ಪ್ರಭಾತ ಕಲಾವಿದರು ರಂಗತಂಡದ ಪ್ರಸಿದ್ಧ ನೃತ್ಯ ನಾಟಕ ‘ಶ್ರೀ ರಾಮ ಪ್ರತೀಕ್ಷಾ’ ವಚ್ರ್ಯುವಲ್‌ ಆಗಿ ರಿಲೀಸ್‌ ಆಗಿದೆ. ಬುಕ್‌ ಮೈ ಶೋನಲ್ಲಿ ಬುಕ್ಕಿಂಗ್‌ ಮಾಡಿ ಈ ನೃತ್ಯ ನಾಟಕ ನೋಡಬಹುದು. 

ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು ಭಾಷೆಗೂ ಡಬ್‌ ಆಗಿರುವುದು ಮತ್ತೊಂದು ವಿಶೇಷ. ಶ್ರೀ ರಾಮನ ನಿರೀಕ್ಷೆಯಲ್ಲಿರುವ ಶಬರಿ, ಗುಹ, ಅಹಲ್ಯೆ ಮೊದಲಾದ ಪಾತ್ರಗಳ ಮೂಲಕ ಇಡೀ ರಾಮಾಯಣ ಕಥೆಯನ್ನು ನೃತ್ಯ ನಾಟಕದ ಮೂಲಕ ಕಟ್ಟಿಕೊಡಲಾಗಿದೆ.

Add Asianetnews Kannada as a Preferred SourcegooglePreferred

ಸೇತೂರಾಂಗೆ ಜೀವಮಾನ ರಂಗ ಗೌರವ ಪ್ರಶಸ್ತಿ 

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಪ್ರಭಾತ್‌ ಕಲಾವಿದರು ರಂಗ ತಂಡದ ಕಲಾವಿದ, ಚಿತ್ರನಟ ಹರೀಶ್‌ ಪ್ರಭಾತ್‌, ‘86 ವರ್ಷಗಳ ಪರಂಪರೆ ಇರುವ ರಂಗ ತಂಡ ನಮ್ಮದು. ಇಂಥದ್ದೊಂದು ಹೊಸ ಪ್ರಯೋಗ ಮಾಡುವ ಐಡಿಯಾ ಬಂದಾಗ ವಿಷುವಲ್‌ ಕ್ವಾಲಿಟಿ ಬಗ್ಗೆ ಆತಂಕ ಇತ್ತು. 2 ತಿಂಗಳು ಕರೆಕ್ಟಾಗಿ ಪ್ಲಾನ್‌ ಮಾಡಿ ಮೂರು ಹೈ ಎಂಡ್‌ ಕ್ಯಾಮರಾ, ಟ್ರಾಲಿ ಬಳಸಿ ಶೂಟಿಂಗ್‌ ಮಾಡಿದೆವು. ವಿಷುವಲ್‌ ಎಫೆಕ್ಟ್ ನಮಗೆ ತೃಪ್ತಿ ನೀಡಿದ ಮೇಲೆ ಇದನ್ನು ವಚ್ರ್ಯುವಲ್‌ ಆಗಿ ಬಿಡುಗಡೆ ಮಾಡುವ ಪ್ಲಾನ್‌ ಮಾಡಿದೆವು. ಈ ಶೋ ಸಿನಿಮ್ಯಾಟಿಕ್‌ ಅನುಭವ, ಭರಪೂರ ಮನರಂಜನೆ ನೀಡುತ್ತದೆ. ನಮ್ಮ ಸಂಸ್ಕೃತಿ, ಪುರಾಣವನ್ನು ಅದ್ಭುತ ಲೈಟಿಂಗ್‌, ನಟನೆ, ವೇಷಭೂಷಣಗಳ ಮೂಲಕ ಕಟ್ಟಿಕೊಡುವ ಪ್ರಯತ್ನ ಜನ ಮೆಚ್ಚುಗೆ ಪಡೆಯುವ ವಿಶ್ವಾಸವಿದೆ’ ಎನ್ನುತ್ತಾರೆ. ಸುಮಾರು 75 ಜನ ಕಲಾವಿದರು ಈ ತಂಡದಲ್ಲಿದ್ದಾರೆ. ರಾಮನಾಗಿ ಹರೀಶ್‌ ಪ್ರಭಾತ್‌, ಸೀತೆಯಾಗಿ ದೀಪಶ್ರೀ ಹರೀಶ್‌, ರಾವಣನಾಗಿ ವಿಶ್ವನಾಥ ಕಟ್ಟಿಮನಿ ನಟಿಸಲಿದ್ದಾರೆ. ಪದ್ಮಶ್ರೀ ಪಂ.ವಿಜಯ ರಾಘವ ರಾವ್‌ ಅವರ ಸಂಗೀತ ಸಂಯೋಜನೆ, ಉಡುಪಿ ಲಕ್ಷ್ಮೇನಾರಾಯಣಾಚಾರ್ಯ ಹಾಗೂ ಹೇಮಾ ಪ್ರಭಾತ್‌ ಅವರ ನೃತ್ಯ ಸಂಯೋಜನೆ ಇದೆ. ನಿರ್ವಹಣೆ ಟಿ ಜಿ ವೆಂಕಟೇಶಾಚಾರ್‌ ಅವರದು.

ನಾಟಕ ಮಾಡುವಾಗ ಪಾತ್ರಧಾರಿಯ ಮೇಲೆ ಚಾಮುಂಡೇಶ್ವರಿ ಅವಾಹನೆ.?

ಕೊರೋನಾ ಟೈಮ್‌ನಲ್ಲಿ ಜನರಿಗೆ ಮನರಂಜನೆ ಬೇಕು. ಸಿನಿಮಾ, ಸೀರಿಯಲ್‌ಗಳ ಜೊತೆಗೆ ನೃತ್ಯ ನಾಟಕವನ್ನೂ ಆಸ್ವಾದಿಸುವ ಜನ ಬಹಳಷ್ಟಿದ್ದಾರೆ. ಒಂಚೂರೂ ಲ್ಯಾಗ್‌ ಆಗದೇ 2 ಗಂಟೆಗಳ ಕಾಲ ಮನರಂಜನೆ ಒದಗಿಸಲಿದೆ.- ಹರೀಶ್‌ ಪ್ರಭಾತ್‌, ನಟ

ಸುಮಾರು ಒಂದು ತಿಂಗಳ ಕಾಲ ಪ್ರತೀ ದಿನ ಸಂಜೆ 7 ಗಂಟೆಗೆ ಈ ನೃತ್ಯ ನಾಟಕ ನಡೆಯಲಿದೆ.