1995ರ ತೆರೆ ಕಂಡ ಉಪೇಂದ್ರ ನಿರ್ದೇಶನದ, ಶಿವರಾಜ್ ಕುಮಾರ್ ಮತ್ತು ಪ್ರೇಮಾ ಅಭಿನಯದ 'ಓಂ' ಚಿತ್ರದ ದೃಶ್ಯವೊಂದನ್ನು ಮರುಸೃಷ್ಟಿ ಮಾಡಿದೆ ಇದೇ ಜೋಡಿ. ವಿಡಿಯೋ ನೋಡಿ...  

1995ರ ಮೇ 19ರಂದು ಬಿಡುಡೆಯಾದ ಉಪೇಂದ್ರ ನಿರ್ದೇಶನದ, ಶಿವರಾಜ್ ಕುಮಾರ್ ಮತ್ತು ಪ್ರೇಮಾ ಅಭಿನಯದ 'ಓಂ' ಚಿತ್ರ ಹಲವು ದಾಖಲೆಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ಈ ಚಿತ್ರದ ಅಭಿನಯಕ್ಕೆ 'ಸತ್ಯ' ಪಾತ್ರದ ಶಿವರಾಜ್ ಕುಮಾರ್ ಮತ್ತು 'ಮಧು' ಪಾತ್ರದ ಪ್ರೇಮಾ ಇಬ್ಬರೂ ಅತ್ಯುತ್ತಮ ನಟ, ನಟಿ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ, ಒಂದೇ ಚಿತ್ರದ ಅಭಿನಯಕ್ಕೆ ಹೀರೋ ಮತ್ತು ಹೀರೋಯಿನ್​ ಪ್ರಶಸ್ತಿ ಪಡೆದುಕೊಂಡ ಅಪರೂಪದ ಚಿತ್ರ ಎನಿಸಿತು. ರೌಡಿಸಂ ಮತ್ತು ಪ್ರೇಮ ಕಥೆಯ ಸಂಘರ್ಷವನ್ನು ಹೀಗೂ ಹೇಳಬಹುದು ಎಂದು ಭಾರತೀಯ ಚಿತ್ರರಂಗಕ್ಕೆ ತೋರಿಸಿದ ಚಿತ್ರವಿದು. ಇದೇ ಚಿತ್ರಕ್ಕೆ ಉಪೇಂದ್ರ ಅವರು ಅತ್ಯುತ್ತಮ ಚಿತ್ರಕಥೆಗೆ ಪ್ರಶಸ್ತಿ ಪಡೆದುಕೊಂಡರೆ, ಬಿ.ಸಿ. ಗೌರಿಶಂಕರ್ ಅವರು ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಗೆ ಭಾಜನರಾದರು. ಈ ಚಿತ್ರ ಸುಮಾರು 632 ಕ್ಕೂ ಹೆಚ್ಚು ಬಾರಿ ಮರು ಬಿಡುಗಡೆಯಾಗಿ ಭಾರತದ ಚಿತ್ರರಂಗದಲ್ಲಿಯೇ ಅದ್ಭುತ ದಾಖಲೆ ಮಾಡಿದೆ.2015 ರಲ್ಲಿ ಡಿಟಿಎಸ್ ನೊಂದಿಗೆ 400 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

ಈ ಚಿತ್ರದ ದೃಶ್ಯವೊಂದನ್ನು ಚಿತ್ರದ ನಾಯಕ-ನಾಯಕಿಯರಾಗಿದ್ದ ಶಿವರಾಜ್​ ಕುಮಾರ್​ ಮತ್ತು ಪ್ರೇಮಾ ಅವರು 30 ವರ್ಷಗಳ ಬಳಿಕ ಮರುಸೃಷ್ಟಿ ಮಾಡಿದ್ದಾರೆ. ಜೀ ಕನ್ನಡದ ಡಾನ್ಸ್​ ಕರ್ನಾಟಕ ಡಾನ್ಸ್​ ಮತ್ತು ಮಹಾನಟಿ ರಿಯಾಲಿಟಿ ಷೋಗಳ ಮಹಾಸಂಗಮದಲ್ಲಿ ಈ ಜೋಡಿ ಬ್ಲಾಕ್​ಬಸ್ಟರ್​ ಪರ್ಫಾಮೆನ್ಸ್​ ನೀಡಿದೆ. ಇಂದಿಗೂ ಇಬ್ಬರೂ 30 ವರ್ಷಗಳ ಹಿಂದಿನ ಉತ್ಸಾಹ, ತೇಜಸ್ಸು ಉಳಿಸಿಕೊಂಡಿರುವುದಕ್ಕೆ ಅಭಿಮಾನಿಗಳು ಮನಸೋತು ಹೋಗಿದ್ದಾರೆ. ಚಪ್ಪಾಳೆಗಳ ಸುರಿಮಳೆಯಾದರೆ, ಇದರ ಪ್ರೊಮೋಗೆ ಸಹಸ್ರಾರು ಮಂದಿ ಕಮೆಂಟ್​ ಮಾಡುವ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಈ ಇಬ್ಬರು ನಟರ ನಟನೆಗೆ ಹ್ಯಾಟ್ಸ್​ ಆಫ್​ ಹೇಳುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಪೂರ್ಣ ಬೆತ್ತಲಾಗೋಕೆ ರೆಡಿನಾ ಕೇಳಿದ... ಶಾಕಿಂಗ್​ ವಿಷ್ಯ ತಿಳಿಸಿದ ಬಿಗ್​ಬಾಸ್​ ತನಿಷಾ ಕುಪ್ಪಂಡ

ಇನ್ನು ಓಂ ಚಿತ್ರದ ಕುರಿತು ಕೆಲವೊಂದು ಇಂಟರೆಸ್ಟಿಂಗ್​ ವಿಷಯಗಳನ್ನು ಹೇಳುವುದಾದರೆ, ಚಿತ್ರಕ್ಕೆ ಮೊದಲು ಸತ್ಯ ಎಂದು ಹೆಸರಿಡಲು ನಿರ್ಧರಿಸಿಲಾಗಿತ್ತು. ಮುಹೂರ್ತದ ದಿನ ಕ್ಲ್ಯಾಪ್ ಬಾಕ್ಸ್ ಮೇಲೆ ಡಾ. ರಾಜಕುಮಾರ್ ಓಂ ಬರೆದು ಚಿತ್ರಕ್ಕೆ ಚಾಲನೆ ನೀಡಿದರು. ನಂತರ ಉಪ್ಪಿ ಚಿತ್ರಕ್ಕೆ ಓಂ ಎಂದೇ ಹೆಸರಿಟ್ಟಿದ್ದು ವಿಶೇಷ. ಚಿತ್ರರಂಗಕ್ಕೆ ಬರುವ ಮುನ್ನವೇ ಉಪೇಂದ್ರ ಅವರು ಹತ್ತು ಚಿತ್ರಕಥೆಗಳನ್ನು ಬರೆದಿದ್ದರು. ಅದರಲ್ಲಿ ಇದು ಕೂಡ ಒಂದು ಎನ್ನಲಾಗಿದೆ. ತಮ್ಮ ಗೆಳೆಯ ಪುರಷೋತ್ತಮ್ ಎಂಬುವವರ ಲೆಟರ್ ಒಂದನ್ನು ಇಟ್ಟುಕೊಂಡು ಚಿತ್ರಕಥೆಯನ್ನು ಬರೆದಿದ್ದರು. ಕಾಲೇಜು ದಿನಗಳಲ್ಲಿಯೇ ಈ ಕಥೆ ಬರೆದಿದ್ದು, ನಂತರ ಸಿನಿಮಾಗೆ ಇಳಿಸಿದರು ಎಂದು ನಟ ಹಿಂದೊಮ್ಮೆ ಹೇಳಿದ್ದರು. ಈ ಚಿತ್ರ ಹಿಂದಿ ಮತ್ತು ತೆಲಗುವಿನಲ್ಲಿಯೂ ರೀಮೇಕ್​ ಆಯಿತು. ಉಪೇಂದ್ರ ಅವರೇ ತೆಲುಗಿನಲ್ಲಿ ನಿರ್ದೇಶಿಸಿದ್ದರು. ತೆಲುಗಿನಲ್ಲಿ ಪ್ರೇಮಾ ಅವರೇ ನಾಯಕಿಯಾಗಿ ನಟಿಸಿದರು.

 ಚಿತ್ರದ ಹೈಲೈಟ್​ ಎಂದರೆ, ಬೆಂಗಳೂರಿನ ಭೂಗತ ಲೋಕದ ರೌಡಿಗಳಾದ ಬೆಕ್ಕಿನ ಕಣ್ಣು ರಾಜೇಂದ್ರ, ಕೊರಂಗು ಕೃಷ್ಣ. ತನ್ವೀರ್ ಅಹ್ಮದ್. ಜೇಡರಹಳ್ಳಿ ಕೃಷ್ಣ, ಕೋಳಿ ಫಯಾಜ್ ಮುಂತಾದವರು ತಮ್ಮ ನಿಜವಾದ ಹೆಸರಿನಿಂದಲೇ ಈ ಚಿತ್ರದಲ್ಲಿ ನಟಿಸಿರುವುದು! ಮೊದಲಿಗೆ ಈ ಚಿತ್ರಕ್ಕೆ ಕುಮಾರ್​ ಗೋವಿಂದ್ ಅವರನ್ನು ಉಪೇಂದ್ರ ಆಯ್ಕೆ ಮಾಡಿದ್ದರು ಎನ್ನಲಾಗಿದೆ. ಕೊನೆಗೆ ಶಿವರಾಜ್​ಕುಮಾರ್​ ಅವರೇ ಸೂಕ್ತ ಎನಿಸಿ ಅವರನ್ನು ಆಯ್ಕೆ ಮಾಡಿದ್ದರು. 

ತೆಲಗು ಫ್ಯಾನ್ಸ್​ನಿಂದ ಸೀತಾರಾಮ ನಟಿಗೆ ಸಕತ್​ ಡಿಮಾಂಡ್​! ರೀಲ್ಸ್​ ನೋಡಿ ಸಿನಿಮಾಗೆ ಆಫರ್​..