Asianet Suvarna News Asianet Suvarna News

'ಎದೆತುಂಬಿ ಹಾಡುವೆನು' ಸ್ಪರ್ಧಿ ನಾದಿರಾ ಬಾನು ನೋವಿನ ಕತೆ ಏನು?

ಕಲರ್ಸ್ ಕನ್ನಡದ 'ಎದೆತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ಅದ್ಭುತ ಗಾಯನದ ಮೂಲಕ ಗಮನ ಸೆಳೆಯುತ್ತಿರುವ ಗಾಯಕಿ ನಾದಿರಾ ಬಾನು ಅವರ ಬದುಕಿನಲ್ಲೊಂದು ನೋವಿನ ಕತೆ ಇದೆ. ಅದನ್ನು ಕೇಳಿದರೆ ಎಂಥವರಿಗೂ ಪಾಪ ಅನಿಸದಿರದು.

 

heart touching story of Ede tumbi haduvenu contestant Nadira Banu
Author
Bengaluru, First Published Sep 29, 2021, 2:34 PM IST

ಕಲರ್ಸ್ ಕನ್ನಡ ಮನರಂಜನಾ ಚಾನೆಲ್‌ನಲ್ಲಿ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮ ಸೊಗಸಾಗಿ ಮೂಡಿಬರುತ್ತಿದೆ. ಇದರಲ್ಲಿ ಕಲಾವಿದರ ಹಾಡಿನ ಜೊತೆಗೆ ಅವರ ಲೈಫನ್ನೂ ತೋರಿಸಿರುವುದು ಮಹತ್ವ ಪಡೆಯುತ್ತಿದೆ. ಈ ವಾರ ಚೀಟಿ ಎತ್ತುವ ಮೂಲಕ ಸಹ ಗಾಯಕನನ್ನು ಆಯ್ಕೆ ಮಾಡಿ ಅವರ ಜೊತೆಗೆ ಸ್ಪರ್ಧಿಸುವಂತೆ ಕಾರ್ಯಕ್ರಮ ಆಯೋಜನೆ ಆಗಿತ್ತು. ಆದರೆ ಇದಕ್ಕೂ ಮೊದಲು ಸ್ಪರ್ಧಿಗಳ ಬದುಕಿನ ಕತೆಯನ್ನು ವೀಕ್ಷಕರಿಗೆ ತಿಳಿಸಿದ್ದು ಕುತೂಹಲಕಾರಿಯಾಗಿತ್ತು. ಈ ಸರಣಿಯಲ್ಲಿ ಬಹಳ ಗಮನ ಸೆಳೆದದ್ದು ನಾದಿರಾ ಬಾನು ಎಂಬ ಹುಡುಗಿಯ ಬದುಕಿನ ಕತೆ. ಸಿನಿಮಾ ಕೆಲಸಗಳಿಗಾಗಿ 'ಎದೆತುಂಬಿ ಹಾಡುವೆನು' ಕಾರ್ಯಕ್ರಮದಿಂದ ಬ್ರೇಕ್‌ ತೆಗೆದುಕೊಂಡಿದ್ದ ಹರಿಕೃಷ್ಣ ಅವರೂ ಫೋನ್‌ಇನ್ ಮೂಲಕ ನಾದಿರಾಗೆ ವಿಶ್ ಮಾಡಿದ್ದು ನಾದಿರಾ ಘನತೆ ಹೆಚ್ಚಿಸೋ ಹಾಗಿತ್ತು. ಅಷ್ಟಕ್ಕೂ ನಾದಿರಾ ಕತೆ ಏನು?

ಆರ್ಕೆಸ್ಟ್ರಾದಲ್ಲಿ ಹಾಡುವ ಕಲಾವಿದರ ಕುಟುಂಬದಲ್ಲಿ ಹುಟ್ಟಿದವರು ನಾದಿರಾ ಬಾನು. ತಂದೆ ತಾಯಿ ಇಬ್ಬರೂ ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಿದ್ದರೆ, ನಾದಿರಾ ಅವರನ್ನು ನೋಡಿ ನೋಡಿ ತಾನೂ ಹಾಡೋದನ್ನು ಕಲಿಯುತ್ತಾಳೆ. ಹತ್ತನೇ ಕ್ಲಾಸ್ ಅಂದರೆ ಅದು ವಿದ್ಯಾರ್ಥಿಯ ಮುಂದಿನ ಬದುಕಿನ ಹಾದಿಯನ್ನು ನಿರ್ಧರಿಸುವ ಮಹತ್ವದ ಘಟ್ಟ. ಆ ಹೊತ್ತಲ್ಲೇ ನಾದಿರಾಗೆ ಬಹುದೊಡ್ಡ ಆಘಾತ ಎದುರಾಗುತ್ತದೆ. ಅದು ಅಪ್ಪ ಅಮ್ಮನ ನಡುವೆ ವೈಮನಸ್ಸು ಉಂಟಾಗಿ ಅಪ್ಪ ಈ ಫ್ಯಾಮಿಲಿಯಿಂದಲೇ ದೂರ ಹೋಗುತ್ತಾರೆ. ಒಂದು ಕಡೆ ತನ್ನ ಓದು, ಇನ್ನೊಂದು ಕಡೆ ಇಬ್ಬರು ಚಿಕ್ಕ ತಂಗಿಯರ ಹೊಣೆಗಾರಿಕೆ, ಅದೇ ಹೊತ್ತಿಗೆ ಅಮ್ಮನಿಗೆ ಆಕ್ಸಿಡೆಂಟ್. ಹತ್ತನೇ ಕ್ಲಾಸಿನ ಗುಬ್ಬಿಯಂಥಾ ಚಿಕ್ಕ ಹುಡುಗಿ ಈ ದೈತ್ಯ ಕಷ್ಟಗಳನ್ನು ಹೇಗೆ ತಾನೇ ಎದುರಿಸಿಯಾಳು?
 

ಮಾಲಾಶ್ರೀ ಆಯ್ತು ಈಗ ನಟಿ ಆರತಿ ಲುಕ್‌ನಲ್ಲಿ ಕಾಣಿಸಿಕೊಂಡ ನಿರೂಪಕಿ ಅನುಪಮಾ ಗೌಡ!

ಸಣ್ಣ ಹಮ್ಮು ಬಿಮ್ಮು ಇಲ್ಲದೇ ಸಂಕೋಚದ ನಗೆಯೊಂದಿಗೇ ಮಾತನಾಡುವ ನಾದಿರಾ ಒಳಗೊಳಗೇ ಎಂಥಾ ಗಟ್ಟಿಗಿತ್ತಿ ಅಂದರೆ, ಅಷ್ಟು ಚಿಕ್ಕ ವಯಸ್ಸಿಗೇ ಜವಾಬ್ದಾರಿ ಹೊರುತ್ತಾಳೆ. ತಾನೇ ಆರ್ಕೆಸ್ಟ್ರಾಗೆ ಹೋಗಿ ಹಾಡುತ್ತಾ ಮನೆ ಮಂದಿಯನ್ನು ಪೋಷಿಸುತ್ತಾಳೆ. ಜೊತೆಗೆ ಓದಿನ ಕಡೆಗೂ ಗಮನಕೊಡುತ್ತಾಳೆ. ಆದರೆ ಪರಿಸ್ಥಿತಿ ಎಷ್ಟು ಕಠಿಣವಾಗಿತ್ತು ಅಂದರೆ ಒಂದು ಹತ್ತನೇ ತರಗತಿ ಪಾಸಾಗಿ ಒಂದು ಹಂತದ ನಂತರ ಈಕೆಗೆ ಓದು ಮುಂದುವರಿಸಲಾಗುವುದಿಲ್ಲ. ಓದಿಗೆ ಗುಡ್ ಬೈ ಹೇಳಿ ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಾ, ತನ್ನ ಹಾಡಿನ ಪ್ರೀತಿಯನ್ನೂ, ಗಳಿಕೆಯನ್ನೂ ಹೆಚ್ಚಿಸಿಕೊಳ್ಳುತ್ತಾ ನಾದಿರಾ ಮುಂದೆ ಹೋಗುತ್ತಿರುತ್ತಾಳೆ. ಅಂಥಾ ಸಮಯದಲ್ಲಿ 'ಎದೆ ತುಂಬಿ ಹಾಡುವೆನು' ರಿಯಾಲಿಟಿ ಶೋಗೆ ಆಯ್ಕೆ ಆಗುತ್ತಾಳೆ. ಇದೀಗ ಈಕೆಯ ಹಾಡಿನ ಮಾಧುರ್ಯವನ್ನು ಕನ್ನಡಿಗರೆಲ್ಲ ಸವಿಯುತ್ತಿದ್ದಾರೆ.

'ನೀನು ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಿದ್ದೆ ಅಂತಷ್ಟೇ ಗೊತ್ತಿತ್ತು. ನಿನ್ನ ಬದುಕಿನಲ್ಲಿ ಈ ಮಟ್ಟಿನ ನೋವಿದೆ ಅಂತ ಗೊತ್ತಿರಲಿಲ್ಲ. ನಿನಗೆ ಉಜ್ವಲ ಭವಿಷ್ಯವಿದೆ' ಅನ್ನೋದು ಈಕೆಯ ಕತೆ ಕೇಳಿದ ಬಳಿಕ ರಾಜೇಶ್ ಕೃಷ್ಣನ್ ನೀಡಿದ ಅಭಿಪ್ರಾಯ. 'ಹಳೆಯದನ್ನೆಲ್ಲ ಮರೆತು ಭವಿಷ್ಯದತ್ತ ಕಣ್ಣು ನೆಟ್ಟು ಹಾಡುತ್ತಿರು' ಅಂತಾರೆ ಗುರುಕಿರಣ್. 'ನೀನು ಹಿಂದೆ ಫೇಸ್ ಮಾಡಿದ ಕಷ್ಟವನ್ನು ಇಂಧನವಾಗಿ ಮಾಡಿಕೊ. ಅದರ ಪವರ್‌ನಲ್ಲಿ ಮುಂದು ಹೋಗುತ್ತಿರು' ಅಂತ ರಘು ದೀಕ್ಷಿತ್ ಹೇಳ್ತಾರೆ.

ಆಟ ಆಡುವಾಗ ರಸ್ತೆ ಮಧ್ಯೆ ತಲೆ ಸುತ್ತಿ ಬಿದ್ದ ಅನು ಸಿರಿಮನೆ!

ಈ ಎಪಿನೋಡ್‌ ನೋಡಿ ಭಾವುಕರಾದ ಹಿರಿಯ ಸಂಗೀತ ನಿರ್ದೇಶಕ ಹರಿಕೃಷ್ಣ, ಫೋನ್ ಕಾಲ್ ಮೂಲಕ ನಾದಿರಾಗೆ ಶುಭ ಹಾರೈಸಿದ್ದು ಮನದುಂಬುವಂತಿತ್ತು. 'ನನ್ನ ಹಿನ್ನೆಲೆಗೂ ನಿನ್ನ ಹಿನ್ನೆಲೆಗೂ ಒಂದಿಷ್ಟು ಸಿಮಿಲಾರಿಟಿ ಇದೆ. ನಿನಗೆ ಕಷ್ಟ ಬಂದಾಗ ಸಂಗೀತ ಕೈ ಹಿಡಿಯಿತು. ಆದರೆ ನನಗೆ ಬಂದ ಕಷ್ಟ ನಾನು ಮೆಕ್ಯಾನಿಕ್ ಆಗೋ ಹಾಗೆ ಮಾಡಿತು. ಆರ್ಕೆಸ್ಟ್ರಾದಲ್ಲಿ ಹಾಡೋದು ವೀಕ್‌ನೆಸ್ ಅಲ್ಲ, ಗ್ರೇಟ್‌ನೆಸ್. ನಾನೂ ಆರ್ಕೆಸ್ಟ್ರಾ ಹಿನ್ನೆಲೆಯಿಂದಲೇ ಬಂದವನು, ಬೆಂಗಳೂರಿನ ಶೇ.90ರಷ್ಟು ಸಂಗೀತಗಾರರು ಆರ್ಕೆಸ್ಟ್ರಾದಲ್ಲಿದ್ದವರೇ. ಅಪ್ಪನಿಂದ ದೂರಾಗಿ ಕುಟುಂಬದ ಜವಾಬ್ದಾರಿ ಹೊತ್ತಿರುವ ನೀನು ಬಹಳ ಎತ್ತರಕ್ಕೆ ಬೆಳೆಯಬೇಕು. ನಾವೆಲ್ಲ ನಿನ್ನ ಕಾಲ್‌ಶೀಟ್‌ಗೆ ಕಾಯೋ ಹಾಗಾಗಬೇಕು' ಅಂತ ಹೃದಯತುಂಬಿ ಹಾರೈಸುತ್ತಾರೆ ಹರಿಕೃಷ್ಣ.

ಇಷ್ಟೆಲ್ಲ ಹಾರೈಕೆಗಳಿಂದ ಬಹಳ ಖುಷಿಯಾಗುವ ನಾದಿರಾ, 'ಹಾಡೊಂದ ಹಾಡಬೇಕೂ..' ಅನ್ನೋ ಹಾಡನ್ನು ಹಾಡೋ ಮೂಲಕ ಮತ್ತೊಂದು ಎತ್ತರಕ್ಕೆ ಏರುತ್ತಾಳೆ.

ನೀರಜ್‌ಗೆ ಎಂಥಾ ಹುಡುಗಿ ಬೇಕು ? ಡ್ಯಾನ್ಸ್‌+ ವೇದಿಕೆಯಲ್ಲಿ ಚಿನ್ನದ ಹುಡುಗ ಹೇಳಿದ್ದಿಷ್ಟು

Follow Us:
Download App:
  • android
  • ios