ಬೆಂಗಳೂರಿನಲ್ಲಿ ಫುಟ್ಪಾತ್ ಮೇಲೆ ಸ್ಕೂಟರ್ ಓಡಿಸಿ ಕಾರಿಗೆ ಡಿಕ್ಕಿ ಹೊಡೆದ ಯುವಕನಿಗೆ, ಕಾರ್ ಮಾಲೀಕರು ಕೋಪಗೊಳ್ಳದೆ ಮೊದಲು ಸಹಾಯ ಮಾಡಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಚಾಲಕನ ಅಸಾಮಾನ್ಯ ತಾಳ್ಮೆ ಮತ್ತು ಪ್ರಬುದ್ಧ ನಡವಳಿಕೆಗೆ ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಬೆಂಗಳೂರು: ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರಿನ ರಸ್ತೆ ಅಪಘಾತವೊಂದರ ವಿಡಿಯೋ ಸಖತ್ ವೈರಲ್ ಆಗ್ತಿದೆ. ಆದರೆ ಈ ವಿಡಿಯೋ ಸದ್ದು ಮಾಡ್ತಿರೋದು ಅಪಘಾತದ ತೀವ್ರತೆಯಿಂದಲ್ಲ, ಬದಲಿಗೆ ಅಪಘಾತದ ನಂತರ ಕಾರ್ ಮಾಲೀಕರು ತೋರಿಸಿದ ಅಸಾಮಾನ್ಯ ತಾಳ್ಮೆಯಿಂದ. ಫುಟ್ಪಾತ್ ಮೇಲೆ ಅಡ್ಡಾದಿಡ್ಡಿ ಸ್ಕೂಟರ್ ಓಡಿಸಿ ಬಂದ ಯುವಕನೊಬ್ಬ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಕಾರ್ ಮಾಲೀಕರು ತೋರಿಸಿದ ಸಂಯಮ ಎಲ್ಲರ ಗಮನ ಸೆಳೆದಿದೆ.
ಅಸಾಮಾನ್ಯ ತಾಳ್ಮೆ ತೋರಿದ ಕಾರ್ ಮಾಲೀಕ
ಕರ್ನಾಟಕ ಪೋರ್ಟ್ಫೋಲಿಯೋ (Karnataka Portfolio) ಎಂಬ ಎಕ್ಸ್ (X) ಖಾತೆಯು 38 ಸೆಕೆಂಡುಗಳ ಈ ವಿಡಿಯೋವನ್ನು ಹಂಚಿಕೊಂಡಿದೆ. ಟ್ರಾಫಿಕ್ ಜಾಮ್ನಿಂದ ತಪ್ಪಿಸಿಕೊಳ್ಳಲು ಫುಟ್ಪಾತ್ ಮೇಲೆ ವೇಗವಾಗಿ ಸ್ಕೂಟರ್ ಓಡಿಸಿಕೊಂಡು ಬಂದ ಯುವಕ, ನಿಯಂತ್ರಣ ತಪ್ಪಿ ಕಾರಿಗೆ ಗುದ್ದಿ ಕೆಳಗೆ ಬಿದ್ದಿದ್ದಾನೆ. ತಪ್ಪು ಸಂಪೂರ್ಣವಾಗಿ ಸ್ಕೂಟರ್ ಸವಾರನದ್ದೇ ಆಗಿದ್ದರೂ, ಕಾರ್ ಮಾಲೀಕರು ಸ್ವಲ್ಪವೂ ಕೋಪ ಮಾಡಿಕೊಳ್ಳಲಿಲ್ಲ. ಬದಲಿಗೆ, ತಮ್ಮ ಕಾರಿಗೆ ಆಗಿರುವ ಹಾನಿ ನೋಡುವ ಮೊದಲೇ, ಕೆಳಗೆ ಬಿದ್ದಿದ್ದ ಸ್ಕೂಟರ್ ಸವಾರನಿಗೆ ಎದ್ದು ನಿಲ್ಲಲು ಸಹಾಯ ಮಾಡಿದ್ದಾರೆ.
ಈ ವಿಡಿಯೋ ಎರಡು ಮುಖ್ಯ ವಿಚಾರಗಳತ್ತ ನಮ್ಮ ಗಮನ ಸೆಳೆಯುತ್ತದೆ. ಮೊದಲನೆಯದಾಗಿ, ಫುಟ್ಪಾತ್ಗಳು ಪಾದಚಾರಿಗಳಿಗೆ ಮಾತ್ರವೇ ಹೊರತು ವಾಹನ ಚಲಾಯಿಸಲು ಅಲ್ಲ ಎಂಬ ಸಾಮಾನ್ಯ ನಿಯಮ ಉಲ್ಲಂಘಿಸುವುದು ಎಷ್ಟು ಅಪಾಯಕಾರಿ ಎಂಬುದನ್ನು ಇದು ತೋರಿಸುತ್ತದೆ. ಎರಡನೆಯದಾಗಿ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಬುದ್ಧತೆ ತೋರಿಸುವುದೇ ಒಬ್ಬ ಜವಾಬ್ದಾರಿಯುತ ನಾಗರಿಕನ ಲಕ್ಷಣ ಎಂದು ಕಾರ್ ಮಾಲೀಕರ ನಡವಳಿಕೆಯನ್ನು ಹೊಗಳಿ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಇದು ತಾಳ್ಮೆಯ ಪಾಠ ಎಂದ ನೆಟ್ಟಿಗರು
ಲಕ್ಷಾಂತರ ಜನರು ಈ ವಿಡಿಯೋವನ್ನು ನೋಡಿದ್ದು, ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ‘ರಸ್ತೆಯಲ್ಲಿ ಎರಡು ವಿಭಿನ್ನ ಮನಸ್ಥಿತಿಗಳು ಹೇಗೆ ಬೇರೆ ಬೇರೆ ಫಲಿತಾಂಶ ಕೊಡುತ್ತವೆ ಅನ್ನೋದಕ್ಕೆ ಇದು ಅತ್ಯುತ್ತಮ ಉದಾಹರಣೆ,’ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. 'ಇವತ್ತಿನ ದಿನಗಳಲ್ಲಿ ನಮ್ಮ ರಸ್ತೆಗಳಿಗೆ ಇಂಥಾ ವಿವೇಚನೆಯುಳ್ಳ ನಡವಳಿಕೆಯೇ ಹೆಚ್ಚು ಬೇಕಾಗಿರುವುದು' ಎಂದು ಮತ್ತೊಬ್ಬರು ಹೇಳಿದ್ದಾರೆ. ಒಟ್ಟಿನಲ್ಲಿ, ಕೋಪ ಮತ್ತು ಆಕ್ರಮಣಶೀಲತೆಯಿಂದ ಸಮಸ್ಯೆ ದೊಡ್ಡದು ಮಾಡುವ ಬದಲು, ಶಾಂತವಾಗಿ ವರ್ತಿಸಿ ದೊಡ್ಡ ಜಗಳವನ್ನೇ ತಪ್ಪಿಸಬಹುದು ಅಂತ ಈ ಬೆಂಗಳೂರಿನ ವ್ಯಕ್ತಿ ತೋರಿಸಿಕೊಟ್ಟಿದ್ದಾರೆ. ಇಂತಹ ತಾಳ್ಮೆಯ ಪಾಠಗಳು ನಗರದ ಜನನಿಬಿಡ ರಸ್ತೆಗಳಲ್ಲಿ ದೊಡ್ಡ ಬದಲಾವಣೆ ತರಬಲ್ಲವು ಎಂದು ಸೋಷಿಯಲ್ ಮೀಡಿಯಾ ಒಕ್ಕೊರಲಿನಿಂದ ಹೇಳುತ್ತಿದೆ.


