ಬೆಂಗಳೂರಿನ ಕಾಡುಗೋಡಿಯಲ್ಲಿ ಬೆಳಗ್ಗೆ ಜಾವ 3 ಗಂಟೆಗೆ ಒಬ್ಬಂಟಿಯಾಗಿ ಸಿಲುಕಿಕೊಂಡಿದ್ದ ಯುವತಿಗೆ ಇಬ್ಬರು ಅಪರಿಚಿತರು ಸಹಾಯ ಮಾಡಿದ್ದಾರೆ. ಐಶ್ವರ್ಯ ಕಲ್ಪಾರ್ಜುನ್ ಎಂಬ ಯುವತಿ ಈ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ.

ಬೆಂಗಳೂರು (ಏ.05): ಸಿಲಿಕಾನ್ ಸಿಟಿ ಬೆಂಗಳೂರು ಎಂದರೆ ಬರೀ ಟ್ರಾಫಿಕ್, ಯಾಂತ್ರಿಕ ಜೀವನ ಎಂಬ ದೂರುಗಳ ನಡುವೆ, ಇಲ್ಲಿನ ಜನರ ಮನುಷ್ಯತ್ವ ಎಂತಹದ್ದು ಎಂಬುದನ್ನು ಸಾರುವ ಒಂದು ಘಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ತಡರಾತ್ರಿ ಒಬ್ಬಂಟಿಯಾಗಿದ್ದ ಯುವತಿಯ ಸುರಕ್ಷತೆಗಾಗಿ ಇಬ್ಬರು ಅಪರಿಚಿತರು ತೋರಿದ ಕಾಳಜಿ ಈಗ ಲಕ್ಷಾಂತರ ಜನರ ಹೃದಯ ಗೆದ್ದಿದೆ.

ಏನಿದು ಘಟನೆ?

ಐಶ್ವರ್ಯ ಕಲ್ಪಾರ್ಜುನ್ ಎಂಬ ಯುವತಿ ಇತ್ತೀಚೆಗೆ ತಮಗಾದ ಒಂದು ಅದ್ಭುತ ಅನುಭವವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಐಶ್ವರ್ಯ ಅವರು ತಡರಾತ್ರಿ ಬೆಂಗಳೂರು ಏರ್‌ಪೋರ್ಟ್‌ನಿಂದ ಕಾಡುಗೋಡಿಗೆ ಬಂದಿಳಿದಿದ್ದರು. ಆಗ ಸಮಯ ಸರಿಯಾಗಿ ತಡರಾತ್ರಿ 3 ಗಂಟೆ. ಆ ಸಮಯದಲ್ಲಿ ಕಾಡುಗೋಡಿ ಬಸ್ ನಿಲ್ದಾಣದಿಂದ ಅವರ ಮನೆಗೆ ಇದ್ದ ದೂರ ಕೇವಲ 3 ಕಿಲೋಮೀಟರ್ ಮಾತ್ರ. ಆದರೆ, ಇಷ್ಟು ಕಡಿಮೆ ದೂರಕ್ಕೆ ಯಾವುದೇ ಟ್ಯಾಕ್ಸಿ ಅಥವಾ ಆಟೋಗಳು ಬರಲು ಸಿದ್ಧವಿರಲಿಲ್ಲ. ಆನ್‌ಲೈನ್ ಟ್ಯಾಕ್ಸಿ ಆ್ಯಪ್‌ಗಳಲ್ಲೂ ರೈಡ್ ಬುಕ್ ಆಗುತ್ತಿರಲಿಲ್ಲ. ಜನರಿಲ್ಲದ ರಸ್ತೆಯಲ್ಲಿ ಒಬ್ಬಂಟಿಯಾಗಿ ನಿಂತಿದ್ದ ಯುವತಿಗೆ ಆ ಸಮಯದಲ್ಲಿ ಭಯವಾಗುವುದು ಸಹಜ. ಆದರೆ, ಆ ಸಂಕಷ್ಟದ ಸಮಯದಲ್ಲಿ ಇಬ್ಬರು ಅಪರಿಚಿತರು ದೇವದೂತರಂತೆ ಬಂದು ನೆರವಾಗಿದ್ದಾರೆ.

ಬಸ್ ಕಂಡಕ್ಟರ್ ತೋರಿದ ಕಾಳಜಿ:

ಐಶ್ವರ್ಯ ಅವರು ಟ್ಯಾಕ್ಸಿಗಾಗಿ ಕಾಯುತ್ತಿದ್ದಾಗ ಅಲ್ಲಿದ್ದ ಒಬ್ಬ ಬಸ್ ಕಂಡಕ್ಟರ್ ಅವರ ನೆರವಿಗೆ ಬಂದಿದ್ದಾರೆ. ಯುವತಿ ಒಬ್ಬಂಟಿಯಾಗಿರುವುದನ್ನು ಗಮನಿಸಿದ ಆ ಕಂಡಕ್ಟರ್, 'ನಿಮಗೆ ಟ್ಯಾಕ್ಸಿ ಸಿಗುವವರೆಗೂ ನಾನು ನಿಮ್ಮ ಜೊತೆಯಲ್ಲೇ ಇರುತ್ತೇನೆ, ಭಯಪಡಬೇಡಿ' ಎಂದು ಧೈರ್ಯ ತುಂಬಿದ್ದಾರೆ. ಯುವತಿಗೆ ಯಾವುದಾದರೂ ವಾಹನ ಸಿಗುವವರೆಗೂ ಆ ಕಂಡಕ್ಟರ್ ಅವಳ ರಕ್ಷಣೆಗಾಗಿ ಅಲ್ಲಿಯೇ ನಿಂತು ಮನುಷ್ಯತ್ವ ಮೆರೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಅಷ್ಟೇ ಅಲ್ಲ, ಮಾನವೀಯತೆಗೂ ಅದ್ಭುತವೆಂದ ಹಿಂದಿ ಭಾಷಿಕ ಟೆಕ್ಕಿ; ರಾಪಿಡೋ ಚಾಲಕನ ಸಹಾಯಕ್ಕೆ ಫಿದಾ!

ಹಣಕ್ಕಿಂತ ಸುರಕ್ಷತೆಯೇ ಮುಖ್ಯ ಎಂದ ಡ್ರೈವರ್:

ಯಾವುದೇ ಕ್ಯಾಬ್ ಮತ್ತು ಆಟೋಗಳು ಬುಕಿಂಗ್ ಆಗದಿದ್ದಾಗ ಅದೇ ಸಮಯಕ್ಕೆ ಒಬ್ಬ ರಾಪಿಡೋ ಡ್ರೈವರ್ ಅಲ್ಲಿಗೆ ಬಂದಿದ್ದಾರೆ. ಐಶ್ವರ್ಯ ಅವರು ಆ ಡ್ರೈವರ್ ಬಳಿ ಮನೆಗೆ ಬಿಡುವಂತೆ ಕೇಳಿದ್ದಾರೆ. ಇದಕ್ಕೆ ರಾಪಿಡೋ ಚಾಲಕ ಒಪ್ಪಿಕೊಂಡಾಗ, 'ಎಷ್ಟು ಹಣವಾಗುತ್ತದೆ?' ಎಂದು ಯುವತಿ ವಿಚಾರಿಸಿದ್ದಾರೆ. ಅದಕ್ಕೆ ಆ ಚಾಲಕ ನೀಡಿದ ಉತ್ತರ ನಿಜಕ್ಕೂ ಶ್ಲಾಘನೀಯ. 'ಅದೆಲ್ಲಾ ಪರವಾಗಿಲ್ಲ ಮೇಡಂ, ಮೊದಲು ನೀವು ಮ್ಯಾಪ್‌ನಲ್ಲಿ ಲೊಕೇಶನ್ ತೋರಿಸಿ, ಲೇಟ್ ಆಗಿದೆ' ಎಂದು ಹೇಳಿ ಅವರನ್ನು ಮನೆಗೆ ಕರೆದೊಯ್ದಿದ್ದಾರೆ. ಮನೆ ತಲುಪಿದ ನಂತರ ಐಶ್ವರ್ಯ ಅವರು ಮತ್ತೆ ಹಣದ ಬಗ್ಗೆ ಕೇಳಿದಾಗ, 'ಸಮಯ ತುಂಬಾ ಲೇಟ್ ಆಗಿದೆ, ಒಬ್ಬ ಮಹಿಳೆಯಾಗಿ ನಿಮ್ಮನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವುದು ನನ್ನ ಜವಾಬ್ದಾರಿಯಾಗಿತ್ತು. ಇಷ್ಟೇ ಹಣ ಬೇಕು ಎಂದು ನಾನು ಕೇಳುವುದಿಲ್ಲ, ನಿಮಗೆ ಎಷ್ಟು ಅನಿಸುತ್ತದೋ ಅಷ್ಟನ್ನು ಕೊಡಿ' ಎಂದು ಹೇಳಿದ್ದಾರೆ.

View post on Instagram

ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಹಾಪೂರ:

ಐಶ್ವರ್ಯ ಅವರು ಈ ಸಂಪೂರ್ಣ ಘಟನೆಯನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದು, 'ಬೆಳಗ್ಗೆ 3 ಗಂಟೆಗೆ, ಒಂದು ಹೊಸ ನಗರದಲ್ಲಿ, ಇಬ್ಬರು ಅಪರಿಚಿತರು ನಾನು ಸೇಫ್ ಆಗಿರೋದನ್ನು ಖಚಿತಪಡಿಸಿಕೊಂಡರು. ಒಬ್ಬ ಮಹಿಳೆಯಾಗಿ ಆ ಕ್ಷಣ ನನಗೆ ಎಷ್ಟು ದೊಡ್ಡದು ಎನ್ನುವುದು ಅರ್ಥವಾಗುತ್ತದೆ' ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋ ಈಗ ಲಕ್ಷಾಂತರ ವೀಕ್ಷಣೆಗಳನ್ನು ಕಂಡಿದ್ದು, ನೆಟ್ಟಿಗರು ಆ ಬಸ್ ಕಂಡಕ್ಟರ್ ಮತ್ತು ರಾಪಿಡೋ ಡ್ರೈವರ್ ಅವರ ಪ್ರಾಮಾಣಿಕತೆ ಹಾಗೂ ಮಾನವೀಯತೆಯನ್ನು ಹಾಡಿ ಹೊಗಳುತ್ತಿದ್ದಾರೆ. 'ಬೆಂಗಳೂರು ಸುರಕ್ಷಿತ ನಗರ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ' ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಇಂತಹ ಸಣ್ಣ ಸಣ್ಣ ಘಟನೆಗಳೇ ಸಮಾಜದಲ್ಲಿ ಇನ್ನೂ ಮನುಷ್ಯತ್ವ ಬದುಕಿದೆ ಎನ್ನುವುದನ್ನು ಸಾಬೀತುಪಡಿಸುತ್ತವೆ.