ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಅಲಿಯಾಸ್ ಬುಜ್ಜಿ, ಪೆಟ್ರೋಲ್ ಬಾಂಬ್ ಮಾದರಿಯ ಸ್ಫೋಟಕ ಬಳಸಿ ರೀಲ್ಸ್ ಮಾಡಿ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಈ ಅಪಾಯಕಾರಿ ಕೃತ್ಯ ಎಸಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆಯೂ ಅವರು ಬೆದರಿಕೆ ಮತ್ತು ಮಚ್ಚು ಹಿಡಿದು ರೀಲ್ಸ್ ಮಾಡಿದಂತಹ ಹಲವು ವಿವಾದಗಳಲ್ಲಿ ಭಾಗಿಯಾಗಿದ್ದರು.
ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಅಲಿಯಾಸ್ ಬುಜ್ಜಿ ಮತ್ತೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವೀಡಿಯೊದಲ್ಲಿ ಅವರು ಪೆಟ್ರೋಲ್ ಬಾಂಬ್ ಮಾದರಿಯ ಸ್ಫೋಟಕವನ್ನು ಬಳಸಿಕೊಂಡು ರೀಲ್ಸ್ ಶೂಟ್ ಮಾಡಿರುವುದು ಕಂಡುಬಂದಿದೆ. ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ನಿರ್ಲಕ್ಷ್ಯ ಮತ್ತು ಅಜಾಗರೂಕತೆಯ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗಿದೆ.
ವೈರಲ್ ವಿಡಿಯೋದಲ್ಲಿ ಕಂಡುಬಂದಂತೆ ಪ್ರಕಾರ ರಜತ್ ಅವರು ಒಂದು ಕವರ್ ಒಳಗೆ ಪೆಟ್ರೋಲ್ ಹಾಕಿ, ಅದರ ಮೇಲೆ ಕಲ್ಲಿಟ್ಟು ಅದನ್ನು ಸ್ಫೋಟಗೊಳಿಸುವ ರೀತಿಯಲ್ಲಿ ವೀಡಿಯೊ ಚಿತ್ರೀಕರಣ ನಡೆಸಿದ್ದಾರೆ. ಈ ಶೂಟಿಂಗ್ ನೇರವಾಗಿ ರಸ್ತೆಯ ಮೇಲೆಯೇ ನಡೆದಿರುವುದು ಇನ್ನಷ್ಟು ಆತಂಕಕಾರಿ ಸಂಗತಿಯಾಗಿದೆ. ಸಾಮಾನ್ಯವಾಗಿ ಜನ ಸಂಚಾರ ಇರುವ ಪ್ರದೇಶದಲ್ಲಿ ಇಂತಹ ಅಪಾಯಕಾರಿ ಕೃತ್ಯಗಳನ್ನು ಮಾಡಿರುವುದು ಸಾರ್ವಜನಿಕ ಸುರಕ್ಷತೆಯನ್ನು ಗಂಭೀರವಾಗಿ ಪ್ರಶ್ನಿಸುವಂತಾಗಿದೆ.
ತೀವ್ರ ಖಂಡನೆ
ಆದರೆ, ಈ ಘಟನೆ ಯಾವ ಸ್ಥಳದಲ್ಲಿ ನಡೆದಿದೆ ಮತ್ತು ಯಾವಾಗ ಚಿತ್ರೀಕರಣ ಮಾಡಲಾಗಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈ ಅಸ್ಪಷ್ಟತೆಯ ನಡುವೆಯೇ, ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿದ್ದು, ಹಲವರು ಈ ಕೃತ್ಯವನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣ ಬಳಕೆದಾರರು ರಜತ್ ಅವರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಅಪಾಯಕಾರಿ ಸ್ಟಂಟ್ಗಳನ್ನು ಮಾಡುವುದು ಕೇವಲ ಗಮನ ಸೆಳೆಯಲು ಅಥವಾ ಫಾಲೋವರ್ಸ್ ಹೆಚ್ಚಿಸಲು ಆಗುವುದಿಲ್ಲ ಎಂಬ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ, ಸಾರ್ವಜನಿಕ ಸ್ಥಳದಲ್ಲಿ ಸ್ಫೋಟಕದಂತೆ ಕಾಣುವ ವಸ್ತುವನ್ನು ಬಳಸಿರುವುದು ಕಾನೂನುಬಾಹಿರವಾಗಿದ್ದು, ಇದು ಇತರರಿಗೆ ಕೆಟ್ಟ ಮಾದರಿಯನ್ನೂ ನೀಡುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಈ ಘಟನೆ ಮತ್ತೊಂದು ಪ್ರಮುಖ ಪ್ರಶ್ನೆಯನ್ನು ಎತ್ತಿಹಿಡಿದಿದೆ. ಇಂತಹ ಘಟನೆ ವೇಳೆ ಏನಾದರೂ ಅನಾಹುತ ಸಂಭವಿಸಿದ್ದರೆ, ಅದರ ಹೊಣೆ ಯಾರು ಹೊರುತ್ತಿದ್ದರು? ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವ ಇಂತಹ ಕೃತ್ಯಗಳಿಗೆ ಕಟ್ಟುನಿಟ್ಟಿನ ಕ್ರಮ ಅಗತ್ಯ ಎಂಬ ಮಾತುಗಳು ಕೇಳಿಬರುತ್ತಿವೆ.
ಒಟ್ಟಿನಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಪಡೆಯಲು ಕೆಲವರು ಅಪಾಯಕಾರಿ ಮಾರ್ಗಗಳನ್ನು ಆರಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಇಂತಹ ಕೃತ್ಯಗಳನ್ನು ತಡೆಯಲು ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಹೆಚ್ಚುತ್ತಿದೆ.
ಈ ಹಿಂದೆಯೂ ರಜತ್ ಹಲವು ವಿವಾದ
ಬಿಗ್ಬಾಸ್ 'ಡಾಗ್' ಸತೀಶ್ ಸ್ನೇಹಿತನಿಗೆ ಫೋನ್ ಮೂಲಕ ಬೆದರಿಕೆ ಹಾಕಿದ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಬೆಂಗಳೂರಿನ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ರಜತ್ ವಿರುದ್ಧ ಎಫ್ಐಆರ್ (FIR) ದಾಖಲಾಗಿತ್ತು. ಬೆದರಿಕೆ ಆಡಿಯೋ ಮತ್ತು ಮೆಸೇಜ್ಗಳಿಗೆ ಸಂಬಂಧಿಸಿದಂತೆ ತನಿಖೆಗೆ ಹಾಜರಾಗಲು ಪೊಲೀಸರು ರಜತ್ಗೆ ನೋಟಿಸ್ ನೀಡಿದ್ದರು.
ಇನ್ನು ಈ ಹಿಂದೆ ಬಿಗ್ಬಾಸ್ ವಿನಯ್ ಗೌಡ ಜೊತೆ ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲೂ ಅವರು ಸುದ್ದಿಯಲ್ಲಿದ್ದರು. ಇದರ ಜತೆಗೆ ಮೈಸೂರಿನ ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಬಳಿ ಫೋಟೋಶೂಟ್ ಮಾಡಿಸಿಕೊಂಡು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಹೀಗೆ ಸಾಲು ಸಾಲು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿರುವ ಅವರು ಈಗ ಹೊಸ ರೀಲ್ಸ್ ಮೂಲಕ ಸುದ್ದಿಯಲ್ಲಿದ್ದಾರೆ.


