ಆಕೃತಿ ಧಾರಾವಾಹಿಗೆ ಪ್ರೇಕ್ಷಕರ ಮೆಚ್ಚುಗೆ!
ಸದ್ದಿಲ್ಲದೆ ನಿರ್ದೇಶಕ ಕೆ ಎಂ ಚೈತನ್ಯ ನಿರ್ಮಾಪಕರಾಗಿದ್ದು, ಅವರ ನಿರ್ಮಾಣದ ಧಾರಾವಾಹಿಗೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಧಾರಾವಾಹಿಗಳ ಪೈಕಿ ಇದೊಂದು ವಿಭಿನ್ನ ರೀತಿಯ ಕತೆಯನ್ನು ಹೇಳುತ್ತಿರುವ ಧಾರಾವಾಹಿ ಎಂಬುದು ನೋಡುಗರ ಪ್ರತಿಕ್ರೆಯೆ.
ಧಾರಾವಾಹಿ ಹೆಸರು ‘ಆಕೃತಿ’. ಇದೇ ತಿಂಗಳು ಆ.24ರಿಂದ ಉದಯವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 9.30ಕ್ಕೆ ಈ ಧಾರಾವಾಹಿ ಪ್ರಸಾರ ಆಗುತ್ತಿದೆ.
ಕೌಟಂಬಿಕದ ಜತೆಗೆ ಹಾರಾರ್ ನೆರಳು ಇರುವ ಈ ಧಾರಾವಾಹಿಯಲ್ಲಿ ತನ್ವಿರಾವ್, ನೇತ್ರಾವತಿ ಜಾದವ್, ಬಾಬಿ, ಪವನ್, ಪ್ರಖ್ಯಾತ್, ತನುಜ, ಶ್ರೀಧರ್, ಉಷಾ ಭಂಡಾರಿ ಮುಂತಾದವರು ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಕೆ ಎಂ ಚೈತನ್ಯ ಅವರು ಈ ಧಾರಾವಾಹಿ ಮೂಲಕ ನಿರ್ಮಾಪಕರಾಗಿದ್ದು, ಇವರಿಗೆ ಹರಿದಾಸ್ ಪಿ ಕೆಜಿಎಫ್ ಅವರು ನಿರ್ಮಾಣದಲ್ಲಿ ಸಾಥ್ ನೀಡುತ್ತಿದ್ದಾರೆ.
'ಆಕೃತಿ' ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಚೈತನ್ಯ!
ಛಾಯಾಗ್ರಹಣ ಹಾಗೂ ನಿರ್ದೇಶನ ಎಂ ಕುಮಾರ್ ಅವರು. ಕತೆ ಹಾಗೂ ಚಿತ್ರಕತೆ ಸಿದ್ದಾರ್ಥ ಅವರದ್ದು. ಮೃಗಶಿರ ಶ್ರೀಕಾಂತ್ ಸಂಭಾಷಣೆ ಬರೆದಿದ್ದು, ಶೀರ್ಷಿಕೆ ಗೀತೆಗೆ ಗುರುಕಿರಣ್ ಸಂಗೀತ, ಕವಿರಾಜ್ ಸಾಹಿತ್ಯ ನೀಡಿದ್ದಾರೆ.
ಮಹಾತ್ವಾಕಾಂಕ್ಷಿ ಹೆಣ್ಣು ಮಗಳು ದಿವ್ಯಾ. ಅವಳ ತಂದೆ ಪ್ರಜ್ವಲ್, ತಾಯಿ ಚೈತ್ರ ಮತ್ತು ತಮ್ಮ ಸುಜಯ್. ಇವರ ಕುಟುಂಬ ಚಿಕ್ಕದಾಗಿದ್ದು, ಇವರ ಮನೆಯಲ್ಲಿ ಸಂತೋಷ ಮನೆಮಾಡಿದೆ. ದಿವ್ಯಾಳ ಕುಟುಂಬ ಸಕಲೇಶಪುರದಲ್ಲಿ ಒಂದು ಹಳೆ ಫಾಮ್ರ್ ಹೌಸ್ ಕೊಂಡುಕೊಳ್ಳುತ್ತದೆ. ಆ ಮನೆಯ ಅಂಗಳದಲ್ಲಿ ಒಂದು ಮರ, ಆ ಮರದಲ್ಲಿ ಒಂದು ಆಕೃತಿ, ಅದಕ್ಕೆ ಒಂದು ಹಿನ್ನಲೆ ಇದೆ. ಆ ಆಕೃತಿಯಿಂದ ಮುಂದೆ ಇವರ ಕುಟುಂಬದಲ್ಲಿ ಹತ್ತಾರು ಸಮಸ್ಯೆಗಳು ಎದುರಾಗುತ್ತವೆ. ಅದು ಹೇಗೆ ಎಂಬುದು ಧಾರಾವಾಹಿಯ ಕತೆ. ಸಕಲೇಶಪುರ ಸುತ್ತಮುತ್ತ ಪ್ರದೇಶಗಳಲ್ಲಿ ಅದ್ಭುತವಾಗಿ ಚಿತ್ರೀಕರಿಸಲಾಗಿದೆ.