ಚಾರ್ಟರ್ಡ್ ಅಕೌಂಟೆಂಟ್ ಗುಂಜನ್ ರಾಥೋಡ್ ಅವರು ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಿ ವರದಕ್ಷಿಣೆ ಕಿರುಕುಳ, ಆರ್ಥಿಕ ವಂಚನೆ ಮತ್ತು ದೈಹಿಕ ಹಲ್ಲೆಗೊಳಗಾದರು. ಈ ಕುರಿತು ಕಂಪ್ಲೀಟ್ ಇನ್ಸೈಡ್ ಸ್ಟೋರಿ ಇಲ್ಲಿದೆ.
ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ಕನಸು. ಆದರೆ, ಅದೇ ಮದುವೆ ಕೆಲವರ ಜೀವನದಲ್ಲಿ ಹೇಗೆ ದುಃಸ್ವಪ್ನವಾಗಿ ಬದಲಾಗುತ್ತದೆ ಎಂಬುದಕ್ಕೆ ಚಾರ್ಟರ್ಡ್ ಅಕೌಂಟೆಂಟ್ ಗುಂಜನ್ ರಾಥೋಡ್ ಅವರ ಜೀವನವೇ ಒಂದು ಪ್ರತ್ಯಕ್ಷ ಉದಾಹರಣೆ. ಮ್ಯಾಟ್ರಿಮೋನಿಯಲ್ ವೆಬ್ಸೈಟ್ ಮೂಲಕ ಪರಿಚಯವಾಗಿ, ಇಬ್ಬರೂ ಸಿಎ ಗಳಾಗಿದ್ದರಿಂದ ಜೀವನ ಸುಂದರವಾಗಿರಲಿದೆ ಎಂದು ನಂಬಿದ್ದ ಗುಂಜನ್ ಅವರ ಬದುಕು, ಕೆಲವೇ ತಿಂಗಳುಗಳಲ್ಲಿ ಕರಾಳ ತಿರುವು ಪಡೆದುಕೊಂಡಿತು. ಹಾಗಾದರೆ ಆಗಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ!
ಮದುವೆಗೂ ಮುನ್ನವೇ ಶುರುವಾದ ವರದಕ್ಷಿಣೆ ಕಿರುಕುಳ!
26ನೇ ವಯಸ್ಸಿನಲ್ಲಿಯೇ CA ಆಗಿ ಎರಡು ಉದ್ಯಮಗಳನ್ನು ನಡೆಸುತ್ತಾ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದ ಗುಂಜನ್, ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಬಂದ ಮದುವೆ ಪ್ರಸ್ತಾಪವನ್ನು ಒಪ್ಪಿಕೊಂಡರು. ಆದರೆ, ಮದುವೆಗೆ ಕೇವಲ ಒಂದು ತಿಂಗಳು ಇರುವಾಗ ವರನ ಕುಟುಂಬದವರಿಂದ ವರದಕ್ಷಿಣೆ ಬೇಡಿಕೆಗಳು ಆರಂಭವಾದವು. ಸಂಬಂಧಿಕರಿಗೆ ಕಾರು, 5 ಲಕ್ಷ ರೂ. ನಗದು ನಾಣ್ಯ ನೀಡುವಂತೆ ಪೀಡಿಸಲಾಯಿತು. ಗುಂಜನ್ ಕಾರು ಮತ್ತು ನಗದು ನೀಡಲು ಸ್ಪಷ್ಟವಾಗಿ ನಿರಾಕರಿಸಿದರಾದರೂ, ಎಲ್ಲವೂ ಮುಂದೆ ಸರಿಹೋಗುತ್ತದೆ ಎಂಬ ಆಶಯದೊಂದಿಗೆ ನೀಡಲು ಒಪ್ಪಿಕೊಂಡು ಮದುವೆಯನ್ನು ಮುಂದುವರಿಸಿದರು. ಆದರೆ ಇದು ಕೇವಲ ದೊಡ್ಡ ವಂಚನೆಯೊಂದರ ಮುನ್ಸೂಚನೆ ಅಷ್ಟೇ ಆಗಿತ್ತು. ಮುಂದೆ ಆಗಿದ್ದು ಬೇರೆನೆ.
ಯುಕೆ ಸ್ಟಡಿ ವೀಸಾ ಹೆಸರಿನಲ್ಲಿ ಮಹಾಮೋಸ!
ಮದುವೆಯ ನಂತರ ದಂಪತಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ಯುಕೆಯ ಲಿವರ್ಪೂಲ್ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದರು. ಹೊಸ ಬದುಕು ಆರಂಭಿಸುವ ಉತ್ಸಾಹದಲ್ಲಿದ್ದ ಗುಂಜನ್ಗೆ ಪತಿ ದೊಡ್ಡ ಆಘಾತ ಕಾದಿದ್ದನು. ತನ್ನ ಕುಟುಂಬದವರೇ ತನ್ನೊಂದಿಗೆ ಸಂಬಂಧ ಕಡಿದುಕೊಂಡಿದ್ದಾರೆ ಎಂದು ನಟಿಸಿದ ಪತಿ, ಗುಂಜನ್ ಹೆಸರಿನಲ್ಲಿಯೇ ಬಲವಂತವಾಗಿ 50 ಲಕ್ಷ ರೂ. ಶಿಕ್ಷಣ ಸಾಲ ಮಾಡಿಸಿದನು. ಅಷ್ಟೇ ಅಲ್ಲದೆ, ವೀಸಾ ಖರ್ಚುಗಳ ನೆಪದಲ್ಲಿ ಗುಂಜನ್ ತಾಯಿಯಿಂದಲೂ 13 ಲಕ್ಷ ರೂ.ಗಳನ್ನು ಪಡೆದು ವಂಚಿಸಿದ್ದಾನೆ ಎನ್ನಲಾಗಿದೆ.
ರಾತೋರಾತ್ರಿ ನಾಪತ್ತೆಯಾದ ಪತಿ!
ಪ್ರಯಾಣಕ್ಕೆ ಕೇವಲ ಮೂರು ದಿನಗಳು ಬಾಕಿ ಇರುವಾಗ ಪತಿ ರಾತ್ರೋರಾತ್ರಿ ನಾಪತ್ತೆಯಾದನು. ಸ್ವಲ್ಪ ಸಮಯದ ಬಳಿಕ ವಾಪಸ್ ಬಂದ ಆತ, ತನ್ನ ಪಾಸ್ಪೋರ್ಟ್ನಿಂದ ವೀಸಾ ಪುಟವನ್ನೇ ಹರಿದು ಹಾಕಿದನು. ನಾನು ವಿದೇಶಕ್ಕೆ ಹೋಗುವುದಿಲ್ಲ, ನಿನ್ನ ಹಾಗೂ ನಿನ್ನ ಕುಟುಂಬದ ಹಣವನ್ನೆಲ್ಲಾ ನಾನೇ ಇಟ್ಟುಕೊಂಡಿದ್ದೇನೆ ಎಂದು ಹೀಯಾಳಿಸಿದನು. ಇದರಿಂದ ಗುಂಜನ್ ಅವರ 65 ವರ್ಷದ ನಿವೃತ್ತ ತಂದೆ ಸಾಲದ ಬಡ್ಡಿಯನ್ನು ತೀರಿಸಲು ತಮ್ಮ ಜೀವಮಾನದ ಫಿಕ್ಸೆಡ್ ಡಿಪಾಸಿಟ್ಗಳನ್ನು ಕಣ್ಣೀರಿನೊಂದಿಗೆ ಮುರಿಯಬೇಕಾಯಿತು.
ಆರ್ಥಿಕ ವಂಚನೆಯಿಂದ ದೈಹಿಕ ಹಿಂಸೆಯವರೆಗೆ!
ಹಣ ಕಳೆದುಕೊಂಡ ಗುಂಜನ್ಗೆ ದೈಹಿಕ ಮತ್ತು ಮಾನಸಿಕ ಹಿಂಸೆ ಕೂಡ ಆರಂಭವಾಯಿತು. "ನಿಮ್ಮಪ್ಪನ ದುಡ್ಡನ್ನೇ ತಿಂದುಬಿಟ್ಟೆ, ಸಾಧ್ಯವಾದರೆ ಅದನ್ನು ಮರಳಿ ಪಡೆಯಲು ಪ್ರಯತ್ನಿಸು ಎಂದು ಪತಿ ಗೇಲಿ ಮಾಡುತ್ತಿದ್ದನು. ಪತಿಯ ಕುಟುಂಬದವರೂ ಇದಕ್ಕೆ ಸಾಥ್ ನೀಡಿದರು. "ಮರ್ದ್ ಹೈ ತೋ ಪತ್ನಿ ಕೋ ಪಿತ್ನಾ ಭಿ ಚಾಹಿಯೇ ಎಂದು ಹೇಳುತ್ತಾ ಗುಂಜನ್ ಅವರ ಕೂದಲನ್ನುಳೆದು, ಮುಟ್ಟಿನ ಸಮಯದಲ್ಲೂ ಹೊಟ್ಟೆಗೆ ಹೊಡೆದು ಭೀಕರವಾಗಿ ಹಲ್ಲೆ ನಡೆಸುತ್ತಿದ್ದರು. ಯಾವುದೇ ಗುರುತುಗಳಾಗದಂತೆ ಎಚ್ಚರಿಕೆ ವಹಿಸಿ ಹಲ್ಲೆ ನಡೆಸಲಾಗುತ್ತಿತ್ತು.
ಹೋರಾಟ ಮತ್ತು ನ್ಯಾಯಕ್ಕಾಗಿ ಹೆಜ್ಜೆ!
ಕೊನೆಯಲ್ಲಿ, ತಾನು ಕೇವಲ ದೈಹಿಕ ಅಗತ್ಯಗಳಿಗಾಗಿ ಮಾತ್ರ ಬಳಸಿಕೊಳ್ಳಲು ಆತ ತನ್ನೊಂದಿಗೆ ಇರುವುದಾಗಿ ಪತಿ ಯಾವುದೇ ಮುಜುಗರವಿಲ್ಲದೆ ಒಪ್ಪಿಕೊಂಡಾಗ ಗುಂಜನ್ ಮನಸ್ಸು ನುಚ್ಚುನೂರಾಯಿತು. ಆ ಕ್ಷಣದಲ್ಲೇ ಒಳಗಿನ ಹೆಣ್ಣಿನ ದೌರ್ಬಲ್ಯ ಸತ್ತಿತು ಎಂದು ಅವರು ಹೇಳುತ್ತಾರೆ. ತಕ್ಷಣವೇ ಧೈರ್ಯ ಮಾಡಿ ಮನೆಯಿಂದ ಹೊರಬಂದ ಗುಂಜನ್, ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ಅವರನ್ನು ಬಂಧಿಸುವಂತೆ ಮಾಡಿದರು. ಸ್ವಲ್ಪ ದಿನಗಳ ಜೈಲುವಾಸದ ಬಳಿಕ ಪತಿಗೆ ಜಾಮೀನು ಸಿಕ್ಕಿತು. ಇಷ್ಟೆಲ್ಲಾ ಮೋಸ, ವಂಚನೆ ಎಸಗಿದರೂ ಆತನ ಕುಟುಂಬದವರು ಈಗ ಆತನಿಗೆ ಮತ್ತೊಂದು ಮದುವೆಗೆ ಹೆಣ್ಣು ಹುಡುಕುತ್ತಿದ್ದಾರೆ ಎಂದು ಗುಂಜನ್ ಅಳಲು ತೋಡಿಕೊಳ್ಳುತ್ತಾರೆ. ಎಚ್ಚರಿಕೆ ಸೂಚನೆಗಳನ್ನು ಆರಂಭದಲ್ಲೇ ಕಡೆಗಣಿಸದೆ, ತಪ್ಪುಗಳನ್ನು ಪ್ರಶ್ನಿಸುವ ಧೈರ್ಯ ಮಾಡಬೇಕು ಎಂಬುದಕ್ಕೆ ಗುಂಜನ್ ರಾಥೋಡ್ ಅವರ ಈ ಕಥೆ ಒಂದು ಎಚ್ಚರಿಕೆಯ ಪಾಠವಾಗಿದೆ.


