Asianet Suvarna News Asianet Suvarna News

ಧಾರಾವಾಹಿ ಚಿತ್ರೀಕರಣಕ್ಕೆ ಎರಡು ದಿನ ಗಡುವು;ಕಲಾವಿದರಿಗೆ ಕಡ್ಡಾಯ ರಜೆ!

ಕೊರೋನಾ ವೈರಸ್‌ ಭೀತಿ ಮನೊರಂಜನಾ ಉದ್ಯಮಕ್ಕೆ ಭಾರಿ ಹೊಡೆತ ನೀಡಿದೆ. ಮಾ.19 ರಿಂದ ಮಾ.31ರವರೆಗೆ ಕಡ್ಡಾಯವಾಗಿ ರಾಜ್ಯದಲ್ಲಿ ಸಿನಿಮಾ, ಧಾರಾವಾಹಿ, ವೆಬ್‌ ಸೀರೀಸ್‌ ಹಾಗೂ ಸಾಕ್ಷ್ಯ ಚಿತ್ರಗಳ ಚಿತ್ರೀಕರಣ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಧಾರಾವಾಹಿಗಳ ಚಿತ್ರೀಕರಣ ಮುಗಿಸಿಕೊಳ್ಳಲು ಎರಡು ದಿನ ಗಡುವು ನೀಡಲಾಗಿದೆ. ಮಾ.19ರಿಂದ ಎಲ್ಲಾ ಕಲಾವಿದರಿಗೂ ಕಡ್ಡಾಯ ರಜೆ ಘೋಷಿಸಲಾಗಿದೆ.

Kannada industry shut downs its shooting due to covid19
Author
Bangalore, First Published Mar 17, 2020, 8:24 AM IST

ಕೊರೋನಾ ವೈರಸ್‌ ಹರಡುವ ಭೀತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇಂಡಿಯನ್‌ ಮೋಷನ್‌ ಪಿಕ್ಚರ್ಸ್‌ ಪ್ರೊಡ್ಯೂಸರ್‌ ಅಸೋಸಿಯೇಷನ್‌ ಭಾನುವಾರ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರದ ಬೆನ್ನಲ್ಲೇ ಕನ್ನಡದ ಮನೋರಂಜನಾ ವಾಹಿನಿಗಳು ಹಾಗೂ ಕಿರುತೆರೆಯ ನಿರ್ಮಾಣ ಸಂಸ್ಥೆಗಳು ಕೂಡ ಅದಕ್ಕೆ ಬೆಂಬಲಿಸಿವೆ. ಅದರ ಪರಿಣಾಮ ಗುರುವಾರ(ಮಾ.19)ದಿಂದ ಕನ್ನಡ ಕಿರುತೆರೆಯ ಚಿತ್ರೀಕರಣದ ಚಟುವಟಿಕೆಗಳು ಸಂಪೂರ್ಣ ಸ್ತಬ್ಧಗೊಳುವುದು ಕಡ್ಡಾಯ ಮತ್ತು ಅನಿವಾರ್ಯ.

ಗಾಯಕ ಅರ್ಜುನ್ ಇಟಗಿಗೂ ತಟ್ಟಿದ ಕೊರೋನಾ ಭೀತಿ!

ಸಿನಿಮಾದಂತೆ ಸೀರಿಯಲ್‌ ಚಿತ್ರೀಕರಣಕ್ಕೂ ಈಗ ಸಾಕಷ್ಟುಜನ ಇರುತ್ತಾರೆ. ಅವರ ಆರೋಗ್ಯವೂ ಮುಖ್ಯ. ಹಾಗಾಗಿ ನಾವು ಈಗಾಗಲೇ ಚಿತ್ರೀಕರಣ ನಿಲ್ಲಿಸೋದು ಸೂಕ್ತ ಅಂತಲೂ ಯೋಚಿಸಿದ್ದೇವೆ. ಮುನ್ನೆಚ್ಚರಿಕೆಯಾಗಿ ಚಿತ್ರೀಕರಣ ನಿಲ್ಲಿಸುವುದೇ ಸೂಕ್ತ ಅಂತ ಚಾನೆಲ್‌ ಕಡೆಯಿಂದಲೂ ಸೂಚನೆ ಬಂದಿದೆ. ಹಾಗಾಗಿ ನಾಳೆಯಿಂದ ನಮ್ಮ ಪ್ರೊಡಕ್ಷನ್‌ ಹೌಸ್‌ ಧಾರಾವಾಹಿಗಳ ಚಿತ್ರೀಕರಣವನ್ನು ನಿಲ್ಲಿಸಲಿದ್ದೇವೆ. -ಶ್ರುತಿ ನಾಯ್ಡು, ನಿರ್ಮಾಪಕಿ

ಸಿನಿಮಾಕ್ಕೆ ಹೋಲಿಸಿದರೆ ಕನ್ನಡದ ಕಿರುತೆರೆ ದೊಡ್ಡ ಮಟ್ಟದ ವಹಿವಾಟಿನ ಕ್ಷೇತ್ರ. ನಿತ್ಯವೂ ಹತ್ತಾರು ಧಾರಾವಾಹಿಗಳು ವಿವಿಧ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿವೆ. ನಿತ್ಯವೂ ಪ್ರಸಾರ ವಾಗುವ ಎಪಿಸೋಡ್‌ಗಳಿಗೆ ನಿತ್ಯವೂ ಚಿತ್ರೀಕರಣ ಇದ್ದೇ ಇರುತ್ತದೆ. ಹಾಗಾಗಿ ಚಿತ್ರೀಕರಣ ಬಂದ್‌ ಎನ್ನುವುದು ಕಿರುತೆರೆಗೆ ಕಡು ಕಷ್ಟವೇ ಆಗಿದ್ದರೂ ಸಿಬ್ಬಂದಿ ಆರೋಗ್ಯದ ದೃಷ್ಟಿಯಿಂದ ಚಿತ್ರೀಕರಣ ನಿಲ್ಲಿಸಲೇಬೇಕು ಎನ್ನುವುದು ಕಿರುತೆರೆ ನಿರ್ಮಾಪಕರ ಅಭಿಪ್ರಾಯ.

ಮಾಜಿ ಬಿಗ್ ಬಾಸ್‌ ಸ್ಪರ್ಧಿ ನೇಹಾ ಗೌಡ 'Mommy to be' ಪೋಟೋಸ್!

‘ಧಾರಾವಾಹಿಗಳ ಚಿತ್ರೀಕರಣ ಸಿನಿಮಾದಂತೆ ಅಲ್ಲ. ಪ್ರತಿ ನಿತ್ಯವೂ ಪ್ರಸಾರವಾಗುವ ಎಪಿಸೋಡ್‌ಗೆ ನಿರಂತರವಾದ ಚಿತ್ರೀಕರಣ ಇದ್ದೇ ಇರುತ್ತದೆ. ಹಾಗಾಗಿ ನಾವೀಗ ಸಂಕಷ್ಟಕ್ಕೆ ಸಿಲುಕಿದ್ದೇವೆ. ಬ್ಯಾಂಕಿಂಗ್‌ ಇದ್ದರೆ ಸಮಸ್ಯೆ ಆಗಲ್ಲ. ಆದರೆ ಪರಿಸ್ಥಿತಿ ಈಗ ವಿಚಿತ್ರವಾಗಿದೆ. ಏಕಾಏಕಿ ನಿಲ್ಲಿಸಬೇಕಾಗಿದೆ. ಆದರೂ ನಮಗೂ ಸಿಬ್ಬಂದಿ ಆರೋಗ್ಯದ ಬಗ್ಗೆ ಕಾಳಜಿಯಿದೆ. ವಾಹಿನಿಯವರು ಕೂಡ ಸೂಚನೆ ಕೊಟ್ಟಿದ್ದಾರೆ. ನಾವು ಚಿತ್ರೀಕರಣ ನಿಲ್ಲಿಸಬೇಕಿದೆ. ಅದಕ್ಕೆ ನಾವು ಬದ್ಧರಾಗಿದ್ದೇವೆ’ ಎನ್ನುತ್ತಾರೆ ನಿರ್ಮಾಪಕಿ ಶ್ರುತಿ ನಾಯ್ಡು.

ಇದು ಕಷ್ಟ, ಆದರೂ ಅನಿವಾರ್ಯ. ಚಾನೆಲ್‌ನವರು ತೆಗೆದುಕೊಳ್ಳುವ ತೀರ್ಮಾನಗಳಿಗೆ ನಾವು ಬದ್ಧರಾಗಲೇಬೇಕು. - ಎಸ್‌. ಭಾಸ್ಕರ್‌

ಈಗಾಗಲೇ ಬಹುತೇಕ ಸಿನಿಮಾ ಚಿತ್ರೀಕರಣ ಸ್ಥಗಿತಗೊಂಡಿದ್ದರೂ ಸೀರಿಯಲ್‌ಗಳ ಚಿತ್ರೀಕರಣ ಅನಿವಾರ್ಯವಾಗಿ ನಡೆಯುತ್ತಿದ್ದವು. ಸೆಟ್‌ನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಿಬ್ಬಂದಿಗೆ ಮಾಸ್ಕ್‌ ವಿತರಿಸಿ, ಚಿತ್ರೀಕರಣ ನಡೆಸಲಾಗುತ್ತಿತ್ತು. ಇಷ್ಟಾಗಿಯೂ ಕೊರೋನಾ ಚಿತ್ರೀಕರಣಕ್ಕೆ ತೊಂದರೆ ಆಗಿದ್ದನ್ನು ನಿರ್ಮಾಪಕರೊಬ್ಬರು ಬೇಸರದಿಂದ ಹೇಳಿಕೊಂಡರು. ‘ಕೊರೋನಾ ಭೀತಿಯಿಂದ ಚಿತ್ರಮಂದಿರಗಳು, ಮಾಲ್‌ ಬಂದ್‌ ಆಗಿದ್ದ ದಿನದಿಂದಲೂ ಸೀರಿಯಲ್‌ ಚಿತ್ರೀಕರಣಕ್ಕೆ ಸಾಕಷ್ಟುಅಡ್ಡಿ ಆಗಿವೆ. ಶೂಟಿಂಗ್‌ ಮನೆಗಳು ಸಿಗುತ್ತಿಲ್ಲ. ಮಾಲೀಕರು ಬರಬೇಡಿ ಅಂತಿದ್ದಾರೆ. ಕಲಾವಿದರು ಕೂಡ ಬರುವುದಕ್ಕೆ ಭಯ ಪಡುತ್ತಿದ್ದಾರೆ. ಸಮಸ್ಯೆಗಳು ನಡುವೆಯೂ ಎರಡ್ಮೂರು ದಿನ ಚಿತ್ರೀಕರಣ ನಡೆಸಬೇಕಾಗಿ ಬಂತು. ಇನ್ನೇನು ಮಾ.19 ರಿಂದ ಕಡ್ಡಾಯ ರದ್ದಾಗುತ್ತಿರುವುದು ನಮಗೂ ಒಂದ್ರೀತಿ ನಿರಾಳ’ ಎನ್ನುವ ಮಾತು ಅವರದು.

 

Follow Us:
Download App:
  • android
  • ios