ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಸಸ್ಯಗಳು ಮನೆಯ ಸುತ್ತಮುತ್ತ ಇದ್ದರೆ ವಾಸ್ತುದೋಷ ನಿವಾರಣೆಯಾಗುತ್ತದೆ. ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಅಂತಹ ಸಸ್ಯಗಳಲ್ಲಿ ಒಂದಾದ ಶಮಿ ವೃಕ್ಷ. ಅತ್ಯಂತ ಉತ್ತಮವಾದ ಸಸ್ಯವೆಂದು ಹೇಳಲಾಗುತ್ತದೆ. ಈ ಸಸ್ಯದಿಂದ ಧನಸಂಪತ್ತು ಹೆಚ್ಚುವುದಲ್ಲದೆ ವಾಸ್ತುದೋಷ ನಿವಾರಣೆಯಾಗುತ್ತದೆ. ಶಮೀ ವೃಕ್ಷದ ಬಗ್ಗೆ ಮತ್ತಷ್ಟು ತಿಳಿಯೋಣ.

ಮನೆಯಲ್ಲಿ ಸುಖ ಸಮೃದ್ಧಿ ನೆಲೆಸಿರಬೇಕೆಂದರೆ ಮನೆಯ ವಾಸ್ತು ಸರಿಯಾಗಿರಬೇಕು. ವಾಸ್ತು ಪ್ರಕಾರ ಮನೆಯ ನಿರ್ಮಾಣ ಆಗಿದ್ದರೆ ನೆಮ್ಮದಿ ಸುಖ ಸಂತೋಷ ನೆಲೆಸಿರುತ್ತದೆ. ಮನೆಯ ಒಳಗಷ್ಟೇ ಅಲ್ಲದೆ ಮನೆಯ ಸುತ್ತಮುತ್ತಲಿನ ಸಸ್ಯಗಳನ್ನು ವಾಸ್ತು ನಿಯಮದ ಪ್ರಕಾರ ನಿರ್ಮಿಸಿದಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗಿರುತ್ತದೆ. ಹಾಗೆ ಕೆಲವು ವಸ್ತುಗಳಿಂದ ಸುತ್ತಮುತ್ತಲಿನ ವಾತಾವರಣ ನಕಾರಾತ್ಮಕತೆಯಿಂದ ಆವರಿಸಿಕೊಳ್ಳುತ್ತದೆ. ಇದರಿಂದ ವಾಸ್ತು ದೋಷ ಉಂಟಾಗುತ್ತದೆ.

Add Asianetnews Kannada as a Preferred SourcegooglePreferred

ಯಾವುದೇ ಮನೆ ಅಥವಾ ಕಚೇರಿಯಲ್ಲಿ ವಾಸ್ತು ದೋಷವಿದ್ದರೆ ಅಲ್ಲಿ ಯಶಸ್ಸನ್ನು ಕಾಣುವುದು ಅಸಾಧ್ಯವಾಗಿರುತ್ತದೆ. ಹಾಗಾಗಿ ಅಂಥ ಕಡೆಗಳಲ್ಲಿ ವಾಸ್ತು ದೋಷವಿದ್ದರೆ ಅದನ್ನು ಪರಿಹರಿಸಿಕೊಳ್ಳುವುದು ಅವಶ್ಯಕವಾಗಿರುತ್ತದೆ. ವಾಸ್ತು ಶಾಸ್ತ್ರದ ಅನುಸಾರ ಶಮಿ ವೃಕ್ಷವನ್ನು ಮನೆಯಲ್ಲಿದ್ದರೆ ವಾಸ್ತುದೋಷ ನಿವಾರಣೆಯಾಗುವುದಲ್ಲದೆ ಹಣ ಸಂಪಾದನೆಯ ಮಾರ್ಗ ತೆರೆದುಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.

ವಾಸ್ತು ಶಾಸ್ತ್ರ ಹೇಳುವ ಪ್ರಕಾರ ಶಮಿ ವೃಕ್ಷ ಮನೆಯಲ್ಲಿದ್ದರೆ ಲಕ್ಷ್ಮೀ ಕೃಪೆ ಪಡೆಯಲು ಸಾಧ್ಯವಿದೆ. ಶಮಿವೃಕ್ಷದ ಬಗ್ಗೆ ಇನ್ನಷ್ಟು ತಿಳಿಯೋಣ..

ಇದನ್ನು ಓದಿ: ಸ್ಪಟಿಕ ಧರಿಸುವುದರಿಂದ ಏನೆಲ್ಲ ಲಾಭಗಳಿವೆ ಗೊತ್ತಾ?

ಶಮಿ ವೃಕ್ಷದ ಲಾಭಗಳು:

ಗಳಿಕೆ ಹೆಚ್ಚು ಇದ್ದರೂ ಹಣ ಕೈಯಲ್ಲಿ ನಿಲ್ಲುತ್ತಿಲ್ಲ ಎಂದಾದರೆ ಅದಕ್ಕೆ ಪರಿಹಾರವಾಗಿ, ಶಮಿ ಸಸ್ಯವನ್ನು ಮನೆಯಲ್ಲಿ ನೆಡುವುದರಿಂದ ಧನಾಗಮನವಾಗುತ್ತದೆ ಎಂದು ಹೇಳಲಾಗುತ್ತದೆ. ಈ ಸಸ್ಯವು ಹಣವನ್ನು ಆಕರ್ಷಿಸುತ್ತದೆ ಎಂಬ ನಂಬಿಕೆ ಇದೆ. ಇದರಿಂದ ಮನೆಯ ಸದಸ್ಯರ ಆರೋಗ್ಯವೂ ಸಹ ಉತ್ತಮವಾಗಿರುತ್ತದೆ.

ಶಮಿ ವೃಕ್ಷವನ್ನು ಪೂಜಿಸುವುದರಿಂದ ವಿವಾಹಕ್ಕೆ ಎದುರಾಗುವ ಅಡೆತಡೆಗಳು ನಿವಾರಣೆ ಆಗುತ್ತವೆ. ಶನಿ ಸಾಡೇಸಾತಿ ಅಥವಾ ಅರ್ಧಾಷ್ಟಮ ಶನಿ ಪ್ರಭಾವದಿಂದ ತೊಂದರೆಗೊಳಗಾದವರು ಶಮಿ ವೃಕ್ಷವನ್ನು ಪೂಜಿಸಿದರೆ ದೋಷದ ಪ್ರಮಾಣ ತಗ್ಗುವುದಲ್ಲದೆ, ಜೀವನದಲ್ಲಿ ಒಳ್ಳೆಯದಾಗುತ್ತದೆ. ಶಮಿ ವೃಕ್ಷವು ಶನಿ ದೋಷವನ್ನು ನಿವಾರಿಸುವುದಲ್ಲದೆ, ವಾಸ್ತು ದೋಷದಿಂದ ಮುಕ್ತಿ ನೀಡುತ್ತದೆ.

ಇದನ್ನು ಓದಿ: ಕಾಲಿಗೆ ಕಪ್ಪುದಾರ ಕಟ್ಟಿಕೊಳ್ಳುವುದರ ಹಿಂದಿದೆ ರಹಸ್ಯ..!

ಶಮಿ ಸಸ್ಯವನ್ನು ನೆಡುವ ಬಗೆ:

ಶಮಿ ಸಸ್ಯವನ್ನು ಶನಿವಾರದಂದು ನೆಡುವುದು ಉತ್ತಮ. ಶಮಿ ಸಸ್ಯವನ್ನು ಪಾಟ್‌ನಲ್ಲಿ ಅಥವಾ ಮನೆಯ ಮುಖ್ಯದ್ವಾರದ ಆಸುಪಾಸಿನಲ್ಲಿ ನೆಡಬಹುದು. ಶಮಿ ಸಸ್ಯವನ್ನು ಮನೆಯ ಒಳಗಡೆ ಪಾಟ್‌ನಲ್ಲಿ ಇಟ್ಟುಕೊಳ್ಳಬಾರದು. ಶಮಿ ಸಸ್ಯವನ್ನು ಮನೆಯ ಮುಖ್ಯದ್ವಾರದ ಎಡಬದಿಗೆ ನೆಡಬೇಕು ಅಥವಾ ಪಾಟ್‌ನಲ್ಲಿ ಇಟ್ಟುಕೊಳ್ಳಬೇಕು.

ಸ್ವಚ್ಛವಾದ ಪ್ರದೇಶದಲ್ಲಿ ಈ ಸಸ್ಯವನ್ನು ನೆಡಬೇಕು. ಈ ಸಸ್ಯದ ಸುತ್ತಮುತ್ತ ಯಾವುದೇ ಕಳೆ ಗಿಡಗಳು ಬೆಳೆಯದಂತೆ ನೋಡಿಕೊಳ್ಳಬೇಕು. ಶಮಿ ಸಸ್ಯಕ್ಕೆ ಸರಿಯಾಗಿ ಸೂರ್ಯನ ಬೆಳಕು ಬೀಳುವಂತ ಜಾಗದಲ್ಲಿ ನೆಡಬೇಕು. ಈ ಸಸ್ಯಕ್ಕೆ ಸೂರ್ಯನ ಬೆಳಕು ಹೆಚ್ಚು ಅವಶ್ಯಕವಿರುತ್ತದೆ. ಅಷ್ಟೇ ಅಲ್ಲದೆ ಹೆಚ್ಚು ನೀರಿನ ಅವಶ್ಯಕತೆ ಈ ಸಸ್ಯಕ್ಕೆ ಇರುವುದಿಲ್ಲ.

ಶಮಿವೃಕ್ಷದ ಪ್ರಯೋಜನಗಳು:

ಹಣದ ಸಮಸ್ಯೆ ಉಂಟಾದರೆ, ಆರ್ಥಿಕ ಸ್ಥಿತಿ ಅಷ್ಟು ಚೆನ್ನಾಗಿಲ್ಲವೆಂದಾದರೆ ಶನಿವಾರದಂದು ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಬೇಕು. ಸಂಜೆ ಹೊತ್ತು ಶಮಿವೃಕ್ಷದ ಎದುರು ದೀಪ ಹಚ್ಚಿಡಬೇಕು. ಇದರಿಂದ ಮನೆಯಲ್ಲಿ ಧನ ಧಾನ್ಯ ವೃದ್ಧಿಸುತ್ತದೆ.

ಗಂಭೀರ ರೋಗದಿಂದ ಬಳಲುತ್ತಿದ್ದವರು ಶನಿವಾರದಂದು ಶಮೀ ವೃಕ್ಷದ ಕೆಳಗೆ ಹಚ್ಚಿ ಕಲ್ಲಿನ ಅಥವಾ ಲೋಹದ ಶಿವಲಿಂಗವನ್ನು ಸ್ಥಾಪನೆ ಮಾಡಬೇಕು. ನಂತರ ಪ್ರತಿದಿನ ಆ ಶಿವಲಿಂಗಕ್ಕೆ ಹಾಲಿನ ಅಭಿಷೇಕವನ್ನು ಮಾಡಬೇಕು. ಬಳಿಕ ಶಿವಲಿಂಗಕ್ಕೆ ಸರಿಯಾದ ವಿಧಾನಗಳಿಂದ ಪೂಜೆ ಸಲ್ಲಿಸಿದ ಸಲ್ಲಿಸಬೇಕು. ಶಮಿವೃಕ್ಷದ ಎದುರು ಮಹಾ ಮೃತ್ಯುಂಜಯ ಜಪವನ್ನು ಮಾಡಬೇಕು.

ವಿವಾಹಕ್ಕೆ ಅಡೆತಡೆಗಳು ಉಂಟಾದಲ್ಲಿ ಯಾವುದಾದರೂ ಒಂದು ಶನಿವಾರ ಪ್ರಾರಂಭಿಸಿ ನಲವತ್ತೈದು ಶನಿವಾರಗಳ ಕಾಲ ಶಮಿವೃಕ್ಷದ ಎದುರು ತುಪ್ಪದ ದೀಪವನ್ನು ಹಚ್ಚಿಡಬೇಕು. ಅಷ್ಟೇ ಅಲ್ಲದೆ ಕುಂಕುಮದಿಂದ ಪೂಜೆ ಸಲ್ಲಿಸಬೇಕು. ಇದರಿಂದ ವಿವಾಹ ಯೋಗ ಬೇಗ ಕೂಡಿ ಬರುತ್ತದೆ. 

ಇದನ್ನು ಓದಿ: ಜಾತಕದಲ್ಲಿ ಹೀಗಿದ್ದರೆ ಧನಯೋಗ, ನಿಮಗೂ ಇರಬಹುದು ಈ ಲಕ್ಷ್ಮಿಯನ್ನು ಒಲಿಸಿಕೊಳ್ಳುವ ಭಾಗ್ಯ!

ಶನಿ ಸಾಡೇಸಾತಿ ಅಥವಾ ಅರ್ಧಾಷ್ಟಮ ಶನಿ ನಡೆಯುತ್ತಿದೆ ಎಂದಾದರೆ ಶಮಿ ಸಸ್ಯವನ್ನು ನೆಟ್ಟು ಅದರ ಪೋಷಣೆ ಮಾಡಬೇಕು. ಅಷ್ಟೇ ಅಲ್ಲದೆ ಅದರ ಮುಂದೆ ದಿನವೂ ದೀಪ ಹಚ್ಚಿಡಬೇಕು. ಶನಿವಾರದಂದು ಉದ್ದಿನ ಬೇಳೆ ಮತ್ತು ಕಪ್ಪು ಎಳ್ಳನ್ನು ಶಮಿ ವೃಕ್ಷಕ್ಕೆ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ಶನಿಯ ಕೆಟ್ಟ ಪ್ರಭಾವದಿಂದ ರಕ್ಷಣೆ ಸಿಗುತ್ತದೆ.