ಹೊಸ ಧಾರಾವಾಹಿ 'ಯಾರಿವಳು'; ಕಿರುತೆರೆಗೆ ಬಂದ ವೆನಿಲ್ಲಾ ಚಿತ್ರದ ನಾಯಕಿ ಸ್ವಾತಿ!
ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ಮತ್ತೊಂದು ಹೊಸ ಧಾರಾವಾಹಿಯನ್ನು ಹೊತ್ತು ತರುತ್ತಿದೆ ಉದಯ ವಾಹಿನಿ. ‘ಯಾರಿವಳು’ ಎಂಬುದು ಧಾರಾವಾಹಿಯ ಹೆಸರು.
ಆಗಸ್ಟ್ 31ರಿಂದ ಪ್ರತಿ ಸೊಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 8 ಗಂಟೆಗೆ ಈ ಧಾರಾವಾಹಿ ಪ್ರಸಾರ ಆಗಲಿದೆ. ಶ್ರೀಮಂತ ಮನೆತನಕ್ಕೆ ಸೇರಿದ ಮಗು, ಹೆತ್ತವರ ಪ್ರೀತಿಯಿಂದ ವಂಚಿತರಾಗಿರುತ್ತಾರೆ. ಇದರ ಜತೆಗೆ ಆಸ್ತಿ ಗಲಾಟೆ, ಈ ಮಗುವಿಗೆ ಬೆನ್ನೆಲುಬಾಗಿ ನಿಲ್ಲುವ ಮಂಗಳಮುಖಿ ಇವರ ಸುತ್ತ ಕತೆ ಸಾಗುತ್ತದೆ.
ಹೊಸ ರೀತಿಯ ತಿರುವುಗಳಿಂದ ಕೂಡಿದ ಈ ಧಾವಾರಾಹಿ ನಾಯಕಿ ಮಾಯಾ, ಅಂಜನೇಯನ ಪರಮ ಭಕ್ತೆ ಎಂಬುದು ಮತ್ತೊಂದು ಹೈಲೈಟ್. ಆರ್ಕಾ ಮಿಡಿಯಾ ಈ ಧಾವಾಹಿಯನ್ನು ನಿರ್ಮಿಸುತ್ತಿದ್ದು, ದರ್ಶಿತ್ ಭಟ್ ನಿರ್ದೇಶನ ಮಾಡುತ್ತಿದ್ದಾರೆ. ಮಂಡ್ಯ ಮಂಜು ಕ್ಯಾಮೆರಾ ಇದೆ.
‘ಬ್ಯೂಟಿಫುಲ್ ಮನಸುಗಳು’, ‘ಕಮರೊಟ್ಟು ಚೆಕ್ಪೋಸ್ಟ್’, ‘ವೆನಿಲ್ಲಾ’, ‘ಕಟ್ಟುಕಥೆ’ ಮುಂತಾದ ಚಿತ್ರದಲ್ಲಿ ನಟಿಸಿದ್ದ ಸ್ವಾತಿ ಕೊಂಡೆ ಈ ಧಾರಾವಾಹಿಯಲ್ಲಿ ನಾಯಕಿ ಪಾತ್ರ ಮಾಡುತ್ತಿದ್ದಾರೆ. ಉಳಿದಂತೆ ಆರವ್ ಸೂರ್ಯ, ಅಂಬರೀಶ್ ಸಾರಂಗಿ, ಅಶೋಕ ಹೆಗಡೆ, ಬಾಲರಾಜ್, ವಾಣಿಶ್ರೀ, ದೀಪಾ ಪಾರ್ವತಿ, ನಾಗರಾಜ್ ಭಟ್, ಮಂಗಳಮುಖಿ ಪಾತ್ರಧಾರಿಗಳಾಗಿ ಸನಾ ಸುಮನ್ ಹಾಗೂ ಲೋಹಿತ್ ಪಟೇಲ್ ಮುಂತಾದವರು ನಟಿಸುತ್ತಿದ್ದಾರೆ.