹೊಂದುವ ಸಾಮರ್ಥ್ಯವನ್ನು ಹೊಂದಿದೆ. ಬೆಂಗಳೂರು ಪ್ರಸ್ತುತ ದೇಶದಲ್ಲಿ ದತ್ತಾಂಶ ಕೇಂದ್ರದ ಉದ್ಯಮಕ್ಕೆ ಅಗ್ರ ಐದು ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ಬೆಂಗಳೂರಿನ ಹೊರಗೆ ದತ್ತಾಂಶ ಶೇಖರಣಾ ಮೂಲಸೌಕರ್ಯವನ್ನು ಸ್ಥಾಪಿಸಲು ವಿಶೇಷ ಪ್ರೋತ್ಸಾಹವನ್ನು ನೀಡಲಾಗುತ್ತದೆ. 10 ಕೋಟಿ ರು.ವರೆಗೆ ಬಂಡವಾಳ ಸಬ್ಸಿಡಿ, ಮೂರು ಕೋಟಿ ರು.ವರೆÜಗೆ ಶೇ.10ರಷ್ಟುಭೂ ಸಬ್ಸಿಡಿ, 10 ಎಕರೆವರೆಗೆ ಶೇ.100ರಷ್ಟುಸ್ಟ್ಯಾಂಪ್‌ ಡ್ಯೂಟಿ ವಿನಾಯಿತಿ, ನೋಂದಣಿ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುತ್ತದೆ ಎಂದು ನೀತಿಯಲ್ಲಿ ಉಲ್ಲೇಖಿಸಲಾಗಿದೆ.

Google ban apps ವೈಯುಕ್ತಿಕ ಮಾಹಿತಿ ಕದಿಯುತ್ತಿದ್ದ 10ಕ್ಕೂ ಹೆಚ್ಚು ಆ್ಯಪ್ ನಿಷೇಧಿಸಿದ ಗೂಗಲ್!

ರಾಜ್ಯವು ಎಂಟು ದತ್ತಾಂಶ ಕೇಂದ್ರಗಳಿಗೆ ನೆಲೆಯಾಗಿದೆ. ರಿಲಯನ್ಸ್‌, ಸಿಫಿ, ಎನ್‌ಟಿಟಿ, ನೆಕ್ಸ್ಟ್‌ಜೆನ್‌, ಟ್ರೈಮ್ಯಾಕ್ಸ್‌, ಏರ್‌ಟೆಲ್‌, ಎಸ್‌ಟಿಟಿ ಪ್ರಮುಖವಾಗಿವೆ. ನೀತಿಯು 2025ರ ವೇಳೆಗೆ ರಾಜ್ಯದಲ್ಲಿ 200 ಮೆಗಾವ್ಯಾಟ್‌ಗಿಂತ ಹೆಚ್ಚಿನ ಸಾಮರ್ಥ್ಯದ ದತ್ತಾಂಶ ಕೇಂದ್ರ ಉದ್ಯಮವನ್ನು ಅಭಿವೃದ್ಧಿಪಡಿಸುವ ಉದ್ದೇಶ ಇದೆ ಎಂದು ತಿಳಿಸಿದರು.

ಕರ್ನಾಟಕ ದತ್ತಾಂಶ ಕೇಂದ್ರ ನೀತಿಯು ರಾಜ್ಯದಲ್ಲಿ ದತ್ತಾಂಶ ಕೇಂದ್ರಗಳ ಬೆಳವಣಿಗೆಗೆ ದೃಢವಾದ ಮತ್ತು ಉತ್ತಮ ಸಂಪರ್ಕ ಹೊಂದಿದ ಪರಿಸರ ವ್ಯವಸ್ಥೆಯನ್ನು ಒದಗಿಸುವ ಮೂಲಕ ದತ್ತಾಂಶ ಕೇಂದ್ರಗಳಿಗೆ ಬೇಡಿಕೆ ಮತ್ತು ಮೌಲ್ಯವನ್ನು ರಚಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.

ಕ್ರಿಮಿನಲ್ ಪ್ರೊಸೀಜರ್ ಐಡೆಂಟಿಫಿಕೇಶನ್ ಬಿಲ್ ಸಂಸತ್ತಿನಲ್ಲಿ ಅಂಗೀಕಾರ: ಪೊಲೀಸರಿಗೆ ಬಯೋಡೇಟಾ ಸಂಗ್ರಹಕ್ಕೆ ಅವಕಾಶ!

ಸೈಬರ್‌ ಭದ್ರತಾ ನೀತಿ ರೂಪಿಸಲು ಐಬಿಎಂ ಒಲವು
ಸೈಬರ್‌ ಭದ್ರತಾ ನೀತಿ ರೂಪಿಸಲು ಅಗತ್ಯ ನೆರವು ನೀಡಲು ಮುಕ್ತ ಮನಸ್ಸು ಹೊಂದಿದ್ದೇವೆ. ದತ್ತಾಂಶಗಳ ಸುರಕ್ಷಿತ ಸಂಗ್ರಹಣೆ, ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಉನ್ನತೀಕರಣ, ಕೃಷ್ಣರಾಜೇಂದ್ರ ಎಂಜಿನಿಯರಿಂಗ್‌ ಕಾಲೇಜು ಅಭಿವೃದ್ಧಿಪಡಿಸಲು ಉತ್ಸುಕವಾಗಿದ್ದೇವೆ ಎಂದು ಐಬಿಎಂ ಕಂಪನಿ ಸರ್ಕಾರಕ್ಕೆ ಸ್ಪಷ್ಟಪಡಿಸಿದೆ.

ವಿಕಾಸಸೌಧದಲ್ಲಿ ಐಟಿ-ಬಿಟಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರನ್ನು ಭೇಟಿ ಮಾಡಿದ ಐಬಿಎಂ ನಿಯೋಗ, ಸೈಬರ್‌ ಭದ್ರತೆ, ಕೃತಕ ಬುದ್ಧಿಮತ್ತೆ, ಸೈಬರ್‌ ಭದ್ರತಾ ನೀತಿ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಈ ಭರವಸೆ ನೀಡಿತು.

ಬಳಿಕ ಮಾತನಾಡಿದ ಐಬಿಎಂ ಕಂಪೆನಿಯ ದಕ್ಷಿಣ ಏಷ್ಯಾ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಸಂದೀಪ್‌ ಪಟೇಲ್‌, ಸೈಬರ್‌ ಭದ್ರತೆಗೆ ಸಂಬಂಧಿಸಿದಂತೆ ಐಬಿಎಂ ಇತ್ತೀಚೆಗೆ ಬೆಂಗಳೂರಿನಲ್ಲಿ ಸೆಕ್ಯೂರಿಟಿ ಕಮಾಂಡ್‌ ಸೆಂಟರ್‌ ಆರಂಭಿಸಿದೆ. ಸರ್ಕಾರವು ದತ್ತಾಂಶಗಳ ಸುರಕ್ಷಿತ ಸಂಗ್ರಹಣೆಗೆ ಇದನ್ನು ಬಳಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಆಸಕ್ತಿ ತೋರಿಸಿದರೆ, ಸರ್ಕಾರದ ಸಿಬ್ಬಂದಿಗೆ ಕಂಪೆನಿಯಿಂದ ಸೂಕ್ತ ಮತ್ತು ದಕ್ಷ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಐಬಿಎಂ ಕ್ಲೌಡ್‌ ಮತ್ತು ಕಾಗ್ನಿಟೀವ್‌ ಸಾಫ್‌್ಟವೇರ್‌ ಲ್ಯಾಬ್ಸ್‌ ವಿಭಾಗದ ಉಪಾಧ್ಯಕ್ಷ ಗೌರವ್‌ ಶರ್ಮ, ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್‌ ಬಾಲಾಜಿ ನಿಯೋಗದಲ್ಲಿದ್ದರು. ಐಟಿ-ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ ಹಾಜರಿದ್ದರು.