Kannadathi: ಹಾರ ಹಾಕಿದ ತನ್ನ ಫೋಟೋ ಪಕ್ಕ ನಿಂತ ಚಿತ್ಕಳಾ! ಫ್ಯಾನ್ಸ್ ಖುಷ್
ಕನ್ನಡತಿ ಸೀರಿಯಲ್ನಲ್ಲಿ ಅಮ್ಮಮ್ಮನ ಪಾತ್ರ ಕೊನೆಯಾಗಿ ಕೆಲ ವಾರಗಳೇ ಕಳೆದರೂ ಜನರ ಮನಸ್ಸಿಂದ ಆ ಪಾತ್ರ ಮರೆಯಾಗಲ್ಲ. ಇದೀಗ ಮರೆಯಾದ ಅಮ್ಮಮ್ಮನ ಫೋಟೋಗೆ ಹಾರ ಬಿದ್ದಿದೆ. ಈ ಫೋಟೋದ ಪಕ್ಕ ಅಮ್ಮಮ್ಮ ಪಾತ್ರ ಮಾಡಿದ ಚಿತ್ಕಳಾ ಬಿರಾದಾರ್ ನಿಂತಿರೋ ಫೋಟೋ ಈಗ ವೈರಲ್ ಆಗಿದೆ. ನಿಮ್ಮ ಆಯುಸ್ಸು ಹೆಚ್ಚಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
ಕನ್ನಡತಿ ಸೀರಿಯಲ್ನಲ್ಲಿ ಬಹಳ ಜನರ ಗಮನ ಸೆಳೆದದ್ದು ಅಮ್ಮಮ್ಮನ ಪಾತ್ರ. ಈ ಸೀರಿಯಲ್ ನಾಯಕ ಹರ್ಷನ ತಾಯಿ ರತ್ನಮಾಲಾ ಮಾಲಾ ಕೆಫೆ ಹಾಗೂ ಮಾಲಾ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಗಟ್ಟಿಗಿತ್ತಿ. ಒಳ್ಳೆಯತನದ ಜೊತೆಗೆ ಚಾಣಾಕ್ಷತನ, ಬುದ್ಧಿವಂತಿಕೆಯ ಮೂಲಕವೂ ಗಮನ ಸೆಳೆದದ್ದು ಅಮ್ಮಮ್ಮನ ಪಾತ್ರ. ಹರ್ಷ ಭುವಿ ಮದುವೆಯ ಹೊತ್ತಿಗೆ ಈ ಪಾತ್ರ ಕೊನೆಯಾಗುತ್ತೆ ಅನ್ನೋ ಮಾತಿತ್ತು. ಈ ಪಾತ್ರದ ಜೊತೆಗೆ ಎಮೋಶನಲ್ ಆಗಿ ಕನೆಕ್ಟ್ ಆಗಿದ್ದ ಫ್ಯಾನ್ಸ್ ಅಮ್ಮಮ್ಮ ಪಾತ್ರ ಬೇಕೇ ಬೇಕು, ಕೊನೆ ಮಾಡಬೇಡಿ ಅಂತ ಪಟ್ಟು ಹಿಡಿದಿದ್ರು. ಅಮ್ಮಮ್ಮ ಪಾತ್ರಧಾರಿ ಚಿತ್ಕಳಾ ಬಿರಾದಾರ್ ಅಮೆರಿಕಾ ಪ್ರವಾಸ ಮುಗಿಸಿ ಬಂದ ಕೂಡಲೇ ಈ ಪಾತ್ರವನ್ನು ಮುಂದುವರಿಸಲಾಯ್ತು. ಆದರೆ ಈ ಪಾತ್ರ ಕೊನೆಯಾಗಲೇ ಬೇಕಿತ್ತು. ಇಲ್ಲವಾದರೆ ನಾಯಕಿ ಭುವಿ ಈ ಸ್ಥಾನದಲ್ಲಿ ಮೇಲೇರಲು ಸಾಧ್ಯವಿರಲಿಲ್ಲ. ಹೀಗಾಗಿ ಕೆಲವು ದಿನಗಳ ಹಿಂದೆ ಅಮ್ಮಮ್ಮ ಪಾತ್ರ ಕೊನೆ ಮಾಡಲಾಯ್ತು. ಈ ಪಾತ್ರದ ಅಂತ್ಯಕ್ರಿಯೆಯೂ ಸಂಪ್ರದಾಯಬದ್ಧವಾಗಿ ನಿಜವೇನೋ ಅನ್ನೋ ಹಾಗೆ ನಡೆಸಿದ್ದು ಕೊಂಚ ಚರ್ಚೆಗೆ ಕಾರಣವಾಯ್ತು. ಇದೀಗ ಅಮ್ಮಮ್ಮ ಪಾತ್ರ ಕೊನೆಯಾಗಿ ಬಹಳ ದಿನಗಳಾದರೂ ಜನ ಈ ಪಾತ್ರವನ್ನು ಮಿಸ್ ಮಾಡ್ತಿದ್ದಾರೆ. ಅಂಥಾ ಟೈಮಲ್ಲೇ ಹಾರ ಹಾಕಿದ ತನ್ನ ಪಾತ್ರದ ಪಕ್ಕದಲ್ಲೇ ನಿಂತು ನಗು ನಗುತ್ತಾ ಚಿತ್ಕಳಾ ಫೋಟೋ ತೆಗೆಸಿಕೊಂಡಿದ್ದಾರೆ.
ಹೌದು, ಕನ್ನಡತಿ ಸೀರಿಯಲ್ನಲ್ಲಿ ಅಮ್ಮಮ್ಮ ಈಗ ಫೋಟೋ ಫ್ರೇಮಿನೊಳಗೆ ಹಾರ ಹಾಕಿಸಿಕೊಂಡು ನಗುತ್ತಿದ್ದಾರೆ. ಈ ಫೋಟೋದ ಪಕ್ಕ ಕನ್ನಡತಿ ಟೀಂನ ಅನೇಕರು ನಿಂತು ಫೋಟೋ ಹೊಡೆಸಿಕೊಂಡಿದ್ದಾರೆ. ಆದರೆ ತನ್ನ ಹಾರ ಹಾಕಿಸಿಕೊಂಡ ತನ್ನ ಫೋಟೋ ಪಕ್ಕವೇ ನಿಂತು ಚಿತ್ಕಳಾ ಫೋಟೋ ತೆಗೆಸಿಕೊಂಡಿದ್ದು ಇದೀಗ ವೈರಲ್ ಆಗಿದೆ. ಈ ಫೋಟೋಗೆ ಪ್ರತಿಕ್ರಿಯೆಯ ಮಹಾಪೂರವೇ ಹರಿದುಬಂದಿದೆ. 'ಈ ಥರ ನಮ್ಮನ್ನು ನಾವು ನೋಡಿಕೊಳ್ಳೋಕೂ ಪುಣ್ಯ ಮಾಡಿರಬೇಕು ಅಲ್ವೇನ್ರೀ? ಅಂತ ಚಿತ್ಕಳಾ ಈ ಫೋಟೋ ಪಕ್ಕ ಬರೆದುಕೊಂಡಿದ್ದಾರೆ. ಪ್ರತಿಕ್ಷಣದಲ್ಲೂ ತಾನು ಖುಷಿ ಕಾಣುತ್ತಿರುವೆ ಅಂತಲೂ ಬರೆದುಕೊಂಡಿದ್ದಾರೆ.
ಕನ್ನಡತಿ ಸೀರಿಯಲ್ ಜನವರಿ ಕೊನೆಯಲ್ಲಿ ವೈಂಡ್ ಅಪ್ ಆಗುತ್ತಾ?
'ಕಲಾವಿದರಿಗೆ ಮಾತ್ರ ಇಂಥ ಅವಕಾಶ ಸಿಗೋದು, ನಮ್ಮ ಶ್ರದ್ಧಾಂಜಲಿ ಸಭೆಯನ್ನು ನಾವೇ ಅಟೆಂಡ್ (Attend) ಮಾಡಿ ನೋಡುವ ಅಪರೂಪದ ಅವಕಾಶವಿದು' ಅಂತ ಒಬ್ಬರು ಕಮೆಂಟ್ ಮಾಡಿದರೆ, 'ಇಂಥಾ ಪಾತ್ರ ಮಾಡೋಕೂ ಪುಣ್ಯ ಮಾಡಿರಬೇಕು' ಅಂತೊಬ್ಬರು ಹೇಳಿದ್ದಾರೆ. 'ನಿಮ್ಮನ್ನು ಹೀಗೆ ಫೋಟೋದಲ್ಲಿ ಹಾರ ಹಾಕಿಸಿಕೊಂಡು ನೋಡೋದಕ್ಕೆ ಬಹಳ ಬೇಜಾರು.. ದೇವರು ನಿಮ್ಮ ಆಯುಸ್ಸು ಹೆಚ್ಚಿಸಲಿ' ಅಂತ ಬಹಳ ಮಂದಿ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.
ಕನ್ನಡತಿ ಸಂಚಿಕೆಯಲ್ಲೂ ಅಮ್ಮಮ್ಮ ಭುವಿ ಮನಸ್ಸಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಭುವಿಗೆ ಸಪೋರ್ಟ್(Suport) ಮಾಡಿ ಆಕೆ ಕಷ್ಟದ ಸನ್ನಿವೇಶವನ್ನು ಜಯಿಸುವ ಹಾಗೆ ಮಾಡ್ತಾರೆ. ರತ್ನಮಾಲಾ ಅವರ ಈ ರೀಎಂಟ್ರಿಗೂ(Re entry) ಅಪಾರ ಮೆಚ್ಚುಗೆ ಹರಿದು ಬಂದಿದೆ. 'ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಹೀಗೆ ಭುವಿ ಮನಸ್ಸಿನೊಳಗೋ ಕನಸಿನೊಳಗೋ ಹೇಗಾದ್ರೂ ಬನ್ನಿ. ನಿಮ್ಮನ್ನ ಬಹಳ ಮಿಸ್ ಮಾಡ್ಕೊಳ್ತಿದ್ದೀವಿ' ಅಂತ ಕೆಲವರು ಕಮೆಂಟ್ ಮಾಡಿದ್ದಾರೆ.
ಆದರೂ ಹಾರ ಹಾಕಿರುವ ತನ್ನ ಫೋಟೋ ಪಕ್ಕದಲ್ಲೇ ನಿಂತು ಫೋಟೋ ತೆಗೆಸಿಕೊಂಡದ್ದು ಕಲಾವಿದೆ ಚಿತ್ಕಳಾ ಅವರಿಗಂತೂ ಖುಷಿ ಕೊಟ್ಟಿದೆ. ಅವರನ್ನು ಫೋಟೋ (Photo)ದಲ್ಲಿ ಹೀಗೆ ನೋಡಿ ಬೇಜಾರಾದರೂ ಅವರನ್ನು ನಿಜವಾಗಿ ಕಂಡಾಗ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ. ಅಮ್ಮಮ್ಮನ ಪಾತ್ರ ಕೊನೆಯವರೆಗೂ ಅಲ್ಲಲ್ಲಿ ಬರುತ್ತಲೇ ಇರಲಿ ಅಂತ ಅವರೆಲ್ಲ ಆಶಿಸುತ್ತಿದ್ದಾರೆ.
Kannadathi : ಅಮ್ಮಮ್ಮನ ಅಂತ್ಯಕ್ರಿಯೆ ನನ್ನನ್ನೂ ಬಾಧಿಸಿತು : ಚಿತ್ಕಳಾ ಬಿರಾದಾರ್