ಕ್ರಿಮಿನಲ್ ಪ್ರೊಸೀಜರ್ ಐಡೆಂಟಿಫಿಕೇಶನ್ ಬಿಲ್ ಸಂಸತ್ತಿನಲ್ಲಿ ಅಂಗೀಕಾರ: ಪೊಲೀಸರಿಗೆ ಬಯೋಡೇಟಾ ಸಂಗ್ರಹಕ್ಕೆ ಅವಕಾಶ!
ಅಪರಾಧದ ಪ್ರಮಾಣವನ್ನು ಕಡಿಮೆ ಮಾಡುವುದು, ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವುದು ಮತ್ತು ದೇಶದ ಭದ್ರತೆಯನ್ನು ಹೆಚ್ಚಿಸುವುದು ಮಸೂದೆಯ ಉದ್ದೇಶವಾಗಿದೆ ಎಂದು ಅಮಿತ್ ಶಾ ಹೇಳಿದರು.
ನವದೆಹಲಿ (ಏ. 07): ಅಪರಾಧ ಪ್ರಕರಣಗಳಲ್ಲಿ ಗುರುತಿಸುವಿಕೆ ಮತ್ತು ತನಿಖೆಯ ಉದ್ದೇಶಗಳಿಗಾಗಿ ಅಪರಾಧಿಗಳು ಮತ್ತು ಇತರ ವ್ಯಕ್ತಿಗಳ ಕೆಲವು ಗುರುತಿಸಬಹುದಾದ ಮಾಹಿತಿಯನ್ನು ಸಂಗ್ರಹಿಸಲು ತನಿಖಾಧಿಕಾರಿಗಳಿಗೆ ಅವಕಾಶ ನೀಡುವ ಕ್ರಿಮಿನಲ್ ಪ್ರೊಸೀಜರ್ (ಐಡೆಂಟಿಫಿಕೇಶನ್) ಮಸೂದೆಯನ್ನು ಸಂಸತ್ತು ಬುಧವಾರ ಅಂಗೀಕರಿಸಿದೆ. ಏಪ್ರಿಲ್ 4 ರಂದು ಲೋಕಸಭೆಯಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಯಿತು. ಅಪರಾಧದ ಪ್ರಮಾಣವನ್ನು ಕಡಿಮೆ ಮಾಡುವುದು, ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವುದು ಮತ್ತು ದೇಶದ ಭದ್ರತೆಯನ್ನು ಹೆಚ್ಚಿಸುವುದು ಮಸೂದೆಯ ಉದ್ದೇಶವಾಗಿದೆ ಎಂದು ಅಮಿತ್ ಶಾ ಹೇಳಿದರು.
ಈ ಕಾನೂನು ಕಠಿಣವಾಗಿದೆ ಎಂದು ಪ್ರತಿಪಕ್ಷಗಳು ಕಳವಳ ವ್ಯಕ್ತಪಡಿಸಿದ್ದರೂ, ಚರ್ಚೆಯಲ್ಲಿ ಉತ್ತರಿಸಿದ ಗೃಹ ಸಚಿವ ಅಮಿತ್ ಶಾ "ಪೊಲೀಸರು ಮತ್ತು ತನಿಖಾಧಿಕಾರಿಗಳು ಅಪರಾಧಿಗಳಿಗಿಂತ ಎರಡು ಹೆಜ್ಜೆ ಮುಂದೆ ಇರುವುದನ್ನು ಖಚಿತಪಡಿಸಿಕೊಳ್ಳಲು ಮಸೂದೆಯನ್ನು ತರಲಾಗಿದೆ" ಎಂದು ಹೇಳಿದರು.
ಮಸೂದೆ ಮೇಲಿನ ಚರ್ಚೆಯಲ್ಲಿ ಒಟ್ಟು 17 ಸದಸ್ಯರು ಭಾಗವಹಿಸಿದ್ದರು. ಕೆಲವು ವಿರೋಧ ಪಕ್ಷದ ಸದಸ್ಯರು ಮಸೂದೆಯನ್ನು "ಅಸಂವಿಧಾನಿಕ" ಎಂದ್ದಿದ್ದು ಹೆಚ್ಚಿನ ಪರಿಶೀಲನೆಗಾಗಿ ಸ್ಥಾಯಿ ಸಮಿತಿಗೆ ಕಳುಹಿಸಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರ ಹಣಕಾಸು ನಿಷೇಧಿಸುವ ಬಿಲ್ ಲೋಕಸಭೆಯಲ್ಲಿ ಅಂಗೀಕಾರ!
ಬಳಿಕ ರಾಜ್ಯಸಭೆಯು ಧ್ವನಿ ಮತದ ಮೂಲಕ ಮಸೂದೆಯನ್ನು ಅಂಗೀಕರಿಸಿತು. ಈ ಹಿಂದೆ ಲೋಕಸಭೆಯಲ್ಲಿ ಮಸೂದೆ ಅಂಗೀಕಾರವಾಗಿತ್ತು. ಕ್ರಿಮಿನಲ್ ಪ್ರೊಸೀಜರ್ (ಐಡೆಂಟಿಫಿಕೇಶನ್) ಮಸೂದೆ, 2022 ಕೈದಿಗಳ ಗುರುತಿಸುವಿಕೆ ಕಾಯಿದೆ, 1920ಯನ್ನು ಹೊಸ ಕಾಯ್ದೆ ಬದಲಿಸುತ್ತದೆ.
ಗೌಪ್ಯತೆ ಉಲ್ಲಂಘಿಸುವುದಿಲ್ಲ: ರಾಜಕೀಯ ಬಂಧಿತರನ್ನು ಯಾವುದೇ ಆಂದೋಲನದಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಬಂಧಿಸಿದ್ದರೆ ಅವರ ಬಯೋಮೆಟ್ರಿಕ್ ಡೇಟಾವನ್ನು ಸಂಗ್ರಹಿಸಲಾಗುವುದಿಲ್ಲ.ಇದು ಯಾರ ಗೌಪ್ಯತೆಯನ್ನು ಉಲ್ಲಂಘಿಸುವುದಿಲ್ಲ ಎಂದು ನಾನು ಭರವಸೆ ನೀಡಲು ಬಯಸುತ್ತೇನೆ. ಈ ಮಸೂದೆಯು "ಅಪರಾಧಗಳ ಬಲಿಪಶುಗಳ ಮಾನವ ಹಕ್ಕುಗಳನ್ನು ರಕ್ಷಿಸುತ್ತದೆ, ಅಪರಾಧಿಗಳದಷ್ಟೇ ಅಲ್ಲ" ಎಂದು ಶಾ ಹೇಳಿದರು.
ಸಂಗ್ರಹಿಸಿದ ಮಾಹಿತಿಯು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ ಮತ್ತು ಖಾಸಗಿತನ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುವ ಯಾವುದೇ ಲೋಪದೋಷಗಳು ಮಸೂದೆಯಲ್ಲಿ ಇರದಂತೆ ಸರ್ಕಾರ ಖಚಿತಪಡಿಸುತ್ತದೆ ಎಂದು ಶಾ ಭರವಸೆ ನೀಡಿದರು.
ತಂತ್ರಜ್ಞಾನ ಬಳಕೆ ಅತ್ಯಗತ್ಯ: "ಇತರ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ಕಾನೂನು ಕಟ್ಟುನಿಟ್ಟಿನ ವಿಷಯದಲ್ಲಿ 'ಬಚ್ಚಾ' (ಏನೂ ಇಲ್ಲ). ದಕ್ಷಿಣ ಆಫ್ರಿಕಾ, ಯುಕೆ, ಆಸ್ಟ್ರೇಲಿಯಾ, ಕೆನಡಾ ಮತ್ತು ಯುಎಸ್ನಂತಹ ದೇಶಗಳಲ್ಲಿ ಹೆಚ್ಚು ಕಠಿಣ ಕಾನೂನುಗಳಿವೆ, ಅದಕ್ಕಾಗಿಯೇ ಅವರ ಅಪರಾಧದ ಪ್ರಮಾಣವು ಕಡಿಮಡಯಾಗಿದೆ," ಎಂದು ಅವರು ಹೇಳಿದರು.
ಮುಂದಿನ ಪೀಳಿಗೆಯ ಅಪರಾಧಗಳನ್ನು ಹಳೆಯ ತಂತ್ರಗಳೊಂದಿಗೆ ನಿಭಾಯಿಸಲು ಸಾಧ್ಯವಿಲ್ಲ; ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಮುಂದಿನ ಯುಗಕ್ಕೆ ಕೊಂಡೊಯ್ಯಲು ನಾವು ಪ್ರಯತ್ನಿಸಬೇಕು, ”ಎಂದು ಅವರು ಹೇಳಿದರು.
ಇದನ್ನೂ ಓದಿ: PAN Card Misuse: ನಟ ರಾಜ್ ಕುಮಾರ್ ರಾವ್ ಪ್ಯಾನ್ ದುರ್ಬಳಕೆ; ನಿಮ್ಮ ಪ್ಯಾನ್ ಕಾರ್ಡ್ ದುರ್ಬಳಕೆ ಆಗಿದೆಯಾ? ಚೆಕ್ ಮಾಡಿ
ಹೊಸ ಶಾಸನದ ದುರುಪಯೋಗದ ಬಗ್ಗೆ ವಿರೋಧ ವ್ಯಕ್ತಪಡಿಸಿದ ಆತಂಕಗಳನ್ನು ನಿವಾರಿಸಲು ಅವರು ಪ್ರಯತ್ನಿಸಿದರು.
"ದತ್ತಾಂಶವನ್ನು ರಕ್ಷಿಸಲು ಅತ್ಯುತ್ತಮ ತಂತ್ರಜ್ಞಾನವನ್ನು ಬಳಸಲಾಗುವುದು ಮತ್ತು ಮಾನವಶಕ್ತಿಯ ತರಬೇತಿ ಇರುತ್ತದೆ" ಎಂದು ಶಾ ಹೇಳಿದರು.
ಬಯೋಡೇಟಾ ಸಂಗ್ರಹ: ಅಂತಹ ಮಾಪನಗಳನ್ನು ನೀಡಲು ಅಗತ್ಯವಿರುವ ವ್ಯಕ್ತಿಗಳ ಸೂಕ್ತವಾದ ದೇಹದ ಅಳತೆಗಳನ್ನು (ಬೆರಳಿನ ಗುರುತುಗಳು, ಅಂಗೈ-ಮುದ್ರೆ ಮತ್ತು ಪಾದದ ಗುರುತುಗಳು, ಛಾಯಾಚಿತ್ರಗಳು, ಐರಿಸ್ ಮತ್ತು ರೆಟಿನಾ ಸ್ಕ್ಯಾನ್, ಭೌತಿಕ ಮತ್ತು ಜೈವಿಕ ಮಾದರಿಗಳು) ತೆಗೆದುಕೊಳ್ಳಲು ಕಾನೂನು ಅನುಮತಿಯನ್ನು ಮಸೂದೆ ಒದಗಿಸುತ್ತದೆ. ಈ ಮೂಲಕ ಅಪರಾಧದ ತನಿಖೆ ಹೆಚ್ಚು ಪರಿಣಾಮಕಾರಿ ಮತ್ತು ತ್ವರಿತವಾಗುತ್ತದೆ".
ಇದು ಮಾಪನಗಳ ದಾಖಲೆಯನ್ನು ಸಂಗ್ರಹಿಸಲು ಮತ್ತು ಸಂರಕ್ಷಿಸಲು ಮತ್ತು ದಾಖಲೆಗಳ ಹಂಚಿಕೆ, ಪ್ರಸಾರ, ನಾಶ ಮತ್ತು ವಿಲೇವಾರಿಗಾಗಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋಗೆ ಅಧಿಕಾರ ನೀಡಲು ಪ್ರಯತ್ನಿಸುತ್ತದೆ. ಇದು ಯಾವುದೇ ವ್ಯಕ್ತಿಗೆ ಅಳತೆಗಳನ್ನು ನೀಡುವಂತೆ ನಿರ್ದೇಶಿಸಲು ಮ್ಯಾಜಿಸ್ಟ್ರೇಟ್ಗೆ ಅಧಿಕಾರ ನೀಡುತ್ತದೆ ಮತ್ತು ಅಳತೆಗಳನ್ನು ನೀಡಲು ವಿರೋಧಿಸುವ ಅಥವಾ ನಿರಾಕರಿಸುವ ಯಾವುದೇ ವ್ಯಕ್ತಿಯ ಅಳತೆಗಳನ್ನು ತೆಗೆದುಕೊಳ್ಳಲು ಪೊಲೀಸ್ ಅಥವಾ ಜೈಲು ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ.