ಅಗ್ನಿಸಾಕ್ಷಿ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ಸುಮಾರು ಒಂದು ದಶಕದ ನಂತರ ಉದಯ ವಾಹಿನಿಗೆ ಮರಳುತ್ತಿದ್ದಾರೆ. ಈ ಹೊಸ ಧಾರಾವಾಹಿಯಲ್ಲಿ ಅವರು 'ರಾಧಾ ಕಲ್ಯಾಣ' ಖ್ಯಾತಿಯ ಕೃತಿಕಾ ರವೀಂದ್ರ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದು, ಇಬ್ಬರು ಪ್ರಬಲ ನಾಯಕಿಯರ ಈ ಕಥೆಯು ಕಿರುತೆರೆಯಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಬೆಂಗಳೂರು (ಮಾ.9): ಕನ್ನಡ ಕಿರುತೆರೆಯ ಟಾಪ್ ನಟಿಯರ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಹೆಸರು ವೈಷ್ಣವಿ ಗೌಡ. 'ಅಗ್ನಿಸಾಕ್ಷಿ' ಧಾರಾವಾಹಿಯ ಸನ್ನಿಧಿ ಪಾತ್ರದ ಮೂಲಕ ಇಡೀ ಕರ್ನಾಟಕದ ಮನೆಮಾತಾಗಿದ್ದ ಈ ನಟಿ, ಮದುವೆಯ ನಂತರ ಬಣ್ಣದ ಲೋಕದಿಂದ ದೂರ ಉಳಿಯಲಿದ್ದಾರೆ ಎಂಬ ಚರ್ಚೆಗಳಿಗೆ ಈಗ ತೆರೆ ಬಿದ್ದಿದೆ. ಮದುವೆಯ ಬಳಿಕವೂ ನಟನೆ ಮುಂದುವರಿಸುವುದಾಗಿ ಅಭಿಮಾನಿಗಳಿಗೆ ನೀಡಿದ್ದ ಮಾತನ್ನು ವೈಷ್ಣವಿ ಈಗ ಉಳಿಸಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ದಶಕದ ಬಳಿಕ 'ಉದಯ'ಕ್ಕೆ ಮರಳಿದ ನಟಿ

ವಿಶೇಷವೆಂದರೆ, ವೈಷ್ಣವಿ ಗೌಡ ಸುಮಾರು ಒಂದು ದಶಕದ ನಂತರ ಮತ್ತೆ ಉದಯ ವಾಹಿನಿಗೆ ಮರಳುತ್ತಿದ್ದಾರೆ. ಈ ಹಿಂದೆ ಇದೇ ವಾಹಿನಿಯ 'ಮನೆದೇವ್ರು' ಸೀರಿಯಲ್‌ನಲ್ಲಿ ಅವರು ಮಿಂಚಿದ್ದರು. ಅಲ್ಲಿಂದ 'ಅಗ್ನಿಸಾಕ್ಷಿ', 'ಸೀತಾರಾಮ' ಹಾಗೂ 'ಬಿಗ್‌ಬಾಸ್' ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ವೈಷ್ಣವಿ, ಈಗ ಮತ್ತೆ ತನ್ನ ಹಳೆಯ ಮನೆಗೆ ಮರಳುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಒಂದೇ ಪರದೆಯಲ್ಲಿ ಇಬ್ಬರು ಸ್ಟಾರ್ ನಾಯಕಿಯರು!

ಈ ಹೊಸ ಪ್ರಾಜೆಕ್ಟ್‌ನ ಮತ್ತೊಂದು ಹೈಲೈಟ್ ಎಂದರೆ ಇಲ್ಲಿ ಇಬ್ಬರು ಪ್ರಬಲ ನಾಯಕಿಯರು ಇರಲಿದ್ದಾರೆ. ವೈಷ್ಣವಿ ಗೌಡ ಅವರಿಗೆ ಸಾಥ್ ನೀಡಲು ಕೃತಿಕಾ ರವೀಂದ್ರ ಸಜ್ಜಾಗಿದ್ದಾರೆ. 'ರಾಧಾ ಕಲ್ಯಾಣ' ಮತ್ತು 'ಭೂಮಿಗೆ ಬಂದ ಭಗವಂತ' ಖ್ಯಾತಿಯ ಕೃತಿಕಾ ಹಾಗೂ ವೈಷ್ಣವಿ ಜೋಡಿ ಒಂದೇ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಣ್ಣ ಪರದೆಯ ಇತಿಹಾಸದಲ್ಲಿ ದೊಡ್ಡ ಸಂಚಲನ ಮೂಡಿಸುವ ನಿರೀಕ್ಷೆಯಿದೆ. ಸದ್ಯ ಜೀ ಕನ್ನಡದ 'ಕರ್ಣ' ಧಾರಾವಾಹಿಯ ಮಾದರಿಯಲ್ಲೇ ಈ ಸೀರಿಯಲ್ ಕೂಡ ಇಬ್ಬರು ನಾಯಕಿಯರ ಕಥಾಹಂದರ ಹೊಂದಿರಲಿದೆ ಎನ್ನಲಾಗಿದೆ.

ಶೀಘ್ರದಲ್ಲೇ ಈ ಹೊಸ ಧಾರಾವಾಹಿಯ ಅಧಿಕೃತ ಪ್ರೋಮೋ ಬಿಡುಗಡೆಯಾಗಲಿದ್ದು, ವೈಷ್ಣವಿ ಗೌಡ ಅವರನ್ನು ಮತ್ತೆ ಸ್ಕ್ರೀನ್ ಮೇಲೆ ನೋಡಲು ಕಿರುತೆರೆ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.