ಬೆಂಗಳೂರು ವಿಮಾನ ನಿಲ್ದಾಣದ ರಾಮೇಶ್ವರಂ ಕೆಫೆಯಲ್ಲಿ ಆಹಾರದಲ್ಲಿ ಕೀಟವಿದೆ ಎಂದು ಸುಳ್ಳು ಆರೋಪ ಮಾಡಿ ಹಣ ಸುಲಿಗೆ ಮಾಡಲು ಯತ್ನಿಸಿದ ಗುಂಪಿನ ವಿರುದ್ಧ ಪೊಲೀಸ್ ದೂರು ದಾಖಲು. ₹25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪ.

ಬೆಂಗಳೂರು (ಜು.24): ಭಾರತದ ಅತ್ಯಂತ ಜನಪ್ರಿಯ ದಕ್ಷಿಣ ಭಾರತದ ಕ್ವಿಕ್ ಸರ್ವಿಸ್ ರೆಸ್ಟೋರೆಂಟ್ ಬ್ರ್ಯಾಂಡ್‌ಗಳಲ್ಲಿ ಒಂದಾದ ರಾಮೇಶ್ವರಂ ಕೆಫೆಯ ಬೆಂಗಳೂರು ವಿಮಾನ ನಿಲ್ದಾಣದ ಔಟ್‌ಲೆಟ್‌ನಲ್ಲಿ (Bengaluru Airport Rameshwaram Cafe Outlet) ಆಹಾರದಲ್ಲಿ ಕೀಟವಿದೆ ಎಂದು ಸುಳ್ಳು ಆರೋಪ ಮಾಡಿ, ಹಣ ಸುಲಿಗೆ ಮಾಡಲು ಪ್ರಯತ್ನಿಸಿದ ವ್ಯಕ್ತಿಗಳ ಗುಂಪಿನ ವಿರುದ್ಧ ಅಧಿಕೃತ ಪೊಲೀಸ್ ದೂರು ದಾಖಲಿಸಲಾಗಿದೆ.

ರಾಮೇಶ್ವರಂ ಬ್ರಾಂಡ್‌ನ ಕಾರ್ಯಾಚರಣೆ ಮುಖ್ಯಸ್ಥರು ಸಲ್ಲಿಸಿದ ದೂರಿನ ಪ್ರಕಾರ, ಆಹಾರದಲ್ಲಿ ಜಿರಳೆ ಸಿಕ್ಕಿದೆ ಎಂಬ ವೈರಲ್ ವಿಡಿಯೋದ ಘಟನೆ ಜುಲೈ 24, 2025 ರಂದು ಬೆಳಿಗ್ಗೆ ಸಂಭವಿಸಿದೆ. ಸುಮಾರು 5-7 ವ್ಯಕ್ತಿಗಳ ಗುಂಪು ಸಾರ್ವಜನಿಕ ಗೊಂದಲವನ್ನು ಸೃಷ್ಟಿಸಿದ್ದರು. ನಾವು ಬಡಿಸಿದ ಆಹಾರದಲ್ಲಿ ಕೀಟವಿದೆ ಎಂದು ಸುಳ್ಳು ಆರೋಪ ಹೊರಿಸಿದ್ದಾರೆ. ನಂತರ ವ್ಯಕ್ತಿಗಳು ಪರಿಹಾರ ನೀಡದಿದ್ದರೆ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಸ್ವಲ್ಪ ಸಮಯದ ನಂತರ, ಅನಾಮಧೇಯ ನಂಬರ್‌ನಿಂದ ಫೋನ್ ಕರೆ ಬಂದಿದ್ದು, ₹25 ಲಕ್ಷ ನಗದು ನೀಡುವಂತೆ ಒತ್ತಡ ಹೇರಿದ್ದಾರೆ.

ಹಣಕ್ಕೆ ಬೇಡಿಕೆಯೊಡ್ಡಿ ಕರೆ ಮಾಡಿದ ವ್ಯಕ್ತಿಯ ಬಗ್ಗೆ ರಾಮೇಶ್ವರಂ ಕೆಫೆ ಬಳಿ ಫೋನ್ ಕರೆ ದಾಖಲೆಗಳು, ಸಂದೇಶ ಸ್ಕ್ರೀನ್‌ಶಾಟ್‌ಗಳು ಮತ್ತು ಇತರ ದಾಖಲೆಗಳನ್ನು ಪೊಲೀಸರಿಗೆ ಸಲ್ಲಿಕೆ ಮಾಡಲಾಗಿದೆ. ಇನ್ನು ಹಣಕ್ಕೆ ಬ್ಲ್ಯಾಕ್‌ಮೇಲ್ ಮಾಡಿದ ಪ್ರಯತ್ನದ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ದಿ ರಾಮೇಶ್ವರಂ ಕೆಫೆಯ ಸಂಸ್ಥಾಪಕಿ ದಿವ್ಯಾ ರಾಘವ್, 'ನಮ್ಮ ಆಹಾರದಲ್ಲಿ ಹುಳು ಅಥವಾ ಕೀಟ ಕಂಡುಬಂದಿದೆ ಎಂಬ ಆಧಾರ ರಹಿತ ಆರೋಪವನ್ನು ನಾವು ಸ್ಪಷ್ಟವಾಗಿ ನಿರಾಕರಿಸುತ್ತೇವೆ. ನಮ್ಮ ಆಹಾರ ತಯಾರಿಕೆಯ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ಹೆಚ್ಚು ಗಮನ ವಹಿಸುತ್ತೇವೆ. ನಾವು ಕಟ್ಟುನಿಟ್ಟಾದ ಗುಣಮಟ್ಟದ ಪ್ರೋಟೋಕಾಲ್‌ಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತೇವೆ. ವಿಶೇಷವಾಗಿ ವಿಮಾನ ನಿಲ್ದಾಣಗಳಂತಹ ಸೂಕ್ಷ್ಮ ಸ್ಥಳಗಳಲ್ಲಿ, ಅಲ್ಲಿ ನಿಯಮಿತ ಪರಿಶೋಧನೆ ಮತ್ತು ನೈರ್ಮಲ್ಯ ತಪಾಸಣೆಗಳು ಕಡ್ಡಾಯವಾಗಿರುತ್ತವೆ. ಇಲ್ಲಿ ಹಣವನ್ನು ಸುಲಿಗೆ ಮಾಡಲು ಮತ್ತು ನಮ್ಮ ಬ್ರ್ಯಾಂಡ್‌ಗೆ ಕಳಂಕ ತರುವ ದುರುದ್ದೇಶದಿಂದ ಕಿಡಿಗೇಡಿಗಳು ಈ ಪ್ರಯತ್ನ ನಡೆಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ರಾಮೇಶ್ವರಂ ಕೆಫೆ ಹೆಸರು ಕೆಡಿಸಲು ಹಿಂದೆಯೂ ವಿಫಲ ಯತ್ನ:

ಈ ಹಿಂದೆಯೂ ಇದೇ ರೀತಿಯ ಪ್ರಯತ್ನಗಳು ರಾಮೇಶ್ವರಂ ಕೆಫೆಯ ವಿರುದ್ಧ ನಡೆದಿವೆ. ಆಹಾರದಲ್ಲಿ ಕಲ್ಲು, ಕೀಟಗಳನ್ನು ಹಾಕಿ ಬಳಿಕ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ನಾವು ಬೆದರಿಕೆ ಅಥವಾ ಬ್ಲ್ಯಾಕ್‌ಮೇಲ್‌ಗೆ ಹೆದರುವುದಿಲ್ಲ. ಈ ಘಟನೆ ಸಂಬಂಧ ನಾವು ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ. ಇಂತಹ ಅನುಚಿತ ಕೃತ್ಯಗಳನ್ನು ಬಹಿರಂಗಪಡಿಸಿ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದರು.

ಇನ್ನು ರಾಮೇಶ್ವರಂ ಹೋಟೆಲ್‌ನ ಗ್ರಾಹಕರನ್ನು ದಾರಿ ತಪ್ಪಿಸುವ ಮತ್ತು ನಮ್ಮ ಒಗ್ಗಟ್ಟಿನ ಕೆಲಸ ಮಾಡುವ ವ್ಯವಹಾರಗಳ ಖ್ಯಾತಿಗೆ ಹಾನಿಯನ್ನು ಉಂಟುಮಾಡುವ ಇಂತಹ ಆಧಾರ ರಹಿತ ವಿಡಿಯೋಗಳನ್ನು ಹಂಚಿಕೊಳ್ಳದಂತೆ ರಾಮೇಶ್ವರಂ ಕೆಫೆಯು ಸಾರ್ವಜನಿಕರನ್ನು ಮತ್ತು ಮಾಧ್ಯಮಗಳನ್ನು ಮನವಿ ಮಾಡಿದೆ.

View post on Instagram