ಒಬ್ಬ ಉದ್ಯೋಗಿ ತನ್ನ ಆಫೀಸ್‌ನಲ್ಲಿ ಎಸಿ ಮತ್ತು ಕಿಟಕಿಗಳಿಲ್ಲದಿದ್ದರೂ ಕೆಲಸ ಮಾಡಲು ಒತ್ತಾಯಿಸುತ್ತಿರುವ ಬಗ್ಗೆ ರೆಡ್ಡಿಟ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಎರಡು ವಾರಗಳಿಂದ ಎಸಿ ಕೆಟ್ಟು ಹೋಗಿದ್ದರೂ, ಕಂಪನಿ ಅದನ್ನು ಸರಿಪಡಿಸುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಪೋಸ್ಟ್ ಈಗ ವೈರಲ್ ಆಗಿದೆ.

ಕಂಪನಿಗಳು ಯಾವಾಗಲೂ ಉದ್ಯೋಗಿಗಳ ಆರೋಗ್ಯ, ಸುರಕ್ಷತೆ ಮತ್ತು ಉತ್ಪಾದಕತೆ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುತ್ತವೆ. ಆದರೆ, ನಿಜಕ್ಕೂ ಪರಿಸ್ಥಿತಿ ಹೇಗಿರುತ್ತೆ ಅನ್ನೋದಕ್ಕೆ ಇತ್ತೀಚೆಗೆ ವೈರಲ್ ಆದ ರೆಡ್ಡಿಟ್ ಪೋಸ್ಟ್ ಒಂದು ಸಾಕ್ಷಿ. 'ನನ್ನ ಕಂಪನಿ ಬೆಂಕಿಗೆ ಆಹುತಿಯಾಗಲಿ' ಅನ್ನೋ ತಲೆಬರಹದಡಿ, ಒಬ್ಬ Reddit ಬಳಕೆದಾರರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ತಮ್ಮ ಕಂಪನಿಯು ಎಸಿ ಮತ್ತು ಕಿಟಕಿಗಳೇ ಇಲ್ಲದ ಆಫೀಸ್‌ನಲ್ಲಿ ಕೆಲಸ ಮಾಡಲು ಒತ್ತಾಯಿಸುತ್ತಿದೆ ಎಂದು ಅವರು ಬರೆದಿದ್ದಾರೆ. ಅಷ್ಟೇ ಅಲ್ಲ, ಆಫೀಸ್ ಇರೋದು ಬಿಲ್ಡಿಂಗ್‌ನ ಟಾಪ್ ಫ್ಲೋರ್‌ನಲ್ಲಿ. ಹಾಗಾಗಿ ಬೇಸಿಗೆಯಲ್ಲಿ ಪರಿಸ್ಥಿತಿ ಎಷ್ಟು ಘೋರವಾಗಿರಬಹುದು ಅಂತ ನೀವೇ ಊಹಿಸಿ.

Add Asianetnews Kannada as a Preferred SourcegooglePreferred

ಪೋಸ್ಟ್‌ನಲ್ಲಿ ಅವರು, 'ನಾನು ಕೆಲಸ ಮಾಡೋದು ಒಂದು ಲಾಲಾ ಕಂಪನಿಯಲ್ಲಿ. ಎರಡು ವಾರಗಳ ಹಿಂದೆ ಎಸಿ ಕೆಟ್ಟುಹೋಯ್ತು. ಆರಂಭದಲ್ಲಿ ಒಮ್ಮೆ 'ರಿಪೇರಿ' ಮಾಡಿಸಿದ್ರು, ಆದರೆ ಅದು ಕೇವಲ ಒಂದೂವರೆ ದಿನ ಕೆಲಸ ಮಾಡಿ ಮತ್ತೆ ಕೈಕೊಟ್ಟಿತು. ಅಂದಿನಿಂದ ಅದನ್ನು ಸರಿಪಡಿಸಲು ಮುಂದಾಗಿಲ್ಲ' ಎಂದು ಬರೆದುಕೊಂಡಿದ್ದಾರೆ.

ಕಂಪನಿಯ ಕಟ್ಟುನಿಟ್ಟಿನ ಹಾಜರಾತಿ ನಿಯಮಗಳಿಂದಾಗಿ ಸಮಸ್ಯೆ ಮತ್ತಷ್ಟು ಹದಗೆಟ್ಟಿದೆ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ, ವರ್ಕ್ ಫ್ರಂ ಹೋಮ್‌ಗೂ ಅವಕಾಶ ಕೊಡುತ್ತಿಲ್ಲ. 'ನಮ್ಮ ಟಾಪ್ ಫ್ಲೋರ್ ಆಫೀಸ್‌ನಲ್ಲಿ ಗಾಳಿಯಾಡಲು ಕಿಟಕಿಗಳೇ ಇಲ್ಲ. ಇದು ಅಸಹನೀಯವಾಗಿದೆ. ಉದ್ಯೋಗಿಗಳು ತುಂಬಾ ಒತ್ತಡ ಮತ್ತು ಅಸ್ವಸ್ಥತೆಯಿಂದ ಇರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ' ಎಂದು ಅವರು ಹೇಳಿದ್ದಾರೆ. ಇಷ್ಟು ಸುಲಭವಾಗಿ ಬಗೆಹರಿಸಬಹುದಾದ ಸಮಸ್ಯೆಯನ್ನು ಕಂಪನಿ ಯಾಕೆ ಸರಿಪಡಿಸುತ್ತಿಲ್ಲ ಎಂದು ಉದ್ಯೋಗಿ ಪ್ರಶ್ನಿಸಿದ್ದಾರೆ.

ವೈರಲ್ ರೆಡ್ಡಿಟ್ ಪೋಸ್ಟ್ ಇಲ್ಲಿದೆ

ಅವರ ಸಮಸ್ಯೆ ಏನು ಅಂತ ನನಗೆ ಅರ್ಥವಾಗುತ್ತಿಲ್ಲ. ಒಬ್ಬ ಟೆಕ್ನಿಷಿಯನ್‌ಗೆ ಕರೆ ಮಾಡಿ ಒಂದೇ ದಿನದಲ್ಲಿ ಈ ಕೆಲಸ ಮುಗಿಸಬಹುದು. ಈ ರೀತಿ ನಮಗೆ ಚಿತ್ರಹಿಂಸೆ ನೀಡಿ ಅವರಿಗೆ ಏನು ಸಿಗುತ್ತದೆ?' ಎಂದು ಪೋಸ್ಟ್‌ನ ಕೊನೆಯಲ್ಲಿ ಪ್ರಶ್ನಿಸಿದ್ದಾರೆ.

ಸೋಶಿಯಲ್ ಮೀಡಿಯಾ ಹೇಳಿದ್ದೇನು?

ಈ ಪೋಸ್ಟ್ ಆನ್‌ಲೈನ್‌ನಲ್ಲಿ ವೈರಲ್ ಆಗ್ತಿದ್ದಂತೆ, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ತಮಾಷೆಯಾಗಿ ಕಾಮೆಂಟ್ ಮಾಡಿದ್ರೆ, ಇನ್ನು ಕೆಲವರು ಗಂಭೀರ ಸಲಹೆಗಳನ್ನು ನೀಡಿದ್ದಾರೆ.

ಒಬ್ಬರು, 'ಚಡ್ಡಿ ಬನಿಯನ್ ಹಾಕೊಂಡು ಕೆಲಸ ಮಾಡಿ' ಅಂತ ತಮಾಷೆ ಮಾಡಿದ್ದಾರೆ. ಇನ್ನೊಬ್ಬರು, 'ಎಲ್ಲರೂ ಒಟ್ಟಾಗಿ ಒಬ್ಬೊಬ್ಬರಾಗಿ ಪ್ರಜ್ಞೆ ತಪ್ಪಿ ಬೀಳಲು ಶುರು ಮಾಡಿ' ಎಂದು ವ್ಯಂಗ್ಯವಾಡಿದ್ದಾರೆ.

ಮತ್ತೊಬ್ಬರು ಕಾನೂನು ಮಾರ್ಗವನ್ನು ಸೂಚಿಸಿದ್ದಾರೆ. 'ಅಸುರಕ್ಷಿತ ಕೆಲಸದ ವಾತಾವರಣದ ಬಗ್ಗೆ ಕಾರ್ಮಿಕ ಆಯುಕ್ತರಿಗೆ ಅನಾಮಧೇಯ ದೂರು ನೀಡಿ' ಎಂದು ಅವರು ಸಲಹೆ ನೀಡಿದ್ದಾರೆ.

ಎಲ್ಲರೂ ಸೇರಿ ಮಾಸ್ ಬಂಕ್ ಹಾಕಿ ಬ್ರೋ! ಎಂದು ಮತ್ತೊಬ್ಬರು ಗುಂಪು ಪ್ರತಿಭಟನೆಗೆ ಕರೆ ನೀಡಿದ್ದಾರೆ.