ಸೀರಿಯಲ್ನಿಂದ ಮನೆಹಾಳು ಬುದ್ಧಿನೂ ಬರುತ್ತಲ್ಲಾ ಅತ್ತೆ... ಭೂಮಿ ಬೀಸಿದ ಚಾಟಿಗೆ ಶಕುಂತಲಾ ತತ್ತರ...
ಸೀರಿಯಲ್ನಿಂದ ಮನೆಹಾಳು ಬುದ್ಧಿನೂ ಬರುತ್ತೆ ಎಂದು ಇದೀಗ ಖುದ್ದು ಸೀರಿಯಲ್ನಲ್ಲಿಯೇ ಭೂಮಿಕಾ ಹೇಳಿದ್ದು, ನೆಟ್ಟಿಗರು ಇದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.
![Shakuntala shocked to see Bhoomika preparing non veg for husband in Amrutadhare suc Shakuntala shocked to see Bhoomika preparing non veg for husband in Amrutadhare suc](https://static-ai.asianetnews.com/images/01j0drwvgrbmfymnc1ytbavg6r/amrutadhare-bhoomi-shakuntala_363x203xt.jpg)
ಸೀರಿಯಲ್ ನೋಡಿದ್ರೆ ಮನೆಹಾಳು ಬುದ್ಧಿ ಬರುತ್ತೆ ಎನ್ನೋದು ಮಾಮೂಲಾಗಿ ಹೇಳುವುದು ಉಂಟು. ಅದರಲ್ಲಿಯೂ ಹೆಂಗಸರು ಇದಕ್ಕೆ ಅಡಿಕ್ಟ್ ಆಗಿರೋದು ಜಾಸ್ತಿ. ಯಾವುದೇ ವಿಷಯದಲ್ಲಿ ಒಳ್ಳೆಯದ್ದಕ್ಕಿಂತಲೂ ಕೆಟ್ಟದ್ದೇ ಜನರಿಗೆ ಅಟ್ರಾಕ್ಷನ್ ಆಗುವುದು ಪ್ರಕೃತಿ ಸಹಜ ಗುಣವೂ ಹೌದು. ಹಲವು ಸೀರಿಯಲ್ಗಳಲ್ಲಿ ಅತ್ತೆ-ಸೊಸೆ ಜಗಳ ಇಲ್ಲವೇ ಮನೆಹಾಳು ದೃಶ್ಯಗಳು ಹೇರಳವಾಗಿ ಕಾಣಸಿಗುತ್ತದೆ. ವಿವಿಧ ರೀತಿಯ ಕಂತ್ರಿ ಬುದ್ಧಿಗಳು, ಯಾರಿಗೆ ಹೇಗೆ ಮೋಸ ಮಾಡಬಹುದು ಎನ್ನುವ ಪ್ಲ್ಯಾನ್ ಎಲ್ಲವೂ ಸೀರಿಯಲ್ಗಳಲ್ಲಿ ಧಾರಾಳವಾಗಿ ಕಾಣಬಹುದು. ಯಾವುದೇ ವಿಷಯವನ್ನು ಪದೇ ಪದೇ ನೋಡಿದಾಗ ಅದು ನಮ್ಮ ಅರಿವಿಲ್ಲದೇ ನಮ್ಮೊಳಗೆ ಆಹ್ವಾನವಾಗಿ ಬಿಡುತ್ತದೆ ಎನ್ನುತ್ತದೆ ಸಂಶೋಧನೆಗಳು. ಇದೇ ರೀತಿ ಸೀರಿಯಲ್ಗಳು ಕೂಡ ಹೆಚ್ಚಿನವರನ್ನು ಅವರಿಗೆ ಅರಿವಿಗೆ ಬಾರದಂತೆ ಆವರಿಸಿಕೊಂಡು ಬಿಡುತ್ತವೆ. ಇದೀಗ ಕುತೂಹಲದ ವಿಷಯವೆಂದರೆ ಖುದ್ದು ಸೀರಿಯಲ್ನಲ್ಲಿಯೇ ಈ ವಿಷಯವನ್ನು ಹೇಳಿರುವುದು!
ಹೌದು. ಎಲ್ಲಾ ಸೀರಿಯಲ್ಗಳಿಗಿಂತಲೂ ಸ್ವಲ್ಪ ಭಿನ್ನ ಎನಿಸಿರುವ ಸೀರಿಯಲ್ ಅಮೃತಧಾರೆ. ಅಮೃತಧಾರೆ ಈ ಹೆಸರು ಕೇಳಿದರೆ ಸೀರಿಯಲ್ ವೀಕ್ಷಕರಿಗೆ ಅದೇನೋ ಒಂಥರಾ ರೋಮಾಂಚನ ಆಗುವುದು ಇದೆ. ಕಾರಣ, ಮಧ್ಯ ವಯಸ್ಕರಾಗಿರುವ ಇಬ್ಬರ ನಡುವಿನ ಅಪರೂಪದ ಪ್ರೇಮ ಕಥೆ ಇದು. ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಈ ಸೀರಿಯಲ್ ಹಲವು ಸೀರಿಯಲ್ಗಳಿಗಿಂತಲೂ ಭಿನ್ನವಾಗಿರುವ ಕಾರಣ, ಇದನ್ನು ಪ್ರೇಕ್ಷಕರಿಗೆ ಅಚ್ಚುಮೆಚ್ಚಿನ ಸೀರಿಯಲ್ ಆಗಿದೆ. ಸದ್ಯ ಸೀರಿಯಲ್ ಪ್ರೇಮಿಗಳ ಮನಸ್ಸನ್ನು ಗೆಲ್ಲುತ್ತಿರುವ ಸೀರಿಯಲ್ಗಳ ಪೈಕಿ ಜೀ ಕನ್ನಡದ ಅಮೃತಧಾರೆ ಅಗ್ರಸ್ಥಾನ ಪಡೆದಿದೆ.
ಅಮೃತಧಾರೆಗೆ 300: ಭೂಮಿಕಾ-ಗೌತಮ್ ರೀಲ್ ಜೋಡಿಯ ಪ್ರೇಮ ಪಯಣದ ವಿಶೇಷ ವಿಡಿಯೋ ರಿಲೀಸ್
ಬಹುತೇಕ ಎಲ್ಲಾ ಸೀರಿಯಲ್ಗಳಲ್ಲಿಯೂ ಅಳುಮುಂಜಿ ಮಹಿಳೆಯರು, ವಿಲನ್ಗಳೇ ಭರ್ಜರಿ ಗೆಲುವು ಸಾಧಿಸುತ್ತಿರುವುದನ್ನು ನೋಡಿ ನೋಡಿ ಬೇಸತ್ತ ವೀಕ್ಷಕರಿಗೆ ಅಮೃತಧಾರೆ ನಿಜಕ್ಕೂ ಅಮೃತವನ್ನೇ ಉಣಬಡಿಸುತ್ತಿದೆ. ಇದಕ್ಕೆ ಕಾರಣ, ಎಲ್ಲಾ ಸೀರಿಯಲ್ಗಳಂತೆ ಇಲ್ಲಿ ಲೇಡಿ ವಿಲನ್ ಇದ್ದರೂ ಸದಾ ಇಲ್ಲಿ ವಿಲನ್ ಸೋಲುತ್ತಿದ್ದಾಳೆ. ವಿಲನ್ ಆಗಿರೋ ಶಕುಂತಲಾ ದೇವಿ ಇನ್ನೇನು ಕೆಟ್ಟದ್ದು ಮಾಡುತ್ತಾಳೋ ಎನ್ನುವಷ್ಟರಲ್ಲಿಯೇ ನಾಯಕಿ ಭೂಮಿಕಾ ಅವಳ ಎಲ್ಲಾ ಪ್ಲ್ಯಾನ್ಗಳನ್ನು ಠುಸ್ ಮಾಡುವ ಕಾರಣ, ವೀಕ್ಷಕರಿಗೆ ಈ ಸೀರಿಯಲ್ ವಿಭಿನ್ನವಾಗಿ ಕಾಣಿಸುತ್ತಿದೆ. ಅದರ ಜೊತೆ ಮಧ್ಯ ವಯಸ್ಸಿನಲ್ಲಿ ಮದುವೆಯಾದ ಜೋಡಿಯ ನವೀರಾದ ಪ್ರೇಮ ಕಥೆಯೂ ಇಷ್ಟವಾಗುತ್ತಿದೆ.
ಇದೀಗ ಪತಿಗಾಗಿ ಶುದ್ಧ ಸಸ್ಯಾಹಾರಿ ಪತ್ನಿ ಭೂಮಿಕಾ ಚಿಕನ್ ಖಾದ್ಯ ಮಾಡುವುದನ್ನು ಕಲಿಯುತ್ತಿದ್ದಾಳೆ. ಇದನ್ನು ನೋಡಿ ಅತ್ತೆ ಹೌಹಾರಿ ಹೋಗುತ್ತಾಳೆ. ದಂಪತಿಯನ್ನು ಬೇರೆಬೇರೆ ಮಾಡುವ ಆಕೆಯ ಎಲ್ಲ ಪ್ಲ್ಯಾನ್ಗಳೂ ವಿಫಲ ಆಗ್ತಿರೋ ಈ ಹೊತ್ತಿನಲ್ಲಿ ಇದನ್ನು ಅವಳಿಗೆ ಅರಗಿಸಿಕೊಳ್ಳಲು ಆಗ್ತಿಲ್ಲ. ಅವಳನ್ನು ಅಡುಗೆ ಮನೆಯಲ್ಲಿ ನೋಡಿದ ಭೂಮಿಕಾ, ನನ್ನ ಅಡುಗೆಯಲ್ಲಿ ಉಪ್ಪು, ಖಾರ, ಹುಳಿ ಏನಾದ್ರೂ ಎಕ್ಸ್ಟ್ರಾ ಹಾಕಿ ಹೋಗಿಲ್ಲ ತಾನೆ ಎಂದು ಪ್ರಶ್ನಿಸುತ್ತಾಳೆ. ಕುತಂತ್ರಿ ಶಕುಂತಲಾಗೆ ಇದನ್ನು ಕೇಳಿ ಶಾಕ್ ಆಗುತ್ತದೆ. ಇಲ್ಲ, ಯಾಕೆ ಹೀಗೆ ಹೇಳ್ತಾ ಇದ್ಯಾ ಕೇಳುತ್ತಾಳೆ. ಅದಕ್ಕೆ ಭೂಮಿಕಾ ಇತ್ತೀಚಿನ ದಿನಗಳಲ್ಲಿ ನೀವು ಟಿ.ವಿ.ಸೀರಿಯಲ್ ನೋಡುವುದು ಜಾಸ್ತಿಯಾಗ್ತಿದೆಯಲ್ಲ. ಅದಕ್ಕೇ ಕೆಲವರು ಇನ್ಸ್ಪೈರ್ ಆಗುವ ಹಾಗೆ ನೀವೂ ಆಗಿ ಏನಾದ್ರೂ ಮಾಡಿದ್ರೋ ಎಂದುಕೊಂಡೆ ಎನ್ನುತ್ತಾಳೆ. ಇದನ್ನು ಕೇಳಿದ ವೀಕ್ಷಕರು ಅಬ್ಬಾ ಅಂತೂ ಸೀರಿಯಲ್ನಲ್ಲಿಯೇ ಇಂಥ ಮಾತು ಬಂತಲ್ಲ ಎನ್ನುತ್ತಿದ್ದಾರೆ.
ಆ್ಯಂಕರ್ ಅನುಶ್ರೀಗೆ ಈ ಪರಿ ಮೋಸ ಮಾಡೋದಾ ತೀರ್ಪುಗಾರರು? ಒಬ್ಬಂಟಿಯಾದ ನಟಿ ಕಣ್ಣೀರು