Asianet Suvarna News Asianet Suvarna News

ರಾಮಾಚಾರಿ ಸೀರಿಯಲ್‌ನಲ್ಲಿ ನುಗ್ಗೇಕಾಯಿ ಜಗಳ, ಎರಡನೇ ಒಲೆ ಹೊತ್ತಿಸಿದ ವೈಶಾಖ!

ರಾಮಾಚಾರಿ ಸೀರಿಯಲ್‌ನಲ್ಲಿ ನುಗ್ಗೇಕಾಯಿ ಜಗಳದಿಂದ ಒಂದೇ ಮನೆಯಲ್ಲಿ ಎರಡು ಒಲೆ ಉರಿಯೋ ಹಾಗಾಗಿದೆ. ವೈಶಾಖ ಹೊಸ ಕ್ಯಾತೆ ಇನ್ಯಾವ ಲೆವೆಲ್‌ಗೆ ಹೋಗುತ್ತೋ ಅಂತಿದ್ದಾರೆ ವೀಕ್ಷಕರು.

Ramachari serial new update
Author
First Published May 26, 2023, 1:00 PM IST

ಸೀರಿಯಲ್ ಕಥೆಗಳು ಮಧ್ಯಮ ವರ್ಗ, ಕೆಳ ಮಧ್ಯಮ ವರ್ಗದ ಗೃಹಿಣಿಯರ ಮೆಚ್ಚಿನ ಎಂಟರ್‌ಟೈನ್‌ಮೆಂಟ್‌ ಮೀಡಿಯಾ ಅಂತ ಬಿಂಬಿಸೋದು ಹಳೇ ವಿಷ್ಯ. ಅದಕ್ಕೆ ತಕ್ಕ ಹಾಗೆ ಮಧ್ಯಮ ವರ್ಗದ ಜಗತ್ತಿನ ಕಥೆಯೇ ಇಲ್ಲೂ ಹೈಲೈಟ್‌ ಆಗುತ್ತೆ, ವೈರಲ್‌ ಸಹ ಆಗುತ್ತೆ. ರಾಮಾಚಾರಿ ಸೀರಿಯಲ್ ನಲ್ಲಿ ಒಂದು ಕಡೆ ಸಂಸ್ಕಾರದ ಶ್ರೀಮಂತಿಕೆ, ಇನ್ನೊಂದೆಡೆ ದುಡ್ಡಿನ ಶ್ರೀಮಂತಿಕೆಗಳ ಮುಖಾಮುಖಿ ಆಗಿದೆ. ಇದೀಗ ಸಂಸ್ಕಾರವಂತ ನಾರಾಯಣಾಚಾರ್ ಮನೆಗೆ ರಾಮಾಚಾರಿ ಅಣ್ಣ ಕೋದಂಡನ ಎರಡನೇ ಹೆಂಡತಿಯಾಗಿ ವೈಶಾಖಳ ಆಗಮನವಾಗಿದೆ. ಸಖತ್ ನೆಗೆಟಿವ್ ಶೇಡ್‌ನ ಈ ಪಾತ್ರವನ್ನು ವೀಕ್ಷಕರು ಚೆನ್ನಾಗಿ ಎನ್‌ಜಾಯ್ ಮಾಡ್ತಿದ್ದಾರೆ. ಇದರಲ್ಲಿ ನುಗ್ಗೇಕಾಯಿ ಜಗಳದ ಎಪಿಸೋಡ್ ಅಂತ ಹೆಚ್ಚು ಜನರ ಪ್ರತಿಕ್ರಿಯೆ ಪಡೆದಿದೆ. ಒಂದಿಷ್ಟು ಮಂದಿ ಇದನ್ನು ನೋಡಿ ಬಿದ್ದೂ ಬಿದ್ದೂ ನಕ್ಕರೆ ಇನ್ನೊಂದಿಷ್ಟು ಜನ ಇದು ಕೆಲವು ಮನೆಗಳಲ್ಲಿ ನಡೆಯೋ ಕತೆನೇ. ಊಟದ ವಿಚಾರಕ್ಕೆ ಮದುವೆಗಳೇ ಮುರಿದು ಬೀಳುವಾಗ ಮನೆ ಮುರಿದಿದ್ದರಲ್ಲಿ ಆಶ್ಚರ್ಯ ಪಡುವಂಥದ್ದೇನಿಲ್ಲ ಅಂದಿದ್ದಾರೆ.

ಅಷ್ಟಕ್ಕೂ ಆದದ್ದಿಷ್ಟು. ರಾಮಾಚಾರಿ ಸೀರಿಯಲ್‌ನಲ್ಲಿ ರಾಮಾಚಾರಿ ಮನೆಯ ಸನ್ನಿವೇಶ. ಎಲ್ಲರೂ ಊಟಕ್ಕೆ ಕೂತಿದ್ದಾರೆ. ರಾಮಾಚಾರಿ ತಾಯಿ ಜಾನಕಿ ಎಲ್ಲರಿಗೂ ಬಡಿಸುತ್ತಿದ್ದಾರೆ. ಎಲ್ಲಿ ಕ್ಯಾತೆ ತೆಗೀಲಿ ಅಂತ ಕಾಯ್ತನೇ ಇರೋ ವೈಶಾಖ ಊಟ ಶುರುವಾಗೋ ಮೊದಲೇ ಅಜ್ಜಿ ಜೊತೆ ಜಗಳ ಆಡೋದಕ್ಕೆ ಮುಂದಾಗಿದ್ದಾಳೆ. ಜಾನಕಿ ಒಬ್ಬಳೇ ಬಡಿಸುತ್ತಿದ್ದಾಳೆ. ಮನೆ ಸೊಸೆ ವಿಶಾಖ ಊಟಕ್ಕೆ ಕೂತಿದ್ದಾಳೆ, ಅವಳೂ ಬಡಿಸಿ ಜಾನಕಿಗೆ ಸಹಾಯ ಮಾಡಬಹುದಿತ್ತಲ್ಲಾ ಅಂತ ಅಜ್ಜಿ ಹೇಳಿದಾಗ ತಾನು ಗಂಡನ ಜೊತೆ ಕೂತು ಊಟ ಮಾಡೋದನ್ನು ಅಜ್ಜಿ ಸಹಿಸುತ್ತಿಲ್ಲ ಎಂಬ ಕಾರಣಕ್ಕೆ ವೈಶಾಖ ಜಗಳ ತೆಗೆಯುತ್ತಾಳೆ. ಜಾನಕಿ ಇದನ್ನು ಹೇಗೋ ಸಂಭಾಳಿಸಿ ತಾನೇ ಬಡಿಸಲು ಮುಂದಾಗುತ್ತಾಳೆ. ಅಲ್ಲೂ ಹದ್ದಿನ ಕಣ್ಣಿಂದ ಗಮನಿಸುವ ವೈಶಾಖ ಜಾನಕಿ ಅರಿಯದೇ ಹಾಕಿದ ತರಕಾರಿ ಹೋಳಿನ ವಿಚಾರದಲ್ಲಿ ದೊಡ್ಡ ರಾದ್ಧಾಂತವನ್ನೇ ಮಾಡುತ್ತಾಳೆ.

ಶ್ರೀರಸ್ತು ಶುಭಮಸ್ತು ಸೀರಿಯಲ್‌ನಿಂದ ದೀಪಕ್ ಗೌಡ ಔಟ್, ದರ್ಶಿತ್ ಗೌಡ ಇನ್

ಜಾನಕಿ ಎಲ್ಲದರಲ್ಲೂ ಒಬ್ಬರ ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಎಣ್ಣೆ ಹಾಕುತ್ತಿದ್ದಾರೆ. ಮಕ್ಕಳಲ್ಲೇ ತಾರತಮ್ಯ ತೋರುತ್ತಿದ್ದಾರೆ. ರಾಮಾಚಾರಿ ತಟ್ಟೆಗೆ ಹೆಚ್ಚು ನುಗ್ಗೆಕಾಯಿ ಹಾಕಿದ್ದಾಳೆ, ತನ್ನ ಗಂಡ ಕೋದಂಡನ ತಟ್ಟೆಗೆ ಕಡಿಮೆ ನುಗ್ಗೆಕಾಯಿ ಹೋಳು ಹಾಕಿದ್ದಾಳೆ ಅಂತ ದೊಡ್ಡ ರಂಪಾಟವನ್ನೇ ಮಾಡುತ್ತಾಳೆ. ಊಟದ ವಿಷಯಕ್ಕೆ ವೈಶಾಖ ದೂಷಿಸಿದ್ದು ಜಾನಕಿ ಮನಸ್ಸಿಗೆ ತೀವ್ರ ನೋವುಂಟು ಮಾಡುತ್ತದೆ. ಇತ್ತ ವೈಶಾಖ ಮಾಡಿದ್ದು ಸರಿಯಲ್ಲ ಅಂತ ಕೋದಂಡನಿಗೂ ಅನಿಸುತ್ತದೆ. ಈ ಜಗಳ ಬೆಳೆಯುತ್ತಾ ಹೋಗಿ ಇದೀಗ ಒಂದೆ ಮನೆಯಲ್ಲಿ ಎರಡು ಒಲೆ ಹೂಡುವ ಸ್ಥಿತಿ ನಿರ್ಮಾಣವಾಗಿದೆ.

ಇದನ್ನು ಎನ್‌ಜಾಯ್ ಮಾಡಿರೋ ವೀಕ್ಷಕರು ಈ ವೈಶಾಖಾಗೆ ಬುದ್ಧಿ ಕಲಿಸೋದಕ್ಕೆ ನಮ್ ಚಾರುನೇ ಬರ್ಬೇಕು. ಈ ಮೂಲಕ ಚಾರು ಆಗಮನಕ್ಕೆ ವೇದಿಕೆ ಸಿದ್ಧಗೊಳ್ತಾ ಇದೆ ಅನ್ನೋ ರೀತಿ ಮಾತಾಡ್ತಿದ್ದಾರೆ. ಆದರೆ ಸೀರಿಯಲ್‌ನಲ್ಲಿ ರಾಮಾಚಾರಿ - ದೀಪಾ, ಚಾರುಲತಾ - ವಿಕಾಸ್ ಬಾನೇರಿ ನಿಶ್ಚಿತಾರ್ಥ ಆಗಿಬಿಟ್ಟಿದೆ. ಈ ನಿಶ್ಚಿತಾರ್ಥ ಮುರಿದು ಚಾರು, ಚಾರಿ ಹೇಗೆ ಒಂದಾಗ್ತಾರೆ ಅನ್ನೋದು ಇಂಟರೆಸ್ಟಿಂಗ್ ವಿಚಾರ.

Bhagyalakshmi Serial: ನಮ್ಗೆ ಸ್ಟ್ರಾಂಗ್ ಭಾಗ್ಯ ಬೇಕು ಅನ್ನೋ ವೀಕ್ಷಕರ ಬೇಡಿಕೆ ಈಡೇರೋ ಟೈಮ್ ಬಂತು!

ಈ ಸೀರಿಯಲ್‌ನಲ್ಲಿ ರಾಮಾಚಾರಿ ಪಾತ್ರದಲ್ಲಿ ರಿತ್ವಿಕ್ ಕೃಪಾಕರ್, ಚಾರುಲತಾ ಆಗಿ ಮೌನಾ ಗುಡ್ಡೇಮನೆ, ವೈಶಾಖ ಪಾತ್ರದಲ್ಲಿ ಐಶ್ವರ್ಯಾ ಸಾಲಿಮಠ ನಟಿಸಿದ್ದಾರೆ. ನಾರಾಯಣಾಚಾರ್ ಆಗಿ ಶಂಕರ್ ಅಶ್ವತ್ಥ್, ಜಾನಕಿ ಆಗಿ ಅಂಜಲಿ ಸುಧಾಕರ್ ಅಭಿನಯಿಸುತ್ತಿದ್ದಾರೆ.

Follow Us:
Download App:
  • android
  • ios